ಒಟ್ಟು ನೋಟಗಳು

Wednesday, November 30, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 18


ಶೃಂಗೇರಿಗೆ ಹೋಗಿ ಜಗದ್ಗುರುಗಳಿಂದ ಫಲಮಂತ್ರಾಕ್ಷತೆ ಪಡೆಯಿರಿ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಸಖರಾಯಪಟ್ಟಣದಲ್ಲಿ ಅನೇಕ ವರ್ಷಗಳು ವಾಸವಾಗಿದ್ದು, ತದನಂತರ ಶಿವಮೊಗ್ಗಕ್ಕೆ ಬಂದು ನೆಲೆಸಿದ ಗುರುಬಾಂಧವರೊಬ್ಬರ ಮನೆಗೆ ಗುರುನಾಥರು ಆಗಾಗ್ಗೆ ಬರುತ್ತಿದ್ದರು. ಗುರುನಾಥರ ವಿಚಾರವಾಗಿ ಅವರು ಕಂಡ ವಿಚಾರವನ್ನವರು ಸ್ಮರಿಸುತ್ತಾ ಹೀಗೆ ಹೇಳುತ್ತಾರೆ: "ಸುಮಾರು ನಲವತ್ತೈದು ವರ್ಷಗಳಿಂದ ವೆಂಕಟಾಚಲಯ್ಯನವರ ಪರಿಚಯ ನನಗಿತ್ತು. ನಮ್ಮ ಮಾವನವರ ಮನೆಯ ಎದುರಿಗೇ ಅವರ ಮನೆ ಇತ್ತು. ಓದಿದ ಸುಸಂಸ್ಕೃತರಾದ ಅವರು ಉತ್ತಮ ಕೃಷಿಕರಾಗಿದ್ದರು. ಆಸ್ತಿಕರು. ನಮ್ಮ ಜೊತೆಗೆ ಕ್ರಿಕೆಟ್ ಆಟಕ್ಕೆ ಬರುತ್ತಿದ್ದರು. ಮುಂದೆ ಕೆಲದಿನಗಳಲ್ಲೇ ಅವರು ಆಂತರ್ಯದ ಸಾಧನೆಯಿಂದಲೋ, ಮತ್ಯಾವ ಶಕ್ತಿಯಿಂದಲೋ ಅವರ ಬಗ್ಗೆ ಜನಗಳಲ್ಲಿ ಗುರುಭಾವನೆ ಬೆಳೆಯತೊಡಗಿತು. ಅವರು ಭೂತ ಭವಿಷ್ಯತ್ ವರ್ತಮಾನಗಳನ್ನು ಬಲ್ಲವರಾದರು. ಅನೇಕ ನೊಂದವರಿಗೆ ದಾರಿದೀಪರಾದರು. ಒಮ್ಮೆ ನಮ್ಮ ಮಗಳ ಮದುವೆಯ ವಿಚಾರದಲ್ಲಿ ಮನಸ್ಸಿಗೆ ಸ್ವಲ್ಪ ಕಿರಿಕಿರಿಯಾದಾಗ, ಅವರ ಬಳಿ ನೇರವಾಗಿ ಹೋಗಿದ್ದೆ. ಫಲಪುಷ್ಪ ತಾಂಬೂಲಗಳನ್ನು ತೆಗೆದುಕೊಂಡು ಹೋದಾಗ ಒಳಕರೆದರು. "ನೀವು ಸೀದಾ ಈಗಲೇ ಜಗದ್ಗುರುಗಳ ಬಳಿ ನಡೆಯಿರಿ. ಇದನ್ನೆಲ್ಲಾ ಅವರಿಗರ್ಪಿಸಿರಿ. ನೀವು ಅಲ್ಲೇನೂ ಅವರ ಬಳಿ ಪ್ರಸ್ತಾಪಿಸುವುದು ಬೇಡ. ಅವರಿಂದ ಫಲ ಮಂತ್ರಾಕ್ಷತೆಗಳನ್ನು ಪಡೆದುಕೊಳ್ಳಿರಿ. ಎಲ್ಲ ಸರಿಯಾಗುತ್ತೆ. ನಿಮ್ಮ ಮಗಳು ಸುಖವಾಗಿರುತ್ತಾಳೆ" ಎಂದು ನನ್ನನ್ನು ಶೃಂಗೇರಿಗೆ ಆ ಕೂಡಲೇ ಕಳಿಸಿದರು. ಈ ಹಿಂದೆ ಅನೇಕ ಸಾರಿ ಇವರು ಹೋದರೂ ಗುರುನಾಥರು ಸಿಕ್ಕಿರಲಿಲ್ಲ. 

"ಶೃಂಗೇರಿ ತಲುಪಿದ ನಾನು ಜಗದ್ಗುರುಗಳನ್ನು ಭೇಟಿಯಾದಾಗ, ಗುರುನಾಥರ ಬಗ್ಗೆ ನಮ್ಮೂರಿನ ಇತರರ ಬಗ್ಗೆ ಸಹಜವಾಗಿ ಪ್ರಸ್ತಾಪಿಸಿದರು. ಒಂದು ಹುಸಿನಗೆಯನ್ನು ನಕ್ಕರು. ಆ ನಗೆ ತಮಗೆಲ್ಲವೂ ತಿಳಿದಿದೆ - ನೀವೇನೂ ಚಿಂತಿಸಬೇಡಿರೆಂಬ ಅಭಯದಂತಿತ್ತು. ನಂತರ ಫಲಮಂತ್ರಾಕ್ಷತೆಯನ್ನು ನೀಡಿದರು. ಗುರುನಾಥರು ಹೀಗೆ ಆಶೀರ್ವದಿಸಿ, ಜಗದ್ಗುರುಗಳ ಆಶೀರ್ವಾದವನ್ನು ದಯಪಾಲಿಸಿದರು. ಈಗ ನನ್ನ ಮಗಳು, ಒಂದು ಮಗುವಿನೊಂದಿಗೆ ಗುರುನಾಥರ ನುಡಿಯಂತೆ ಸೌಖ್ಯದಿಂದಿದ್ದಾಳೆ. ಇನ್ನೂ ವಿಶೇಷವೆಂದರೆ ಆ ಮಗಳು ತಾಯಿ ಹೊಟ್ಟೆಯಲ್ಲಿದ್ದಾಗಲೂ ಗುರುನಾಥರು ನಮ್ಮ ಮನೆಗೆ ಬಂದಿದ್ದರು. ಹೀಗಾಗಿ, ಗುರುನಾಥರ ಶ್ರೀರಕ್ಷೆ ನಮಗೆಂದಿಗೂ ಇದೆ" ಎಂದು ಸ್ಮರಿಸುತ್ತಾರೆ. ಎಲ್ಲ ನಿರ್ವಹಿಸಬಲ್ಲ ಸಬಲರು ಗುರುನಾಥರಾಗಿದ್ದರೂ ಅವರು ನೀಡುತ್ತಿದ್ದ, ತೋರಿಸುತ್ತಿದ್ದ ಕ್ಷೇತ್ರಗಳು, ನಿರ್ದೇಶಿಸುತ್ತಿದ್ದ ದರ್ಶನಗಳ ಮರ್ಮವೇನೆಂದು ತಿಳಿಯುವುದೇ ಅಸಾಧ್ಯವಾಗಿತ್ತು". 

ಭವರೋಗ ವೈದ್ಯ 


ಗುರುನಾಥರ ಬಗ್ಗೆ ಮತ್ತೆ ತಮ್ಮ ಅನುಭವವನ್ನು ಬಿಚ್ಚಿಡುತ್ತಾ ಅವರು ಹೀಗೆ ಮುಂದುವರೆಸಿದರು. "ಅರಸೀಕೆರೆಯಲ್ಲಿ ನಮ್ಮ ಬಂಧುಗಳೊಬ್ಬರಿದ್ದಾರೆ. ಅವರ ಮಗನಿಗೆ ಕಣ್ಣಿನ ಮೇಲೊಂದು ದೊಡ್ಡ ಗೆಡ್ಡೆ ಎದ್ದಿದ್ದು, ಅನೇಕ ರೀತಿಯ ಚಿಕಿತ್ಸೆ ಮಾಡಿಸಿದ್ದರೂ ಗುಣವಾಗಿರಲಿಲ್ಲ. ಒಮ್ಮೆ ಗುರುನಾಥರು ಅರಸೀಕೆರೆಯ ಸೀತಾರಾಮ ಕಲ್ಯಾಣ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು. ಆಗ ನಮ್ಮ ಬಂಧುಗಳು ಮಗನನ್ನು ಕರೆದುಕೊಂಡು ಹೋಗಿ ಗುರುನಾಥರಿಗೆ ನಮಿಸಿ ಬೇಡಿಕೊಂಡರು. ಗುರುನಾಥರು ಆ ಮಗುವಿನ ಕಣ್ಣಿನ ಮೇಲೆ ಕೈ ಇಟ್ಟು ಅದೇನು ಚಿಕಿತ್ಸೆ, ಆಶೀರ್ವಾದ ಮಾಡಿದರೋ ಅವರೇ ಬಲ್ಲರು. ಮುಂದೆ ಯಾವುದೇ ಔಷಧಿಗಳಿಲ್ಲದೆ, ನಂತರದಲ್ಲಿ ಅವನು ಗುಣಮುಖನಾದನು. ಉತ್ತಮವಾಗಿ ಓದುತ್ತಾ, ಅವನೀಗ ಇಂಜಿನಿಯರಿಂಗ್ ಮಾಡುತ್ತಿದ್ದಾನೆ. ಆ ಮನೆಯವರೆಲ್ಲರೂ ಈಗಲೂ ಗುರುನಾಥರ ಭಕ್ತರಾಗಿ, ಅವರ ಸೇವೆಯಲ್ಲಿ ತೊಡಗಿದ್ದಾರೆ. ಹೀಗೆ ಯಾವ ಚಿಕಿತ್ಸೆಯಿಂದಲೂ ಗುಣವಾಗದ್ದು ಭವರೋಗಹರ ವೈದ್ಯರಾದ ಗುರುನಾಥರ ಸ್ಪರ್ಶ ಮಾತ್ರದಿಂದ ಗುಣವಾಗಿಬಿಟ್ಟಿತು ಎಂದು ಸ್ಮರಿಸುತ್ತಾರೆ. 

ಏನೂ ಆಗಲ್ಲ ಹೆದರಬೇಡ 


ಗುರುಕಥಾಮೃತವನ್ನು ಮುಂದುವರೆಸಿದ ಆ ಗುರು ಬಂಧುಗಳು ತಮಗಾದ ಮತ್ತೊಂದು ಘಟನೆಯನ್ನು ಸ್ಮರಿಸುತ್ತಾ ಹೀಗೆ ಮುಂದುವರೆಸಿದರು. "ನನ್ನ ಮಗಳ ಜೀವನದಲ್ಲಿ ಗುರುನಾಥರ ಕೃಪೆ ಆಗಾಗ್ಗೆ ಆಗುತ್ತಲೇ ಸಾಗಿದೆ. ಜೀವನದ ಪ್ರಮುಖ ಘಟ್ಟವಾದ ಎಸ್. ಎಸ್. ಎಲ್. ಸಿ. ಯಲ್ಲಿ ಬಹಳ ಶ್ರಮ ಪಟ್ಟು ಓದಿದ ಅವಳಿಗೆ ಇದ್ದಕ್ಕಿದ್ದಂತೆ ಜ್ವರ ಬಂದು ಅಮ್ಮ ಬಂದಿತು. ಪರೀಕ್ಷೆಗೆ ಹೋಗುವುದಕ್ಕೂ ಆಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಧಿಕ ಅಂಕ ಪಡೆಯಬೇಕೆಂದು ಓದಿದ್ದ ಅವಳು, ಪರೀಕ್ಷೆ ಎದುರಿಸುವುದು, ಮುಂದಿನ ತರಗತಿಗಳಲ್ಲಿ ಪ್ರವೇಶ ಪಡೆಯುವುದು ಅಸಾಧ್ಯವೆಂದು ಭಾವಿಸಿ ಭೀತಳಾಗಿದ್ದಳು. ಆಗ ಒಂದು ದಿನ ರಾತ್ರಿ ಹನ್ನೊಂದೂವರೆಗೆ ಗುರುನಾಥರು ನಮ್ಮ ಮನೆಗೆ ಎಲ್ಲಿಗೋ ಹೋದವರು ಬಂದರು. ನಾವುಗಳೆಲ್ಲಾ ನೀವೇ ರಕ್ಷಿಸಬೇಕೆಂದು ಕೇಳಿಕೊಂಡಾಗ "ಏನೂ ಆಗಲ್ಲ ಹೆದರಬೇಡಿ" ಎಂದು ಅವಳ ಹಾಸಿಗೆಯ ಬಳಿ ಬಂದು, ಅದೇನೋ ಮಂತ್ರಿಸಿ, ಹಾಸಿಗೆಯ ಕೆಳಗೆ ಇಟ್ಟರು. ಎಲ್ಲ ಸುಸೂತ್ರವಾಯಿತು. ಪರೀಕ್ಷೆಗೂ ಹೋದಳು. ಉತ್ತಮ ಅಂಕವನ್ನೂ ಪಡೆದಳು". 

ಹೀಗೆ ಪದೇ ಪದೇ ಅವರು ಸಂಕಟದಲ್ಲಿ ಬಿದ್ದಾಗ ಗುರುನಾಥರು ಅವರನ್ನು ರಕ್ಷಿಸುತ್ತಾ ಬಂದಿದ್ದಾರೆ. ಗುರುನಾಥರಿಗೆ ನಮ್ಮವರು ತಮ್ಮವರೆಂಬ ಬೇಧಭಾವವೇ ಇಲ್ಲ. ಅವರ ಕೃಪೆ ಯಾವಾಗ, ಯಾರ ಮೇಲಾಗುತ್ತದೆ ಎಂದು ಊಹಿಸುವುದೂ ಅಸಾಧ್ಯ. 

ಆಪದ್ಭಾಂಧವರು


"ನಮ್ಮ ಮನೆಯ ಮುಂದೆ ಒಬ್ಬ ಪತ್ರಿಕಾ ಪ್ರತಿನಿಧಿಗಳಿದ್ದರು. ಅವರ ಮನೆಯಲ್ಲಿ ಅವರ ತಾಯಿ ಹಾಗೂ ಅವರ ಹೆಂಡತಿ ಇದ್ದರು. ಒಮ್ಮೆ ಯಾವುದೋ ಕಾರ್ಯ ನಿಮಿತ್ತ ಅವರು ಬೆಂಗಳೂರಿಗೆ ಹೋಗಿದ್ದರು. ರಾತ್ರಿ ಹನ್ನೆರಡು ಗಂಟೆಯ ಸಮಯದಲ್ಲಿ ಆ ಪತ್ರಿಕಾ ಪ್ರತಿನಿಧಿಗಳ ಹೆಂಡತಿ ಬಂದು 'ಮನೆಯಲ್ಲಿ ಅವರು ಇಲ್ಲ. ವೃದ್ಧರಾದ ನಮ್ಮ ಅತ್ತೆ ಹೇಗೆ ಹೇಗೋ ಮಾಡುತ್ತಿದ್ದಾರೆ. ನನಗೇನೂ ದಿಕ್ಕೇ ತೋಚುತ್ತಿಲ್ಲ. ಸ್ವಲ್ಪ ಬರ್ತೀರಾ' ಎಂದು ಕರೆದಾಗ, ನಾನು ಹೋದೆ. ನೋಡಿದರೆ ದೇಹ ತಣ್ಣಗಾಗುತ್ತಿತ್ತು. ಆ ಕ್ಷಣದಲ್ಲಿ ಏನೂ ಮಾಡುವಂತಿರಲಿಲ್ಲ. ಯಾರು ಯಾರಿಗೆ ತಿಳಿಸಬೇಕೆಂದು ಮಾತನಾಡುತ್ತಿರುವಾಗ, ಆ ಸರಿ ರಾತ್ರಿಯಲ್ಲಿ ನಮ್ಮ ಮನೆಗೆ ಬಂದ ಗುರುನಾಥರು, ಯಜಮಾನರು ಎಲ್ಲಿದ್ದಾರಮ್ಮಾ? ಎಂದು ಕೇಳಿ ನೇರವಾಗಿ ಎದುರು ಮನೆಗೇ ಬಂದರು. ಆ ವೃದ್ಧೆ ಅದೆಷ್ಟು ಪುಣ್ಯ ಮಾಡಿದ್ದರೋ, ಅಂತಿಮ ಘಳಿಗೆಯಲ್ಲಿ ಗುರುನಾಥರ ಸಾನ್ನಿಧ್ಯ ಅವರಿಗೆ ಸಿಕ್ಕಿತ್ತು. ನಾನು ಆ ರಾತ್ರಿಯೇ ಅನ್ಯ ಕಾರ್ಯ ನಿಮಿತ್ತ ಪರ ಊರಿಗೆ ಹೋಗಲೇ ಬೇಕಾಗಿತ್ತು. ಇದನ್ನು ಅರಿತ ಗುರುನಾಥರು "ನೀವು ಹೊರಡಿ. ನಾನಿಲ್ಲಿ ಎಲ್ಲಾ ನೋಡಿಕೊಳ್ಳುತ್ತೇನೆ" ಎಂದು ಅಲ್ಲೇ ಇದ್ದು , ಅವರ ಮಗ ಬೆಂಗಳೂರಿನಿಂದ ಬರುವವರೆಗೆ ಎಲ್ಲ ನೋಡಿಕೊಂಡಿದ್ದರು. 

ಗುರುನಾಥರು ಇವರ ಮನೆಗೆ ಬಂದಾಗ ಸಾಮಾನ್ಯ ಒಂದು ಚಾಪೆ, ದಿಂಬು ಕೊಡಿ ಸಾಕೆಂದು ಮಲಗಿ ಬೆಳಗಿನ ಜಾವವೇ ಎದ್ದು ಎಲ್ಲಿಗೆ ಹೋಗುತ್ತಿದ್ದರೋ ಒಂದೂ ಅರಿವಾಗುತ್ತಿರಲಿಲ್ಲ. ಯಾರಿಗಾದರೂ ಆಪದ್ಭಾಂಧವರಾಗಿ ಬಂದು ಸಹಕರಿಸಿದರೂ, ಕೆಲಸವಾದ ಮೇಲೆ ಒಂದು, ವಂದನೆಯನ್ನು ಅಪೇಕ್ಷಿಸಿದೇ ಹೋಗಿ ಬಿಡುತ್ತಿದ್ದುದು ಗುರುನಾಥರ ಒಂದು ಲಕ್ಷಣವಾಗಿತ್ತು. 

