ಒಟ್ಟು ನೋಟಗಳು

Tuesday, February 28, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 147


    ಗ್ರಂಥ ರಚನೆ - ಚರಣದಾಸ 

ಬೆಳ್ಳಿ ಲೋಟ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ರೇಷ್ಮೆ ವ್ಯಾಪಾರ ನಡೆಸುತ್ತಿದ್ದ ಆತ ಮೂಲತಃ ಮಲೆನಾಡು ಮೂಲದವರು. ನನಗೆ ಹಳೆಯ ಪರಿಚದವರಾಗಿದ್ದರೂ ಅವರ ಅನುಭವ ಕೇಳುವ ಅವಕಾಶ ಸಿಕ್ಕಿರಲಿಲ್ಲ. ಇತ್ತೀಚೆಗೆ ಭೇಟಿ ಆದ ಆತ ತಮ್ಮ ಅನುಭವವನ್ನು ಈ ರೀತಿ ಹೇಳತೊಡಗಿದರು. ನೋಡಿ, ನನಗೆ ಮೊತ್ತ ಮೊದಲು ಗುರುನಾಥರ ದರ್ಶನವಾದದ್ದು ಬಹುಶಃ 1997 ರಲ್ಲಿ ಅನಿಸುತ್ತೆ. ಅಂದು ನನ್ನ ಸಂಬಂಧಿಯೊಂದಿಗೆ ಹೋದಾಗ ನನಗೆ ಗುರುಗಳ ಮೇಲೆ ನಂಬಿಕೆ ಇರಲಿಲ್ಲ. ಆದರೆ ಆ ನಂತರ ನಡೆದ ಘಟನಾವಳಿಗಳು ನನ್ನನ್ನು ಪರಿಪೂರ್ಣವಾಗಿ ಗುರುವಿಗೆ ಶರಣಾಗುವಂತೆ ಮಾಡಿತು. 

ನನ್ನ ನೋಡಿದಾಕ್ಷಣ ಗುರುನಾಥರು "ಏನು ಕಾಲು ನೋವಲ್ಲವೇ?" ಎಂದು ಕೇಳಿ ಎರಡು ಬಾಳೆಹಣ್ಣು ನೀಡಿದರು. ಅದೇ ಕೊನೆ, ಮತ್ತೆಂದೂ ನನಗೆ ಕಾಲು ನೋವು ಬಾಧಿಸಲಿಲ್ಲ. ಅದಕ್ಕೂ ಮೊದಲು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ನನಗೆ ಕೆಳಗೆ ಕೂರಲಾಗುತ್ತಿರಲಿಲ್ಲ. ಹೀಗೆ ಒಂದು ಘಟನೆಯಿಂದ ನನ್ನ ಬಾಳಗತಿಯನ್ನೇ ಬದಲಿಸಿದ ಆ ಗುರುವನ್ನು ಅರಿಯಲು ಇಂದಿಗೂ ಪ್ರಯತ್ನಿಸುತ್ತಿದ್ದೇನೆ. 

ಮತ್ತೊಮ್ಮೆ ನಮ್ಮೂರಿಗೆ ಬಂದು ನನ್ನ ಹೆಂಡತಿಯ ಊರಿಗೆ ಹೊರಟ ನನ್ನನ್ನು ಗುರುಗಳು "ನೀ ಅಲ್ಲಿಗೆ ಹೋಗಬೇಡ" ಎಂದು ಹೇಳಿದರೂ ನಾನು ಕೇಳದೆ ಹೆಂಡತಿಯೊಂದಿಗೆ ಹೋಗಿ ಕಾರನ್ನು ಅಲ್ಲೇ ಬಿಟ್ಟು ಗುರುನಿವಾಸಕ್ಕೆ ಬಂದೆ. ನನ್ನನ್ನು ಗುರುನಾಥರು ನಾಲ್ಕು ದಿನ ಜೊತೆಯಲ್ಲಿಯೇ ಇರಿಸಿಕೊಂಡು ನಂತರ ಕಳಿಸಿಕೊಟ್ಟರು. ನಾನು ಹೆಂಡತಿಯ ತವರಿಗೆ ಹೋಗಿ ಕುಟುಂಬದೊಂದಿಗೆ ಕಾರಿನಲ್ಲಿ ಬೆಂಗಳೂರಿಗೆ ಹೊರಟೆ. ತುಸು ಹೊತ್ತು ನನ್ನ ತೊಡೆ ಮೇಲೆ ಕುಳಿತಿದ್ದ ನನ್ನ ಮಗು ನಂತರ ಹಿಂದಿನ ಸೀಟಿಗೆ ತೆರಳಿತು. ಅದಾಗಿ ಕೆಲವೇ ಕ್ಷಣದಲ್ಲಿ ಎದುರಿನಿಂದ ಬಂದ ಲಾರಿಯೊಂದು ನನ್ನ ಕಾರಿಗೆ ಢಿಕ್ಕಿ ಹೊಡೆದು ನಮ್ಮ ಕಾರು ನುಜ್ಜು-ಗುಜ್ಜಾಯಿತು. ಮಗು ಹಾಗೂ ನಮ್ಮೆಲ್ಲರ ಪ್ರಾಣ ಉಳಿಯಿತು. ಆ ನಂತರ ಕಾರನ್ನು ಚಿಕ್ಕಮಗಳೂರಿನಲ್ಲಿ ರಿಪೇರಿಗೆ ಬಿಟ್ಟು ಗುರುನಿವಾಸಕ್ಕೆ ಬಂದೆ. 

ಅಪಘಾತದ ವಿಷಯ ತಿಳಿದ ಗುರುನಾಥರು "ಅಯ್ಯಾ, ನಿನ್ನ ಕಾರಿನಲ್ಲಿ ರಕ್ತ ಕಾಣುತ್ತಿತ್ತು ಕಣಯ್ಯಾ... ಅದಕ್ಕೆ ಕಾರು ತಗೊಂಡು ಹೋಗಬೇಡ ಅಂದಿದ್ದು. ನೀ ಬರೋ ತನಕ ನನಗೆ ಯೋಚನೆ ಆಗಿತ್ತು" ಅಂದ್ರು. ನಮ್ಮೆಲ್ಲರ ಜೀವ ಉಳಿಸಿದ ಆ ಗುರುವಿನ ಮೇಲೆ ನನ್ನ ನಂಬುಗೆ ಮತ್ತಷ್ಟು ದೃಢವಾಯಿತು. 

ಮತ್ತೊಮ್ಮೆ ನಮ್ಮ ಮನೆಗೆ ಬಂದಿದ್ರು. ಎಂಟನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗಳನ್ನು ವಾತ್ಸಲ್ಯದಿಂದ ತೊಡೆಯ ಮೇಲೆ ಕೂರಿಸಿಕೊಂಡು ಹಾಲು ಕುಡಿಸಿದ ಗುರುಗಳು ಅವಳಿಗೆ "ನೀ ಹತ್ತನೇ ತರಗತಿಯಲ್ಲಿ 98% ಪಿಯುಸಿಯಲ್ಲಿ 97% ಅಂಕ ಪಡೀತೀಯ. ಡಾಕ್ಟರ್ ಆಗ್ತೀಯ" ಎಂದು ಆಶೀರ್ವದಿಸಿದರು. ಇಂದು ಆಕೆ ಗುರುಕೃಪೆಯಿಂದ ಎಂ.ಬಿ.ಬಿ.ಎಸ್ ಓದುತ್ತಿರುವಳು. ನಮ್ಮ ಮನೆಗೆ ಬಂದ ಗುರುವಿಗೆ ಏನು ನೀಡಬೇಕೆಂದು ತೋಚದೆ ಮನೆಯಲ್ಲಿದ್ದ ಒಂದು ಬೆಳ್ಳಿ ಲೋಟವನ್ನು ಗುರುವಿಗೆ ಸಮರ್ಪಿಸಿದೆ. 

