ಗುರುನಾಥ ಗಾನಾಮೃತ
ಬೇಗನೆ ಬಾರೋ ಗುರುನಾಥಾ ಅವಧೂತಾ
ರಚನೆ: ಅಂಬಾಸುತ
ಬೇಗನೆ ಬಾರೋ ಗುರುನಾಥಾ ಅವಧೂತಾ
ಬಾಧಿಪುದೀ ಭವ ಬಹಳಾಂತ ||ಪ||
ಹುಟ್ಟು ಸಾವಿನ ನಡುವೇ ಕೆಟ್ಟ ರೋಗಾರುಜಿನಾ
ಕಟ್ಟಳೆ ಇಲ್ಲದ ಈ ಬದುಕೂ
ಬಟ್ಟೆ ಕಟ್ಟಿ ಕಣ್ಣಿಗೆ ಅಡವಿಗೆ ಬಿಟ್ಟಂತಾಗಿದೇ
ದುಷ್ಟತನವಾ ಕುಟ್ಟಿ ಕಣ್ತೆರೆಸಲೂ ಬಾರೋ ||೧||
ರಾಮನಾಮ ನೆನೆಯೋ ನಾಲಿಗೆ ರುಚಿ ಹುಡುಕೀ
ನಾನಾ ಕಡೆ ತಿರುಗಿಹುದಯ್ಯಾ
ಕಾಮಾದಿ ದಾನವರು ಪ್ರೇಮ ತೋರುತಾ ಮನವಾ
ಸೆರೆಹಿಡಿದಿಹರೂ ಬಿಡಿಸಲು ಬಾರೋ ||೨||
ಬಂಧುಬಾಂಧವರು ತಾವ್ ಬಂದ್ಹೋದರೂ
ಇದ್ದ ಸಾಧನೆಯಾ ಕದ್ದೊಯ್ದರೂ
ಆತ್ಮಬಂಧು ನಿನ್ನ ಹೊರೆತೂ ನಾ ಯಾರನು ಕಾಣೇ
ಎನ್ನನುದ್ಧರಿಸಲು ನೀ ಬೇಗ ಬಾರೋ ||೩||
ಸಖರಾಯಪುರದಿಂದ ಸದ್ಗುರುನಾಥನೇ
ಅಂಬಾಸುತನ ಈ ಮನಮನೆಗೇ
ಕರುವಾ ದನಿಯಾ ಕೇಳಿ ಬರುವಾ ಧೇನುವಂತೇ
ಕಲಿಯುಗದಾ ಕಾಮಧೇನು ನೀ ಬಾರೋ ||೪||
No comments:
Post a Comment