ಗುಡ್ಡವನ್ನು ಕಡ್ಡಿಯಾಗಿಸಿದ ಗುರುನಾಥರ ಭಕ್ತರ ಮನೆಯ ಕಾಫಿ 


ಒಂದು ಸಣ್ಣ ಅವಘಡವಾಯ್ತು ಒಬ್ಬರಿಗೆ. ಅವರ ಬಂಧುಗಳು ಗುರುನಾಥರ ಭಕ್ತರು. ಮುಂದೆ ಅವರು ಚಿಕಿತ್ಸೆಗೆಂದು ಆಸ್ಪತ್ರೆ ಸೇರಿದಾಗ ಯಾರದೋ ಬೇಜವಾಬ್ದಾರಿಯಿಂದ ಸೀರಿಯಸ್ ಆಗಿ ಅವರನ್ನು ಐಸಿಯುಗೆ ಸೇರಿಸಲಾಯ್ತು. ಎಲ್ಲರೂ ಗಾಭರಿಯಾಗಿಬಿಟ್ಟರು. ಜೀವನ ಮರಣದ ಪ್ರಶ್ನೆ. 

ಇವರನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಹೋದ, ಗುರುನಾಥರ ಶಿಷ್ಯರು ಒಬ್ಬರು, ಗುರುಗಳನ್ನು ಅನನ್ಯವಾಗಿ ಸ್ಮರಿಸಿದರು ಮತ್ತು ಸನಿಹದಲ್ಲೇ ಇರುವ ಗುರುನಾಥರ ಭಕ್ತರೊಬ್ಬರ ಮನೆಗೆ ಬಂದು, ಪರಿಸ್ಥಿತಿಯನ್ನು ವಿವರಿಸಿ... 'ನೋಡಿ ನಿಮ್ಮ ಮನೆಯ ಕಾಫಿಯನ್ನು ಕೊಡಿ.. ಗುರುನಾಥರ ತೀರ್ಥವೆಂದು ಭಾವಿಸಿ, ಅವರಿಗೆ ಅದನ್ನು ಕುಡಿಸುತ್ತೇನೆ. ಗುರುನಾಥರ ಕೃಪೆಯಿಂದ ಅವರು ಹುಷಾರಾಗುತ್ತಾರೆ' ಎಂದು ಹೇಳುತ್ತಾ, ಭಕ್ತಿಭಾವದೊಂದಿಗೆ ಗುರುನಾಥರ ಶಿಷ್ಯರ ಮನೆಯ ಕಾಫಿಯನ್ನು ಕುಡಿಸಿದರಂತೆ. ಐಸಿಯುನಲ್ಲಿ ಇದ್ದ ಅವರು ಅಪಾಯದಿಂದ ಪಾರಾದರು. ಈಗ ಆರಾಮವಾಗಿಯೂ  ಇದ್ದಾರೆ. ಹೇಗಿದೆ? ಗುಡ್ಡವಾಗಿ ಬಂದಿದ್ದ ಅವಘಡ ಕಡ್ಡಿಯಂತೆ ಹಗುರವಾಗಿತ್ತು. ಅವರ ಭಕ್ತರ ಮನೆಯ ಕಾಫಿ - ಭಕ್ತರ ದೃಢಭಾವದಿಂದ ಮಾಡಿದ ಗುರುನಾಥರ ಸ್ಮರಣೆ. 


ಬದುಕುವ ಮಾರ್ಗ ಕಲಿಸಿದ ಗುರುನಾಥರು 


ಒಬ್ಬ ಗುರು ಬಂಧುಗಳು ಒಂದು ದೊಡ್ಡ ಅಂಗಡಿ ನಡೆಸುತ್ತಿದ್ದರು. ಅವರ ಕೈಕೆಳಗೆ ಅನೇಕ ಜನ ನಂಬಿಗೆಯವರಂತೆ ನಾಟಕವಾಡುವ ಕೆಲಸದವರಿದ್ದಿರಬಹುದು. ಇದು ಆ ಗುರುಬಂಧುವಿಗೆ ಅರಿವೇ ಆಗಿರಲಿಲ್ಲ. ಮನಸ್ಸು ಬಂದಾಗಲೆಲ್ಲಾ ಗುರುನಾಥರನ್ನು ಕಾಣಲು ಸಖರಾಯಪಟ್ಟಣಕ್ಕೆ ಹೋಗುತ್ತಿದ್ದರು. ಇವರ ಈ ರೀತಿ ಕಂಡ ಅವರ ಬಂಧುಗಳು 'ಇವನಿಗೆ ಏನೋ ಹುಚ್ಚು ಹಿಡಿದಿದೆ' ಎಂದೂ ಅಂದಿದ್ದರು. ಕೊನೆಗೊಂದು ದಿನ ಮೇಲಿನವರು ಬಂದು ಪರೀಕ್ಷಿಸಿ, ಇವರನ್ನು ಕೆಲಸದಿಂದ ವಜಾ ಮಾಡಿದುದೂ ಅಲ್ಲದೆ ಲಕ್ಷಗಟ್ಟಲೆಯ ಬಾಕಿ ಹೇರಿದರು. 

ಮಾರನೆಯ ದಿನ ಬೆಳಿಗ್ಗೆ ಎಂದಿನಂತೆ ಪೂಜೆ ಪುನಾಸ್ಕಾರ ಮಾಡಿ ಬಟ್ಟೆ ಹಾಕಿ ಹೋರಾಟ ಇವರನ್ನು ಅವರ ಪತ್ನಿ ಎಚ್ಚರಿಸಿದರು. ಈಗ ನಿಮ್ಮ ಕೆಲಸ ಇಲ್ಲ. ಎಲ್ಲಿಗೆ ಹೊರಟಿರಿ? ಹೌದು ಎಲ್ಲಿಗೆ ಹೋಗೋದು ಗುರುನಾಥರಲ್ಲಿಗೆ ಎಂದು ಸಖರಾಯಪಟ್ಟಣಕ್ಕೆ ಬಂದರು ಆ ಗುರುಬಂಧುಗಳು. 

ಬಂಧುಗಳೆಲ್ಲ ಮೂಗಳೆದರು. 'ಬೇಡ ಬೇಡ ಎಂದರೂ ಎಲ್ಲ ಬಿಟ್ಟು ಬೇಜವಾಬ್ದಾರಿಯಿಂದ ಹೋಗುತ್ತಿದ್ದ ಈಗ ಯಾರು ಇವನನ್ನು ಕಾಪಾಡುತ್ತಾರೆ' ಎಂದರು . 

ಸಖರಾಯಪಟ್ಟಣಕ್ಕೆ ಬಂದ ಇವರನ್ನು ಸಾಂತ್ವನಗೊಳಿಸಿ ಗುರುನಾಥರೆಂದರು. 'ಅಲ್ಲಪ್ಪಾ ಹದಿಮೂರು ಲಕ್ಷ ನಿನ್ನ ಮೇಲೆ ಬರಬೇಕಿತ್ತು. ನಾನು ಎಷ್ಟಂತ ಮಾಡಲಿ, ಕಾಯಲಿ ಮೂರು ಲಕ್ಷ ಕೊಡಬೇಕಾಗಿದೆಯಲ್ಲ ಚಿಂತಿಸಬೇಡಿ' ಎಂದು ಅಭಯ ನೀಡಿದರು. ಸಾಲ ತೀರಿಸುವ ಮಾರ್ಗವನ್ನೂ ತೋರಿಸಿದರು. ಇಂದೂ ಅವರು ನೂರಾರು ಜನಗಳಿಗೆ ದರ್ಶಿನಿಯೊಂದರ ಮೂಲಕ ಉತ್ತಮ ಆಹಾರ ಪಾನೀಯಗಳನ್ನೊದಗಿಸುವ ಕಾರ್ಯವನ್ನು ಮಾಡುತ್ತಾ ಸಂತಸದಿಂದಲೇ ಜೀವನ ಸಾಗಿಸುತ್ತಿದ್ದಾರೆ. ಗುರುಕೃಪೆ ಅವರಿಗೆ ಬದುಕುವ ಮಾರ್ಗ ಕಳಿಸಿದೆ. 

ನನಗೆ ಸೀರೆ ಕೊಡುವುದಿಲ್ಲವಾ 


ಒಮ್ಮೆ ಸೀರೆ ವ್ಯಾಪಾರ ಮಾಡುತ್ತಿದ್ದ ಗುರುಭಕ್ತೆಯೊಬ್ಬರು ಗುರುನಾಥರ ಬಳಿ ಹೋದಾಗ 'ನನಗೆ ಸೀರೆ ಕೊಡುವುದಿಲ್ಲವಾ' ಎಂದು ಕೇಳಿದ್ದರಂತೆ. ಗುರುನಾಥರೇಕೆ ಸೀರೆ ಕೇಳಿದರೋ ಯಾರಿಗೂ ಅರ್ಥವಾಗಲಿಲ್ಲ. ಅಂದು ಗುರುನಾಥರನ್ನು ಕಾಣಲು ಹೋದ ಆ ಭಕ್ತೆ ಸೀರೆ, ಬ್ಲೌಸ್ ಪೀಸ್, ಶಲ್ಯ  ಪಂಚೆಗಳನ್ನೆಲ್ಲಾ ತೆಗೆದುಕೊಂಡು ಹೋಗುವುದಷ್ಟೇ ಅಲ್ಲದೆ, ತಮ್ಮ ಬಳಿ ಉಳಿದಿದ್ದ ಇನ್ನೊಂದು ಹತ್ತು ಸೀರೆಯನ್ನು ಒಂದಿಷ್ಟು ಬ್ಲೌಸ್ ಪೀಸನ್ನು ತೆಗೆದುಕೊಂಡು ಹೋಗಿದ್ದರು. 

'ಇದೇನು ಒಂದು ಕೇಳಿದರೆ ಇಷ್ಟೊಂದು ತಂದಿದೀಯಲ್ಲಾ. ಇರಲಿ. ಇಲ್ಲಿರುವ ಎಲ್ಲರಿಗೂ ಕೊಟ್ಟುಬಿಡು' ಎಂದರು. ಶಿವಮೊಗ್ಗದಿಂದ ಬಂದಿದ್ದ ಗುರುಭಕ್ತ ದಂಪತಿಗಳಿಗೆ ಮೊದಲು ವಸ್ತ್ರದಾನ ಮಾಡಿಸಿ, ಮುಂದೆ ಎಲ್ಲರಿಗೂ ಸೀರೆ ಕುಪ್ಪಸಗಳ ದಾನ ಮಾಡಲು ಹೇಳಿದರು. ಹಾಗೆ ಮಾಡುತ್ತಿರುವಾಗ 'ನನಗೆ ಬ್ಲೌಸ್ ಪೀಸ್ ಕೊಡು ಎರಡು' ಎಂದು ಗುರುನಾಥರು, ಒಂದೊಂದು ತೊಡೆಯ ಮೇಲೂ ಒಂದೊಂದನ್ನು ಇಟ್ಟುಕೊಂಡು 'ನೋಡು ಆ ಬ್ಲೌಸ್ ಪೀಸುಗಳ ಮಧ್ಯೆ ನಿನ್ನ ಸೀರೆಗೆ ಮ್ಯಾಚ್ ಆಗುವುದೊಂದಿದೆ. ಅದನ್ನ ನೀನೇ ಹೊಲಿಸಿಕೋ' ಎಂದರು. ಆದರೆ ಅದಾಗಲೇ ಯಾರಿಗೋ ಹೋಗಿಬಿಟ್ಟಿತ್ತು. 

'ಗುರುನಾಥರೇ ನೀವು ನಿನ್ನೆ ಕನಸಿನಲ್ಲಿ ಬಂದಿದ್ದಿರಿ. ತಲೆ ಬಾಚಿಕೊಂಡಿದ್ದಿರಿ. ನನಗೆ ಹಣೆಗೆ ಕುಂಕುಮ ಹಚ್ಚಿ ಜಪಮಾಲೆಯನ್ನು ನೀಡಿದಿರಿ' ಎಂದು ಆ ಭಕ್ತೆ ವಿನಂತಿಸಿಕೊಂಡಾಗ, ಯಾರಪ್ಪಾ ಅಲ್ಲಿ ಬಾಚಣಿಕೆ ತನ್ನಿ ಎಂದು ತಲೆ ಬಾಚಿಸಿಕೊಂಡರು. ಗುರುನಾಥರ ಸಾನ್ನಿಧ್ಯದಲ್ಲಿ ಆನಂದ ಪಡುತ್ತಿರುವ ಆ ಭಕ್ತೆಗೆ ರಾಮನ ಗೀತೆಗಳೆಂದರೆ ಅತ್ಯಂತ ಪ್ರೀತಿ. ತಮ್ಮ ಬಂಧುಗಳೊಬ್ಬರಿಗೆ 'ರಾಯರ ಆ ಹಾಡನ್ನು ಹಾದಿ ಎಂದರಂತೆ'. ಹಾಡು ಕೇಳುತ್ತಾ ಆನಂದ ಭಾಷ್ಪ ಸುರಿಸುತ್ತಿದ್ದ ಭಕ್ತೆಗೆ, 'ರಾಮ ಎಂದರೆ ಆರಾಮ ಎಂದು ಹೇಳಿದ್ದರಲ್ಲದೆ, ನಿನಗೆ ಪೂರ್ಣಾನುಗ್ರಹವಿದೆ. ನೀನು ನುಡಿಯುತ್ತಿರು. ನಾನು ನುಡಿಸುತ್ತೇನೆ' ಎಂದು ಅನುಗ್ರಹಿಸಿದರಂತೆ. 

ಆ ಭಕ್ತೆ ಇಂದೂ ಗುರುನಾಥರ ಆ ನುಡಿಗಳನ್ನೇ ಮೆಲುಕು ಹಾಕುತ್ತಾ ಅವರ ನಾಮಸ್ಮರಣೆ ಮಾಡುತ್ತಾ ಅವರು ಜೀವನ ನಡೆಸುತ್ತಿದ್ದಾರೆ. ಗುರುನಾಥರು ಹೇಳಿದ್ದನ್ನ ಬಂದವರಿಗೆ ಹೇಳುತ್ತಾರೆ. ಅದು ಸತ್ಯವೂ ಆಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 



।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 57

ಗುರುಗಳ ಮನೆ ಗೂಂಡಾಗಳು 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಸಾಮಾನ್ಯವಾಗಿ ಗುರುನಾಥರು ಮನೆಯಲ್ಲಿದ್ದಾಗಲೆಲ್ಲಾ ಹಿಂದಿನ ದಿನದ ಅನ್ನ-ಅಡುಗೆ ಎಸೆಯಲು ಬಿಡುತ್ತಿರಲಿಲ್ಲ. ಬೆಳಿಗ್ಗೆ ಎಲ್ಲಿಗಾದ್ರೂ ಹೋಗುವ ಸಂಭವವಿದ್ದಲ್ಲಿ ಅಡಿಕೆ ಹಾಳೆಯಲ್ಲಿ ಅನ್ನ  ಹುಳಿ ಕಲೆಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದರು. 

ಮನೆಯಲ್ಲಿದ್ದಾಗ ನನ್ನ ಕರೆದು ಹಿಂದಿನ ದಿನದ ಅಡುಗೆ ಅನ್ನ ಕಲೆಸಲು ಹೇಳಿ ನಾ ಎಲ್ಲೇ ಇದ್ರೂ ಕರೆದು "ಬಾರಯ್ಯಾ, ನಂಗೇ ನಿಂಗೇ ಇದೇ ಗತಿ. ಇದೇ ಊಟ ಕಣೋ" ಎಂದು ಹಾಕಿ ತಿನ್ನುತ್ತಿದ್ದರು. 

ಒಮ್ಮೆ ಅಮ್ಮ ಮೆಲುದನಿಯಲ್ಲಿ "ಈ ಅಡುಗೆ ಬೇಡ. ಬೇರೆ ಹಾಕು. ಅದು ನಿನ್ನೆಯದು ಹಳಸಿರಬಹುದು" ಅಂದ್ರು. ಅದನ್ನ ಕೇಳಿಸಿಕೊಂಡ ಗುರುನಾಥರು "ಅದು ನಿನ್ನೆಯದಾದ ಮಾತ್ರಕ್ಕೆ ಬಳಸಬಾರದೆಂದಾದರೆ, ನೀ ಬಂದು ಎಷ್ಟು ವರ್ಷವಾಯ್ತು? ಹೇಳು" ಅಂದರು. ಅಮ್ಮ ಸುಮ್ಮನಾದರು. 

ಹೀಗೆ ಗುರುನಾಥರು ನಿನ್ನೆ, ಇಂದು, ನಾಳೆಗಳ ಬೇಧವಿರದಂತೆ ಬದುಕಿರಬೇಕೆಂಬುದನ್ನು ಸರಳ ಮಾತುಗಳಲ್ಲಿ ಹೇಳುತ್ತಿದ್ದರು. 

ಮೂಲದಲ್ಲಿ ಎಲ್ಲವೂ ಒಂದೇ ಎಂಬುದನ್ನು ಹೀಗೆ ಹೇಳುತ್ತಿದ್ದರು:- "ಹೆಣದ ಬಾಯಿಗೆ ನೆನೆದಕ್ಕಿ ದೇವರ ತಲೆಗೆ ಬಣ್ಣದಕ್ಕಿ ಅಲ್ವೇನಯ್ಯ?" ಅನ್ನುತ್ತಿದ್ದರು. 

ಹಾಗೆಯೇ ಮತ್ತೊಮ್ಮೆ ಜನರ ಕಾಮವನ್ನು ಕುರಿತು "ಹೆಣ್ಣು ಮಾಯೆ, ಗಂಡು ನಾಯಿ ಅಲ್ವೇ" ಎಂದಿದ್ದರು. 

