ಒಟ್ಟು ನೋಟಗಳು

Thursday, July 10, 2025

ಹರನೂ ನೀನೇ ಹರಿಯೂ ನೀನೇ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಹರನೂ ನೀನೇ ಹರಿಯೂ ನೀನೇ ನನ್ನ ಪಾಲಿಗೆ ಎಲ್ಲವೂ ನೀನೆ ಗುರುವೇ
ನೀನಿಲ್ಲದೇ ಬದುಕು ಇಲ್ಲವೆನಗೆ ಸದಾ ನಿನ್ನಲ್ಲೇ ಲೀನನಾಗಿಹೆ ಪ್ರಭುವೇ.

ಒಂದೊಂದು ಕ್ಷಣ ನಿನ್ನ ನೆನೆಯದೇ ಹೋದರೆ ಬೆದರುವುದು ಜೀವ
ನಿನ್ನ ಆಸರೆಯೊಂದೇ ಸಾಕೆನಗೆ ಬದುಕಿನ ಕೊನೆಯ ತನಕ ಬೇಡುವುದು ಜೀವ.

ನಿನ್ನ ಭಜಿಸುವ ಪರಿಯ ಅರಿಯಲಾರೆ ನಿನ್ನ ಇರುವಿನ ಅರಿವು ತಿಳಿಯಲಾರೆ
ನಿನ್ನ ಕೃಪೆಯ ಬೇಡಿ ಬರುವೆ ನಾನು ಬದುಕು ಬರಿದಾಗಿ ದಾರಿ ಕಾಣಲಾರೆ.

ತಪ್ಪು ಒಪ್ಪುಗಳ ಅರಿವಿಲ್ಲ ಎನಗೆ ದಾರಿ ತೋರುವ ಗುರು ನೀನಾಗು ಪ್ರಭುವೇ
ಅಂಧಕಾರ ಅಳಿಸಿ ಜ್ಞಾನವನು ಕರುಣಿಸಿ ಎನ್ನ ಪೊರೆಯೋ ಸಖರಾಯ ದೊರೆಯೇ.

Friday, January 31, 2025

ನನ್ನೊಳಗಿಹ ನಿನ್ನ ಅರಿಯದೇ ಮರುಳನಂತೆ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ನನ್ನೊಳಗಿಹ ನಿನ್ನ ಅರಿಯದೇ ಮರುಳನಂತೆ ಇನ್ನೆಲ್ಲೋ ಹುಡುಕುತಿಹೆನೋ ಗುರುವೇ
ಇರುವಿನರಿವು ಮೂಡಲು ಇನ್ನೆಷ್ಟು ಕಾಡಿ ಬೇಡಬೇಕೋ ತಿಳಿಯನು ನನ್ನ ದೊರೆಯೇ.

ನಿನ್ನಿರುವ ಮರೆತು ಮನ ತೋರಿದೊಡೆ ಓಡುವ ಬದುಕಿಗೆ ಅರ್ಥವಿದೆಯಾ ಗುರುವೇ
ತೋರುವರ್ಯಾರೋ ಸರಿ ದಾರಿಯ ಮಂಕನಂತೆ ತಿರುಗಿ ಬಸವಳಿದೆ ಪ್ರಭುವೇ.

ಯೋಗ್ಯನಲ್ಲ ನಾನು ನಿನ್ನ ಪ್ರೀತಿ ಗಳಿಸಲು ಸೋತು ಸುಣ್ಣವಾಗಿ ಅಸಹಾಯಾಕನಾದೆನೋ 
ಬೇಡಲು ಮನ ಒಪ್ಪದು ಮಾಡಿದಾ ಕರ್ಮವದು ಬಲು ಕಾಡುತಿಹದೋ ದೊರೆಯೇ.

ನಿನ್ನೆದುರು ನಿಂತು ಬೇಡಲಾರದೆ ಅನ್ಯರಿಗೆ ಶರಣಾಗಿ ಅಂಗಲಾಚಿದೆ ನಿನ್ನ ಕರುಣೆಗಾಗಿ
ಕಾರುಣ್ಯಸಿಂದು ಎಂದು ಬಿರುದು ಹೊತ್ತವ ನೀನು ಪಾಮರನ ಕೂಗು ಆಲಿಸದಾದೆಯಾ.

ಸಹಜ ಬದುಕು ಬಳಲಾರದೆ ಬಣ್ಣ ಬಳಿದು ವೇಷ ಧರಿಸಿ ನಿಂತರೆ ಅರಿಯಲಾರೆಯಾ
ಎಲ್ಲದಕೂ ಕ್ಷಮೆ ಇರಲಿ ಮುನಿಸು ತೋರಬೇಡ ನನ್ನ
ಸಖರಾಯಪುರದ ಮಹಾದೇವನೇ.

ಜೊತೆ ಇರಲು ನೀನು ಭಯ ಪಡೆನು ನಾನು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಜೊತೆ ಇರಲು ನೀನು  ಭಯ ಪಡೆನು ನಾನು ಇನ್ನೆಂದೂ ಗುರುನಾಥ
ಅಭಯ ನೀಡಲು ನೀನು ಇನ್ನೇಕೆ ಮರುಗುವೆನು ನಾನು ಹೇಳೋ ಗುರುನಾಥ.

ದೂರ ಮಾಡಿದೆ ನೀನೆಂದು ಕೊರಗುತಲಿ ಕಾಲ ಕಳೆದೆನು ಗುರುದೇವ
ನೀ ಜೊತೆಗಿರಲು ಬದುಕು ನಡೆವುದ ಅರಿಯದೇ ಮೂಡನಾದೆ ಗುರುದೇವ.

ಕರ್ಮದ ಫಲವು ಕಾಡುವುದೆಂದು ನೀ ಹೇಳಿದರೂ ಸುಮ್ಮನೆ ಕೊರಗಿದೆ ನಾನು
ನಿನ್ನ ಚರಣದಲಿ ಶಿರವಿರಿಸಿ ಎಲ್ಲವೂ ನಿನ್ನದೆನುವುದ ಮರೆತು ಹಲುಬಿದೆ ನಾನು.

ಕಾಯುವುದ ಕಲಿಯಲಿಲ್ಲ  ಬರೀ ಅವಸರದಲಿ ಬೇಡುವುದೊಂದೇ ಬದುಕಾಯಿತು
ಬೇಕು ಬೇಡಗಳ ಸುಳಿಯೊಳು ಬದುಕಿನರ್ಥ ಅರಿಯದೆ ಸಮಯ ವ್ಯರ್ಥವಾಯಿತು.