ಕೂಡಲೇ ಗುರುಗಳು "ಈ ಲೋಟ ನಿನಗೆ ನಿನ್ನ ಅಕ್ಕ ಕೊಟ್ಟಿದ್ದು ಅಲ್ಲವೇ? ಅಕ್ಕನ ಅನುಮತಿ ಪಡೆದು ಈ ಲೋಟವನ್ನು ಅದ್ವೈತ ಪೀಠದ ಯತಿವರೇಣ್ಯರಿಗೆ ಸಮರ್ಪಿಸು. ಇದರಲ್ಲೇ ಹಾಲು ಕುಡಿಯುವಂತೆ ವಿನಂತಿಸು" ಅಂದ್ರು. ಆದರೆ ನನಗೆ ಕಾರಣಾಂತರದಿಂದ ಅದ್ವೈತ ಪೀಠಕ್ಕೆ ಹೋಗೋಕಾಗಲಿಲ್ಲ. ಆಗ ಗುರುನಾಥರೇ ಒಮ್ಮೆ ನನ್ನ ಕರೆಸಿಕೊಂಡು ಅದ್ವೈತ ಪೀಠಕ್ಕೆ ಬೆಳ್ಳಿ ಲೋಟವನ್ನು ಸಮರ್ಪಿಸುವ ಅವಕಾಶ ಮಾಡಿಕೊಟ್ಟರು. "ಹೀಗೆ ಶಿಷ್ಯರಿಗೆ ಮಾಡೆಂದು ಅವರೇ ಹೇಳಿದ ಮಾತನ್ನು ನಾವು ಮರೆತರೂ ನಮ್ಮ ಉದ್ಧಾರಕ್ಕಾಗಿ ತಾನೇ ಮುಂದೆ ನಿಂತು ನಡೆಸುತ್ತಿದ್ದ ಇಂತಹ ಶ್ರೇಷ್ಠ ಸದ್ಗುರು ಅತಿ ವಿರಳ" . ನಾನು ಯಾವ ದೇವರನ್ನು ನಂಬುತ್ತೀನೋ ಇಲ್ಲವೋ..... ಆದರೆ ಆತನ ಸಂಗವಿರದೇ ನನ್ನ ಜೀವನ ಇಲ್ಲ. ಅದೆಂತಹ ಕಷ್ಟವಿದ್ದರೂ ಅವನೇ ನಮ್ಮುಸಿರು.... ಎಂದು ಹೇಳಿ ಮೌನಕ್ಕೆ ಶರಣಾದರು....,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

Monday, February 27, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 146


    ಗ್ರಂಥ ರಚನೆ - ಚರಣದಾಸ 

ನೀನು ನೀನಾಗಿರು 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಈ ವ್ಯಕ್ತಿಯನ್ನು ಯಾವಾಗಲೋ ಒಮ್ಮೆ ಗುರುನಿವಾಸದಲ್ಲಿ ನೋಡಿದ ನೆನಪು. ಸರಳ ಹಾಗೂ ಮಿತ ಭಾಷಿಯಂತೆ ಕಂಡಿದ್ದರು. ಇವರ ಸೋದರಿಯ ಮೂಲಕ ಇತ್ತೀಚೆಗೆ ಇವರ ಸಂಪರ್ಕ ಸಾಧ್ಯವಾಯಿತು. ಇವರು ಗುರುನಾಥರ ಬಾಲ್ಯದ ಸಹಪಾಠಿಯಾಗಿದ್ದು "ನಿಮ್ಮ ಬಾಲ್ಯದ ಅನುಭವ ಹೇಳುತ್ತೀರಾ?" ಎಂಬ ನನ್ನ ಪ್ರಶ್ನೆಗೆ ಆತ "ನಾನು ಅಂತಹ ಯೋಗಿ ಪುರುಷನ ಸ್ನೇಹಿತ ಎಂಬುದಷ್ಟೇ ಸಾಕು ನಂಗೆ... ನನ್ನ ಜನ್ಮ ಸಾರ್ಥಕ" ಎಂದು ನುಡಿದು ಮೌನವಾದರು. ಮತ್ತೆ ಬಾಲ್ಯವನ್ನು ನೆನೆದು ಹೀಗೆ ಹೇಳತೊಡಗಿದರು. ಕಡೂರು ನನ್ನ ಹುಟ್ಟೂರಾಗಿದ್ದು ನಾನು, ಗುರುನಾಥರ ಬಾಲ್ಯದ ಒಡನಾಡಿಯಾಗಿದ್ದೆ. ನನ್ನ ತಾಯಿ ಹುಟ್ಟೂರು ಸಖರಾಯಪಟ್ಟಣವಾದದ್ದರಿಂದ ರಜಾ ದಿನಗಳಲ್ಲಿ ನಾನು "ಅವರು" ಒಟ್ಟಾಗುತ್ತಿದ್ದೆವು. 

ಆಟ-ಪಾಠಗಳಲ್ಲಿ ತುಂಟುತನವಿತ್ತಾದರೂ "ಅವರಲ್ಲಿ" ಯಾವುದೇ ಆಕ್ರಮಣಕಾರಿ ಭಾವ ಇರಲಿಲ್ಲ. 

ನಾವೆಲ್ಲರೂ ಸೇರಿ ಆಡುತ್ತಿದ್ದ "ಲಗ್ಗೆ" ಎಂಬ ಚೆಂಡಾಟ ಸ್ಮರಣೀಯವಾದದ್ದು. ಸುಮಾರು ಮೂರು ದಶಕದ ನಂತರ ಭೇಟಿಯಾದಾಗ ಗುರುನಾಥರು ಈ ಎಲ್ಲಾ ಆಟಗಳನ್ನು ನೆನಪಿಸಿಕೊಂಡು ನಾನು ಬಿದ್ದು ಗಾಯಗೊಂಡು ಅಳುತ್ತಿದ್ದುದನ್ನು ನೆನೆದು ನಕ್ಕರು. ಒಮ್ಮೆ ಸ್ನೇಹಿತನ ಮಾವಿನ ತೋಪಿನಲ್ಲಿ ಬಹಳ ಹೊತ್ತು ಮರಕೋತಿ ಆಟ ಆಡಿದೆವು. ತಂಡ ತಿಂಡಿ ಎಲ್ಲ ಖಾಲಿಯಾಗಿ ಮರದಲ್ಲಿದ್ದ ಹಣ್ಣುಗಳನ್ನು ಕಿತ್ತು ತಿಂದೆವು. ಅವರು ಮಾತ್ರ ಹಣ್ಣು ತಿನ್ನಲಿಲ್ಲ. ಅವರ ಸೌಮ್ಯತೆ, ಚುರುಕು ಬುದ್ದಿ ಮತ್ತು ಗಣಿತದ ಲೆಕ್ಕವನ್ನು ಶೀಘ್ರವಾಗಿ ಪರಿಹರಿಸುತ್ತಿದ್ದ ರೀತಿ ಇತರರಲ್ಲಿ ಅಸೂಯೆ ಮೂಡುವಂತಿತ್ತು. 

ಯಾವುದೇ ಸಾಮೂಹಿಕ ಕಾರ್ಯಕ್ರಮ ಹಾಗೂ ಯಾರದೇ ಮನೆಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದು ಎಲ್ಲರ ನೋವು ನಲಿವುಗಳಿಗೆ ಸ್ಪಂದಿಸುವ ಹಾಗೂ ಪರಸ್ಪರರಲ್ಲಿ ವಿಶ್ವಾಸ ನಮ್ಮ ನಡೆ ನುಡಿಗಳಲ್ಲಿ ಸೇರಿ ಹೋಗಿತ್ತು. ಒಮ್ಮೆ ಬೆಂಗಳೂರಿನಲ್ಲಿ ಇದ್ದಾಗ ನನ್ನನ್ನು ಕರೆಸಿಕೊಂಡು "ಅಯ್ಯಾ ನಿನ್ನ ನೋಡಿ ಹದಿನಾಲ್ಕು ವರ್ಷವಾಗಿತ್ತಲ್ಲವೇ? ಅದಕ್ಕೆ ಹೇಳಿ ಕಳುಹಿಸಿದೆ" ಅಂದ್ರು. ಬಾಲ್ಯದ ಗೆಳೆಯನಾಗಿದ್ದ ಆತ ವೇದ ಬ್ರಹ್ಮನಾಗಿ, ಅವಧೂತನಾಗಿ ಆವಿರ್ಭವಿಸಿದ ವಿಷಯ ನನ್ನ ಮಂದಬುದ್ಧಿಗೆ ಹೊಳೆಯಲಿಲ್ಲ. 