ಜಗತ್ತಿನ ಪ್ರತಿಯೊಂದು ಸತ್ಯವೇ ಆದ್ರೂ ಆ ಸತ್ಯ ಎಂತಹ ಸತ್ಯ? ಅಂತ ಯೋಚಿಸಬೇಕು. ಅದು ಆ ಕ್ಷಣದ ಸತ್ಯ ಅಷ್ಟೇ. ಆ ಸತ್ಯದ ಅರಿವಿನಲ್ಲಿ ನಿತ್ಯ ಸತ್ಯದ ಬೆಳಕನ್ನು ಹುಡುಕಬೇಕು" ಅಂತಿದ್ರು. 

"ಇಲ್ಲಿ ಯಾರು ಗುರು ಇಲ್ಲ ಕಣ್ರೋ, ನಿನ್ನೊಳಗಿನ ಅರಿವೇ ಗುರು" ಅಂತಿದ್ರು. 

ಅವರಿಗೆ ಜಗತ್ತಿನ ಎಲ್ಲ ಆಗು-ಹೋಗುಗಳು ತಿಳಿದಿರುತ್ತಿತ್ತು ಎಂಬುದಕ್ಕೆ ಈ ಕೆಳಗಿನ ಘಟನೆ ಸಣ್ಣ ಉದಾಹರಣೆ ಅಷ್ಟೇ. ಗುರುನಾಥರು ನಿತ್ಯವೂ ಬೆಳಿಗ್ಗೆ ಒಂದು ಹೋಟೆಲ್ ನಿಂದ ತಿಂಡಿ ತರಿಸಿ ಹಂಚುತ್ತಿದ್ದರು. 

ಒಮ್ಮೆ ಎಂದಿನಂತೆ ತಿಂಡಿ ಸಿದ್ಧ ಮಾಡಿಸುವಂತೆ ಹೋಟೆಲ್ ನವರಿಗೆ ಕರೆ ಮಾಡಿ ತಿಳಿಸಿದ್ದೆ. ಆತ ಹಾಗೇ  ಮಾಡಿದ್ದರು. ನಾನು ಹೋಗೋದು ಸ್ವಲ್ಪ ತಡವಾಯಿತು. 

ಆಗ ಅಲ್ಲೇ ಹೋಟೆಲ್ ನಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ "ಆ ತಿಂಡಿ ಎಲ್ಲಿಗೆ?" ಎಂದು ಕೇಳಲು

ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ "ಗುರುಗಳ ಮನೆ ಗೂಂಡಾಗಳಿಗೆ" ಎಂದರು. 

ಅದಾಗಿ ಕೆಲವೇ ದಿನಗಳಲ್ಲಿ ಹಾಗೆ ಹೇಳಿದ್ದ ಆ ವ್ಯಕ್ತಿ ಯಾವುದೋ ಸಮಸ್ಯೆಗೆ ಸಿಲುಕಿಕೊಂಡು ಗುರುನಾಥರ ಹತ್ತಿರವೇ ಬರುವಂತಾಯಿತು. 

ಆಗ ಅದೇ ಹೋಟೆಲ್ ನಿಂದ ತಿಂಡಿ ತರಿಸಿದ ಗುರುನಾಥರು ಆ ವ್ಯಕ್ತಿಗೆ "ಗುರುಗಳ ಮನೆ ಗೂಂಡಾಗಳಿಗೆ ತಿಂಡಿ ತಂದಿದ್ದೆ. ನೀನೂ ತಗೋಳಯ್ಯಾ?" ಅಂದರು. ಅದನ್ನು ಕೇಳಿದ ಆ ವ್ಯಕ್ತಿ ಅವಾಕ್ಕಾಗಿ ತಲೆ ತಗ್ಗಿಸಿದರು. 

ನೀ ಸೋಲಬಾರದು, ಬೀಳಬಾರದು, ಸೋತವರ ಆಶಾಕಿರಣ. 

ಗುರುನಾಥರ ಮನೋ ಧೃಡತೆ, ದಿಟ್ಟತನ ಹಾಗೂ ಸತ್ಯದ ತುಡಿತ ಅನನ್ಯವಾದದ್ದು. 

ಒಮ್ಮೆ ಗುರುನಾಥರಲ್ಲಿ ಚರಣದಾಸನಾದ ನಾನು ನನ್ನ ದುಃಖವನ್ನು ತೋಡಿಕೊಳ್ಳುತ್ತಾ, ಗುರುಗಳೇ ನಾಗರೀಕ ಸೇವೆಗೆ ಸೇರಬಯಸಿ ಬಂದಿರುವೆ. ನನಗೆ ಯಾರ ಸಹಕಾರವೂ ಇಲ್ಲ. ನಾನು ಗೆಲ್ತೀನಾ ಗುರುಗಳೇ? ಎಂದೆ. 

ಅದಕ್ಕವರು "ನೋಡಯ್ಯಾ, ನಾನು ಎಂಟು ತಿಂಗಳು 1 ರೂಪಾಯಿ ನಾಣ್ಯ ನೋಡಿರಲಿಲ್ಲ. 1-1/2 ದಿನ ಬೆಂಗಳೂರಿನ ಪಾರ್ಕ್ ಒಂದರಲ್ಲಿ ಊಟವಿರದೇ ಮಲಗಿದ್ದೆ ಕಣೋ... ಹೆದರ್ಕೋಬೇಡ. ನಿನ್ನನ್ನ ಕೀಳಾಗಿ ನೋಡಿದ ಪ್ರತಿಯೊಬ್ಬರೂ ನಿನ್ನ ಕಾಲ ಹತ್ತಿರವೇ ಬರುವಂತಾಗುತ್ತದೆ. ನೀ ಗೆದ್ದೇ ಗೆಲ್ತೀಯ" ಅಂದು ಧೈರ್ಯ ತುಂಬಿದರು. 

ಮತ್ತೊಮ್ಮೆ ನಾನು ಬೇಸರದಿಂದ ಗುರುಗಳೇ ಯಾರಾದ್ರೂ ನಿಮ್ಮ ಹತ್ರ ಬಂದು ಅತ್ತು ಬಿಟ್ಟರೆ ತಕ್ಷಣವೇ ಕೆಲಸ ಮಾಡಿ ಕೊಡುತ್ತೀರಲ್ಲ ಅಂದೆ. 

ಅದಕ್ಕವರು ಹೂಂನಯ್ಯಾ ಅವರ ಕಷ್ಟ ನೋಡಲಾಗಲಿಲ್ಲ ಅದಕ್ಕೆ ಅಂದ್ರು. 

ನಾನು 'ಹಾಗಾದ್ರೆ ನಾನೂ ಅತ್ತು ಬಿಡ್ತೇನೆ, ಸೋತು ಬಿಡ್ತೇನೆ' ಅಂದೆ. 

ಅದಕ್ಕವರು "ನೀ ಸೋಲಬಾರದು, ಅಳಬಾರದು ಕಣೋ" ಅಂದ್ರು. ಅದ್ಯಾಕೆ ಹಾಗೆ ಅಂದ್ರೋ ತಿಳಿದಿಲ್ಲ. ಆದರೆ ಈವರೆಗೆ ಅದೆಷ್ಟು ಅಸಮಾನ ಕಷ್ಟ ಬಂದಿದ್ದರೂ ಅಳು ಬರುತ್ತಿಲ್ಲ. "ಆಯ್ತಾ ಇಷ್ಟೇ ತಾನೇ.... ?" ಅನ್ಸುತ್ತೆ. ಹಾಗೂ ಬಹುಶಃ ಅದಕ್ಕೆ ಗುರುನಾಥರು ಹೇಳುತ್ತಿದ್ದ ಈ ಮಾತು ಧೈರ್ಯ ನೀಡುತ್ತೆ. 

ಅವರು ಯಾವಾಗ್ಲೂ "ಅಯ್ಯಾ ಇದ್ಯಾವ ಮಹಾ ಕಷ್ಟ? ಈಶ್ವರ ಇನ್ನೂ ಕಷ್ಟ ಕೊಡಲಿ" ಅನ್ನುತ್ತಾ ಇದ್ದರು. ಹಾಗೂ ಮನುಷ್ಯ ಎಣಿಸಿದಂತೆ ಏನೂ ನಡೀಬಾರದು ಕಣೋ. ಎಲ್ಲವೂ ಅವನ ವಿರುದ್ಧವಾಗೇ ನಡೀಬೇಕು. ಆಗ ಮಾತ್ರ ಮನುಜ ಮನುಷ್ಯನಾಗುತ್ತಾನೆ" ಅಂತಿದ್ರು.....,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Tuesday, November 29, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 17


ಕೇಳಿದ್ದೆ ಕಣ್ಣಾರೆ ಕಂಡೆ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಒಂದು ಪೀಠದ ಶ್ರೀಗಳು ಶಿವಮೊಗ್ಗದ ಮುಖಾಂತರ ತರೀಕೆರೆಗೆ ಹೋಗಿ ಮಾರನೆಯ ದಿನ ಅಲ್ಲೊಂದು ದೊಡ್ಡ ಕಾರ್ಯಕ್ರಮ ನಡೆಸಲಿದ್ದರು. ಶಿವಮೊಗ್ಗದ ಒಬ್ಬ ಭಕ್ತರು ಬಸ್ಸಿನಲ್ಲಿ ತರೀಕೆರೆಯಿಂದ ಬರುತ್ತಾ ಸಹ್ಯಾದ್ರಿ ಕಾಲೇಜಿನ ಬಳಿ, ಮರದ ನೆರಳಿನಲ್ಲಿ ಗುರುನಾಥರು ಕುಳಿತಿರುವುದನ್ನು ಕಂಡು ಆಶ್ಚರ್ಯದಿಂದ ನನ್ನ ಬಳಿ ಬಂದು ತಿಳಿಸಿದರು... ಎಂದು ಶಿವಮೊಗ್ಗದ ಒಬ್ಬ ರಾಮಭಕ್ತರೂ, ಗುರುನಾಥರ ಆರಾಧಕರೂ ಆದ ಗುರುಬಂಧು ಒಬ್ಬರು ಗುರುನಾಥರ ಲೀಲಯನ್ನು ಪ್ರಾರಂಭಿಸಿದರು. 

"ನಾನು ರಿಕ್ಷಾ ಮಾಡಿಕೊಂಡು ಇನ್ನೊಂದಿಬ್ಬರ ಜೊತೆ ಅಲ್ಲಿಗೆ ಹೋದೆ. ಮಹಾನುಭಾವರು ಅತ್ಯಂತ ಸರಳರಂತೆ ರಸ್ತೆ ಬದಿಯಲ್ಲಿ ಕುಳಿತಿದ್ದರು. ಅದೆಷ್ಟು ಹೊತ್ತಿನಿಂದ ಅಲ್ಲಿ ಕಾಯುತ್ತಿದ್ದರೋ, ಗುರುನಾಥರಿಗೆ ನಮಿಸಿದೆ. 'ಬನ್ನಿ ಆರೋಗ್ಯವೇ ಒಂದು ಕುರ್ಚಿ ತಂದು ಕೊಡಯ್ಯ ಇವರಿಗೆ' ಎಂದರು. ನಾನು ಬೇಡವೆಂದು ಮರದ ಬೊಡ್ಡೆಯ ಮೇಲೆ ಕುಳಿತುಕೊಂಡೆ. ಗುರುನಾಥರು ತಮಾಷೆ ಮಾಡುತ್ತಾ 'ಬಹಳ ಬುದ್ಧಿವಂತರಪ್ಪ. ಈ ಕುರ್ಚಿ ಯಾರದ್ದೋ. ಯಾವಾಗ ಬೇಕಾದರೂ ತೆಗೆದುಕೊಂಡು ಹೋಗಬಹುದು. ಮರದ ಬೊಡ್ಡೆಯಿಂದ ಏಳುವ ಪ್ರಸಂಗ ಬರುವುದಿಲ್ಲ. ಯಾರೂ ಏಳಿಸುವುದಿಲ್ಲ ' ಎಂದರು. ಸಂಜೆ ಆರು, ಏಳು, ಎಂಟು ಗಂಟೆಯೂ ಆಯಿತು. ನಾವಾದರೆ ಅರ್ಧ ಗಂಟೆ ಕಾದು, ಬಂದ ಮೇಲೆ ತಿಳಿಸು ಎಂದು ಯಾರಿಗಾದರೂ ವಹಿಸಿ ಹೋಗುತ್ತಿದ್ದೇವೇನೋ. ಎಂಟೂವರೆಗೆ ಯಾರಿಗೋ ಏನೋ ಗುರುನಾಥರು ಹೇಳಿದರು. ಊಟ ಸಿದ್ಧವಾಗಿ ಬಂದಿತು. ಅಲ್ಲಿದ್ದವರಿಗೆಲ್ಲಾ ಸಂತರ್ಪಣೆಯಂತೆ, ಆ ರಸ್ತೆಯಲ್ಲೇ ವಿತರಿಸಿದರು.... ಮುಂದೆ ಒಂಬತ್ತು  ಒಂಬತ್ತೂವರೆಗೆ, ಗುರುನಾಥರು ಕಾಣಬೇಕಿದ್ದ ಪೀಠದ ಶ್ರೀಗಳ ಕಾರು ಬಂದಿತು. ಗುರುನಾಥರು ಎದ್ದು ಹೋಗಿ ಆ ಶ್ರೀಗಳಿಗೆ ತೋರಿಸಿದ ಅನುನಯ ವಿನಯಗಳು, ಅಲ್ಲಿದ್ದ ನಮಗೆ, ಗುರುಗಳೊಂದಿಗೆ ಹೇಗೆ ವಿನೀತರಾಗಿರಬೇಕೆಂಬುದನ್ನು ನಿರ್ದೇಶಿಸುವ ಪಾಠದಂತಿತ್ತು. ಮುಂದೆ ಗುರುನಾಥರು ಆ ಶ್ರೀಗಳೊಂದಿಗೆ ಮಾತನಾಡಿ ನಂತರ ತಮ್ಮ ಕಾರಿನ ಡಿಕ್ಕಿಯಿಂದ ಒಂದೊಂದೇ ವಸ್ತುಗಳನ್ನು ತಂದು ಅರ್ಪಿಸುತ್ತಿದ್ದರು. ಶ್ರೀಗಳ ಕಾರು ತುಂಬಿತು. ಹಿಂದಿದ್ದ ವ್ಯಾನು ತುಂಬತೊಡಗಿತು. ಕಾರಿನ ಡಿಕ್ಕಿಯಲ್ಲಿ ಏನಿತ್ತು, ಎಷ್ಟಿರಲು ಸಾಧ್ಯ? ಗುರುನಾಥರು ಕೈಯಲ್ಲಿ ತಂದು ತುಂಬುವಲ್ಲಿ ಎಲ್ಲವೂ ಅಪಾರವಾಗುತ್ತಿದ್ದವು. ನಾಳಿನ ಕಾರ್ಯಕ್ರಮಕ್ಕೆ ಬೇಕಾದ ಅಕ್ಕಿ, ಬೇಳೆ, ಬೆಲ್ಲ, ತರಕಾರಿ, ಹಣ್ಣು, ಹಂಪಲು ಎಲ್ಲವೂ ಒಂದಾದ ಮೇಲೆ ಒಂದರಂತೆ ಶ್ರೀಗಳ ವ್ಯಾನು ತುಂಬಿ ಹೋಯಿತು. ನೋಡುತ್ತಿದ್ದ ನನಗೆ ಅಕ್ಷಯ ಭಂಡಾರದ ದರ್ಶನ ಮಾಡಿಸಿದ್ದರು ಗುರುನಾಥರು. ಅದೆಲ್ಲಿಂದ ಸೃಷ್ಠಿಯಾಗಿ ಬರುತ್ತಿತ್ತೋ ಕೊನೆಗೆ 'ಬಹಳ ಸಮಯವಾಯಿತು. ನೀವೆಲ್ಲಾ ಹೋಗಿ ಬನ್ನಿರೆಂದು' ನಮಗೆ ಆಶೀರ್ವದಿಸಿದಾಗ - ಸದ್ಗುರುನಾಥಾ ಕೇಳಿದ್ದೆ. ಒಳ್ಳೆಯ ಸಮಯದಲ್ಲಿ ಕಣ್ಣಾರೆ ಕಾಣುವ ಅವಕಾಶವನ್ನು ಒದಗಿಸಿದಿರಲ್ಲಿ, ಮನದಲ್ಲೇ ನೆನೆಯುತ್ತಾ ನಾವೆಲ್ಲಾ ಮನೆಗೆ ಬಂದೆವು. ಇನ್ನೂ ಇಂತಹ ಘಟನೆಗಳಿವೆ. ನೆನಪಿಗೆ ಬರುತ್ತಿಲ್ಲ" ಎಂದರು. 

ದೇವರ ದರ್ಶನವಾಯ್ತು ಮನೆಗೆ ನಡೆಯಿರಿ 

ಇದೇ  ರಾಮಭಕ್ತರಿಗೆ ಗುರುನಾಥರು ನೀಡಿದ ಇನ್ನೊಂದು ವಿಚಿತ್ರ ಅನುಭವವನ್ನು ಅವರಿಂದಲೇ ಕೇಳೋಣ ಬನ್ನಿ. 