ನೀ ಹರಸ ಬೇಕೆಂಬುದು ನನ್ನ ಬಯಕೆ ಆಗದಿರಲಿ ಅದು ಬರೀ ಮರೀಚಿಕೆ
ಸಕಲವನು ಅರಿತಿಹ ನಿನ್ನ ಬೇಡುವುದು ಕಾಡುವುದು ಸರಿಯೇನು ಸಖರಾಯಾಧೀಶ.

Wednesday, July 24, 2024

ನನ್ನೊಳಗಿಹ ನಿನ್ನ ಅರಿಯದೇ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

 ನನ್ನೊಳಗಿಹ ನಿನ್ನ ಅರಿಯದೇ ಮರುಳನಂತೆ ಇನ್ನೆಲ್ಲೋ ಹುಡುಕುತಿಹೆನೋ ಗುರುವೇ

ಇರುವಿನರಿವು ಮೂಡಲು ಇನ್ನೆಷ್ಟು ಕಾಡಿ ಬೇಡಬೇಕೋ ತಿಳಿಯನು ನನ್ನ ದೊರೆಯೇ.

ನಿನ್ನಿರುವ ಮರೆತು ಮನ ತೋರಿದೊಡೆ ಓಡುವ ಬದುಕಿಗೆ ಅರ್ಥವಿದೆಯಾ ಗುರುವೇ
ತೋರುವರ್ಯಾರೋ ಸರಿ ದಾರಿಯ ಮಂಕನಂತೆ ತಿರುಗಿ ಬಸವಳಿದೆ ಪ್ರಭುವೇ.

ಯೋಗ್ಯನಲ್ಲ ನಾನು ನಿನ್ನ ಪ್ರೀತಿ ಗಳಿಸಲು ಸೋತು ಸುಣ್ಣವಾಗಿ ಅಸಹಾಯಾಕನಾದೆನೋ 
ಬೇಡಲು ಮನ ಒಪ್ಪದು ಮಾಡಿದಾ ಕರ್ಮವದು ಬಲು ಕಾಡುತಿಹದೋ ದೊರೆಯೇ.

ನಿನ್ನೆದುರು ನಿಂತು ಬೇಡಲಾರದೆ ಅನ್ಯರಿಗೆ ಶರಣಾಗಿ ಅಂಗಲಾಚಿದೆ ನಿನ್ನ ಕರುಣೆಗಾಗಿ
ಕಾರುಣ್ಯಸಿಂದು ಎಂದು ಬಿರುದು ಹೊತ್ತವ ನೀನು ಪಾಮರನ ಕೂಗು ಆಲಿಸದಾದೆಯಾ.

ಸಹಜ ಬದುಕು ಬಳಲಾರದೆ ಬಣ್ಣ ಬಳಿದು ವೇಷ ಧರಿಸಿ ನಿಂತರೆ ಅರಿಯಲಾರೆಯಾ
ಎಲ್ಲದಕೂ ಕ್ಷಮೆ ಇರಲಿ ಮುನಿಸು ತೋರಬೇಡ ನನ್ನ
ಸಖರಾಯಪುರದ ಮಹಾದೇವನೇ.

ನಂಬಿಹೆ ನಿನ್ನನು ಗುರುದೇವ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

 ನಂಬಿಹೆ ನಿನ್ನನು ಗುರುದೇವ ಎನ್ನ ಜೊತೆಯಲಿ ಸಾಗೋ  ಮಹಾದೇವ

ಶರಣೆಂಬಗೆ ಮತಿಯನೀಡಿ ಸರಿ ದಾರಿ ತೋರೋ ನಮ್ಮೊಲುಮೆಯ ಗುರುದೇವ.

ಮನಸೆಂಬ ಕುದುರೆಯ ಏರಿ ಕಂಡಲ್ಲಿ ಸಾಗುತ ದಾರಿ ಮೂಡನಾದೆ ಗುರುವೇ
ನನ್ನದಲ್ಲದ ಬಾಳ ಬದುಕಿ  ಎಲ್ಲಾ ಅರಿವಿದೆಯೆಂಬ ಬ್ರಮೆಯೊಳು ಬಿದ್ದೆನು ದೊರೆಯೇ.

ನೀನಿಲ್ಲದ ಕ್ಷಣವ ಒಂದಿನಿತೂ ಊಹಿಸಲಾರೆ ಬಂಡ ಬದುಕು ಸಾಕಾಗಿದೆ ಪ್ರಭುವೇ
ನಿನ್ನ ನೆರಳಲಿ ಒಂದಾಗದಿದ್ದರೂ ಬೇಡ ನಿನ್ನ ಪಾದ ದೂಳಿಯ ಮಾಡೋ ಗುರುವೇ.

ನನ್ನಿಷ್ಟದ ಬದುಕು ಬೇಡ ನೀ ನೀಡುವ ಕರುಣೆಯ ಬದುಕು ಬೇಡುವೆ ದೊರೆಯೇ
ಶುದ್ಧ ಭಾವವ ನೀಡಿ ಒಳ ಹೊರಗೂ ಬೇಧವಿಲ್ಲದ ಮನವ ನೀಡೋ ಗುರುವೇ.

ಅರಿವಿದೆ ನನಗೆ ನನ್ನ ಕೂಗು ಬರೀ ಕಪಟ ಮನದ ಮಲಿನ ಭಾವವೆಂದು
ನಿನ್ನ ಮೊರೆ ಹೋಗುವ ವಿವಿಧ ಪರಿಯ ಕಂಡು ಮುನಿಸು ಬೇಡ ಸಖಾರಾಯ ಪ್ರಭುವೇ.

ನಿಲ್ಲಿಸಲಾರೆ ಎನ್ನ ಮನವ ನಿನ್ನ ನಾಮ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

 ನಿಲ್ಲಿಸಲಾರೆ ಎನ್ನ ಮನವ ನಿನ್ನ ನಾಮ ನೆನೆದರೂ ಹಳಿ ತಪ್ಪಿದ ಬಂಡಿಯಂತೆ ಓಡುತಿಹದೋ 

ಕರ್ಮದ ಸುಳಿಯೊಳು ಸಿಲುಕಿ ನಲುಗಿ ನಲುಗಿ ಕೂಗುತಿಹದೋ ನನ್ನ ಗುರುವೇ.