ಮತ್ತೆ ಕೆಲ ವರ್ಷದ ನಂತರ ಅವರ ತಂಗಿಯ ಮನೆಯಲ್ಲಿ ಅವರ ದರ್ಶನವಾದರೂ ನನ್ನ ತಂಗಿ ಆ ಸಾಧು ಯಾರೆಂದು ಹೇಳುವವರೆಗೂ ನಂಗೆ ಗೊತ್ತಿರಲಿಲ್ಲ. ಆ ಸಾಧು ನನ್ನ ಬರಸೆಳೆದು ಅಪ್ಪಿಕೊಂಡು ಸಿಹಿ ತಿನಿಸಿದರು. ಆಗಲೇ ಗೊತ್ತಾಗಿದ್ದು ಅವರು ನನ್ನ ಬಾಲ್ಯ ಗೆಳೆಯನೆಂದು. ನಾನೆಂತ ಪುಣ್ಯವಂತನೆಂದು ತಿಳಿದು ಪುಳಕಿತನಾದೆ. 

ನಂತರ ನನ್ನ ಮಗನ ವಿದ್ಯಾಭ್ಯಾಸದ ಕುರಿತು ಕೇಳಲು "ಅವನನ್ನ ಓದಿಸೋಕೆ ನೀನು ಯಾರು? ಓದಿಸೋನು ಮೇಲಿದ್ದಾನೆ. ಅವನ ಮನಸ್ಸಿಗೆ ಒಪ್ಪೋ ಕೆಲಸ ಸಿಗುತ್ತೆ. ಸಂಬಳನೂ ಜಾಸ್ತಿ ಆಗುತ್ತೆ" ಎಂದು ನುಡಿದು ತುಸು ತಡೆದು ಏನೋ ಯೋಚಿಸಿ "ಅವನು ಸಧ್ಯದಲ್ಲೇ ಘೋರಖ್ ಪುರಕ್ಕೆ ಹೋಗುತ್ತಾನೆ." ಅಂದರು. ಅದೆಲ್ಲವೂ ನಿಜವಾಯಿತು. ಅಂದಿನಿಂದ ನಾನು ನಾನಾಗಿರಲಿಲ್ಲ. ಅವರ ಭಕ್ತನಾಗಿಬಿಟ್ಟೆ. 

ಮತ್ತೊಮ್ಮೆ ನನ್ನ ಮಗನ ಜೊತೆಗೆ ಬಂದಿದ್ದ ವಿಜ್ಞಾನಿಯೊಬ್ಬರನ್ನು ಕರೆದು "ಇಂತಹ ದಿನ ನೀವು ನಾಲ್ವರು ವಿಮಾನದಲ್ಲಿ ಇಂತಹ ಊರಿಗೆ ಹೋಗಬೇಕಾಗುತ್ತೆ. ಆದ್ರೆ ನೀನು ಅಂದು ವಿಮಾನ ಇರಬಾರದು.... ಎಚ್ಚರ" ಅಂದಿದ್ರು. ಅಂತೆಯೇ ಅದೇ ದಿನ ಆತ ಆ ವಿಮಾನ ಇರಲಿಲ್ಲ. ಅದು ತಮಿಳುನಾಡಿನ ಅರಕೋಣಂ ಎಂಬಲ್ಲಿ ಅಫಘಾತಕ್ಕೆ ಈಡಾಗಿ ಅದರಲ್ಲಿದ್ದವರೆಲ್ಲಾ ಅಸುನೀಗಿದರು. ಗುರುಕರುಣೆ ಈ ವ್ಯಕ್ತಿಯ ಜೀವ ಉಳಿಸಿತ್ತು. 

ಸುತ್ತಲಿದ್ದವರೆಲ್ಲಾ ಗುರುಗಳನ್ನು ಬಹುವಚನದಲ್ಲಿ ಕರೀತಿದ್ರೆ ನಾನು ಮಾತ್ರ ಏಕವಚನ ಬಳಸುತ್ತಿದ್ದ ರೀತಿ ನನಗೆ ಮುಜುಗರ ಉಂಟುಮಾಡುತ್ತಿತ್ತು. ಗುರುಗಳನ್ನು ನಾ ಹಿಂಗೆ ಕರೀಬಹುದೇ? ಹಾಗಾದ್ರೆ ಗುರು ಮತ್ತು ಸ್ನೇಹಿತ ಅಂದ್ರೆ ಯಾರು ಎಂದು ಗುರುಗಳನ್ನು ಪ್ರಶ್ನಿಸಲು ಅವರು "ನೀ ಯಾರು.... ನನ್ನ ಸ್ನೇಹಿತ, ಗುರು ಎಂಬ ಶಬ್ದಕ್ಕೆ ಹೇಳಿಕೊಡುವವನು ಎಂದೂ ಅರ್ಥವಿದೆ. ಸ್ನೇಹಿತ ಎಂದೂ ಅರ್ಥವುಂಟು. ಈಗ ನೀನು ನನ್ನ ಗುರುವೆಂದು ಅರ್ಥ ಮಾಡಿಕೊಂಡೆ. ಆದ್ರಿಂದ ನೀನು ಎಂದೆಂದೂ ನೀನಾಗಿಯೇ ಇರು" ಅಂದಿದ್ರು. ಎಷ್ಟು ಅರ್ಥಪೂರ್ಣವೆಂದು ಅನಿಸಿತು. ಅವರ ದೇಹ ತ್ಯಾಗದ ನಂತರವೂ ಅವರ ನಗುಮುಖ ನಮ್ಮೆಲ್ಲರ ಮನದಲ್ಲಿ ಹಸಿರಾಗಿ ಉಳಿದಿದೆ. ಅವರು ಈಗಲೂ ನಮ್ಮೊಂದಿಗೆ ಇದ್ದಾರೆ. ನೆನಪಾದಾಗಲೆಲ್ಲಾ ಮಾರ್ಗದರ್ಶನ ಮಾಡುತ್ತಾರೆ ಎಂದು ನುಡಿದು ಕಣ್ಣೊರೆಸಿಕೊಂಡರು. 

ಈ ಘಟನೆಯನ್ನು ಗಮನಿಸಿದಾಗ "ಅಯ್ಯಾ ಯಾರನ್ನೋ ಮೆಚ್ಚಿಸೋಕೆ, ಯಾರೋ ಮಾಡಿದ್ರೂಂತ ನೀ ಏನೂ ಮಾಡಬೇಡ ಕಣಯ್ಯಾ.... ಸ್ವ ಇಚ್ಛೆಯಿಂದ ಮಾಡುತ್ತೀ ನೋಡು... ಅದು ನಿಜವಾದದ್ದು ತಿಳೀತೇ?" ಎಂಬ ನನ್ನೊಡೆಯನ ಮಾತು ಮತ್ತೆ ಮತ್ತೆ ನೆನಪಾಗುತ್ತೆ.....,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

Sunday, February 26, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 145


    ಗ್ರಂಥ ರಚನೆ - ಚರಣದಾಸ 

ಚಂದ್ರಶೇಖರ ಪಾಹಿಮಾಂ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರುನಾಥರ ದೂರದ ಸಂಬಂಧಿಯೂ ಆದ ಒಬ್ಬ ಹುಡುಗ ಗುರು ನಿವಾಸಕ್ಕೆ ಆಗಾಗ್ಗೆ ಬರುತ್ತಿದ್ದರು. ಮನೆಯ ಆರ್ಥಿಕ ಸ್ಥಿತಿ ಸಾಧಾರಣವಾಗಿತ್ತು. ಗುರುನಾಥರ ಮಗನ ಸ್ನೇಹಿತನೂ ಆಗಿದ್ದ ಆತ ಗುರು ನಿವಾಸದ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. 

ಆತ ಸಾಮಾನ್ಯವಾಗಿ ಅಗತ್ಯಕ್ಕಿಂತ ಹೆಚ್ಚು ಮಾತನಾಡುತ್ತಿರಲಿಲ್ಲ. ನಾನು ಗುರು ನಿವಾಸಕ್ಕೆ ಬಂದ ದಿನದಿಂದಲೂ ಆತ ಹಾಗೂ ಅವರ ಹಿರಿಯ ಸೋದರ ನನಗೆ ಪರಿಚಯವಿತ್ತು. ಸಾತ್ವಿಕ ಗುಣದವರಾದ ಇಬ್ಬರೂ ನಂತರದಲ್ಲಿ ನನ್ನೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿರುವರು. ಆತ ತೀರಾ ಇತ್ತೀಚೆಗೆ ಸಿಕ್ಕಾಗ ಅವರು ಮಾತನಾಡುತ್ತಾ  ಜೀವನದಲ್ಲಿ ನಡೆದ ಘಟನೆಯನ್ನು ಬಿಚ್ಚಿಟ್ಟರು. 