"ಅಂದು ಬೆಂಗಳೂರಿನಲ್ಲಿದ್ದೆ. ಆಂಜನೇಯನ ದರ್ಶನ ಮಾಡಿ ಬರೋಣವೆಂದು ನಮ್ಮ ಪರಿವಾರದೊಂದಿಗೆ ಹೊರಟೆವು". ಸಂಜೆ ಸುಮಾರು ಐದು ಗಂಟೆ ಇರಬಹುದು. ಹೋಗುತ್ತಿದ್ದ ಕಾರು, ಒಂದು ಮನೆಯ ಎದುರು ಇದ್ದಕ್ಕಿದ್ದಂತೆ ನಿಂತುಬಿಟ್ಟಿತು. ಡ್ರೈವ್ ಮಾಡುತ್ತಿದ್ದವರು, ಕೆಳಗಿಳಿದು ಬಾನೆಟ್ ಎತ್ತಿ ಪರೀಕ್ಷಿಸುತ್ತಿದ್ದರು. ನಾನು ಕಾರಿನಿಂದ ಕೆಳಗಿಳಿದು ಅತ್ತಿತ್ತ ನೋಡುತ್ತಿದ್ದಾಗ ನಮ್ಮ ಜೊತೆಗಿದ್ದವರು 'ಮಾಮಾ ಕಾಫಿ ಎಂದು ಯಾರಾದರೂ ಮನೆಗೆ ಹೋದೀರಾ. ಮೊದಲೇ ನಿಮಗೆ ಕಾಫಿ ಹುಚ್ಚು' ಎಂದು ತಮಾಷೆ ಮಾಡಿದರು. ಇಲ್ಲೆಲ್ಲಿ, ನನಗ್ಯಾರೂ ಪರಿಚಯವಿಲ್ಲ. ಇನ್ನು ಕಾಫಿ ಕೊಡೋರು ಯಾರು? ಎಂದೆ. ಇದಾದ ಒಂದೈದು ನಿಮಿಷದಲ್ಲಿ, ಆ ಎದುರು ಮನೆಯ ಬಾಗಿಲು ತೆರೆಯಿತು. ಆ ಮನೆಯ ತಾಯಿ 'ಬನ್ನಿ ಬನ್ನಿ ಒಳಗೆ ಬನ್ನಿ' ಎಂದು ಗೌರವದಿಂದ ಕರೆದರು. 'ಇಲ್ಲಾ ಇನ್ನೇನು ಹೊರಡ್ತೀವಿ. ಅಲ್ಲದೆ ಇನ್ನೂ ಜನರಿದ್ದಾರೆ ಕಾರಲ್ಲಿ' ಎಂದೆ. ಅದಕ್ಕೆ ಅವರು 'ಅವರೂ ಬರ್ತಾರೆ... ನೀವು ಒಳಗೆ ಹೋಗಿ' ಎಂದರು. ಒಳಗೆ ಹೋದ ನನಗೆ ಕಂಡಿದ್ದು ಗುರುನಾಥರ ಚಿತ್ರ. ಇದೇನು ಇವರ ಚಿತ್ರ ಎಂದೆ. ಅದಕ್ಕವರು ನಮ್ಮ ಗುರುಗಳು. ಬನ್ನಿ ಎಲ್ಲಾ ಕಾಫಿ ಕುಡಿಯಿರಿ, ಎಂದು ಎಲ್ಲರಿಗೂ ಕಾಫಿ ಹಂಚಿದರು. ನಾನು ಗುರುನಾಥರ ಚಿತ್ರಕ್ಕೆ ನಮಿಸಿದೆ. ಆಗ ಮನೆಯೊಡತಿ ಹೇಳಿದರು. 'ನೀವು ಬರುತ್ತೀರಿ. ನಿಮಗೆ ಕಾಫಿ ಕೊಟ್ಟು ಕಳಿಸಬೇಕೆಂದು ನಿನ್ನೆಯೇ ಗುರುನಾಥರು ತಿಳಿಸಿದ್ದರು' ಎಂದಾಗ ನಮಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ನಮ್ಮನ್ನು ನೀವು ಗುರುತಿಸಿದ್ದಾದರೂ ಹೇಗೆ? ಎಂದು ಪ್ರಶ್ನಿಸಿದಾಗ ಅದನ್ನೂ ಗುರುನಾಥರೇ ತಿಳಿಸಿದ್ದರು. 'ಕಪ್ಪು ಬಣ್ಣದ ಕಾರು, ನಿಮ್ಮ ಮನೆ ಬಾಗಿಲಲ್ಲೇ ನಿಲ್ಲುತ್ತೆ. ಒಬ್ಬರು ನಾಮ ಹಾಕಿಕೊಂಡಿರುತ್ತಾರೆ. ಅವರ ಪಕ್ಕದಲ್ಲಿ ಅವರ ಮನೆಯವರು ಇರುತ್ತಾರೆಂದು ಎಲ್ಲಾ ಹೇಳಿದ್ದರು'.... ಎಂದರು. ಗುರುನಾಥರ ಲೀಲೆಗಳನ್ನು ನಾನೊಂದು, ಅವರೊಂದು ಹೀಗೆ ಹೇಳುತ್ತಾ ಸತ್ಸಂಗ ನಡೆಯುತ್ತ ರಾತ್ರಿ ಒಂಬತ್ತು ಗಂಟೆಯಾದುದು ನಮ್ಮ ಅರಿವಿಗೇ ಬಂದಿರಲಿಲ್ಲ. ನಾವು ಹೊರಡುತ್ತೇವೆ ಎಂದು ಎದ್ದಾಗ - ಆ ತಾಯಿ ಉಪ್ಪಿಟ್ಟು ಸಜ್ಜಿಗೆ ಕೊಡದೆ ಕಲಿಸಬೇಡ ಎಂದಿದ್ದಾರೆ ಎಂದು ಹೇಳುತ್ತಾ ಅವನ್ನೆಲ್ಲಾ ನೀಡಿದರು. ಎಲ್ಲ ಮುಗಿಸಿಕೊಂಡು 'ನಡೆಯಿರಿ ಮನೆಗೆ' ಎಂದಾಗ, ಎಲ್ಲರೂ ದೇವಸ್ಥಾನ ಎಂದರು. ದೇವರ ದರ್ಶನವೇ ಆದ ಮೇಲೆ ದೇವಸ್ಥಾನವೇಕೆ ಎಂದು ಮನೆಗೆ ನಡೆದೆವು". 

ನಾನು ಬಂದು ಎಷ್ಟೊತ್ತು ಆಯ್ತು ಕಾಫಿ ಕೊಡಲ್ವಾ


ಶಿವಮೊಗ್ಗದ ರಾಮಭಕ್ತರೊಬ್ಬರು ದೈವಾಧೀನರಾಗಿದ್ದರು. ನೂರಾರು ಜನಗಳು ಸೇರಿದ್ದರು. ಯಾರೋ ಒಂದು ದೊಡ್ಡ ಪಾತ್ರೆಯಲ್ಲಿ ಬಿಸಿ ಬಿಸಿ ಇಡ್ಲಿಯನ್ನು ಕಳಿಸಿದ್ದರು. ಏತಕ್ಕಿದು? ಎಂದು ಕೇಳಿದಾಗ ಎಲ್ಲರಿಗೂ ಕೊಡಬೇಕಂತೆ, ಎಂದರು. ಆದರೆ, ಸಾವಿನ ಮನೆಯಲ್ಲಿ ಇದನ್ನು ಹೇಗೆ ತೆಗೆದುಕೊಳ್ಳುವುದೆಂದು ವಾಪಸ್ಸು ಕಳಿಸಿದಾಗ- ಕೆಲ ಸಮಯದಲ್ಲೇ ಅದು ವಾಪಸ್ಸು ಬಂದಿತು. ತಂದವರು ಹೇಳಿದರು 'ಸಖರಾಯಪಟ್ಟಣ ಗುರುಗಳು ಮತ್ತೆ ಹೇಳಿ ಕಳಿಸಿದ್ದಾರೆ.. ಇದನ್ನು ತೆಗೆದುಕೊಳ್ಳಲೇಬೇಕಂತೆ' ಅವಧೂತರ ಆಜ್ಞೆಯನ್ನು ಮೀರುವವರ್ಯಾರು. ಮೃತರ ಬಂಧುಗಳು ಇಡ್ಲಿ ಪಾತ್ರೆಯನ್ನು ತಮ್ಮ ಪಕ್ಕದವರ ಮನೆಯಲಿ ಇಡಿಸಿ 'ಅಂತಿಮಯಾತ್ರೆಗೆ ಬಂದ ಎಲ್ಲರಿಗೂ ಇದನ್ನು ಹಂಚಿಬಿಡಿ, ಎರಡು ಇಡ್ಲಿಯನ್ನು ಮಾತ್ರ ತೆಗೆದಿಡಿ-  ಆಮೇಲೆ ಕೇಳಿದಾಗ ಕೊಡಿ' ಎಂದಿಡಿಸಿದರು. ಬಂದವರಿಗೆಲ್ಲಾ ಇಡ್ಲಿ ಸಂತರ್ಪಣೆಯಾಯ್ತು ಸಾವಿನ ಮನೆಯಲ್ಲಿ ಹಸಿವು ಜಾಸ್ತಿ ಎಂದು ಗುರುನಾಥರಿಗರಿಯದೆ? 

ಮುಂದೆ ಅಂತ್ಯಕ್ರಿಯೆ ಮುಗಿಸಿಬಂದ ಅವರು ಆ ಎರಡು ಇಡ್ಲಿಯನ್ನು ತರಿಸಿ ಮನೆಯವರಿಗೆಲ್ಲಾ ಒಂದೊಂದು ಚೂರು ನೀಡಿ ತಾವೂ ತಿಂದು, ಸಖರಾಯಪಟ್ಟಣದ ಅವಧೂತರ ಪ್ರಸಾದವಿದೆಂದರು.

ಅವಧೂತರ ಅನೇಕ ವಿಚಾರಗಳು ಅಲ್ಲಿ ಬಂದವು. ಅಂತ್ಯಕ್ರಿಯೆಗೆ ಬಂದವರೆಲ್ಲಾ ಇದನ್ನು ಕೇಳಿ 'ಮಾಮಾ ನಾವೂ ಒಂದು ದಿನ ಸಖರಾಯಪಟ್ಟಣಕ್ಕೆ ಹೋಗೋಣ' ಎಂದಾಗ ಮತ್ಯಾರೋ 'ನಾವು ಹೋಗುವುದೇನು ಬೇಡ. ಅವರೇ ಇಲ್ಲಿಗೆ ಬರುತ್ತಾರೆ' ಎಂದುಬಿಟ್ಟರು. 

ನಾಲ್ಕನೆಯ ದಿನ ಬೆಳಗಿನ ಒಂಬತ್ತಿರಬಹುದು. ಅವಧೂತರು ದೇವಸ್ಥಾನಕ್ಕೆ ಬಂದು ಬಿಟ್ಟರಂತೆ. ಬೇರೆ ಯಾರಿಗೋ ತಿಳಿಸಿ ತೀರ್ಥಪ್ರಸಾದ ಕೊಡುವ ವ್ಯವಸ್ಥೆ ಮಾಡಿಸಿದ್ದಾಯಿತು. ನಂತರ ಅವರು ನೇರವಾಗಿ ಸತ್ತವರ ಮನೆಯ ಒಳಗೆ ಹೋದರು. ಅವರೊಂದಿಗೆ ಇನ್ನೂ ಅನೇಕರಿದ್ದರು. ಎಲ್ಲರನ್ನೂ ಕರೆದು ಕುರ್ಚಿ ಹಾಕಿದರು. ಸ್ವಲ್ಪ ಹೊತ್ತು ಕುಳಿತ ಗುರುನಾಥರು 'ಏನು ನಾನು ಬಂದು ಇಷ್ಟೊತ್ತಾಯ್ತು. ಕಾಫಿ ಗೀಫಿ ಕೊಡಲ್ವಾ" ಎಂದಾಗ, ಆ ಮನೆಯವರು ಪಕ್ಕದ ಮನೆಯಿಂದ ಕಾಫಿ ತರಿಸಲು ಯಾರಿಗೋ ಹೇಳಿದಾಗ ಮತ್ತೆ 'ಯಾಕೆ ನಿಮ್ಮಲ್ಲಿ ಕಾಫಿ ಮಾಡುವುದಿಲ್ಲವಾ? ಅಥವಾ ಕಾಫಿ ಇದೆಯೋ ಇಲ್ಲವೋ? ಪಕ್ಕದ ಮನೆಯ ಕಾಫಿ ಏಕೆ? ನಿಮ್ಮ ಮನೇದೇ ಕೊಡಿರಿ' ಎಂದರು. ಬೆಳ್ಳಿ ಲೋಟದಲ್ಲಿ ಕಾಫಿ ತಂದು ಕೊಟ್ಟಾಗ ಬೆಳ್ಳಿ ಬೇಡ ಬಹಳ ಬಿಸಿ. ಸ್ಟೀಲ್ ಲೋಟದಲ್ಲೇ ಕೊಡಿ... ಹಾಂ... ನನಗೊಬ್ಬನಿಗೆ ಕೊಟ್ಟರೆ ಹೇಗೆ ಕುಡೀಲಿ.. ಇವರುಗಳಿಗೂ ಕೊಡಿ" ಎಂದು ಕೊಡಿಸಿದರು. ಗುರುನಾಥರೇನೋ ಕಾಫಿ ಕುಡಿಯುತ್ತಿದ್ದರು. ಬಾಕಿಯವರ ಮನದಲ್ಲಿ ಮಡಿಮೈಲಿಗೆಯ ತಾಕಲಾಟ ನಡೀತಿತ್ತು. ಇದನ್ನು ಅರ್ಥ ಮಾಡಿಕೊಂಡಂತೆ.... 'ಕುಡೀರಯ್ಯಾ ಯಾವುದು ಮೈಲಿಗೆ? ಈ ಲೋಟಾನಾ , ಈ ಕಾಫೀನಾ? ಯಾವುದು ಮೈಲಿಗೆ' ಎಂದು ಪ್ರಶ್ನಿಸಿದಾಗ ಉತ್ತರ ಹೇಳಲು ಯಾರಿಗೆ ಧೈರ್ಯವಿದೆ. ಮುಂದೆ ಮೈಲಿಗೆಯ ಬಗ್ಗೆ ಮಾತನಾಡುತ್ತಾ, ಆಧ್ಯಾತ್ಮದ ಅನೇಕ ವಿಚಾರವನ್ನೇ ಗುರುನಾಥರು ಎಲ್ಲರ ಮುಂದಿಟ್ಟರು. 'ಈ ಪರಮಾತ್ಮ ಈ ಶರೀರ ಬಿಟ್ಟು ಹೋದ ಮೇಲೆ ಏನಿದೆ? ಮುಂಚೆ ಮುಟ್ಟಬೇಡ, ಮುಟ್ಟಬೇಡ ಮಾಡಿ ಅಂತಾರೆ.... ಈಗ ಮೈಲಿಗೆ, ಮೈಲಿಗೆ ಅಂತಾರೆ. ಯಾರಿಗೆ ಮೈಲಿಗೆ, ಯಾವುದು ಮೈಲಿಗೆ, ಮಡಿ ಯಾವುದು? ನಾ ಮೈಲಿಗೆನೋ, ಅವರು ಮೈಲಿಗೆನೋ ' ಎಲ್ಲಾ ಕೇಳುತ್ತಾ ಮೌನರಾಗಿ ಬಿಟ್ಟರು. 

ನಂತರ ಗುರುನಾಥರು, ಮೃತರ ಪತ್ನಿಯನ್ನು ನೋಡಬಹುದಾ ಎಂದು ಕೇಳಿಕೊಂಡು ಒಳಹೋದರು. "ನಮಸ್ಕಾರ ತಾಯಿ. ನೀವು ಪುಣ್ಯಾತ್ಗಿತ್ತಿ" ಎಂದರು. ಅಲ್ಲಿದ್ದವರಿಗೆಲ್ಲಾ 'ಇದೇನಿದು ಗುರುನಾಥರು ಗಂಡನನ್ನು ಕಳೆದುಕೊಂಡು ವೈಧವ್ಯದ ದುಃಖದಲ್ಲಿರುವವರಿಗೆ ನೀವು ಪುಣ್ಯಾತ್ಗಿತ್ತಿ ಎನ್ನುತ್ತಿದ್ದಾರಲ್ಲಾ' ಎಂಬ ಚಿಂತೆ. 

ಗುರುನಾಥರು ಮುಂದುವರೆಸಿ 'ನೀವು ಪುಣ್ಯಾತ್ಗಿತ್ತಿನೇ. ಯಾಕೆಂದರೆ ಈ ವೈಧವ್ಯ ಜಾಸ್ತಿ ದಿನಗಳಿರಲ್ಲ. ಇನ್ನು ಆರು ತಿಂಗಳಲ್ಲೇ ನಿಮಗೂ ಮುಕ್ತಿ ಸಿಗುತ್ತದೆ' ಎಂದರಂತೆ. 

ಗುರುನಾಥರ ಕೃಪೆ ಸಿಕ್ಕವರು ಪುಣ್ಯಾತ್ಗಿತ್ತಿ ಅಲ್ಲದೆ ಮತ್ತೇನು? ಸ್ವತಃ ಗುರುನಾಥರೇ ಮನೆಗೆ ಬಂದು ಆ ತಾಯಿಗೆ ಸದ್ಗತಿ ನೀಡಿದರು. ಅಷ್ಟೊತ್ತಿಗೆ ಅದೆಲ್ಲಿಂದಲೋ ಬುಟ್ಟಿಗಟ್ಟಲೆ ಕಿತ್ತಳೆಹಣ್ಣು ಬಂದಿತು. ಎಲ್ಲರಿಗೂ ಹಂಚಿ ಹರಸಿದರು - ಹೀಗೆ ಗುರುನಾಥರು ಸಂಕಟದಲ್ಲಿ ಬಳಲುವ ಭಕ್ತರ ಮನೆಗೆ ತಾವೇ ಬಂದು, ಕೇಳಿ ಆತಿಥ್ಯ ಪಡೆದು, ಉದ್ಧರಿಸುವ ಉದ್ಧಾಮಗುಣಿಗಳು. 

ಅವರನ್ನೇ ಕೇಳಿ ನನಗೇನು ಗೊತ್ತು 


ಒಬ್ಬ  ರಾಮ ಭಕ್ತರು. ಅದುವರೆಗೆ ಗುರುನಾಥರನ್ನು ಮುಖತಃ ಕಂಡಿರಲಿಲ್ಲ. ಆದರೆ ಬಹಳಷ್ಟು ಗುರುನಾಥರ ಬಗ್ಗೆ ಕೇಳಿದ್ದರು. ಸದ್ಭಕ್ತಿ ಮನದಲ್ಲಿ ಇತ್ತು ಅವರಿಗೆ. ಬೇಲೂರಿಗೆ ತಮ್ಮ ಬಂಧುಗಳ ಜೊತೆ ಕಾರಿನಲ್ಲಿ ಹೊರಟವರು ಕಡೂರಿನ ಬಳಿ ಬಂದಾಗ, ಸಖರಾಯಪಟ್ಟಣಕ್ಕೆ ಹೋಗಿ ಅವಧೂತರನ್ನು ಕಂಡು ಹೋಗೋಣವೇ ಎಂದಾಗ ಎಲ್ಲರೂ ಸರಿ ಎಂದರು. 