ಮನವು ಹಿoಡಿ ಹಿಪ್ಪೆಯಾಗಿದೆ ಮುದುಡಿ ಮರುಗಿ ನಿನ್ನ  ಕೂಗುತಿದೆ ಕರುಣೆಗಾಗಿ
ಕಾಣದವನಂತೆ ನಟಿಸಿ ನಗುತ ನಿಂತು ಆಟ ನೋಡಬೇಡವೋ ಕೂಗುತಿಹೆ ಬದುಕಿಗಾಗಿ.

ಕಾಡಿ ಬೇಡಿಹುದೆಲ್ಲ ನೀಡಿ ಅಹಂ ಒಡಗೂಡಿ ನನ್ನ ಬದುಕಿನ ಆಟ ನೋಡಿದೆಯಾ
ಅಡಿಗಡಿಗೂ ಎಚ್ಚರಿಕೆ ನೀಡುತ ಜೊತೆ ಜೊತೆಗೂ ನಡೆಯುತ ಬದುಕು ಕಲಿಸುವೆಯಾ.

ಯಾರಿಗೂ ಆಪ್ತನಾಗಲಿಲ್ಲ  ಎಲ್ಲೂ ಸಲ್ಲಲಿಲ್ಲ ನಾನು ಎಂದೂ ನನ್ನ ಕೈ ಬಿಡಬೇಡವೋ
ಎಲ್ಲವೂ ಶಿರದಿಂದ ಎಂದೆ  ಇನ್ಯಾಕೆ ತಡಮಾಡಲಿ ಶಿರವಿಟ್ಟು ಬೇಡುವೆ ಸಖರಾಯ ಪ್ರಭುವೇ.

Tuesday, April 16, 2024

ಭಕ್ತನೆಂಬ ಬಿರುದು ಬೇಡವೋ ನನಗೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಭಕ್ತನೆಂಬ ಬಿರುದು ಬೇಡವೋ ನನಗೆ ನಾ ನಿನ್ನ ಬಕುತನಲ್ಲವೋ  ಗುರುವೇ
ಭವ ಬಂಧನದಿಂದ ಮುಕುತಿ ಬೇಡುವ ತಿರುಕ ನಾನು ಏನ್ನ ಕೈ ಬಿಡ ಬೇಡವೋ.

ಅಳೆದೂ ಸುರಿದು ಗುಣಿಸಿ ಎಣಿಸಿ ಬರೀ ಬಂಡ ಬದುಕು ನಡೆಸಿ ಸೋತಿತು ಜೀವವು
ಸೋಗು ದರಿಸಿ ಬೇಧ ಎಣಿಸಿ ದಿನವ ದೂಡಿ ಸಾಕು ಸಾಕಾಗಿ ಕೊರಗಿತು ಜೀವವು.

ಇನ್ನು ಸಾಕು ನಿನ್ನ ಲೀಲೆ ಕರುಣೆ ಬಾರದೇ ಗುರುವೇ ಎನ್ನ ಮೇಲೆ ಕಾದು ದಣಿವಾಗಿದೆ
ಮುoದೆ  ಇನ್ನೂ ಕಾಯಿಸಬೇಡ ಓರೆಗೆ ಹಚ್ಚಿ ನೋಡಬೇಡ ಒಮ್ಮೆ ಹರಸ ಬಾರದೆ.

ಕಪ್ಪು ಚುಕ್ಕಿ ಎನ್ನ ಬದುಕು ಒಮ್ಮೆ ಅಳಿಸಿ ಶುದ್ಧಗೊಳಿಸಿ ನಡೆಸಬಾರದೇ
ನಿನ್ನ ಒಂದು ನೋಟಕಾಗಿ ಕಾದು ಕುಳಿತು ಜೀವ ಬಳಲಿದೆ ಓರೆ ನೋಟ ಬೀರ ಬಾರದೇ.

ನಿನ್ನ ಕೃಪೆಗೆ ಭಕುತಿ ಎಷ್ಟು ಬೇಕೋ ನಿನ್ನ ಪಡೆಯಲು ಇನ್ನೆಷ್ಟು ಸಾಧಿಸ ಬೇಕೋ ಅರಿಯಾದಾಗಿದೆ
ಪಾಮರನು ನಾನು ತೊದಲುತಿಹೆನು ಸಖರಾಯಪುರದ ಮಹಾದೇವ ನೀನು ಹರಸಬಾರದೇ.

Wednesday, January 3, 2024

ಎಲ್ಲೂ ಸಲ್ಲದವನು ಎಲ್ಲಿಯಾದರೂ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಎಲ್ಲೂ ಸಲ್ಲದವನು ಎಲ್ಲಿಯಾದರೂ ಸಲ್ಲುವನೆನುತ ಎಲ್ಲೆಲ್ಲೋ ಹುಡುಕಿ ಹೊರಟೆನು 
ಬಳಲಿ ಬೆಂಡಾಗಿ ದಾರಿ ಸಾಗದಾಗಿ ಉಸಿರು ಚೆಲ್ಲುತ ದಾರಿ ಕಾಣದೇ ಕುಳಿತೆನೋ.

ಏನಿದು ಬದುಕಿನ ಮರ್ಮ ತಿಳಿಯದೆ ಚಡಪಡಿಸಿ ಕೈ ಚೆಲ್ಲಿ ಕುಳಿತೆನೋ
ಯಾರ ಸಂಗಮಾಡಲಿ ಹೇಗೆ ವಿಷಯ ಅರಿಯಲಿ ಅರ್ಥವಾಗದೆ ಗಲಿಬಿಲಿಯಾದೆನೋ.

ವೇಷಧರಿಸಿ ನಾಮಧರಿಸಿ ಅಡಂಬರದಿ ಮೆರೆದು ಸೋತು ನಿಂತೆನೋ
ನಿನ್ನ ಇರುವ ಅರಿಯದೇ ವ್ಯರ್ಥ ಬದುಕು ನಡೆಸಿ ಸಮಯ ಕಳೆದೆನೋ.

ನಿಜ ಬಕುತರ ಸಂಗ ಗಳಿಸದೆ ಬರೀ ಅಂತೆಕಂತೆಗಳ ಸಂತೆಯಲಿ ಕಳೆದು ಹೋದೆನೋ
ನಿನ್ನ ತತ್ವ ಅರಿಯದೇ ಬದುಕಿನರ್ಥ ತಿಳಿಯದೇ  ಅಲ್ಪಮತಿಯಾದೆನೋ.