ನಾನು ಇಂಜಿನೀಯರಿಂಗ್ ಓದುತ್ತಿದ್ದ ಸಂದರ್ಭ, ಅದರಲ್ಲಿನ ಒಂದು ವಿಷಯ ನನಗೆ ಅರ್ಥವಾಗುತ್ತಿರಲಿಲ್ಲ. ಏನೇ ಮಾಡಿದರೂ ಒಂದು ಚೂರೂ ತಲೆಗೆ ಹತ್ತಲಿಲ್ಲ. ಇದೆ ಸಂದರ್ಭ ನನ್ನ ಪರೀಕ್ಷೆಯ ಹಿಂದಿನ ದಿನ ಗುರುನಾಥರು ಬೆಂಗಳೂರಿಗೆ ಬಂದ ವಿಷಯ ತಿಳಿದು ಅಲ್ಲಿಗೆ ಹೋಗಿ ಗುರುನಾಥರಿಗೆ ನಮಸ್ಕರಿಸಿದೆ. ಗುರುದರ್ಶನಕ್ಕಾಗಿ ಬಹಳ ಜನ ಬಂದಿದ್ದ ಕಾರಣ ನನಗೆ ಏನನ್ನು ಮಾತನಾಡುವ ಅವಕಾಶ ಸಿಗಲಿಲ್ಲ. ಈ ಮಧ್ಯೆ ಗುರುನಾಥರು ನಮ್ಮೆಲ್ಲರನ್ನೂ ಮೈಸೂರಿಗೆ ಪಾದುಕಾ ಪೂಜೆಗಾಗಿ ಕಳಿಸಿಕೊಟ್ಟರು. ಅಲ್ಲಿಂದ ಬೆಂಗಳೂರಿಗೆ ತಿರುಗಿ ಬರುವಾಗ ರಾತ್ರಿ ಒಂದು ಗಂಟೆ ಆಗಿತ್ತು. ಈ ವಿಷಯ (subject) ನನಗೆ ಏನೂ ಅರ್ಥವಾಗುತ್ತಿಲ್ಲ. ಎಷ್ಟೇ ಓದಿದರೂ ತಲೆಯಲ್ಲಿ ನಿಲ್ಲುತ್ತಿಲ್ಲ. ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದೆ ಅಸಹಾಯಕನಾಗಿ. ಆಗ ಅಲ್ಲೇ ಗುರುಭಕ್ತರ ಮನೆಯೊಳಗಿದ್ದ ಚಂದ್ರಶೇಖರ ಭಾರತೀ ಯತಿವರ್ಯರ ಫೋಟೋಗೆ ಹಾಕಿದ್ದ ಒಂದು ಹೂವನ್ನು ನನಗೆ ನೀಡಿ "ಇದನ್ನು ಹಿಡಿದುಕೊಂಡು ಹೋಗು. ಎಲ್ಲವನ್ನೂ ಹೂವೇ ಬರೆಸುತ್ತೆ" ಎಂದು ಧೈರ್ಯ ನೀಡಿ ಕಳಿಸಿದರು. ವಾಸ್ತವವೆಂದರೆ ನಾನು ಆ ದಿನ ಒಂದಿನಿತೂ ಓದಿಕೊಂಡಿರಲಿಲ್ಲ. ಪರೀಕ್ಷೆಯಲ್ಲಿ ಏನು ಬರೆದೆನೋ ಅಂತಾನೂ ಗೊತ್ತಿಲ್ಲ. ಹೋಗಿ ಬರೆದು ಬಂದೆ ಅಷ್ಟು ಮಾತ್ರ ಗೊತ್ತು. ಆಶ್ಚರ್ಯವೆಂದರೆ ಗುರುವಾಕ್ಯದಂತೆಯೇ ನಾನು ಆ ವಿಷಯದಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದೆ. ಇಂದು ನಾನು ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದು ಗುರುಕೃಪೆಯಿಂದಾಗಿಯೇ. ನನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ಗುರುನಾಥರು ಜೊತೆಗಿದ್ದು ನಡೆಸುತ್ತಿದ್ದಾರೆ ಎಂದು ಕೃತಜ್ಞತೆಯಿಂದ ಸ್ಮರಿಸಿದರು. ಮಾತ್ರವಲ್ಲ, ಚರಣದಾಸನಾದ ನಾನು ನೋಡಿದಂತೆ ಸಮಸ್ಯೆ ಹೊತ್ತು ಗುರುನಿವಾಸಕ್ಕೆ ಬರುತ್ತಿದ್ದ ಹೆಚ್ಚಿನ ಭಕ್ತರಿಗೆ "ಚಂದ್ರಶೇಖರ...... " ಹೇಳಿಕೊಳ್ಳಿ ಅಥವಾ ಬರೆಯಿರಿ. ಅವನೇ ಎಲ್ಲಾ ದಾರಿ ಸುಗಮಗೊಳಿಸುತ್ತಾನೆ ತಿಳಿಯಿತೇ? ಎಂದು ಹೇಳುತ್ತಿದ್ದರು.....,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 144


    ಗ್ರಂಥ ರಚನೆ - ಚರಣದಾಸ 

ನಮ್ಮದಲ್ಲದ ಕೆಲಸ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಸೃಷ್ಠಿಯ ಚರಾಚರಗಳೆಲ್ಲವೂ ಗುರುವಿನ ಅಧೀನ. ಅವೆಲ್ಲವೂ ಅವನ ಅಣತಿಯಂತೆಯೇ ನಡೆಯುತ್ತಿರುತ್ತವೆ. ಈ ಮಧ್ಯೆ ನಾವು ನಮ್ಮತನ ಅಹಂಕಾರ ತೋರಿಸಿ ಸದ್ಗುರುವಿನ ಇಚ್ಚೆಗೆ ವಿರುದ್ಧವಾಗಿ ನಡೆಯಹೋದರೆ ತೊಂದರೆ ಕಟ್ಟಿಟ್ಟಬುತ್ತಿ. ಉಪನ್ಯಾಸಕ ವೃತ್ತಿಯಲ್ಲಿರುವ ಒಬ್ಬ ವ್ಯಕ್ತಿ ಗುರುನಿವಾಸಕ್ಕೆ ಆಗಾಗ್ಗೆ ಬರುತ್ತಿದ್ದರು. ಗುರುನಾಥರ ಮನೆಯಲ್ಲಿ ಮುಕ್ತನಾಗಿರುತ್ತಿದ್ದ ಈತ ಗುರುನಾಥರೊಂದಿಗೆ ತುಂಬಾ ಸಲುಗೆಯಿಂದಿದ್ದರು. ಆತ ಆಗಾಗ್ಗೆ "ಗುರುಗಳೇ ನಾನು ನಿಮ್ಮ ಚರಿತ್ರೆ ಬರೆಯಬೇಕು. ಅನುಮತಿ ನೀಡಿ" ಎಂದು ಕೇಳುತ್ತಿದ್ದರು. ಒಮ್ಮೆ ಗುರುನಾಥರು "ಆಯ್ತಯ್ಯಾ ಬರೆಯುವಂತೆ" ಎಂದರು. ಇದರಿಂದ ಖುಷಿಯಾದ ಆತ ಕೂಡಲೇ ಪುಸ್ತಕದೊಂದಿಗೆ ಬಂದು ಗುರುಗಳ ಮುಂದೆ ಕುಳಿತರು. ಗುರುನಾಥರು ಹೇಳುವುದನ್ನೆಲ್ಲ ಬರೆಯತೊಡಗಿದರು. ಬಿಡುವಿದ್ದಾಗಲೆಲ್ಲ ಈ ಕೆಲಸ ನಡೆಯುತ್ತಿತ್ತು. 