ಅವರು ಸಖರಾಯಪಟ್ಟಣಕ್ಕೆ ಬಂದಿದ್ದು ಅದೇ ಮೊದಲು. ಒಂದು ಮನೆಯ ಮುಂದೆ ಕಾರು ನಿಲ್ಲಿಸಿ ಮುಂದೆ ನಿಂತವರನ್ನು 'ಅವಧೂತರ ಮನೆ ಇದೇನಾ.. ಅವರು ಇದ್ದಾರಾ ಎಂದು' ಕೇಳುತ್ತಾರೆ... ಎದುರಿಗಿದ್ದವರು "ಹೌದು ಇದೇ  ಮನೆ ಬನ್ನಿ ಒಳಗೆ.. ಇದ್ದಾರೆ.. ಕಾರಿನಿಂದ ಇಳಿಯಿರಿ" ಎಂದಾಗ ಎಲ್ಲ ಇಳಿದು ಒಳ ಹೊರಟಾಗ ಎರಡು ನಾಯಿಗಳು ಬಂದು ಬಾಲ ಅಲ್ಲಾಡಿಸುತ್ತಾ ಇವರೆಲ್ಲರನ್ನೂ ಒಳಗೆ ಕರೆದುಕೊಂಡು ಹೋಗುವಂತೆ ಹೋದವು. ಒಳ ಮನೆಯಲ್ಲಿ ತುಂಬಾ ಜನ ಕುಳಿತಿದ್ದರು. ಅಡುಗೆಯ ಮನೆಗೆ ಕರೆದೊಯ್ದರು. ಅಲ್ಲಿ ಈಗಾಗಲೇ ಬಡಿಸಿ ಸಿದ್ಧವಾಗಿದ್ದ ಐದು ಎಲೆಯಲ್ಲಿ ಊಟಕ್ಕೆ ಕೂರಲು ತಿಳಿಸಿದರು. 'ಇಲ್ಲ ಹೊಟ್ಟೆ ತುಂಬಿದೆ. ಈಗ ತಾನೇ ಕಡೂರಿನಲ್ಲಿ.... ' ಎಂದು ಇವರು ಹೇಳುತ್ತಿದ್ದರೆ 'ಇಲ್ಲಾ ಇಲ್ಲಾ ಊಟಕ್ಕೆ ಕೂರಲೇಬೇಕು. ಬಡಿಸಿರಿ' ಎಂದು ಮನೆಯವರಿಗೆ ತಿಳಿಸಿದ ಆ ವ್ಯಕ್ತಿಗಳು ಮತ್ತಾರೂ ಅಲ್ಲ ಅವರೇ ಸದ್ಗುರುನಾಥರು. 

ಬಂದವರೆಲ್ಲಾ ಗುರುನಾಥರಿಗೆ ನಮಿಸಿ, ತಮ್ಮ ದೇವಾಲಯದ ಕಾರ್ಯಕ್ರಮ ಒಂದರ ಆಹ್ವಾನ ಪತ್ರಿಕೆಯನ್ನು ನೀಡಿದರು. ಇಷ್ಟರಲ್ಲಿ ಗುರುನಾಥರು ಅಟ್ಟ ಹತ್ತಿ, ಒಂದು ದೊಡ್ಡ ಸುವಾಸನೆ ಬೀರುತ್ತಿರುವ ಹಲಸಿನ ಹಣ್ಣೊಂದನ್ನು ತಂದು, ನಮ್ಮೊಂದಿಗೆ ಬಂದ ಹೆಣ್ಣು ಮಗಳಿಗೆ ನೀಡುತ್ತಾ, ಡ್ರೈವರಾಗಿ ಬಂದ ಅವರ ಯಜಮಾನರ ಕಡೆ ನೋಡುತ್ತಾ "ಏನಯ್ಯಾ, ಹೆಂಡತಿ ಎರಡು ಹಲಸಿನ ತೊಳೆ ಕೇಳಿದರೆ ಕೊಡಿಸಬಾರದೇ, ಹಾಗೆ ಕಾರು ಓಡಿಸಿಕೊಂಡು ಬಂದಿರಲ್ಲಾ" ಎಂದಾಗ ನಾವೆಲ್ಲಾ ಆಶ್ಚರ್ಯಪಟ್ಟೆವು. ಅಲ್ಲಿ ನಡೆದ ವಿಚಾರ ಇವರಿಗೆ ಹೇಗೆ ತಿಳಿಯಿತು" ಎಂದು. 

ನಾವೆಲ್ಲಾ ಗುರುನಾಥರಿಗೆ ನಮಿಸಿ ಹೊರಡಲಿದ್ದೆವು. ಆಗ ಅವರು 'ಒಳಗೆ ಅಮ್ಮನಿಗೆ ನಮಸ್ಕಾರ ಮಾಡಿ ಬಂದಿರಾ ಒಳಹೋಗಿ' ಎಂದರು. ಒಳಗೆ, ದೇವರ ಮನೆಗೆ ಹೋದಾಗ, ಆ ಮಹಾತಾಯಿ, ನಾವು ಕೊಟ್ಟ ಪತ್ರಿಕೆಗೆ ಅರಿಶಿನ-ಕುಂಕುಮ ಹೂವುಗಳನ್ನೇರಿಸಿ ಪೂಜೆ ಮಾಡಿ ನಮಸ್ಕರಿಸುತ್ತಿದ್ದರು. - ದೇವಾಲಯಗಳ ಪತ್ರಿಕೆ ಎಂದರೆ ಓದಿ ಎಸೆಯುವ ನಮಗೆ, ಅದರ ಬೆಲೆ ಎಷ್ಟೆಂಬುದು ಅದನ್ನು ಹೇಗೆ ಗೌರವಿಸಬೇಕೆಂಬುವ ಪಾಠ ದೊರಕಿತ್ತು. ಆ ಮಹಾತಾಯಿಗೆ ನಮಿಸಿ ಹೊರಬಂದು , ಗುರುನಾಥರಿಗೆ ಹೇಳಿ ಹೊರಡುವಷ್ಟರಲ್ಲಿ ಇನ್ನೊಂದು ದೊಡ್ಡ ಹಣ್ಣನ್ನವರು ನಮಗೆ ಕೊಡಲು ಹಿಡಿದುಕೊಂಡು ನಿಂತಿದ್ದರು. 'ಗುರುನಾಥರೇ ಸಾಕು. ನೀವು ಕೊಟ್ಟಿದ್ದೇ ಸಾಕಷ್ಟು ದೊಡ್ಡದಿದೆ. ಎಲ್ಲರಿಗೆ ಆಗುತ್ತೆ' ಎಂದಾಗ.... ಆಗ ಕೊಟ್ಟಿದ್ದು ಆ ತಾಯಿಗೆ, ಈಗ ಕೊಡುತ್ತಿರುವುದು ನಿನಗಲ್ಲ... ಅಲ್ಲಿ ಬೇಲೂರಿನಲ್ಲಿ' ನಿನ್ನನ್ನು ನೋಡಲು ಬರುವ ಎಲ್ಲಾ ಭಕ್ತರಿಗೆ ಈ ಪ್ರಸಾದವನ್ನು ಹಂಚಿಬಿಡಿ" ಎಂದು ಬಲವಂತವಾಗಿ ನೀಡಿದರು - ಎಂದವರು ಗುರುನಾಥರ ಉದಾರತೆ - ದಾನತತ್ಪರತೆ, ಸೇವಾಗುಣವನ್ನು ನೆನೆದರು. 

ಗುರುನಾಥರ ರೀತಿಯೇ ಹೀಗಲ್ಲವೇ. ಸಾಕು ಸಾಕೆನ್ನುವವರೆಗೆ, ಸಾಕೆಂದರೂ ಮತ್ತಷ್ಟನ್ನು ತಾನಾಗಿದೆಯೋ, ಇಲ್ಲವೋ ಎಂಬುದನ್ನು ಪರಿಗಣಿಸದೇ, ನೀಡುವುದೇ  ಅವರ ಮಹಾಗುಣ. ಗುರುನಾಥರ ಭಕ್ತಕೋಟಿಯಲ್ಲೂ ಈಗಲೂ ಸಹಾ ಅದೇ ಗುಣಗಳನ್ನು ಕಂಡಾಗ ನೆನಪಾಗುವುದು ಹರಿಹರನ ರಗಳೆಯಲ್ಲಿ ಬರುವ ಇಳೆಯಾಂಡ ಗುಡಿಮಾರನ ಕಥೆ. ಕಥೆಯಲ್ಲಿ ಒಬ್ಬ ಇಳೆಯಾಂಡ ಗುಡಿಮಾರ ತನ್ನದೆಲ್ಲವನ್ನೂ ಶಿವಗರ್ಪಣ, ದಾನ ಮಾಡಿದ ವಿಚಾರ. ಇಲ್ಲಿ ಶಿವಸ್ವರೂಪಿಯಾದ ಗುರುನಾಥರು ನೂರಾರು, ಸಾವಿರಾರು ಅಂತಹ ಇಳೆಯಾಂಡ ಗುಡಿಮಾರನಂತಹ ಶಿಷ್ಯರನ್ನೇ ನಿರ್ಮಿಸಿರುವುದು, ಕೊಡುಗೈ ಭಕ್ತರನ್ನು ಕೊಟ್ಟಿರುವುದು ನಮ್ಮ ಸೌಭಾಗ್ಯ. 

ಬನ್ನಿ ಮತ್ತೆ ಸಖರಾಯಪಟ್ಟಣಕ್ಕೆ ಗುರುನಾಥರ ಮನೆಗೆ ಹೋಗೋಣ. ಅಲ್ಲಿದ್ದವರೊಬ್ಬರು ಈ ರೀತಿ ಗುರುನಾಥರಿಂದ ಅದರ ಪಡೆದ ರಾಮಭಕ್ತರನ್ನು 'ಸ್ವಾಮಿ ನಿಮಗಿವರೆಷ್ಟು ದಿನದಿಂದ ಪರಿಚಯ? ಎಂದಾಗ, 'ಇವತ್ತೇ ನಾನು ಮೊದಲು ಗುರುನಾಥರನ್ನು ನೋಡುತ್ತಿರುವುದು ಎಂದೇ. 'ಬಹಳ ಹೊತ್ತಿನಿಂದ ಗುರುಗಳು ಒಳಗೂ ಹೊರಗೂ ಚಡಪಡಿಸುತ್ತಾ ಯಾರದೋ ಬರುವಿಗಾಗಿ ಕಾಯುತ್ತಿದ್ದರು. ಎಷ್ಟು ಹೊತ್ತಿನಿಂದ ಎಷ್ಟೊಂದು ಜನ ಕಾಯುತ್ತಿದ್ದಾರೆ. ಆದರೆ, ಗುರುನಾಥರು ನಿಮಗಾಗಿ ಎಲೆ ಹಾಕಿಕೊಂಡು ಕಾಯುತ್ತಿದ್ದಾರಲ್ಲ.. ಏನಿದರ ರಹಸ್ಯ?' ಎಂದು ಅವರು ಕೇಳಿದಾಗ, ಆ ರಾಮಭಕ್ತರೆನ್ನುತ್ತಾರೆ: 'ನನಗೇನು ಗೊತ್ತು. ಎಲ್ಲ ಬಲ್ಲ ಆ ಗುರುನಾಥರನ್ನೇ ಕೇಳಬೇಕು' ,  ಒಳಗೆ ಹೋಗಿ ಅಮ್ಮನಿಗೆ ನಮಸ್ಕಾರ ಮಾಡಿ ಬರುವಾಗ ಅವರೆಂದಿದ್ದರು.  'ಬರ್ತಾ ಇರಿ ಮುಂದಿನ ಸಾರಿ ನೀವು ಬಂದಾಗ ಅವನು ಮನೆಯಲ್ಲಿ ಇರುವುದಿಲ್ಲ - ಹಾಗಂತ ನೀವು ಬರದೇ ಹೋಗಬೇಡಿ' ಎಂದು ಕರೆ ನೀಡಿದ್ದರು' ಪ್ರೀತಿಯಿಂದ. ಅರಿತವರಿಗೆ ಮಾತ್ರ ಅರಿವಾಗುತ್ತೆ. ಅದು ನಡೆದಿದ್ದೂ ಹಾಗೆಯೇ" ಎಂದು ಮುಂದುವರೆಸಿ, "ಕೂಡಲಿಯ ಕಿರಿಯ ಶ್ರೀಗಳೊಂದಿಗೆ ಬೆಂಗಳೂರಿಗೆ ಹೊರಟಿದ್ದ ನಾನು ಸಖರಾಯಪಟ್ಟಣಕ್ಕೆ ಗುರುದರ್ಶನ ಮಾಡಿ ಹೋಗೋಣವೆಂದಾಗ, ಆಯಿತೆಂದರು. ಮನೆಯ ಬಾಗಿಲಿಗೆ 'ಹೋಗಿ ಕಾರು ನಿಲ್ಲಿಸಿ ನಾನು ಒಳ ಹೋದೆ. ಗುರುಪತ್ನಿಯವರು ಇದ್ದರು. 'ಶೀಗಳು ಬಂದಿದ್ದಾರೆ. ಒಳಕರೆತರಲೇ " ಎಂದಾಗ, ಅವರು ಕೂಡಲೇ ಒಂದು ಬಿಂದಿಗೆ ನೀರು, ಅದರ ಮೇಲೆ ಕಾಯಿ ಇಟ್ಟುಕೊಂಡು ಶ್ರೀಗಳನ್ನು ಸ್ವಾಗತಿಸುವ ಸಿದ್ಧತೆ ಮಾಡಿದರು. ಅದೆಲ್ಲಿ ಇದ್ದವೊ, ಎರಡು ನಾಯಿಗಳು ಬಂದು ಶ್ರೀಗಳ ಕಾರಿನ ಬಳಿ ನಿಂತು, ಬಾಲ ಅಲ್ಲಾಡಿಸತೊಡಗಿದವು. ಮನೆಯ ಒಳಗಿನವರೆಗೆ ಬಾಲ ಅಲ್ಲಾಡಿಸುತ್ತಾ ಬಂದವು. ಒಳಗೆ ಶ್ರೀಗಳನ್ನು ಮನೆ ಹಾಕಿ ಕೂರಿಸಿದೆವು. ಅವರು ಜಪದಲ್ಲಿದ್ದರು. ಅಮ್ಮ ಹೊರಬಂದು 'ಮನೆಯಲ್ಲಿ ಹಾಲಿಲ್ಲವಲ್ಲ ಶ್ರೀಗಳಿಗೆ ಕೊಡಲು, ಎಂದಾಗ ನಾನು ತರುತ್ತೇನೆ. ಎಲ್ಲಿ ಸಿಗುತ್ತೆ ಹೇಳಿ ಎಂದಾಗ, 'ಈ ಊರಲ್ಲಿ ಹಾಲು ಸಿಗುವುದು ಕಷ್ಟ' ಎನ್ನುತ್ತಿರುವಾಗ - ಮನೆಯ ಮುಂದೆ ಅಂಬಾ ಎಂದು ಗೋಮಾತೆಯೊಂದು ಬಂದಿತು. ಅಮ್ಮ ಅದರ ಹಾಲು ಕರೆದರು. ಕರುವೂ ಇಲ್ಲ, ತಿಂಡಿಯೂ ಇಲ್ಲ. ಎಲ್ಲರಿಗೂ ಹಾಲನ್ನು ಅಮ್ಮ ನೀಡಿದರು. ಶ್ರೀಗಳು ಹೊರಟಾಗ ಆ ಎರಡು ನಾಯಿಗಳು ಕಾರಿನವರೆಗೆ ಶ್ರೀಗಳನ್ನು ಕಳಿಸಿಕೊಟ್ಟು 'ಊಂ' ಎಂದವು. ಶೀಗಳು ಕೇಳಿದರು 'ಏನಿದು ಈ ವಿಚಿತ್ರ' ಶ್ರೀಗಳೇ ತಮಗೆ ವೇದ್ಯವಾಗದ್ದು ಏನಿದೆ? ಎಂದೆ. ಹೀಗೆ ಅಮ್ಮನ ಮಾತೂ ಸತ್ಯವಾಗಿತ್ತು. ಬಂದ ನಮಗೆ ದತ್ತನ ರೂಪದಲ್ಲಿ ಆದರಿಸಿ - ಸತ್ಕರಿಸಿದ ಗುರುನಾಥರ ಲೀಲಾ ವಿನೋದ ಅರಿತವರಿಗೆ ಮಾತ್ರ ಅರಿವಾಗಿತ್ತು. ಗುರುನಾಥರ ಮನೆಯ ಸತ್ಕಾರ್ಯ, ಬಂದವರ ಸೇವೆಯಲ್ಲಿ ಆ ಮನೆಯ ಪ್ರಾಣಿ ಪಕ್ಷಿಗಳೂ ತಮ್ಮ ಕರ್ತವ್ಯವನ್ನು ಸ್ವಯಂ ಪ್ರೇರಿತವಾಗಿ ನೆರವೇರಿಸುತ್ತಿದ್ದನ್ನು ನೋಡಿದರೆ, ಗುರುನಾಥರ ಮನೆ ಒಂದು ಸಾಮಾನ್ಯ ಮನೆಯಲ್ಲ ಅದೊಂದು ಋಷ್ಯಾಶ್ರಮವೇ ಆಗಿತ್ತು. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 



।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।



For more info visit :  http://srivenkatachalaavadhoota.blogspot.in/

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 56

ಅರುಣ ಪ್ರಶ್ನೆ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಸಾಮಾನ್ಯವಾಗಿ ಗುರುನಾಥರು ಮನೆಯಲ್ಲಿದ್ದಾಗ ಹಾಗೂ ಯಾವುದೇ ಭಕ್ತರ ಮನೆಯಲ್ಲಿದ್ದರೂ ಅರುಣ ಪ್ರಶ್ನೆ, ರುದ್ರ ಹಾಗೂ ಪುರುಷ ಸೂಕ್ತ ಅರುಣ, ಅನ್ನದಾನ ನಡೆಯುತ್ತಲೇ ಇರುತ್ತಿತ್ತು. ಗುರುನಾಥರು ಒಂದು ಘಟನೆಯನ್ನು ಆಗಾಗ್ಗೆ ಹೇಳುತ್ತಿದ್ದರು. 