ನಾನೇನು ನಿನ್ನ ಸೇವಕನೇ ಮೆಚ್ಚಿನ ಶಿಷ್ಯನೇ ನನ್ನ ಹರಸೆಂದು ಬೇಡಲು
 ಸಖರಾಯಪುರದ ಮಹಾದೇವನು ನೀನೇ ಬೇಕಲ್ಲವೇ ಇದಕುತ್ತರ ಹೇಳಲು.

Tuesday, January 2, 2024

ಬೇಡಿ ಬೇಡಿ ಸಾಕಾಯ್ತು ಪದಗಳಲಿ ಗುರುವೇ - ಕೃಪೆ :ಶ್ರೀ. ಆನಂದ ರಾಮ್, ಶೃಂಗೇರಿ

ಬೇಡಿ ಬೇಡಿ ಸಾಕಾಯ್ತು ಪದಗಳಲಿ ಗುರುವೇ ಕರುಣೆ ಬಾರದೇ ಇನ್ನೂ
ಮೌನ ಧರಿಸಿ ಬೇಡುವ ಪರಿ ಅರಿತಿಲ್ಲ ನಾನು ಮಲಿನ ಭಾವ ಕಳೆಚಿಲ್ಲ ಇನ್ನೂ.

ಯಾರೋ ಭಜಿಸಿದರೆಂದು ನಿನ್ನ ಬೇಡುವರೆಂದು ನಾನೂ ಬೇಡ ಹೊರಟೆನೋ
ಭಾವ ಅರಿಯದೇ ಭಕ್ತಿ ಬೆರಸದೇ ತೋರಿಕೆಯ ಭಕುತಿ ತೋರುತಿಹೆನೋ.

ಬೇಡಿದೊಡೆ ಕೊಡಲಿಲ್ಲ ನೀನೆಂದು ಭಕುತಿ ಬದಲಾಗಿ ಸುಮ್ಮನೆ ಕಾಲ ಕಳೆದೆನೋ
ಕರ್ಮ ಕಳೆಯದೆ ದಾರಿ ತೋರದು ಅರಿವಿದ್ದರೂ ಮೂರ್ಕನಂತೆ ಕೂಗುತಿಹೆನೋ.

ಎಲ್ಲೆಲ್ಲೋ ಹುಡುಕುತಿಹ ಈ ಮನಕೆ ನಿನ್ನ ಇರುವಿಕೆಯ ಅರಿವು ಬೇಕಾಗಿದೆ
ಬಾವ ಶುದ್ದಿ ಇಲ್ಲದ ಈ ಮನಕೆ ನಿನ್ನ ದರುಶನ ಬಾಗ್ಯ ಸಿಗಬೇಕಾಗಿದೆ ಗುರುವೇ.

ಸಾಕೆನ್ನುವ ಮೊದಲೇ ಸಾರ್ಥಕಗೊಳಿಸು ಬದುಕನ್ನು ಬೇಡುವೆನು ಪ್ರಭವೇ
ನಿರರ್ಥಕ ಬದುಕು ಸಾಕು ಮಾಡು ನಿಜವ ತಿಳಿಸಿ ಹರಸೆನ್ನ  ಸಖರಾಯಪ್ರಭುವೇ.

Monday, July 10, 2023

ನಮಿಸುವೆ ನಿನಗೆ ಗುರುದೇವ - ಶ್ರೀ. ಆನಂದ ರಾಮ್, ಶೃಂಗೇರಿ

ನಮಿಸುವೆ ನಿನಗೆ ಗುರುದೇವ ನೀನೇ ಅಲ್ಲವೇ ನಮ್ಮೆಲರ ಮಹಾದೇವ
ಬವಣೆ ನೀಗಿಸಿ ಬದುಕಿನ ಹಾದಿ ಸುಗಮ ಮಾಡೋ  ಬೇಡುವೆವು ಗುರುದೇವ.

ಎಲ್ಲಿ ಹುಡುಕಲಿ ನಿನ್ನ ಗುರುವೇ ಹೇಗೆ ಬೇಡಲಿ ನಿನ್ನ ಮುನಿಯದೆ ಹರಸೆನ್ನಾ
ಆಲಿಸೋ ಕರುಣದಿ ಗುರುವೇ ಈ ನಿನ್ನ ಪಾಮರ ಬಕುತನ ಮೊರೆಯನ್ನ.

ಅಂತರಾಳದಲಿಹ ಅಹಂ ಅಳಿಸಿ ಏನೂ ಅಲ್ಲದ ಈ ಜೀವಕೆ ದಾರಿ ತೋರೋ
ಬರೀ ಬೂಟಾಟಿಕೆಯ ಬದುಕು ನಡೆಸೋ ನಿನ್ನ ಸೇವಕನ ಮನ್ನಿಸೋ .

ಭ್ರಮೆಯ ಸಿಂಗಾರಕೆ ತೋರಿಕೆಯ ಆಡಂಬರಕೆ ನೀ ಒಲಿಯಲಾರೆ ಗುರುವೇ
ಒಳ ಹೊರಗೂ ಶುದ್ಧ ಭಾವದ ಕೊರತೆ ನಿನ್ನ ದರುಶನ ದೂರವಂತೆ ನಿಜವೇ.

ಎಲ್ಲಿದ್ದೆನೋ ಹೇಗಿದ್ದೆನೋ ಅದುವೇ ನನ್ನ ಕರ್ಮದ ಫಲವಲ್ಲವೇನೋ
ನಿನ್ನ ನಂಬಿದೊಡೆ ನಿನ್ನ ಬೇಡಿದೊಡೆ ಕರ್ಮ ಕಳೆದು ಶಾಂತಿ ನೀ ನೀಡಿದೆ.

ಅರಿವು ಮೂಡಿಸಿ ಆರು ಅರಿಗಳಿಂದ ದೂರವಿರಿಸಿ ನಮ್ಮ ಪೊರೆಯೋ ದೊರೆಯೇ
ನುಡಿಯು  ನಡೆಯು ಅನ್ಯರಿಗೆ ಆನಂದ ನೀಡುವ ಪರಿ ತೋರೋ ಗುರುವೇ.

ನಾ ಬೇಡುತಿಹೆನೆಂದು ಬರೀ ಪೊಳ್ಳು ಬಕುತಿಯೆಂದು ದೂರ ಮಾಡಬೇಡ ದೊರೆಯೇ
ಸಖಾರಾಯದೀಷ ಪ್ರಭುವೇ ಬೇಡುವೆನು ನಿನ್ನ ಬೇರೆ ದಾರಿ ಅರಿತಿಲ್ಲ ಗುರುವೇ.