ಒಮ್ಮೆ ಗುರುನಾಥರು ಅವರನ್ನು ಕರೆದು ಹೀಗೆ ಹೇಳಿದರು. "ನೀನು ಏಳನೆಯ ಅಧ್ಯಾಯ ಬರೆಯುವ ಹೊತ್ತಿಗೆ ನನ್ನ ಮೇಲಿನ ಅಭಿಮಾನ ಕಳೆದುಕೊಂಡು ನನ್ನ ಮೇಲೆ ಆರೋಪ ಮಾಡುತ್ತೀಯಾ. ಅದೇ ಕೊನೆ. ಆ ಮೇಲೆ ನಿನಗೆ ಬರೆಯಲಾಗುವುದಿಲ್ಲ. ಅಲ್ಲಿಗೆ ನಮ್ಮ ಸ್ನೇಹವೂ ಮುರಿದು ಬೀಳುವುದು" ಎಂದಿದ್ದರು. 

ಅವರೆಂದಂತೆಯೇ ಆತ ಗುರುಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಜಗಳವಾಡಿ ದೂರಾದನು. ಬೆಂಗಳೂರು ನಿವಾಸಿಯಾಗಿದ್ದ ಆತನ ಮನೆಗೆ ಕೊನೆಯದಾಗಿ ಗುರುನಾಥರು ಭೇಟಿ ನೀಡಿದ ಸಂದರ್ಭ ನಾನೂ ಕೂಡಾ ಜೊತೆಗಿದ್ದೆ. ಅಂದು ಎಲ್ಲರಿಗೂ ಕೈಮುಗಿದು ಆ ಮನೆಯಿಂದ ಹೊರಹೋದ ಗುರುನಾಥರು ಮತ್ತೆ ಆ ಕಡೆ ಸುಳಿಯಲಿಲ್ಲ. 

ಘಟನೆ ನಡೆದು ಕೆಲ ವರ್ಷದ ನಂತರ ತನ್ನ ತಪ್ಪಿನ ಅರಿವಾದ ಆತ ಮತ್ತೆ ಗುರುನಾಥರಲ್ಲಿಗೆ ಬರಬೇಕೆಂದುಕೊಂಡನಾದರೂ ಅದು ಇಂದಿಗೂ ಸಾಧ್ಯವಾಗಲಿಲ್ಲ. 

ಇದರಿಂದ ನನ್ನ ಜೀವನದಲ್ಲಿ ಎರಡು ಪಾಠವನ್ನು ಕಲಿತುಕೊಂಡೆ. 

ಒಂದು, ಅಂತಹ ಮಹಾನ್ ಶಕ್ತಿಯಾಗಿದ್ದ ಗುರು ಮನಸ್ಸು ಮಾಡಿದ್ದಲ್ಲಿ ಈ ಆಪಾದನೆಗಳು ಬರದಂತೆ ತಡೆಯಬಹುದಾಗಿತ್ತು ಅಥವಾ ತನಗೆ ನೋವು ಮಾಡಿದ ಆತನನ್ನು ಶಪಿಸಬಹುದಾಗಿತ್ತು. ಆದರೆ ಅದಾವುದನ್ನೂ ಮಾಡದೇ ಈಶ್ವರನ ನಿಯಮಕ್ಕೆ ಬದ್ಧನಾಗಿ ಸಾಮಾನ್ಯರಂತೆ ತಾವೂ ಎಲ್ಲವನ್ನೂ ಅನುಭವಿಸಿದ ಗುರುನಾಥರ ಈ ನಡೆ ನಮಗೆಲ್ಲರಿಗೂ ಮಾದರಿ. 

ಇನ್ನೊಂದು, ಇನ್ನೊಬ್ಬರು ತಪ್ಪು ಮಾಡಿದರೆ ಅವರಿಗೆ ಬೈಯಬೇಡಿ. ಅದರಲ್ಲೂ ಪಾಠವಿದೆ. ಅವರ ತಪ್ಪು, ಅದರ ಫಲಿತಾಂಶ ನಾವು ಈ ರೀತಿಯ ತಪ್ಪು ಮಾಡಬಾರದೆಂಬುದನ್ನು ತೋರಿಸುತ್ತದೆ. ನಮ್ಮನ್ನು ಎಚ್ಚರವಾಗಿ ನಡೆಯಲು ಪ್ರೇರೇಪಿಸುತ್ತದೆ. ಅಂದ ಮೇಲೆ ಅವನೂ ನಮಗೆ ಪಾಠ ಹೇಳಿಕೊಟ್ಟಂತೆ ಅಲ್ಲವೇ? ಹಾಗಿರುವಾಗ ನಾವು ಆತನನ್ನು ದೂಷಿಸುವುದು ಸರಿಯಲ್ಲ ಅಲ್ಲವೇ ಎಂಬ ಗುರುನಾಥರ ಮಾತು ಜಗತ್ತನ್ನು ಗುರುವೆಂದು ಒಪ್ಪಿ ನಡೆ ಎಂಬ ಪಾಠವನ್ನು ಇಂದಿಗೂ ಕಲಿಸಿ ಮುನ್ನಡೆಸುತ್ತಿದೆ.....,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

Friday, February 24, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 143


    ಗ್ರಂಥ ರಚನೆ - ಚರಣದಾಸ 

ಹಳದಿ ಬಟ್ಟೆ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಒಮ್ಮೆ ಬಾಣಾವರದಲ್ಲಿ ಶ್ರೀ ಕೃಷ್ಣ ಯೋಗೇಂದ್ರ ಯತೀಶ್ವರರ ಆರಾಧನೆಯೋ ಅಥವಾ ಜಯಂತಿ ಕಾರ್ಯಕ್ರಮವೋ ನಡೆದಿತ್ತು. ಎಂದಿನಂತೆ ಗುರುಬಾಂಧವರು ಭಕ್ತಾದಿಗಳೆಲ್ಲರೂ ಬಾಣಾವರದಲ್ಲಿ ಸೇರಿದ್ದರು. ನಾನು ಮಾಮೂಲಿನಂತೆ ಸಖರಾಯಪಟ್ಟಣದಿಂದ ಬಾಣಾವರಕ್ಕೆ ಕಳಿಸಬೇಕಾದ ಸಾಮಾನು ಸರಂಜಾಮುಗಳನ್ನು ಗುರುನಾಥರ ಅಣತಿಯಂತೆ ಅಣಿಗೊಳಿಸಿ ಕಳಿಸಿಕೊಟ್ಟು ಕಾರ್ಯ ಮುಗಿಸಿದ್ದೆ. 

ಬಾಣಾವರದಲ್ಲಿ ಹೋಮ ಪೂಜೆ ಕಾರ್ಯಗಳು ಮುಗಿದು ಓಟವಾಗಿ ಹೊರಡುವ ಕಾಲಕ್ಕೆ ಸರಿಯಾಗಿ ಅದೆಲ್ಲಿದ್ದವೋ ಜೇನು ಹುಳುಗಳು ಇದ್ದಕ್ಕಿದ್ದಂತೆ ದಾಳಿ ಮಾಡಿ ಕಚ್ಚತೊಡಗಿದವು. ಕೆಲವರು ಆಸ್ಪತ್ರೆಗೂ ದಾಖಲಾದರು. 

ಯಾರೋ ಒಬ್ಬರಿಂದ ವಿಷಯ ತಿಳಿದ ಗುರುನಾಥರು ಭಕ್ತರೊಬ್ಬರ ಕಾರಿನಲ್ಲಿ ನೇರವಾಗಿ ಬಾಣಾವರಕ್ಕೆ ಬಂದು ಕಾರಿನಿಂದ ಇಳಿದವರೇ ಒಂದು ಬಟ್ಟೆಯನ್ನು ಹಳದಿ ಬಣ್ಣ ಮಾಡಿ ಸುಮ್ಮನೆ ಗಗನದೆಡೆಗೆ ಚಿಮ್ಮಿಸಿದರಷ್ಟೇ ಅರೆ ಕ್ಷಣದಲ್ಲಿ ದಾಳಿ ಮಾಡುತ್ತಿದ್ದ ಜೇನು ಹುಳುಗಳು ಮಾಯವಾಗಿ ಬಿಟ್ಟಿದ್ದವು. 