ಒಮ್ಮೆ ಶಿವಮೊಗ್ಗದಲ್ಲಿ ಅಡಿಕೆ ಮಂಡಿ ವ್ಯವಹಾರ ಮುಗಿಸಿ ಬಸ್ ಸ್ಟ್ಯಾಂಡ್ ಸಮೀಪದ ಹೋಟೆಲ್ ಒಂದರಲ್ಲಿ ಕಾಫಿ ಕುಡಿಯುತ್ತಾ ಕುಳಿತಿದ್ದರು. ಆಗ ಅವರನ್ನು ಹುಡುಕಿ ಬಂದ ವ್ಯಕ್ತಿಯೋರ್ವರು ತಾನೊಬ್ಬ ತಹಶೀಲ್ದಾರರೆಂದು ಪರಿಚಯಿಸಿಕೊಂಡರು. ಹಾಗೂ ತನ್ನ ಹೆಂಡತಿ ಹಾಗೂ ಮಕ್ಕಳು ತನ್ನನ್ನು ಬಿಟ್ಟು ಹೋಗಿದ್ದು ಪರಿಹಾರ ಸೂಚಿಸಬೇಕೆಂದು ಪ್ರಾರ್ಥಿಸಿದರು. 

ಅದಕ್ಕೆ ಗುರುನಾಥರು "ನಾನು ಹೇಳಿದಂತೆ ಮಾಡ್ತೀರಾ? ನನ್ನ ಮಾತಿನ ಮೇಲೆ ನಂಬಿಕೆ ಇದೆಯಾ?" ಎಂದು ಪ್ರಶ್ನಿಸಲು ಅವರು ಸಮ್ಮತಿಸಿದರು. 

ಆಗ ಗುರುನಾಥರು "ಬ್ಯಾಂಕ್ ನಲ್ಲಿ ಇಷ್ಟು ಹಣವಿದೆಯಲ್ಲಾ?. ಅದು ನಿನ್ನ ಲಂಚದ ಹಣ. ಎಷ್ಟು ಲಂಚವಿದೆ. ಅದನ್ನು ಇನ್ನು ಮರೆತು ಬಿಡು. ಮುಟ್ಟಬೇಡ. ಇನ್ನು ಮುಂದೆ ಲಂಚ ಸ್ವೀಕರಿಸಬೇಡ. ಹಾಗೂ ಸದಾ ಅರುಣ ಪ್ರಶ್ನೆಯನ್ನು ಹೇಳಿಕೋ. ಇಷ್ಟೇ ದಿನದಲ್ಲಿ ನಿನ್ನ ಸಂಸಾರ ಸರಿ ಹೋಗುವುದು" ಎಂದರಂತೆ. 

ಆ ವ್ಯಕ್ತಿ ಹಾಗೆಯೇ ನಡೆದುಕೊಂಡರಂತೆ. ಅಂತೇಯೇ ಅವರ ಸಂಸಾರವು ಸರಿ ಹೋಯಿತಂತೆ. 

"ಅಯ್ಯಾ, ನನಗೆ ಈಶ್ವರ ನೀಡಿರುವ ಶಕ್ತಿಯಲ್ಲಿ ಪ್ರಕಟಪಡಿಸಿರುವುದು ಕೇವಲ .0001 ರಷ್ಟೂ ಇಲ್ಲ. ಅಷ್ಟಕ್ಕೇ ಜನ ನನ್ನ ಈ ರೀತಿ ಮುತ್ಕೋತಾರಲ್ಲಾ? ಇನ್ನೇನಾದ್ರೂ 1% ಪ್ರಕಟಪಡಿಸಿದರೆ ಈ ಜನ ನನ್ನ ಇರಗೊಡಿಸುವುದಿಲ್ಲ ಕಣೋ" ಅನ್ನುತ್ತಿದ್ದ ಮಾತು ಸದಾ ನೆನಪಾಗುತ್ತದೆ. 

"ಕೇವಲ ತನ್ನ ದೃಷ್ಠಿಯಿಂದ ಏನು ಬೇಕಾದರೂ ಸಾಧಿಸಬಲ್ಲ ಶಕ್ತಿ ಇದ್ದಾಗಲೂ, ಲೌಕಿಕದೊಳು ಪರಮ ಲೌಕಿಕನಾಗಿ ಯಾರಿಂದಲೂ ಏನನ್ನೂ ಅಪೇಕ್ಷಿಸದೆ ಕೇವಲ ತುಂಡು ಬಟ್ಟೆಯನ್ನುಡುತ್ತಿದ್ದ ಅವರ ಸರಳತೆ ಬಹುಶಃ ಜಗತ್ತಿಗೆ ಮಾದರಿ ಎನಿಸುತ್ತದೆ". 

ಕೊನೆಯ ದಿನಗಳು 


ಒಮ್ಮೆ ಓರ್ವ ಪೀಠಾಧಿಪತಿ ಗುರುನಾಥರನ್ನು ಕುರಿತು ಕೇಳಿದ ಪ್ರಶ್ನೆಗೆ, "ನನಗೆ ಗೊತ್ತಿರುವುದು ಕೇವಲ ಎರಡು ಅಕ್ಷರ ಮಾತ್ರವೇ. ಅದುವೇ ಗ ಕೊಂಬು ಗು, ರ ಕೊಂಬು ರು" ಎಂದಿದ್ರು. 

ಆ ಎರಡಕ್ಷರದ ಅರ್ಥ ತಿಳಿಯಲು ನಾನು ಇಂದಿಗೂ ಹರಸಾಹಸ ಪಡುತ್ತಿದ್ದೇನೆ. ನನ್ನ ವೈಯಕ್ತಿಕ ಲೌಕಿಕ ವಿಚಾರದ ಏರು-ಪೇರುಗಳೇನೇ ಇದ್ದರೂ, ಅವರ ಸಾನ್ನಿಧ್ಯ ನನಗೆ ಸದಾ ಒಂದು ಅವ್ಯಕ್ತವಾದ ನೆಮ್ಮದಿ, ಧೃಡತೆ ಹಾಗೂ ಸಂತಸವನ್ನು ನೀಡುತ್ತಿತ್ತು. ಇವೆಲ್ಲಾ ಇದ್ದಾಗ್ಯೂ ಗುರುನಾಥರೊಂದಿಗೆ ನನ್ನ ಜಗಳ, ತರಲೆಗಳು ಎಂದಿನಂತೆಯೇ ಸದಾ ನಡೆಯುತ್ತಲೇ ಇರುತ್ತಿತ್ತು. 

ಒಮ್ಮೆ ಏನೋ ವಿಚಾರಕ್ಕೆ ನಾನು "ಇದನ್ನೆಲ್ಲಾ ನಂಗೆ ಯಾಕೆ ಹೇಳ್ತೀರಿ ಸಾರ್? ಅದ್ರಿಂದ ನಂಗೇನ್ ಆಗ್ಬೇಕು?. ಎಲ್ರಿಗೂ ಅವರವರಿಗೆ ಬೇಕಾದ್ದೆಲ್ಲಾ ಕೊಡ್ತೀರಾ.... ? ನಂಗೆ ಯಾಕೆ ಈ ರೀತಿ ತಡ ಮಾಡ್ತಿದೀರಾ?" ಎಂದೆ. 

ಅದಕ್ಕವರು "ಒಬ್ಬ ಗುರು ಇದ್ನಂತೆ. ಅವರೊಂದಿಗೆ ಹಲವಾರು ಶಿಷ್ಯರಿದ್ರಂತೆ. ಎಲ್ರೂ ವೇದ-ವೇದಾಂತ ಪರಿಣಿತರಾದರೂ ಒಬ ಶಿಷ್ಯ ನಿನ್ನಂತವನು ಏನ್ ಮಾಡಿದ್ರೂ ವಿದ್ಯೆ ತಲೆಗೆ ಹತ್ಲಿಲ್ವಂತೆ. ಆದ್ರೆ ಸೇವೆಯಲ್ಲಿ ಮಾತ್ರ ನಿನ್ನಂತೆ ಸದಾ ಮುಂದಿದ್ನಂತೆ". 

"ಇದ್ದಕ್ಕಿದ್ದಂತೆ ಒಂದು ದಿನ ಗುರು ದೇಹ ಬಿಟ್ಟನಂತೆ. ಬಿಡುವ ಮೊದಲು ಆ ನಿನ್ನಂತಹ ಶಿಷ್ಯನನ್ನು ಕರೆದು ಒಂದು ಕಡೆ ಬೆರಳು ಮಾಡಿ ತೋರಿಸಿ ದೇಹ ಬಿಟ್ಟರಂತೆ. ಆ ಶಿಷ್ಯ ಬೆರಳು ತೋರಿಸಿದತ್ತ ನೋಡಲಾಗಿ ಅಲ್ಲಿ ಒಂದು ಹಳೆಯ ಬಟ್ಟೆ (ಅರಿವೆ). ಅದರ ಮುಂದೆ ಒಂದು ಚೂರು ಇದ್ದಿಲು ಹಾಗೂ ಅದರ ಮುಂದೆ ದೀಪ (ಬೆಳಕು) ವಿತ್ತಂತೆ" ಎಂದು ಮಾರ್ಮಿಕವಾಗಿ ನುಡಿದರು. 

ನಾನು ಅದರ ಒಳಾರ್ಥ ಅರಿಯಲು ಇಂದಿಗೂ ಪ್ರಯತ್ನಿಸುತ್ತಲೇ ಇರುವೆನು. 

ಚರಣದಾಸನಾದ ನನ್ನ ಹೆಸರನ್ನು ಬದಲಾಯಿಸಿ ಕರೆಯಲಾರಂಭಿಸಿದ ಗುರುನಾಥರು, ಒಮ್ಮೆ ಒಂದು ಬೆಳ್ಳಿಯ ಉಡುದಾರ ತರಿಸಿ ನನ್ನ ಸೊಂಟಕ್ಕೆ ಕಟ್ಟಿ, "ಯಾಕೆ ಇಷ್ಟು ಭಯ ಹಿಂಸೆ ನಿನಗೆ? ಅದಕ್ಕೆ ಇದನ್ನು ಕಟ್ಟಿರುವೆ" ಎಂದಿದ್ದರು. 

ಮತ್ತೊಮ್ಮೆ "ನಾನು ಇಚ್ಛಾಮರಣಿ. ಎಂದು ಬೇಕೋ ಅಂದು ದೇಹ ಬಿಡುವೆ" ಅಂದಿದ್ರು. 

"71ನೇ ವರ್ಷ ತುಂಬ ಸಂದಿಗ್ಧವಾದದ್ದು. ಅದನ್ನು ದಾಟಿದರೆ 83ರವರೆಗೂ ದೇಹ ಬಿಡೋಲ್ಲ" ಅಂದಿದ್ರು. 

ದೇಹ ಬಿಡುವ ಕೆಲ ತಿಂಗಳಿನಿಂದ ಹಲವಾರು ಶಿಷ್ಯರ ಮನೆಗಳಲ್ಲಿ ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಸ್ಪರ್ಶ ಪಾದುಕಾ ಸಮಾಧಿ ನಿರ್ಮಿಸಿದ್ದರು. ಊರಿಂದ ಹೊರಗೆ ಎಲ್ಲೇ ಇದ್ದರೂ ರಾತ್ರಿ 10:30ರ ಒಳಗೆ ಮನೆ ತಲುಪುತ್ತಿದ್ದರು. 

ಒಮ್ಮೆ ರಾತ್ರಿ ದೌಡಾಯಿಸಿ ಮನೆಗೆ ಬಂದವರೇ, "ಎಲ್ಲಿ ಊರ ಹೊರಗೆ ಜೀವ ಹೋಗುತ್ತೋ ಅಂತ ಆತಂಕವಾಗಿತ್ತು ಕಣಯ್ಯಾ" ಅಂದಿದ್ರು. ಪದೇ ಪದೇ "ಅಯ್ಯಾ ಇನ್ನು ಈ ದೇಹ ಇಟ್ಕೊಂಡು ಕೆಲಸ ಮಾಡೋಕಾಗಲ್ಲ ಹೊರೆ ಜಾಸ್ತಿ ಆಯ್ತು ಕಣೋ" ಅಂತ ಹೇಳ್ತಿದ್ರು. 

ದೇಹ ಬಿಡುವ ಎರಡು ದಿನ ಮೊದಲು ಚಿಕ್ಕಮಗಳೂರಿನ ಹಲವು ಭಕ್ತರನ್ನೆಲ್ಲಾ ಒಂದೆಡೆ ಸೇರಿಸಿ ಊಟ ಹಾಕಿಸಿ ಎಲ್ಲರನ್ನೂ ಮಾತನಾಡಿಸಿ, ಕಾರನ್ನೇರಿ ದೃಷ್ಟಿ ಕಾಣುವವರೆಗೂ ಕೈ ಬೀಸುತ್ತಾ ಇದ್ದರು. ವಿಪರೀತ ಲೋಕದ ಭಾರ ಹೊತ್ತಿದ್ದರಿಂದ ಮೊಣಕಾಲು ಗಂಟಿನಲ್ಲಿ ಊತವಾಗಿ ಕೀವು ತುಂಬಿತ್ತು. ಕೆಲವು ವೈದ್ಯರು ತಪಾಸಣೆ ನಡೆಸಿ ಕಾಲಿಗೆ ಯಾವುದೇ ಆಪರೇಷನ್ ಬೇಡ, ಕೇವಲ ಮಾತ್ರೆಯಿಂದಲೇ ಗುಣಪಡಿಸಬಹುದೆಂದು ತಿಳಿಸಿದ್ದರು. 

ಆದರೆ ಕೆಲವರ ವ್ಯಕ್ತಿಗತ ಪ್ರತಿಷ್ಠೆಯಿಂದಾಗಿ ಆಪರೇಷನ್ ಆಗಲೇ ಬೇಕಾದ ಅನಿವಾರ್ಯತೆ ಉಂಟಾಯಿತು. 

ನಾನು ಎಂದಿನಂತೆ ನಿತ್ಯದ ಕಾರ್ಯಗಳನ್ನೆಲ್ಲ ಪೂರೈಸಿ ಗುರುನಾಥರ ದರ್ಶನಕ್ಕೆಂದು ನಿತ್ಯದಂತೆ ಅವರು ಮಲಗಿರುತ್ತಿದ್ದ ಕೋಣೆಗೆ ಹೋದೆ. ತಲೆ ಹಿಂದಕ್ಕೆ ಮಾಡಿ ಕುಳಿತಿದ್ದ ಗುರುನಾಥರು, "ಅಯ್ಯ, ವೈದ್ಯರು ಹೇಳಿದ್ರು ಆಪರೇಷನ್ ಅನಿವಾರ್ಯವಂತೆ. ಹೋಗಿ ಬರ್ತೀನಿ. ಮನೆ ಕಡೆ ಜೋಪಾನ" ಅಂದ್ರು. 

ನಾನು, "ನಿನ್ನೆ ತಾನೇ ಆಪರೇಷನ್ ಬೇಡಾಂತ ಆಗಿತ್ತಲ್ಲಾ ಸಾರ್, ಈಗೇಕೆ ಇದ್ದಕ್ಕಿದ್ದಂತೆ ಈ ತೀರ್ಮಾನ?" ಅಂದೆ. 

ಅದಕ್ಕವರು "ಜನರಿಗೆ ಈ ದೇಹದ ಮೇಲೆ ಅದೊಂದೇ ಆಸೆ ತಾನೇ? ಪೂರೈಸಿಕೊಳ್ಳಲಿ ಬಿಡು" ಅಂದ್ರು. 

ನಾನದಕ್ಕೆ, ಜನರಾಸೆ ಪೂರೈಸಿದರೆ ನೋವು ಅನುಭವಿಸಬೇಕಾದದ್ದು ನೀವಲ್ವಾ ಸಾರ್? ನಾನೇ ತಡೆಯಲೇ?" ಅಂದೆ. 

ಅದಕ್ಕವರು "ಇನ್ನೂ ಮಾತನಾಡಬೇಡ" ಅಂದ್ರು. ದೇಹ ಭಾವವನ್ನು ಸಂಪೂರ್ಣವಾಗಿ ತೊರೆದಿದ್ದ ಗುರುನಾಥರು ದೇಹದ ಮೇಲಿನ ಕಾಳಜಿಯನ್ನು ಸಂಪೂರ್ಣ ಕಡೆಗಣಿಸಿದ್ದರು. ಕೆಲವು ಶಿಷ್ಯರು ತಮ್ಮ ಮಾತಿನಂತೆಯೇ ನಡೆಯಬೇಕೆಂದು ಗುರುನಾಥರ ಗಾಯದ ಮೇಲೆ ಒತ್ತಿ ಹಿಂಸೆ ಮಾಡುತ್ತಿದ್ದಾಗಲೂ ಏನೊಂದೂ ಮಾತನಾಡುತ್ತಿರಲಿಲ್ಲ. 

ದೇಹ ಬಿಡುವ ಬಹುಶಃ ಒಂದು ತಿಂಗಳ ಮೊದಲು ನಾನು ನನ್ನ ಕೆಲಸದ ವಿಚಾರವಾಗಿ ಗುರುನಾಥರಲ್ಲಿ ಕೇಳಬೇಕೆಂದುಕೊಂಡಿದ್ದರೂ ಕೇಳಿರಲಾಗಲಿಲ್ಲ. ಅದಾಗಿ ಒಂದು ವಾರದ ನಂತರ ಹಳೆಯ ದೇಗುಲಗಳ ಜೀರ್ಣೋದ್ಧಾರಕ್ಕಾಗಿ ಸಂಕಲ್ಪ ಮಾಡಿದ್ದ ಏಳು ಜನ ಯುವಕರು ಬಂದಿದ್ದರು. ನನ್ನ ಕೈಯಿಂದ ಅವರೆಲ್ಲರಿಗೂ ಕೈ ತುಂಬ ದಕ್ಷಿಣೆ, ಎಳನೀರು, ಕಾಯಿ, ಕೊಡಿಸಿದರು. 