Wednesday, May 24, 2023

ಬದುಕಿನ ಉದ್ದಗಲಕು ಏನನ್ನೋ ಹುಡುಕಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬದುಕಿನ ಉದ್ದಗಲಕು ಏನನ್ನೋ ಹುಡುಕಿ ಸೋತು ನಿಂತಾಯಿತು ಗುರುವೇ
ಇನ್ನು ನೆಮ್ಮದಿಯ ಅರಸಿ ನಿನ್ನ ನಂಬಿ ನಿನ್ನ ಪಾದದ ಬಳಿ ನಿಂತಾಯಿತು ಪ್ರಭುವೇ.

ಕಾಣದಾ ಸುಖವ  ವಿಷಯ ವಸ್ತುವಿನಲಿ ಹುಡುಕೆ ಸಿಗುವುದೇ ದೊರೆಯೇ
ಕಂಡರೂ ಕಾಣದಂತೆ ಮಾಡುವ ಮಾಯೆಯ ಲೀಲೆಗೆ ಸಿಕ್ಕಿ ಬಸವಳಿದೆ ಗುರುವೇ.

ಇಲ್ಲೇ ಇರುವೆ ಎಂದೆನಿಸುತಿದೆ ಒಳ ಮನಸಿನ ಭಾವಕೆ ಹುಡುಕೆ ನೀ ಸಿಗಲಿಲ್ಲ ಗುರುವೇ
ಶುದ್ದ ಭಾವಕೆ ನೀ ಒಲಿವೆ ಎನ್ನುವರು ಅದರ ಕೊರತೆ ಎನ್ನ ಸೋಲಿಗೆ ಕಾರಣವೇ.

ಬಡ ಬಡಿಸುವೆ ಬರೀ ಪದಗಳ ಜೋಡನೆಯಲಿ ಭಕ್ತಿಯಾ ಕೊರತೆ ಕಾರಣವೇ
ನೀನಿಲ್ಲದ ಬದುಕು ಅಸಹನೀಯ ಎನ್ನುವುದು ಬರೀ ತೋರಿಕೆಯ ಬೂಟಾಟಿಕೆಯೇ.

ಒಳಗೆ ಮನದೊಳು ಬಯಕೆಗಳ ಮಹಾ ಪೂರವು ತೋರಿಕೆಗೆ ಭಕ್ತಿಯ ಆಚರಣೆಯೇ
ಸುಪ್ತ ಮನದ ಆಳದಲಿ ತುಂಬಿಹ ಮಲಿನ ಭಾವಗಳ ಎಡ ಬಿಡದ ತಾಕಲಾಟವೇ.

ಬಯಸುವೆ ಗುರುವೇ ನಿತ್ಯ  ನಿನ್ನ ಭಜಿಸುವ ನಿರಂತರ ನಿರ್ಮಲ ಭಾವವೇ 
ನನ್ನ ಸಲಹಿ ಹರಸಲು ತಡವೇಕೆ ಮಾಡುತಿಹೆ ಓ ನನ್ನ ಸಖರಾಯ ಪ್ರಭುವೇ.

Saturday, March 11, 2023

ನಿನ್ನ ನಂಬಿಹೆನೋ ಗುರುವೇ ಎನ್ನ ಪೊರೆಯುವ ಹೊಣೆ ನಿನ್ನದೋ ದೊರೆಯೇ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ನಿನ್ನ ನಂಬಿಹೆನೋ ಗುರುವೇ ಎನ್ನ ಪೊರೆಯುವ ಹೊಣೆ ನಿನ್ನದೋ ದೊರೆಯೇ
ಕೂಗಿ ಕರೆಯಲು ದ್ವನಿಯು ಕೇಳದೆ ಎನ್ನ ಕಡೆಗಣಿಸಿ ಹೋದೆಯಾ ಪ್ರಭುವೇ.

 ನಿನ್ನ ಬಕುತನೆನುತ ವೇಷ ಧರಿಸಿ ಪರಿ ಪರಿಯ ನಾಟಕ ಆಡಿಹೆನೋ 
ಒಳಗೊಂದು ಹೊರಗೊಂದು ಮಲಿನ ಭಾವ ಹೊತ್ತು ನಿನ್ನ ಕಾಡಿ ಬೇಡುತಿಹೆನೋ.

ತೋರಿಕೆಯ ಬಕುತಿ ಆಡಂಬರದ ಆರಾಧನೆ ನೀನು ಒಪ್ಪಲಿಲ್ಲವೋ ಗುರುವೇ
ನೋಡುಗರ ಕಣ್ಣಿನಲಿ ಈ ಪರಿಯ ಬಕುತಿಯ ತೋರಿ ಮರಳು ಮಾಡಿಹೆನೋ.

ನಿನ್ನ ಕೃಪೆ ಪಡೆದವರ ಕಂಡು ಕರುಬಿ ಎನ್ನ ಕರ್ಮವ ನೆನೆದು ಸೋತು ನಿಂತಿಹೆನೋ
ಸಾಧನೆಯ ಹಾದಿಯಲಿಹ ನಿನ್ನ ನಿಜಬಕುತರ ಅರಿಯದೇ ನಿಂದಿಸುತಿಹೆನೋ.

ವಾಸನೆಗಳಿಗೆ ಮಾರು ಹೋಗಿ ಕುಕರ್ಮದ ಅರಿವಿದ್ದರೂ ದೂರ ನಿಲ್ಲಲಾರೆನೋ
ಭಾವ ಶುದ್ಧಗೊಳಿಸಿ ಈ ಜೀವ ದಂಡಿಸಿ ಪೋರೆಯೋ ಎನ್ನ ಸಖರಾಯ ಪ್ರಭುವೇ.

Wednesday, December 28, 2022

ಸ್ತಿರವಲ್ಲದ ಮನವಹೊತ್ತು - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ಸ್ತಿರವಲ್ಲದ ಮನವಹೊತ್ತು ಬಿದ್ದೆದ್ದು ಓಡುವ ಬದುಕ ನಡೆಸಿ ಸೋತೆನೋ
ಸಂಕುಚಿತ ಭಾವದೊಳು ನಿನ್ನ ಬಜಿಸುವೆನೆನುತ ಬೀಗಿ ಏನೂ ಪಡೆಯದಾದೆನೋ.