ಹರಿವ ನೀರಾಗಿ.......: 

ಪರಮ ಲೌಕಿಕವಾಗಿ ಬದುಕಿ ಆಧ್ಯಾತ್ಮದ ತುತ್ತತುದಿಯನ್ನು ಹೇಗೆ ತಲುಪಬಹುದೆಂಬುದನ್ನು ತಮ್ಮ ಜೀವಮಾನದುದ್ದಕ್ಕೂ ಆಚರಿಸಿ ತೋರಿಸಿದ ಗುರುನಾಥರು ಲೌಕಿಕರಿಗೆ ಲೌಕಿಕ, ಪಾರಮಾರ್ಥಿಕರಿಗೆ ಪರಮ ಪಾರಮಾರ್ಥಿಕರಾಗಿದ್ದರು. 

ಗುರುನಿವಾಸದಲ್ಲಿ ಭಕ್ತರೊಂದಿಗೆ ಕುಳಿತಿರುತ್ತಿದ್ದ ಗುರುನಾಥರು ಬದುಕು ಹೇಗಿರಬೇಕೆಂದು ಹೇಳುತ್ತಿದ್ದರು. 

"ನೋಡ್ರಯ್ಯಾ, ಜೀವನದಲ್ಲಿ ಎಂದಿಗೂ ಯಾರಿಗೂ ನೋವು ಮಾಡಬೇಡಿ. ನಿಮಗೂ ನೋವಾಗದಂತೆ ಬದುಕಿ. ದಿನವೂ ಎದು ಸಿಕ್ಕ ಕೆಲಸವನ್ನು ನಿಷ್ಠೆಯಿಂದ ಮಾಡಿ ಫಲಾಫಲವನ್ನು ಈಶ್ವರನಿಗೆ ಬಿಡಿ. ಪ್ರಯಾಣ ಸುಲಭ ಅಷ್ಟೇ" ಅಂದ್ರು. 

ಮತ್ತು ಮುಂದುವರೆದು "ನಿಮ್ಮ ತಂದೆ-ತಾಯಿ ಬಂಧು-ಬಳಗ,ಸ್ನೇಹಿತರು ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಿ. ಆದರೆ ಎಂದೂ ಯಾವ ಮೋಹಕ್ಕೂ ಸಿಗಬೇಡಿ. ಅದುವೇ ಆಧ್ಯಾತ್ಮ" ಎಂದರು. 

ಜೀವನದಲ್ಲಿ ನಾವುಗಳು ಎಲ್ಲಕ್ಕೂ ಸಾಕ್ಷಿ ರೂಪವಾಗಿರಬೇಕು. ಹೇಗಪ್ಪಾ ಅಂದ್ರೆ ಆಳದ ಮರದಂತಿರಬೇಕು. ಹೇಗೆ ಆಲದ ಮರ ತನ್ನಲ್ಲಿ ವಾಸ ಮಾಡುವ ಎಲ್ಲ ಜೀವಿಗಳಿಗೂ ಆಶ್ರಯ ನೀಡುವುದೋ ಹಾಗೆಯೇ ತನ್ನ ನೆರಳಿಗೆ ಬಂದ ಪ್ರತಿಯೊಬ್ಬರಲ್ಲೂ ಯಾವುದೇ ಬೇಧ ತೋರದೆ ಏಕರೂಪವಾಗಿ ನೆರಳು ನೀಡುವುದು ಅಲ್ಲವೇ? ಹಾಗೆ ಬದುಕಿ ಬಿಟ್ಟರೆ ಸಾಕು. 

ಆಲದ  ಮರ ತನ್ನ ನೆರಳಿಗೆ ಮೈಯೊಡ್ಡಿ ಬರುವ ಜೂಜುಗಾರ, ಸನ್ಯಾಸಿ, ಕಳ್ಳ, ಪ್ರಾಣಿ ಹೀಗೆ ಎಲ್ಲರಿಗೂ ಸಮಾನವಾಗಿ ಆಶ್ರಯ ನೀಡುವುದು. ಯಾವುದೇ ಪ್ರತಿಫಲಾಪೇಕ್ಷೆ ಪಡುವುದಿಲ್ಲ ಅಲ್ಲವೇ? ಅವರ ವೃತ್ತಿ, ನಡತೆಯ ಬಗ್ಗೆ ಎಂದೂ ಚಕಾರವೆತ್ತುವುದಿಲ್ಲ. ಕೇವಲ ಸಾಕ್ಷಿ ರೂಪವಾಗಿದ್ದು, ಯಾವುದಕ್ಕೂ ಅಂಟಿಕೊಳ್ಳದೆ ತನ್ನತನವನ್ನೂ  ಬಿಟ್ಟು ಕೊಡದೆ ಕರ್ತವ್ಯ ನಿರತನಾಗಿರುವುದೋ ಅಂತೆಯೇ ನಾವೂ ಬದುಕಿದಲ್ಲಿ ಪ್ರತಿಯೊಬ್ಬರ ಬದುಕು ನಂದನವನವಾಗುವುದು ಎನ್ನುತ್ತಿದ್ದರು. 

ಮತ್ತೊಮ್ಮೆ ಹೀಗೆ ಹೇಳತೊಡಗಿದರು. ನಿಂತ ನೀರಲ್ಲಿ ಹುಳುವಾಗುವುದು. ಅದು ಯಾರಿಗೂ ಉಪಯುಕ್ತವಲ್ಲ ಅಲ್ಲವೇ? ಆದರೆ ಹರಿವ ನೀರು? ಅದು ನಿಜಕ್ಕೂ ಶುದ್ಧ, ಸ್ವಚ್ಛ ಹಾಗೂ ಬಳಸಲು ಯೋಗ್ಯ. ನಾವುಗಳೂ ಕೂಡಾ ನಿಂತ ನೀರಾಗದೇ ಹರಿವ ನೀರಾಗಬೇಕು. ಸಮುದ್ರವಾಗಬೇಕು. ಹೇಗೆ ಸಮುದ್ರ ತನ್ನೊಡಲಲ್ಲಿ ಏನನ್ನೂ ಇಟ್ಟುಕೊಳ್ಳದೇ ಎಲ್ಲವನ್ನೂ ದಡಕ್ಕೆಸೆವುದೋ ಹಾಗೆಯೇ ನೀವೂ ಕೂಡಾ ಏನನ್ನೂ ಕೂಡಿಟ್ಟುಕೊಳ್ಳಬಾರದು, ಕೂಡಿಟ್ಟಷ್ಟೂ ಭಾರ, ಕಳೆದಷ್ಟು ಹಗುರ, ಎನ್ನುತ್ತಿದ್ದರು. 

ಇನ್ನೊಂದು ಘಳಿಗೆಯಲ್ಲಿ ಏನೂ ಆಗಬಹುದು ಅಲ್ಲವೇ? ಹಾಗಿರುವಾಗ ನಾಳೆಗೆ ಅಂತ ಹಣ ಕೂಡಿಡಬೇಕೆ? ಇಂದಿನ ಈ ಕ್ಷಣವನ್ನು ಪ್ರಾಮಾಣಿಕವಾಗಿ ಶಿವಾರ್ಪಣ ಮಾಡಿ ಬದುಕಿಬಿಡಿ ಸಾಕು ಎಂದು ಹೇಳುತ್ತಿದ್ದರು. 