ಆಗ ಗುರುನಾಥರು "ಈಗ ಏನೋ ಕೇಳಬೇಕೆಂದು ಒಂದು ವಾರದಿಂದ ಪ್ರಯತ್ನಿಸುತ್ತಿರುವನು. ಆದ್ರೆ ಬೇಕಾದ್ದಾಗಲಿ ನಾ ಅವನನ್ನು ಬಿಡಲ್ಲ. ಅವನಿಂದ ಒಂದು ಕಾರ್ಯವಾಗಬೇಕಾಗಿದೆ. ಅದಾದ ನಂತರ ಅವನ ಉದ್ದೇಶವನ್ನು ಪೂರೈಸುವೆ" ಎಂದು ನುಡಿದರು. ಹೀಗೆ ನಮ್ಮ ಮನದ ಸಣ್ಣ ಸಣ್ಣ ಏರುಪೇರುಗಳನ್ನು ಸದಾ ಗುರುತಿಸುತ್ತಿದ್ದ ಗುರುನಾಥರು ಕಾಲ ಬಂದಾಗ ಉತ್ತರಿಸುತ್ತಿದ್ದರು. 

ಬಹುಶಃ ಒಂದು ವಾರದ ಮೊದಲು ನನಗೆ ಯೋಗದ ಹಲವು ಪ್ರಕಾರಗಳನ್ನು ಹೇಳಿಕೊಟ್ಟರು. 

ಗುರುನಾಥರ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿದ್ದ ಓರ್ವ ಮಹಿಳೆಯ ಮಗಳು ತೀರ್ಥಹಳ್ಳಿಯಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದರು. ವಿಷಯ ತಿಳಿದ ಗುರುನಾಥರು ಕರೆ ಮಾಡಿ ಆಕೆಗೆ ಧೈರ್ಯ ತುಂಬಿದರು ಹಾಗೂ ಔಷಧಿಯನ್ನೂ ತಿಳಿಸಿದರು. 

ಅಂತೆಯೇ ಆಕೆ ಗುಣಮುಖಳಾಗಿ ವಿಷಯ ತಿಳಿಸಲು ನನಗೆ ಕರೆ ಮಾಡಿದ್ದರು. ಆಗ ಅವರೊಂದಿಗೆ ಮಾತನಾಡಿದ ಗುರುನಾಥರು "ಎಲ್ಲಿ ನಂಗೆ ಬೋಂಡ, ಸಜ್ಜಿಗೆ ಕೊಡಲ್ವೇ?" ಅಂದ್ರು. 

ಅದಕ್ಕೆ ಆ ತಾಯಿ "ಗುರುಗಳೇ ಊರಿಂದ ಬಂದಾಕ್ಷಣ ಮಾಡಿಕೊಡ್ತೀನಿ" ಅಂದ್ರು. 

ಆಗ ಗುರುನಾಥರು "ಇಲ್ಲ, ನನ್ನ ಪರವಾಗಿ ನಮ್ಮ ಚರಣದಾಸನಿಗೆ ಮಾಡಿಕೊಡು ಆಯ್ತಾ?" ಅಂದ್ರು. 

ಅದೇ ರಾತ್ರಿ 11:30 ರ ಸುಮಾರಿಗೆ ದೇಹತ್ಯಾಗ ಮಾಡಿದರು. 

ಇದಕ್ಕೂ ಒಂದು ವಾರ ಮೊದಲು ಅಲ್ಲಿನ ಓರ್ವ ಮಹಿಳೆಯನ್ನು  ಕರೆದು, "ನೋಡು, ಇನ್ನೊಂದೇ ವಾರ ನಾ ಹೊರತು ಹೋಗ್ತೀನಿ. ಆಗ ಓರ್ವ ವ್ಯಕ್ತಿ, ಅವರಿಗೆ ಸಮಾಧಾನ ಹೇಳೋಕೆ ಧೈರ್ಯವಿರೋ ಮಹಿಳೆ ಯಾರಂತ ನಮ್ಮ ಚರಣದಾಸನನ್ನು ಕೇಳ್ತಾರೆ. ಆಗ ಅವನು ನಿಮ್ಮ ಹೆಸರು ಹೇಳ್ತಾನೆ. ಹಾಗೂ ಬೆಳಗಿನ ಜಾವ 4:30 ಕ್ಕೆ ಚರಣದಾಸನೇ ಕರೆಯೋಕೆ ಬರ್ತಾನೆ. ಸಿದ್ಧವಾಗಿರಮ್ಮ" ಅಂದಿದ್ರು. ಆದ್ರೆ ಯಾರಿಗೂ ಅವರ ಮಾತಿನ ಮರ್ಮ ಅರ್ಥವಾಗಿರಲಿಲ್ಲ. ಅವರು ಹೇಳಿದಂತೆಯೇ ನಡೆದಾಗಲೇ ನಮಗೆ ಅರ್ಧವಾಗಿದ್ದು. ಆದರೇನು? ಕಾಲ ಮಿಂಚಿ ಹೋಗಿತ್ತು. 

ಕೇವಲ ಎರಡು ದಿನ ಮೊದಲು ರಾತ್ರಿ ಓರ್ವ ಭಕ್ತರಿಗೆ ಕರೆ ಮಾಡಿ "ಒಂದು ಸಾರಿ ಬಂದು ಹೋಗು ಸಾಕು. ನನ್ನ ಜೀವ ಒಂದು ವರ್ಷ ಉಳಿಯುತ್ತೆ. ಕಾರು ಕಳಿಸುತ್ತೇನೆ. ನಾನಿನ್ನು ಹಲವು ಕೆಲಸ ಮಾಡಬೇಕಿದೆ" ಅಂದ್ರು. 

ಗುರುನಾಥರಿಂದ ಹಲವು ಅನುಕೂಲಗಳನ್ನು ಪಡೆದಿದ್ದ ಆ ತಾಯಿ ಗುರುವಾಕ್ಯವನ್ನು ತಿರಸ್ಕರಿಸಿದರು. ಆಗ ಗುರುನಾಥರು "ಇನ್ನೂ ಕೇವಲ 48 ಗಂಟೆ ಕಾಲ. ಆಮೇಲೆ ನಾ ಹೊರಟು ಹೋಗ್ತೀನಿ" ಅಂದ್ರು. ಆದರೆ ಎಲ್ಲಾ ಅನುಕೂಲ ಪಡೆದಿದ್ದ ಅವರು ಗುರುವನ್ನು ಮರೆತರು. ಸಾಮಾನ್ಯವಾಗಿ ಗುರುನಾಥರು ಈ ರೀತಿ ಹೇಳಿದಾಗ "ಹೆದರಿಸಬೇಕು ಕಣಯ್ಯಾ.... " ಎಂದು ಕಣ್ಣು ಮಿಟುಕಿಸುತ್ತಿದ್ದರು. ಆದರೆ ಅಂದು ಅವರು ನಿರ್ಲಿಪ್ತ ಭಾವದಲ್ಲಿದ್ದರು. ನನಗೆ ವಿಚಿತ್ರವೆನಿಸಿತು. 

ಈ ಸಂದರ್ಭ ಗಮನಿಸಿದಾಗ ಗುರುನಾಥರು ಆಗಾಗ್ಗೆ ನಾವಿಬ್ಬರೇ ಇರುವಾಗ ಹೇಳುತ್ತಿದ್ದ ಒಂದು ಮಾತು ನೆನಪಾಗುತ್ತದೆ:- "ಅಯ್ಯಾ, ಜಗತ್ತಿನಲ್ಲಿ ಮನುಷ್ಯನಷ್ಟು ಕೆಟ್ಟ ಪ್ರಾಣಿ ಇನ್ನೊಂದಿಲ್ಲ ಕಣೋ. ಹಾವಿಗೆ ಹಲ್ಲಿನಲ್ಲಿ ವಿಷ. ನಾಯಿಗೆ ಜೊಲ್ಲಿನಲ್ಲಿ ವಿಷ. ಆದ್ರೆ ಮನುಜನಿಗೆ ಮೈ ಎಲ್ಲಾ ವಿಷ. ಅವನಿಗೆ ಕೃತಜ್ಞತೆ ಎಂಬುದಿಲ್ಲ. ಆದ್ರೆ ಸಾಧನೆ ಮಾಡಲು ಈ ಜನ್ಮಕ್ಕಿಂತ ಶ್ರೇಷ್ಠ ಜನ್ಮ ಇನ್ನೊಂದಿಲ್ಲ" ಅನ್ನುತ್ತಿದ್ದರು. 

ಮತ್ತೊಮ್ಮೆ "ಅಯ್ಯಾ ನೀ ಎಲ್ಲರನ್ನೂ ನಮ್ಮವರು ಅಂದುಕೊಂಡಿದೀಯಾ? ಈ ದೇಹ ಬಿಡಲು ನಿಂಗೇ ಗೊತ್ತಾಗುತ್ತೆ. ಆ ನಂತರ ನಾಯೀನೂ ನಿನ್ನ ಮೂಸಿ ನೋಡಲ್ಲ. ನೋಡ್ತಾ ಇರು" ಅಂದಿದ್ರು. 

ಅದು ಬದುಕಿನ ವಾಸ್ತವ. ಶಿಷ್ಯ ವೃಂದದಲ್ಲಿ ಕೆಲವೇ ಕೆಲವರನ್ನು ಹೊರತುಪಡಿಸಿ ಯಾರೊಬ್ಬರೂ ನನ್ನತ್ತ ತಿರುಗಿ ನೋಡಲಿಲ್ಲ. ಮಾತ್ರವಲ್ಲ, ಆಳಿಗೊಂದು ಚುಚ್ಚು ಮಾತನಾಡತೊಡಗಿದರು. ಇದು ನನಗೆ ಬದುಕನ್ನು ಕಲಿಸಿತೆನಿಸುತ್ತದೆ.

ಮುಂದೆ ಒಂದು ದೊಡ್ಡ ಕಾರ್ಯಕ್ರಮ ಮಾಡಿ 250ಕ್ಕೂ ಹೆಚ್ಚು ವಾಹನ ನಿಲ್ಲಿಸಲು ಏರ್ಪಾಡು ಮಾಡಬೇಕು ಅಂತಾ ಇದ್ರೂ. ಅದು ಆ ದೇಹ ಅಂತ್ಯವಾದ ದಿನ ನೆರವೇರಿತು. 

ಒಂದಿಷ್ಟು ಮಾತು:- "ಗುರುನಾಥರು ಜನರನ್ನು ಮೊದಮೊದಲು ಅವರಿಚ್ಛೆಯಂತೆ ನಡೆಯಲು ಬಿಟ್ಟು ನಿಧಾನವಾಗಿ ತನ್ನ ದಾರಿಗೆ ತಂದು ಆನಂತರ ಶಿಸ್ತನ್ನು ಕಲಿಸುತ್ತಿದ್ದ ರೀತಿ ನಿಜಕ್ಕೂ ಸ್ಮರಣೀಯ. 

ಅವರಾಡುತ್ತಿದ್ದ ಕೆಲ ಮಾತುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. 

ಕಂಡವರ ಕೈ ಬ್ಲಡ್ಡು. ಡಾಕ್ಟರ್ ಕೈಗೆ ದುಡ್ಡು. 

ಬ್ಯಾಂಕ್  ಅಂದ್ರೆ ಕಂಡವರ ದುಡ್ಡನ್ನು ಬಡ್ಡಿಗೆ ಬಿಟ್ಟು ತಾವು ಜೀವನ ಮಾಡುವುದು. 

ಈ ಕಪ್ಪೆಗಳು ಕೊಚ್ಚೆಯಲ್ಲಿದ್ರೂ ಎಷ್ಟು ಸುಖವಾಗಿ ಜೀವನ ಮಾಡ್ತಾವಯ್ಯಾ? ಆದ್ರೆ ಈ ಮನುಷ್ಯ ಕರ್ಲಾನ್ ಹಾಸಿಗೆ, ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಫ್ಯಾನು ಎಲ್ಲಾ ಇದ್ರೂ ಹುಟ್ಟೋ ಮಗು ಮಾತ್ರ ಅಷ್ಟಾವಕ್ರ. ಯಾಕಯ್ಯಾ ಹೀಗೆ? ಹೇಳು ನೋಡೋಣ ಅಂತಿದ್ರು. 

"ಅಯ್ಯಾ ಚರಣದಾಸ ಕೊನೆಗೆ ನನ್ನ ನಿನ್ನ ಜೊತೆ ಇರೋದು ಈ ನಾಯಿ ಕತ್ತೆ ಮಾತ್ರ ಕಣೋ. ಅವನ್ನ ಕಡೆಗಣಿಸಬೇಡ" ಅಂದಿದ್ರು. 

ನೀ ಎಲ್ಲೇ ಹೋದ್ರೂ ಜೊತೆಗಿರ್ತೀನಿ ಬಿಡಲ್ಲ. ಆ ದೇಹ ನಿಂದಲ್ಲವೋ, ನಂದು ಎಮ್ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಜೀವನದ ಕಲ್ಲು ಬೆಟ್ಟಗಳ ಹಾದಿಯನ್ನು ಧೈರ್ಯವಾಗಿ ಸಾಗಿಸುತ್ತಿದ್ದೇನೆ. ಬಂದದ್ದನ್ನು ಬಂದಂತೆ ಸ್ವೀಕರಿಸುತ್ತಾ ಬದುಕಿನಬಂಡಿ ಸಾಗಿಸುತ್ತಿದ್ದೇನೆ. 

ಮಡಿ-ಮೈಲಿಗೆ ಜಾತಿಗಳ ಬಗ್ಗೆ ಗುರುನಾಥರು ಹೀಗೆ ಹೇಳುತ್ತಿದ್ದರು. "ನಂಗೆಂತದಯ್ಯಾ ಮಡಿ-ಮೈಲಿಗೆ? ಯಾವುದಯ್ಯಾ ಜಾತಿ? ಇನ್ನೊಂದು ವಿಚಾರಕ್ಕೆ ಹೋಗೋದೇ ಮೈಲಿಗೆ. ಇತರರ ವಿಚಾರಕ್ಕೆ ಹೋಗದಿರುವುದೇ ಮಾಡಿ. ಬರೇ ಸ್ನಾನ ಮಾಡಿ ಮಡಿಬಟ್ಟೆ ಉಟ್ಟುಕೊಂಡು ಬಿಟ್ರೆ ಸಾಲದು. ಮನಸ್ಸನ್ನು ಹದಗೊಳಿಸಬೇಕು, ಶುದ್ಧಗೊಳಿಸಬೇಕು ಕಣ್ರಯ್ಯಾ" ಅಂತಿದ್ರು. 

ಒಮ್ಮೆ ಓರ್ವ ಮಹಿಳೆ ಮನೆಯಲ್ಲಿ ತುಂಬಾ ತೊಂದರೆ ಎಂದು ಬಂದಿದ್ದರು. ಅದಕ್ಕವರು ನೀಡಿದ ಪರಿಹಾರ "ಇನ್ನೊಬ್ಬರ ಮನೆ ವಿಚಾರ ಮಾತಾಡ್ತೀಯಲ್ಲಾ. ಅದೇ ನಿಂಗೆ ಹಿಂಸೆ ಆಗ್ತೀರೋದು. ಬಿಟ್ಟುಬಿಡು ಅದನ್ನ. ಎಲ್ಲ ಸರಿ ಹೋಗುವುದು" ಎಂಬುದಾಗಿತ್ತು. 

"ಎಂದಿಗೂ ನಿನ್ನೆ ಹಾಗೂ ನಾಳೆ ಬಗ್ಗೆ ಯೋಚಿಸಬೇಡ. ಸದಾ ವರ್ತಮಾನದಲ್ಲಿರು. ಒಂದು ಕ್ಷಣವೂ ಮತ್ತೆ ತಿರುಗಿ ಬರುವುದಿಲ್ಲ. ಅದಕ್ಕಾಗಿ ಪ್ರತೀ ಘಳಿಗೆಯನ್ನು ನಿಷ್ಕಾಮ ಕರ್ಮದಲ್ಲಿ ಭಗವಂತನ ನಾಮಸ್ಮರಣೆಯಲ್ಲಿ ಕಳೆಯಿರಿ" ಎನ್ನುತ್ತಿದ್ದರು.........,,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Monday, November 28, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 16


ಸದ್ಗುರು ಮಾತೆಗೆ ನಮಿಸಿ  


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಕೂಡಲಿಯ ಒಬ್ಬರ ಮನೆಗೆ ಗುರುನಾಥರು ಆಗಾಗ್ಗೆ ಹೋಗಿ ಬರುತ್ತಿದ್ದರು. ಆ ಮನೆಯವರೂ ಗುರುನಾಥರ ಬಗ್ಗೆ ಆಪಾರ ಪ್ರೀತಿ ತೋರುತ್ತಿದ್ದರು. ಗುರುನಾಥರು ತಮ್ಮ ಮನೆಗೆ ಬರಬೇಕು, ಅವರ ಶಿಷ್ಯ ವೃಂದವೆಲ್ಲಾ ತಮ್ಮ ಮನೆಗೆ ಬಂದು ಆತಿಥ್ಯ ಪಡೆಯಬೇಕೆಂದು ಆಶಿಸುತ್ತಿದ್ದರು. ಆ ಸಜ್ಜನರು ಅಂತಹ ಸ್ಥಿತಿವಂತರಲ್ಲದಿದ್ದರೂ, ಔದಾರ್ಯ, ಗುರುಭಕ್ತಿಯಲ್ಲಿ ಅವರು ಶ್ರೀಮಂತರೆ. ಗುರುನಾಥರು ಪದೇ ಪದೇ ಅವರ ಮನೆಗೇ  ಏಕೆ ಹೋಗುತ್ತಾರೆ, ಆ ಊರಲ್ಲಿ ಇನ್ನೂ ಅನೇಕ ಮನೆಗಳಿವೆಯಲ್ಲ, ಎಂದು ಅನೇಕರು ಮನದಲ್ಲಿ ಚಿಂತಿಸಿದ್ದೂ ಇದೆ. ನಿರಂತರ ಗುರುನಾಥರ ನಿರೀಕ್ಷಣೆಯಲ್ಲಿದ್ದ ಆ ಮನೆಯ ತಾಯಿ ಎಂದಾದರೂ ಅತ್ಯಂತ ಉತ್ಕಂಟಿತರಾಗಿ ಗುರುನಾಥರನ್ನು ನೋಡುವ ಅಪೇಕ್ಷೆಪಟ್ಟರೆ, ಅದು ಹೇಗೋ ಗುರುನಾಥರ ದರ್ಶನವಾಗಿಬಿಡುತ್ತಿತ್ತು. 