ಗುರು ಕೊಡುವನೆಂದು ಹಗುರ ಭಾವದಿ ಮೈ ಮರೆತು ಮೆರೆದೆನೋ
ಅರಿವು ಮೂಡುವ ಮೊದಲೇ ಅರಿತವನಂತೆ ಬೀಗುತ ಎಡವಿ ಬಿದ್ದೆನೋ.

ಚಪಲ ತುಂಬಿದ ಮನ ಹೊತ್ತು ನಿನ್ನ ಭಜಿಸುವ ವೇಷ ಧರಿಸಿ ನಿಂತಿಹೆನೋ
ಆಸೆಗಳ ಮೂಟೆ ಹೊತ್ತು ಏನೂ ಅರಿಯದ ಭಾವ ತೋರಿ ಸೋತೆನೋ.

ನಾನೇ ನಿನ್ನ ಬಕುತನೆನುತ ಬಿಂಕತೋರಿ ನಿಜ ಬಕುತರ ಅರಿಯದಾದೆನೋ
ಶುದ್ಧ ಭಾವದ ಕೊರತೆ ನೀಗದೆ ಚಂಚಲ ಮನದ ಸೆಳೆತ ಮೆಟ್ಟಿ ನಿಲ್ಲದಾದೆನೋ.

ನಿನ್ನ ಕೃಪೆಗೆ ಹಾತೊರೆದು ನಿನ್ನ ಪದತಲದಿ ಶಿರವಿಟ್ಟು ಬೇಡುವ ಪರಿ ತಿಳಿಯದಾದೆನೋ
ಸಖರಾಯಪುರದ ಸರದಾರ ನೀನು ಸರಿ ತಪ್ಪು ತೋರಿ ಹರಸಬಾರದೇನೋ.

Saturday, November 5, 2022

ಕಳೆದ ವಸಂತಗಳೆಷ್ಟೋ ನಿನ್ನ ನೆನೆಯದ ದಿನಗಳು ಇನ್ನೆಷ್ಟೋ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ಕಳೆದ ವಸಂತಗಳೆಷ್ಟೋ ನಿನ್ನ ನೆನೆಯದ ದಿನಗಳು ಇನ್ನೆಷ್ಟೋ
ಅಂತೆ ಕಂತೆಗಳ ಸಂತೆಯೊಳು ಬದುಕ ನಡೆಸಿ ನಿನ್ನ ಮರೆತ ದಿನವೆಷ್ಟೋ.

ಏನಿದು ಗುರುದೇವ ಏನಿದು ನಿನ್ನ  ಲೀಲಾ ಪರಿಯ ನಾ ತಿಳಿಯೆ
ನಾ ನಿನ್ನವನಲ್ಲದೇ ಹೋದರೆ ನೀ  ಎನ್ನ ಮನದೊಳು ಯಾಕೆ ನಿಂತಿರುವೆ.

ಭವರೋಗ ವೈದ್ಯನು ನೀನು ಭವ ಭಂದನ ಬಿಡಿಸುವವ ನೀನು
ಎಲ್ಲಾ ಕರ್ಮ ಮಾಡಿ ಕುಕರ್ಮಿಯಾದ ನಾನು  ನಿನ್ನ ಬೇಡುವ  ಅರ್ಹತೆ ನನಗೇನು.

ನಾ ಅರಿತು ಮಾಡುವ ಕರ್ಮಕೆ ಹೊಣೆಯಾರು ತಿಳಿಸು ಗುರುವೇ 
ಲೌಕಿಕದ ಬಣ್ಣಗಳ ವಿವಿಧ ವಾಸನೆಗಳ ಸುಳಿಯಿಂದ ದೂರಿಡೋ ಪ್ರಭುವೇ.

ನಾನು ನಾನಲ್ಲ ಯಾವುದೂ ನನದಲ್ಲ ಆದರೂ ಒಪ್ಪುವ ಮನವಲ್ಲ
ನೀನೇ ಎಲ್ಲಾ ನಿನ್ನ ಲೀಲೆಗೆ ಕೊನೆಯಿಲ್ಲ  ನಾ ಅರಿಯದೆ ಹೋದೆ ಸಖರಾಯಪ್ರಭುವೇ.

Friday, November 4, 2022

ಗುರುನಾಥ ಇರುವಾಗ ಅಭಯ ನೀಡುವಾಗ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಗುರುನಾಥ ಇರುವಾಗ ಅಭಯ ನೀಡುವಾಗ ಇನ್ಯಾಕೆ ಭಯವು ಹೇಳು ಮನವೇ
ನಿನ್ನ ದಾರಿ ಸರಿ ಎಂದಾಗ ನಿನ್ನ ಜೊತೆ ಗುರುವಿರುವಾಗ ಭಯವೆಂತು ನಾನರಿಯೇ.

ಅವನ ನಂಬಿದ ಮನವು ಅವನೇ ಎಲ್ಲಾ ಎಂಬ ಭಾವವು ಎನ್ನ ಕಾಪಾಡಿದೆ
ಅನುಮಾನದ ಒಂದು ಸುಳಿಯು ದೂರ ಮಾಡುವುದು ನಿನ್ನಿಂದ ಗುರುವೇ.

ಅವನ ನಾಮದ ಜಪವು ತರುವುದು ಮನಕೆ ಹೇಳಲಾರದ ಮುದವು
ಮನದ ಕಲ್ಮಶ ದ್ವೇಷ ಅಸೂಯೆಗಳ ತೊಳೆದು ಶುದ್ಧ ಭಾವ ಮೂಡುವುದು.

ಎಲ್ಲಾ ಅವನೆಂದಾಗ ನಾನೆಲ್ಲಿ ಉಳಿದೆ ಎಲ್ಲಾ ಅವನ ಪಾದ ಸೇರಿದವು
ಎಲ್ಲರೂ ನನ್ನವರೆಂಬ ಭಾವ ಎಲ್ಲರಲೂ ನೀನಿರುವ ಅರಿವು ಮೂಡಿದವು.

ಎಲ್ಲಾ ನಿನ್ನದಾದಾಗ ನನ್ನದೆಂಬುದು ಏನುಂಟು ತಿಳಿಸೋ ಪ್ರಭುವೇ
ಇಲ್ಲದಿರುವುದಕೆ ಹೊಡೆದಾಡಿ ಎಲ್ಲರಿಂದ ದೂರಾಗಿ ನಾ ಮಾಡುವದೆಂತೋ.