ಫೋಟೋ ತೆಗೆಯುವುದನ್ನು ವಿರೋಧಿಸುತ್ತಿದ್ದ ಗುರುನಾಥರು ಫೋಟೋ ತೆಗೆಯಬೇಡಿ, ಫೋಟೋ ಆಗಿ ಬಿಡಿ, ಎನ್ನುತ್ತಿದ್ದರು. ವಿಪರೀತ ಫೋಟೋ ತೆಗೆಯುವುದರಿಂದ ಸ್ವರೂಪನಾಶ ಅಂದರೆ ಆಯುಷ್ಯ  ಕ್ಷೀಣವಾಗುವುದು ಎನ್ನುತ್ತಿದ್ದರು. ಒಮ್ಮೆ ಗುರುನಾಥರು ಬಂಧುಗಳ ಮನೆಗೆ ಹೋಗಿದ್ದರು. ಎಲ್ಲರೊಂದಿಗೂ ಸ್ನೇಹದಿಂದ ಇದ್ದ ಗುರುನಾಥರನ್ನು ನೋಡಿದ ಬಂಧುಗಳೆಲ್ಲರೂ ಅಲ್ಲಿ ಸೇರಿದ್ದರು. ಕುಟುಂಬದವರೆಲ್ಲರೂ ಸೇರಿದ ಕಾರಣ ಎಲ್ಲರೂ ಸೇರಿ ಫೋಟೋ ತೆಗೆಸಿಕೊಳ್ಳೋಣವೆಂದು ಯೋಚಿಸಿದ ಬಂಧುಗಳೆಲ್ಲರೂ ಒಟ್ಟಾಗಿ ತಮ್ಮ ಮನದಾಸೆಯನ್ನು ಗುರುನಾಥರ ಮುಂದಿಟ್ಟರು. ಬಂಧುಗಳ ಒತ್ತಾಸೆಗೆ ತಲೆಬಾಗಿದ ಗುರುನಾಥರು ಆಗಲಿ ಎಂದರು. ಸಮ್ಮತಿ ಸಿಕ್ಕಿದ್ದಕ್ಕೆ ಖುಷಿಯಾದ ಬಂಧುಗಳು ಹಲವಾರು ಫೋಟೋ ಹೊಡೆಸಿಕೊಂಡರು. ಗುರುನಾಥರು ನಗುತ್ತಾ ಕುಳಿತಿದ್ದರು. ನಂತರ ಫೋಟೋ ನೆಗೆಟಿವ್ ತೊಳೆದು ನೋಡಿದರೆ ಅಲ್ಲಿ ಒಂದು ಫೋಟೋ ಕೂಡ ಬಂದಿರಲಿಲ್ಲವೆಂದು ತಿಳಿದು ಬಂತು. ಗುರುವನ್ನು ಬಲಾತ್ಕರಿಸಲಾಗದು. ಗುರುವಿಗೆ ಸನ್ನಡತೆಯೇ ಬಂಧುತ್ವವೆಂದು ತಿಳಿದ ಬಂಧುಗಳು ತಮ್ಮ ತಪ್ಪಿನ ಅರಿವಾಗಿ ಸುಮ್ಮನಾಗಿಬಿಟ್ಟರು.......,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

Thursday, February 23, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 142


    ಗ್ರಂಥ ರಚನೆ - ಚರಣದಾಸ 

ಅನಾಥೋ ದೈವ ರಕ್ಷಕಃ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಭಕ್ತರ ಕೂಗಿಗೆ ಕಣ್ಣೀರಿಗೆ ಭಗವಂತ ಎಲ್ಲಿದ್ದರೂ ಕಿವಿಗೊಡುವನು. ಅಂತಹ ಸಂದರ್ಭದಲ್ಲಿ ಗುರುವಿಗೆ ದೇಶ-ಕಾಲಗಳಾವುವೂ ಅಡೆ ತಡೆಯಾಗದು. 

ಒಮ್ಮೆ ಗುರುನಾಥರು ಇದ್ದಕ್ಕಿದ್ದಂತೆ ಸಖರಾಯಪಟ್ಟಣದಿಂದ ಬೆಂಗಳೂರಿಗೆ ಬಂದಿಳಿದರು. ತಮ್ಮ ಸಹೋದರಿಯ ಮನೆಗೆ ಬಂದು ಅಲ್ಲಿಂದ ತಮ್ಮ ದೂರದ ಬಂಧುವಿಗೆ ಕರೆ ಮಾಡಿ ದ್ವಿಚಕ್ರವಾಹನ ತರಲು ತಿಳಿಸಿದರು. ಗುರುವಿನ ಪರಮ ಭಕ್ತರಾದ ಅವರು ಕೂಡಲೇ ಬಂದರು. ಗಾಡಿ ಏರಿದ ಗುರುನಾಥರು ರಾಜಾಜಿನಗರದ ಗಲ್ಲಿಯೊಳಗೆ ಹೋಗಿ ಒಂದು ಮನೆಯ ಮುಂದೆ ನಿಲ್ಲಿಸಲು ಸೂಚಿಸಿದರು. 

ಗಾಡಿಯಿಂದ ಇಳಿದವರೇ ಒಬ್ಬ ವ್ಯಕ್ತಿಯ ಹೆಸರನ್ನು ಹೇಳಿ "ಅವರ ಮನೆ ಇಲ್ಲೇ ಎಲ್ಲೋ ಬರುತ್ತೆ ಸ್ವಲ್ಪ ವಿಚಾರಿಸಯ್ಯಾ" ಅಂದರು. ಜೊತೆಗೆ ಬಂದ ಆ ವ್ಯಕ್ತಿ ಆ ಕಡೆ ಈ ಕಡೆ ವಿಚಾರಿಸುತ್ತಿರುವಾಗ ಗುರುನಾಥರು ನಿಂತಿದ್ದ ಮನೆಯ ಪಕ್ಕದ ಮನೆಯಿಂದ ಹೊರಬಂದ ದಂಪತಿಗಳು ಗುರುನಾಥರನ್ನು ನೋಡಿ ಓಡೋಡಿ ಬಂದು ಗುರುಗಳೇ ಅಂತೂ ನಮಗೆ ದರ್ಶನ ನೀಡಿದಿರಲ್ಲಾ ಎಂದು ನಮಸ್ಕರಿಸಿ, ತಮ್ಮ ಮನೆಯೊಳಗೆ ಕರೆದೊಯ್ದರು. ಕರೆದು ಒಳಗೆ ಕುಳ್ಳಿರಿಸಿ, ಹೀಗೆ ಹೇಳಿದರು. "ಗುರುಗಳೇ ನಾವು ನಿಮ್ಮ ದರ್ಶನ ಪಡೆಯಲು ಸಖರಾಯಪಟ್ಟಣಕ್ಕೆ ಹಲವು ಬಾರಿ ಬಂದಿದ್ದೆವು. ಆದರೆ ದರ್ಶನವಾಗಿರಲಿಲ್ಲ. ಇಂದು ನಮ್ಮ ಮನೆಯ ಬಾಗಿಲಿಗೇ ಬಂದು ದರ್ಶನ ನೀಡಿ ನಮ್ಮನ್ನು ಕೃತಾರ್ಥರಾಗಿಸಿದ್ದೀರಿ. ನಮ್ಮ ಮನೆಯ ವಿಳಾಸ ನಿಮಗೆ ಹೇಗೆ ತಿಳಿಯಿತು?" ಎಂದು ಕೇಳಿದರು. 

ಆಗ ಗುರುನಾಥರು ನಗುತ್ತಾ ಆ ಮನೆಯೊಡತಿ ಕಡೆ ತಿರುಗಿ ಹೀಗೆ ಕೇಳಿದರು. "ಏನಮ್ಮಾ, ಗುರುಗಳು ಬರದೇ ನಾ ಆಹಾರ ಮುಟ್ಟೋಲ್ಲ ಅಂತ ಉಪವಾಸ ಕುಳಿತಿರುತ್ತೀಯಲ್ಲಾ? ಹಾಗೆಲ್ಲಾ ಹಸಿದುಕೊಂಡು ಇರಬಾರದು. ಊಟ ಮಾಡು", ಎನ್ನಲು ಆ ಮನೆಯೊಡತಿ ಹೌದೆಂದು ತಲೆಯಾಡಿಸಿದರು. 

ನಂತರ ಗುರುನಾಥರು "ಎಲ್ಲಿ ಒಳಗಿದ್ದ ಹಾಲುಬಾಯಿ ತಾ ತಿನ್ನಬೇಕು ನಾನು" ಅಂತ ಕೇಳಲು ಆಕೆ ಸಂತೋಷದಿಂದ ತಂದು ಗುರುವಿಗೆ ಸಮರ್ಪಿಸಿದಳು. 

ನಂತರ ಆಕೆ ತನಗೆ ಎರಡು ಹೆಣ್ಣು ಮಕ್ಕಳಿರುವರೆಂದು ಹೇಳಿ ಒಬ್ಬಾಕೆಯನ್ನು ಒಳಗಿನಿಂದ ಹೊರ ಕರೆತಂದು ಗುರುವಿಗೆ ನಮಸ್ಕರಿಸಲು ಹೇಳಿದರು. ಆಕೆ ಹಾಗೆಯೇ ಮಾಡಿದಳು. ನಂತರ ಎರಡನೇ ಮಗಳನ್ನು ಕರೆದು ನಿಲ್ಲಿಸಿ ಗುರುಗಳೇ ಈಕೆ ತುಂಬಾ ಮಂಕು. ಈಕೆಗೆ ಏನೂ ತಿಳಿಯೋದಿಲ್ಲ ಎಂದು ಮೂದಲಿಸುವಂತೆ ನುಡಿದರು. 