ಗುರುನಾಥರಿಗೆ ಮುಂದಿನ ಆಗುಹೋಗುಗಳೆಲ್ಲಾ ತಿಳಿದಿದ್ದಂತೆ ಕಾಣುತ್ತದೆ. ಒಮ್ಮೆ ಆ ತಾಯಿ ಗುರುನಾಥರನ್ನು ನೋಡಬೇಕೆಂದು ಅಪೇಕ್ಷಿಸಿದರು. ಗುರುನಾಥರು ಕೂಡಲಿಗೆ ಬಂದಿದ್ದಾರೆಂದು ತಿಳಿಯಿತು. ಅಷ್ಟರಲ್ಲಿ ಅಶ್ವತ್ಥಮರದ ಪ್ರದಕ್ಷಿಣೆಗೆ ಹೋಗುವ ಸಮಯವಾಗಿತ್ತು. ಆ ತಾಯಿ ಹೊರಟರು. ದಾರಿಯಲ್ಲೇ ಗುರುನಾಥರು ಕಂಡು, ಸೌಖ್ಯ ವಿಚಾರ ಮಾಡಿದರು. ಆ ತಾಯಿ ಅಶ್ವತ್ಥ ಕಟ್ಟೆಯ ಪೂಜೆ ಪ್ರದಕ್ಷಿಣೆಗೆ ಹೊರಟರು. ತಮ್ಮ ಪೂಜೆ ಮುಗಿಸಿಕೊಂಡು ಮತ್ತೆ ಬರುವವರೆಗೆ ಗುರುನಾಥರು ಬಿಸಿಲಲ್ಲೇ ನಿಂತಿದ್ದರು. ಆ ತಾಯಿಯನ್ನು ಭವಾನಿಶಂಕರ ದೇವಾಲಯದ ಮೆಟ್ಟಿಲ ಮೇಲೆ ಕೂರಬೇಕೆಂದು ಗುರುನಾಥರು ಕೋರಿದರು. ನಂತರ ಅವರ ನೂರಾರು ಶಿಷ್ಯರನ್ನು ಕರೆಸಿ 'ತಾಯಿಗೆ ನಮಸ್ಕರಿಸಿ ಎಂದು ಹೇಳಿ ತಾವೂ ನಮಸ್ಕರಿಸಿ ತಮ್ಮ ಬಳಿ ಇದ್ದ ಹಣವನ್ನು ಅರ್ಪಿಸಿದರು. ಏನು, ಏಕೆ ಎಂದು ಕೇಳದೆ ಗುರುನಾಥರು ತೋರಿದ ಮಾರ್ಗದಲ್ಲಿ ನಡೆಯುವ ಅವರ ಶಿಷ್ಯ ವರ್ಗದ ಮನದಲ್ಲಿ ಎಂದೂ ಪ್ರಶ್ನೆಗಳು ಉದ್ಭವಿಸೇ ಇಲ್ಲ. ಆದರೆ ಇದಾದ ಕೆಲವೇ ವರ್ಷಗಳಲ್ಲಿ ಆ ತಾಯಿಯ ಸತ್ಪುತ್ರರು ಜಗದ್ಗುರು ಪೀಠದಲ್ಲಿ ವಿರಾಜಮಾನರಾದರು. ಜಗದ್ಗುರುಗಳ ಮಾತೆಗೆ ನಮಿಸುವ ಅವಕಾಶ ಸಾಮಾನ್ಯವಾದ್ದೇ? ಹೀಗೆ ಸದ್ಗುರುನಾಥರ ದೂರದೃಷ್ಠಿ ಎಂತೆಂತಹುದೋ ಘನ ಕಾರ್ಯಗಳನ್ನು ಮಾಡಿಸಿವೆ. ಅವರ ಶಿಷ್ಯರಿಗೆ ಅಪಾರವಾದದ್ದನ್ನೆಲ್ಲಾ ಕರುಣಿಸಿದೆ. 

ಇಂದೂ ಆ ಮುಗ್ಧ ತಾಯಿ ಗುರುನಾಥರ ಬಗ್ಗೆ ಅಪಾರ ಗೌರವ ತೋರಿಸುತ್ತಾ ಅವರ ವಾತ್ಸಲ್ಯ ಆಧಾರಗಳನ್ನು ಕೊಂಡಾಡುತ್ತಾ 'ಇಷ್ಟು ಬೇಗ ನಮ್ಮಿಂದ ದೂರವಾಗುತ್ತಾರೆಂದು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ ' ಎಂದು ತಾವೇನೋ ಬಹುದೊಡ್ಡ ನಿಧಿಯನ್ನು ಕಳೆದುಕೊಂಡಂತೆ ದುಃಖಿಸುತ್ತಾರೆ. ಗುರುನಾಥರ ಹೆಸರೆತ್ತಿದರೆ ಭಾವಪರವಶರಾಗುತ್ತಾರೆ. 


ಗುರುನಾಥರೆಂದರೆ ಒಂದು ಅಯಸ್ಕಾಂತವಿದ್ದಂತೆ


ಶಂಕರಲಿಂಗ ಭಗವಾನರ ಪ್ರಿಯ ಶಿಷ್ಯರಾದ ಶಾಮಣ್ಣನವರು ಗುರುನಾಥರ ಬಗ್ಗೆ ತಿಳಿಸುತ್ತ 'ಅತ್ಯಂತ ಸರಳ ಸಜ್ಜನರು, ತಪಸ್ವಿಗಳೂ, ಎಲ್ಲರನ್ನು ತಮ್ಮೆಡೆಗೆ ಆಕರ್ಷಿಸುವ ಮಹಾ ಸಾಧಕರು, ಸಖರಾಯಪಟ್ಟಣದ ಅವಧೂತರು' ಎನ್ನುತ್ತಾ ತಮ್ಮ ಮಾತನ್ನು ಮುಂದುವರೆಸಿದರು. ಮೊದಲ ಬಾರಿ ಅವರ ದರ್ಶನಕ್ಕೆ ಬಂದಾಗ ಗುರುನಾಥರು ಸಿಗಲಿಲ್ಲ. ಬಹಳ ಖಿನ್ನರಾಗಿ ನಾವು ಅಲ್ಲಿಯ ಬಿಲ್ವಪತ್ರ ವನದಲ್ಲಿ ಕುಳಿತು ಗುರುನಾಥರನ್ನು ಸ್ಮರಿಸುತ್ತಾ, ಇನ್ನೇನು ಊರಿಗೆ ಹೊರಡುವುದೆಂದು ಗುರುನಾಥರ ಮನೆಗೆ ಬಂದಾಗ ಅವರಾಗಲೇ ಬಂದಿದ್ದರು. ದರ್ಶನವಿತ್ತು ಆಶೀರ್ವದಿಸಿದರು. ಶಂಕರಲಿಂಗರ ಭಕ್ತರೆಂದರೆ ಅವರಿಗದೆಷ್ಟು ಪ್ರೀತಿಯೋ ಮುಂದೆ ನಮನ್ನು ಎರಡು ದಿನಗಳು ಅಲ್ಲಿಯೇ ಉಳಿಸಿಕೊಂಡಿದ್ದರು. ಶೃಂಗೇರಿಗೆ ಕಳಿಸಿದರು. ದೇವನೂರಿಗೆ ಕಳಿಸಿದರು. ಮುಂದೊಂದು ದಿನ 'ಯಾರು ಊರಿಗೆ ಹೋಗಬೇಕೋ ಅವರು ಹೊರತು ಹೋಗಿ' ಎಂದಾಗ ನಾವೆಲ್ಲಾ ಹೊರಟೆವು. ಗುರುನಾಥರೂ ಬಂದು ಕಾರಿನಲ್ಲಿ ಕುಳಿತರು. ನಾನು ಚಪ್ಪಲಿ ಧರಿಸಿದ್ದೆ. ಸಂಕೋಚದಿಂದ ದೂರವೇ ಕುಳಿತರೂ ಗುರುನಾಥರು ಅತ್ಯಂತ ಪ್ರೀತಿಯಿಂದ ಹತ್ತೀರ ಕುಳಿತಾಗ ನನಗೆ ಏನೋ ನಿಧಿ ಸಿಕ್ಕಂತಾಯಿತು. ಆ ಸ್ಪರ್ಶ, ಅವರ ಮನೆಗೆ ಹೋಗುವಾಗ ನಾವು ಒಂದಿಷ್ಟು ಹೂವುಗಳನ್ನು ತೆಗೆದುಕೊಂಡಿದ್ದೆವು. ಅವರಿಗೆ ಅರ್ಪಣೆ ಮಾಡಲು ನಾವು ಬಯಸಿದರೆ, 'ಬೇಡ ಒಳಗೆ ಗುರುಪಾದುಕೆ ಇದೆ. ಅದಕ್ಕೆ ಅರ್ಪಿಸಿ' ಎಂದಾಗ ಗುರುನಾಥರ ಸರಳತೆ, ಮಹಾನ್ ವ್ಯಕ್ತಿತ್ವ ನನ್ನ ಕಣ್ಣು ತೆರೆಸಿತ್ತು. ಮುಂದೆ ಬಾಣಾವರದ ಕಡೆ ನಾವು ಕಾರಿನಲ್ಲಿ ಹೋಗುತ್ತಿರುವಾಗ ಯಾರೋ ಮೆಣಸಿನಕಾಯಿ ಬೇಕೆಂದರು. ಕ್ಷಣದಲ್ಲಿ ಅದ್ಯಾರೋ ಒಂದು ಬುಟ್ಟಿ ಹಿಟ್ಟು ಹಚ್ಚಿಕರಿದ ಮೆಣಸಿನಕಾಯಿಯನ್ನೇ ಕೊಟ್ಟುಬಿಟ್ಟರು. ಶಂಕರಲಿಂಗ ಭಾಗವಾನರನ್ನು ತಮ್ಮ ಹನ್ನೊಂದನೇ ವಯಸ್ಸಿನಿಂದಲೇ ಕಂಡಿದ್ದ ಗುರುನಾಥರು, ಗುರುಗಳ ಆರಾಧನೆಗೂ ಬರುತ್ತಿದ್ದರು. ಅವರು ಬಂದರೆಂದರೆ ಜನ ಇರುವೆ ಬೆಲ್ಲಕ್ಕೆ ಮುತ್ತಿದಂತೆ ಇವರನ್ನು ಮುತ್ತುತ್ತಿದ್ದರು. ಅವರ ಪ್ರವಚನ ಸತ್ಸಂಗಗಳು ಅಲ್ಲಿದ್ದವರಿಗೆಲ್ಲಾ ಬಹಳ ಪ್ರಿಯವಾಗುತ್ತಿತ್ತು. ಅವರ ಮಾತುಗಳಲ್ಲಿ ಅನೇಕ ಜನರ ಮನದ ಸಂಶಯಗಳಿಗೆ ಉತ್ತರ ಸಿಕ್ಕಿಬಿಡುತ್ತಿತ್ತು. ಯಾರೂ ಬಾಯಿ ಬಿಟ್ಟು ಕೇಳುವ ಪ್ರಶ್ನೆಯೇ ಇರುತ್ತಿರಲಿಲ್ಲ. ಒಮ್ಮೆ ನಾನು ಅವರ ಊರಿಗೆ ಹೋಗಿದ್ದೆ. ಜಗದ್ಗುರುಗಳು ಬಂದಿದ್ದರು. 

ಆಗ ಗುರುನಾಥರು ನನಗೆ 'ಎಲ್ಲಿ ಅರಸಿ, ನಿನ್ನ ಗುರುವೇ ಎಲ್ಲಿ ನೋಡಿದರಲ್ಲಿ ನೀ' ಎಂಬ ಗೀತೆಯನ್ನು ಹಾಡಿ ಎಂದರು. ನನಗೆ ಬರದಿದ್ದರೂ ಪ್ರಯತ್ನಿಸಿದೆ. ಗುರುನಾಥರೂ ದನಿಗೂಡಿಸಿದರು. ಹೀಗೆ ಅಪಾರ ದಯಾವಂತರಾದ ಗುರುನಾಥರ ಬಗ್ಗೆ ಎಷ್ಟು ಹೇಳಿದರೂ ಮುಗಿಯದು ಎಂದು ಮೌನರಾದರು. 

ಎಲ್ಲಾ ಬರ್ನ್ ಆಯ್ತು, ಪ್ಲಾಶ್ ಮಾಡಿ ಬಿಟ್ಟೆಯಾ 


ಪ್ರಚಾರ ಪ್ರಿಯರೂ, ಫೋಟೋ ಪ್ರಿಯರೂ ಆಗಿರಲಿಲ್ಲ ನಮ್ಮ ಗುರುನಾಥರು. ಕೆಲವೊಂದು ಘಟನೆಗಳು ನಡೆದು, ಗುರುನಾಥರ ಫೋಟೋ ತೆಗೆಯಬೇಕೆಂದರೆ ಅವರ ಭಕ್ತರು ಹೆದರುತ್ತಿದ್ದರು. ನಾನೂ ಒಮ್ಮೆ ಅವರ ಫೋಟೋ ತೆಗೆಯಲು ಹೋದಾಗ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳ ವೇದಿಕೆಯ ಬಳಿ ನನ್ನನ್ನು ಕರೆದೊಯ್ದು 'ಇದರ ಫೋಟೋ ತೆಗೆದುಕೊಳ್ಳಿ' ಎಂದು ತಿಳಿಸಿದ್ದರು. 

ಸಖರಾಯಪಟ್ಟಣದಲ್ಲಿ ಅನೇಕ ವರ್ಷಗಳು ಗುರುನಾಥರ ಮನೆಯ ಎದುರಿನ ಮನೆಯಲ್ಲಿದ್ದು, ಗುರುನಾಥರೊಂದಿಗೆ ತುಂಬಾ ಪ್ರೀತಿಯಿಂದ ಇದ್ದ ಒಬ್ಬ ಯುವಕರು, ಆದಾಗ ಚಿಕ್ಕಮಗಳೂರಿಗೆ ಹೋಗಿ ನೆಲೆಸಿ ವ್ಯಾಪಾರಸ್ಥರಾಗಿದ್ದರು. ಅವರ ಅಣ್ಣನ ಮಗನ ಉಪನಯನದ  ಸಮಯ. ಗುರುನಾಥರು ಮನೆಗೆ ಬಂದಿದ್ದರು. ಯಾವುದೋ ಮಾತಿನಲ್ಲಿದ್ದಾಗ ಅದೇ ಹೊಸದಾಗಿ ಕ್ಯಾಮೆರಾ ಕೊಂಡಿದ್ದ ಇವರು ಒಂದು ಫೋಟೋ ತೆಗೆದೇಬಿಟ್ಟರು. ಪ್ಲಾಶ್ ಆಯ್ತು. 'ಪ್ಲಾಶ್ ಆಯ್ತಾ.... ಎಲ್ಲಾ ಪ್ಲಾಶ್ ಆಗಿ ಬಿಡ್ತು... ಮುಗಿತು.. ಎಲ್ಲಾ ಮುಗಿದೋಯ್ತು' ಎಂದುಬಿಟ್ಟರಂತೆ. 

ಚಿಕ್ಕಮಗಳೂರಿನಲ್ಲಿದ್ದ ಇವರದೊಂದು ಲಕ್ಷಾಂತರ ಬೆಳೆಯ ಅಂಗಡಿ ರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಬಿದ್ದು, ಎಲ್ಲಾ ಸುತ್ತು ಭಸ್ಮವಾಗಿ ಹೋಯಿತು. ನಂತರ ಈ ಭಕ್ತರು ಗುರುನಾಥರ ಬಳಿ ಸಖರಾಯಪಟ್ಟಣಕ್ಕೆ ಹೋದರು. ಸುಟ್ಟ  ಅಂಗಡಿಯ ಬೂದಿಯನ್ನು ತರಿಸಿದರು. ಮತ್ತೇನೇನೋ ಮಾಡಿದರೋ..... ಆದರೀಗ ಅವರ ಶಿಷ್ಯರು, ಗುರುನಾಥರ ಕೃಪೆಯಿಂದ ಮೊದಲಿಗಿಂತ ದೊಡ್ಡ ಸ್ಥಿತಿ ತಲುಪಿದ್ದಾರೆ. ನಿರಂತರ ಗುರುನಾಥರನ್ನು ಸ್ಮರಿಸುತ್ತಾ ಉತ್ತಮ ಜೀವನ ಸಾಗಿಸುತ್ತಿದ್ದಾರೆ. 

ಗುರುನಾಥರ ಅಂದು ತೆಗೆದ ಫೋಟೋ ಈಗಲೂ ಅವರ ಬಳಿ ಇದೆ. ಗುರುನಾಥರ ಬಾಯಿಯಿಂದಲೇ ಬಸ್ ಎಂದು ಧೂಳು ಬೂದಿ ಬಂದಂತಿದೆ. ನಂತರ ಗುರುಗಳು ಶಾಂತರಾದಾಗ ತಮ್ಮ ಆ ಭಕ್ತರ ಜೊತೆಯಲ್ಲಿ ತೆಗೆಸಿದ ಶಾಂತ ಮುಖ ಮುದ್ರೆಯ ಚಿತ್ರವೂ ಲಭ್ಯವಿದೆ. 

'ಕರುಣಾಳುಗಳಾದ ಗುರುನಾಥರು ಏನೇ ಮಾಡಿದರೂ ಅದರಲ್ಲಿ ತಮ್ಮ ಭಕ್ತರ ಮುಂದಿನ ಮಂಗಲಮಯ ಚಿಂತನೆಯೇ ಇರುತ್ತದೆ ಎನ್ನುತ್ತಾರೆ'. 
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 



।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/