ಯಾರನೂ ಧೂಷಿಸದೆ  ಹಳಿಯದೆ ನಿನ್ನ ಭಜಿಸುವ ಮನ ನೀಡೋ ದೊರೆಯೇ
ಬದುಕು ಹಸನಗೊಳಿಸಿ ಮನವ ಶುದ್ದಿಗೊಳಿಸೋ ಸಖರಾಯ ಪ್ರಭುವೇ.

Sunday, October 30, 2022

ಗುರುವೆಂದು ನುಡಿಯುತ ಎಲ್ಲಾ ನೀನೆಂದು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಗುರುವೆಂದು ನುಡಿಯುತ ಎಲ್ಲಾ ನೀನೆಂದು ಹೇಳುತ ಬರೀ ನಟಿಸಿ ಬದುಕಿದೆನು
ನಿನ್ನ ನುಡಿಯ ಆಲಿಸದೆ ನಿನ್ನ ತತ್ವ ಅರಿಯದೆ ಬರೀ ವೇಷ ದರಿಸಿ ಬಾಳಿದೆನೋ.

ಕೊಡು ಕೊಡೆಂದು ಸದಾ ಬೇಡುತ ಬೆಂಬಿಡದೆ ನಿನ್ನ ಕಾಡಿದೆನೋ
ನಂಬಿದಂತೆ ನಟಿಸಿ ಬೇಡುವವನಂತೆ ತೋರಿಸಿ ಭಕುತಿಗೆ ವಂಚಿಸಿದೆನೋ.

ಗುಂಪಿನಲಿ ನಿಂತು ತೋರಿಕೆಯ ಭಕುತಿ ಬೀರಿ ನನಗೆ ನಾ ವಂಚಿಸಿ ಕೊಂಡೆನೋ 
ಅನ್ಯರ ಬಕುತಿಯ ಅರಿಯದೆ ತೋರಿಕೆಯ ಭಾವ ತೋರಿ ಸೋತೆನೋ.

ಸ್ವಾರ್ಥದ ಭಕುತಿ ತೋರಿ ಆಸೆಗಳ ಹೊರೆ ಹೊತ್ತು ನಿನ್ನ ಬೇಡಿದೆನೋ
ಮಾಡುವ ಕುಕರ್ಮಕೆ ನಿನ್ನ ಬೆಂಬಲ ಬೇಡಿ ಬಂಡ ಬದುಕ ಬಾಳಿದೆನೋ.

ತಂದೆ ತಾಯಿಯರ  ಸಲಹದೆ ಬೂಟಾಟಿಕೆಯ  ಬದುಕು ನಡೆಸಿ ಕೊರಗಿದೆನೋ
ಓ ಸಖರಾಯಾಧೀಶ  ಎನ್ನ ಸಲಹೆನ್ನಲು ಕನಿಕರದಿ ಬರುವೆಯಾ ನೀನು.

Tuesday, May 10, 2022

ಬಲು ಸಡಗರದಿ ಬಂದು ಬೃಂದಾವನವ ಸುತ್ತಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬಲು ಸಡಗರದಿ ಬಂದು ಬೃಂದಾವನವ ಸುತ್ತಿ ಆನಂದದಿ ನಿಂತೆನೋ
ಎಂದೂ ಕಾಣದ ಅನುಭೂತಿ ಪಡೆದು ಮೈ ಮರೆತು ಭಜಿಸಿಹೆನೋ|

ಹರನೆಲ್ಲಿ ಹರನೆಲ್ಲಿ ಎನುತ ಮುದದಿ ಪಾಡುತ ಸಖರಾಯಧೀಶನ ಕಂಡೆನೋ
ಮಹದೇವ ತಾನಾಗಿ ಬಕುತರಾ ಪೊರೆಯುತ ಇದ್ದರೂ ಇಲ್ಲದಂತಿಹನೋ|

ಶಿವನೇ ತಾನಾಗಿ ಲೀಲೆಗಳ ತೋರುತ ಎಲ್ಲರೊಳಗೊಂದಾಗಿ ಬೆರೆತಿಹನೋ
ಪಂಚ ಭೂತಗಳೊಡೆಯ ತಾನಾದರೂ ಕಿಂಚಿತ್ತೂ ಗರ್ವ ತೋರನಿವನೋ|

ಎಲ್ಲಾ ಅವನ ಲೀಲೆ ಎನುತ ಎಲ್ಲಾ ಕಷ್ಟ ದೂರಮಾಡುತ ಮೌನದರಿಸಿಹನೋ 
ಎಲ್ಲಾ ಜೀವಿಗಳ ಒಡನಾಟದಿ ಅರಿವಿಲ್ಲದೇ ಎಲ್ಲರಲೂ ಅರಿವು ಮೂಡಿಸಿಹನೋ|

ಕರ್ಮ ಬಂಧನದ ಸಂಕೋಲೆ ಕಳಚುತ ನಿತ್ಯ ಸತ್ಯ ಸಾರಿ ಹೇಳಿಹನೋ
ಗುರುನಾಥ ಎಂದೊಡೆ ಅನಾಥ ಭಾವ ಸರಿಸಿ ನಿಮ್ಮೊಡನೆ ಇರುವೆನೆಂದನೋ|

Sunday, May 8, 2022

ಬಡವನಾದೆನು ನಾನು ಭಜಿಸದೇ ನಿನ್ನನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಬಡವನಾದೆನು ನಾನು ಭಜಿಸದೇ ನಿನ್ನನು ಪ್ರಭುವೇ  ಮನ್ನಿಸಿ ಹರಸೆನ್ನನು
ಬಕುತಿಯ ಸೋಗು ಧರಿಸಿಹೆ  ಲೌಕಿಕದ ಚಿಂತೆ ಕಾಡುತಿದೆ ಗುರುವೇ ಎನ್ನನು|

ಮನದ ಒಳಹೊಕ್ಕು ಭಾವನೆಗಳ ತಡಕಾಡಿ ಸೋತು ನಿಂತಿಹೆನೋ
ಬರೀ  ಪ್ರಲೋಭನೆಗಳ ಸುಳಿಯೊಳು ಮನ ಸಿಲುಕಿ ಅಂಧನಾಗಿಹೆನೋ|

ಭಾವಶುದ್ದಿಯ ಬಯಸಿ ಬಯಕೆಗಳ ಬದಿಗೊತ್ತಿ ಹೋರಾಡುತಿಹೆನೋ
ಅಲ್ಪ ಬುದ್ಧಿಯ ಜೀವಿಯು ನಾನು ಏನೂ ಅರಿವಿಲ್ಲದೇ ಕೊರಗುತಿಹೆನೋ|

ಮನವ ನಿನಗರ್ಪಿಸದೆ ಮತಿಯ ಮರ್ದಿಸದೆ ನೀ ಒಲಿಯಲಾರೆಯೇನೋ
ನನಗರಿಯದು ಗುರುವೇ ಬದುಕು ನಡೆಸುವ ಪರಿ ಸೋತು ಕೂಗುತಿಹೆನೋ|

ಬಣ್ಣದಾ ಬದುಕಿನ ರಂಗಿನಾ ಆಟ ಸಾಕು ನೀ ಒಮ್ಮೆ ದಯೆ ತೋರಬಾರದೇನೋ
ಸಖರಾಯ ದೊರೆಯೇ  ನಿನ್ನಂಗಳದಿ ನಾ ಬೇಡುತಾ ನಿಂತೆ ಹರಸಬಾರದೇನೋ|

Tuesday, February 22, 2022

ಮರೆತು ಹೋಯಿತು ನಿನ್ನ ಇರುವಿನ ಅರಿವು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಮರೆತು ಹೋಯಿತು ನಿನ್ನ ಇರುವಿನ ಅರಿವು ಹಾದಿ ತಪ್ಪಿತು ಎನ್ನ ಬದುಕಿನ ಗುರಿಯು
ತಾಳ ತಪ್ಪಿದ ಭಾವವಿಲ್ಲದ ಬರೀ ನೋವುಗಳ ಗೂಡಾಯಿತು ಎನ್ನ ಮನವು|

ಬಕುತನ ಸೋಗು ಧರಿಸಿ ಬಕುತಿಯ ವೇಷ ಧರಿಸಿ ನಿನ್ನ ಮುಂದೆ ನಿಲ್ಲುವುದುಂಟೆ ನಾನು
ಬರೀ ಒಣ ಪದಗಳ ಬಳಸಿ ನಿನ್ನ ಜಪಿಸುವೆನೆನುತ ಕಾಲ ಕಳೆದು ಮೂಡನಾದೆ ನಾನು|

ನೀನೇ ಎಲ್ಲವೂ ಎನುತ ನಿಜ ಬಕುತಿಯನೇ ಮರೆಯುತ ನಾಟಕವಾಡಿಹೆನು ನಾನು
ಕಳ್ಳ ಮನಸ್ಸಿನೊಳು ಪೊಳ್ಳು ಭಾವವ ತುಂಬಿ ಮಳ್ಳನಂತೆ ಬೇಡುತಿಹೆನು ನಾನು|

ಬದುಕಿನ ಬೇಗೆಯನು ತಾಳಲಾರದೆ ನಿಜ ಬಕುತಿಯ ಮಾಡದೆ ನಿನ್ನ ಕಾಡುತಿಹೆನೋ
ಅನ್ಯರ ಸಹಿಸದೇ ಸ್ವಾರ್ಥದಿ ದುರಾಸೆಯ ಬಲೆಯಲಿ ಸಿಲುಕಿ ಬಳಲಿಹೆ ನಾನು|

ಇನ್ನೆಷ್ಟು ಕಾಯಿಸುವೆ ಇನ್ನೆಷ್ಟು ದೂರ ಇಡುವೆ ಮನವ ಮರ್ದಿಸದೆ ಇನ್ನೆಷ್ಟು ಕಾಡುವೆ
ಓ ನನ್ನ ಪ್ರಭುವೇ ನೀನಲ್ಲದೇ ಇನ್ಯಾರು ಪೊರೆವರು ಎನ್ನನು ಮನ್ನಿಸೋ ಸಖರಾಯದೊರೆಯೇ|

Wednesday, November 24, 2021

ಯಾವ ದೈವವ ಬೇಡಲಿ ನಾನು - ಕೃಪೆ :ಶ್ರೀ. ಆನಂದ ರಾಮ್, ಶೃಂಗೇರಿ

ಯಾವ ದೈವವ ಬೇಡಲಿ ನಾನು ಸರ್ವ ದೈವವು ನೀನಾಗಿರುವಾಗ ಗುರುವೇ
ಸರ್ವ ತೀರ್ಥವು ನಿನ್ನ ಪದತಳದಿರುವಾಗ ಇನ್ನೆಲ್ಲಿ ತೀರ್ಥ ಸೇವಿಸಲಿ|

ಕರುಣಾಳು ನೀನೆಂದು ಬಕುತರು ನುಡಿವರು ಬಡವ ನಾನು ಬಕುತಿಯಲಿ ಹರಸು ಎನ್ನನು
ಎನ್ನ ಉಸಿರಿನ ಜೀವ ನೀನಾಗಿ ಕೊನೆ ತನಕ ನಿನ್ನ ನಾಮ ನೆನೆವ ಶಕುತಿ ನೀಡೋ|

 ನಿನ್ನ ಬೇಡಲು ಯೋಗ್ಯತೆಯು ಬೇಕೋ ಅದಿಲ್ಲದ ನಾನು ಗೊಳಿಡುವುದೇಕೋ
ಸತ್ಸಂಗ ಗಳಿಸೆ ನಿನ್ನ ಗಳಿಸಲು ಸುಲಭವಂತೆ ಯಾರ ಸಂಗ ಮಾಡಲಿ ನೀ ತಿಳಿಸ ಬೇಕೋ|

ಭಕುತಿಯ ಅರಿವಿಲ್ಲ ಮನದಿ ಬ್ರಾಂತಿ ತುಂಬಿ ಅರಿವಿಗೆ ಜಾಗವೇ ಇಲ್ಲವೋ
ಮನದ ವಾಸನೆ ತೊಡೆದು ನಿನ್ನನೇ ಭಜಿಸುವ ಕಾಯಕ ನೀಡಿ ಉದ್ಧರಿಸೋ ದೊರೆಯೇ|

ನಿನ್ನ ಮಹಿಮೆಯ ಅರಿವಿಲ್ಲ ಎನಗೆ ನಿನ್ನನೇ ಸೇವಿಸುವ ಪರಿ ತಿಳಿಸೋ ಪ್ರಭುವೇ
ಸಖರಾಯದೀಶ ನಿನ್ನನೇ ನಂಬಿಹೆನು ಮಗುವಂತೆ ಬೇಡುವೆನು ಹರಸು ಗುರುವೇ I