ಕೂಡಲೇ ಮಧ್ಯೆ ಮಾತನಾಡಿದಾಗ ಗುರುನಾಥರು "ಹಾಗೆಲ್ಲಾ ಹೇಳಬಾರದು. ಆಕೆ ತುಂಬಾ ಚುರುಕಿದ್ದಾಳೆ. ಈಕೆಗೆ ಮೊದಲು ಮದುವೆ  ಆಗುತ್ತೆ. ದೀರ್ಘ ಸುಮಂಗಲಿಯಾಗಿ ಸುಖವಾಗಿ ಬಾಳುತ್ತಾಳೆ" ಎಂದು ಧೈರ್ಯ ನೀಡಿ ಆ ಮಗಳಿಗೆ ಹಾಲು ಬಾಯಿ ತಿನ್ನಿಸಿ ಅಲ್ಲಿಂದ ಹೊರಟರು. 

ಅಂದ ಹಾಗೆ ಆಗ ಸಮಯ ರಾತ್ರಿ 9:30 ಆಗಿತ್ತು. ದಾರಿಯಲ್ಲಿ ಬರುವಾಗ, "ನನಗೆ ಮಾಡಲು ಬೇಕಾದಷ್ಟು ಕೆಲಸವಿರುತ್ತೆ ಕಣಯ್ಯಾ" ಎಂದು ನುಡಿದು ಸುಮ್ಮನಾದರು. 

ಒಮ್ಮೆ ಬಾಣಾವರದಲ್ಲಿ ಶ್ರೀ ಕೃಷ್ಣ ಯೋಗೇಂದ್ರ ಯತೀಶ್ವರರ ಆರಾಧನೆಯೋ ಅಥವಾ ಜಯಂತಿ ಕಾರ್ಯಕ್ರಮವೋ ನಡೆದಿತ್ತು. ಎಂದಿನಂತೆ ಗುರು ಬಾಂಧವರು ಭಕ್ತಾದಿಗಳೆಲ್ಲರೂ ಬಾಣಾವರದಲ್ಲಿ ಸೇರಿದ್ದರು. ನಾನು ಮಾಮೂಲಿನಂತೆ ಸಖರಾಯಪಟ್ಟಣದಿಂದ ಬಾಣಾವರಕ್ಕೆ ಕಲಿಸಬೇಕಾದ ಸಾಮಾನು ಸರಂಜಾಮುಗಳನ್ನು ಗುರುನಾಥರ ಅಣತಿಯಂತೆ ಅಣಿಗೊಳಿಸಿ ಕಳಿಸಿಕೊಟ್ಟು ಕಾರ್ಯ ಮುಗಿಸಿದೆ. 

ಬಾಣಾವರದಲ್ಲಿ ಹೋಮ ಪೂಜೆ ಕಾರ್ಯಗಳು ಮುಗಿದು ಓಟವಾಗಿ ಹೊರಡುವ ಕಾಲಕ್ಕೆ ಸರಿಯಾಗಿ ಅದೆಲ್ಲಿದ್ದವೋ ಜೇನು ಹುಳುಗಳು ಇದ್ದಕ್ಕಿದ್ದಂತೆ ದಾಳಿ ಮಾಡಿ ಕಚ್ಚತೊಡಗಿದವು. ಕೆಲವರು ಆಸ್ಪತ್ರೆಗೂ ದಾಖಲಾದರು.....,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

Wednesday, February 22, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 141


    ಗ್ರಂಥ ರಚನೆ - ಚರಣದಾಸ 

ಭಿನ್ನತೆ ಏಕೆ? 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಸದ್ಗುರುವು ಶುದ್ಧಾಶುದ್ಧ ರಹಿತನು. ಅವನಿಗೆ ನಡವಳಿಕೆಯೇ ಜಾತಿ, ಉತ್ತಮ ಸಂಸ್ಕಾರವೇ ಧರ್ಮ. 

ಇಸ್ಲಾಂ ಧರ್ಮಕ್ಕೆ ಸೇರಿದ ಒಬ್ಬ ವ್ಯಕ್ತಿ ಆಗಾಗ್ಗೆ ಗುರುನಿವಾಸಕ್ಕೆ ಬರುತ್ತಿದ್ದರು. ಅವರು ನಮ್ಮೂರಿನ ಸಮೀಪದವರೇ ಆಗಿದ್ದರಿಂದ ನನ್ನೊಂದಿಗೆ ಸಲುಗೆಯಿಂದಿದ್ದರು. ಅವರು ಗುರುನಿವಾಸಕ್ಕೆ ಬಂದಾಗ ಗುರುನಿವಾಸದಲ್ಲೇ ಇದ್ದ ನಾನು ಅಂದು ಗುರುನಾಥರೊಂದಿಗೆ ನಡೆದ ಮಾತುಕತೆಯ ವಿವರ ಕೇಳಲು ಅವರು ಹೀಗೆ ಹೇಳತೊಡಗಿದರು. 

ಸ್ವಾಮಿ ನಾವುಗಳೆಲ್ಲರೂ ಮೂಲತಃ ಆಂಧ್ರದವರಾಗಿದ್ದು ಇಲ್ಲಿಗೆ ಬಂದು ಹಲವು ವರ್ಷಗಳೇ ಕಳೆದಿದೆ. ನಾವಿಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದೇವೆ. ಚಿಕ್ಕಮಗಳೂರಿನ ನಮ್ಮ ಬಂಧುಗಳಿಂದ ನಮಗೆ ಗುರುನಾಥರ ಬಗ್ಗೆ ತಿಳಿದುಬಂತು. ಆ ನಂತರ ಗುರುನಾಥರು ನಮ್ಮೂರಿಗೂ ಬರುತ್ತಿರುವರೆಂಬುದನ್ನು ತಿಳಿದು ನಮ್ಮೂರಿನ ಒಂದು ದೇಗುಲಕ್ಕೆ ಗುರುನಾಥರು ಬಂದ ಸಂದರ್ಭ. ನಾನು ಅಲ್ಲಿಯೇ ಹೋಗಿ ಅವರ ದರ್ಶನ ಪಡೆದೆ.  "ನಾವೆಲ್ಲರೂ ಇಲ್ಲಿಗೆ ಆಗಾಗ್ಗೆ ಬರುತ್ತಿರುತ್ತೇವೆ" ಎನ್ನಲು ನಾನು ಸ್ವಾಮಿ, ತಾವು ತಪ್ಪು ತಿಳಿಯಲಾರರೆಂದಲ್ಲಿ ಒಂದು ಪ್ರಶ್ನೆ ಎಂದು ಕೇಳಲು, ಅವರು ತಲೆಯಾಡಿಸಿದರು. 

ಆಗ ನಾನು ಸ್ವಾಮಿ ತಾವು ಅನ್ಯ ಧರ್ಮೀಯರಾಗಿದ್ದೂ ಇಲ್ಲಿಗೆ ಬಂದಿರುವಿರಲ್ಲಾ ಇದರಿಂದ ನಿಮ್ಮ ಸ್ನೇಹಿತರೂ ಹಾಗೂ ಇತರರಿಂದ ಏನಾದರೂ ತೊಂದರೆ ಆಗದೇ? ಎಂದೆ. 

ಅದಕ್ಕವರು, ನೋಡಿ, ಭಕ್ತಿ ಎಂಬುದು ನಮ್ಮ ವೈಯಕ್ತಿಕ ವಿಚಾರ. ನೆರೆಯ ಆಂಧ್ರದಲ್ಲಿ ಓರ್ವ ಯತಿಗಳ ಸಮಾಧಿ ಇದೆ. ನಮ್ಮ ತಂದೆ, ಅಜ್ಜ, ಎಲ್ಲರೂ ಅವರಿಗೆ ತುಂಬಾ ನಡೆದುಕೊಳ್ಳುತ್ತಿದ್ದರು. ಈಗ ನಾವುಗಳೂ ಕೂಡಾ ಅಲ್ಲಿಗೆ ನಡೆದುಕೊಳ್ಳುತ್ತಿದ್ದೇವೆ. 

ಪೂಜೆ ಯಾರು ಮಾಡಿದರೇನು, ಸಲ್ಲುವುದು ಆ ಭಗವಂತನಿಗೇ ಅಲ್ಲವೇ?. ಹೀಗಿರಲು ನಮ್ಮ ನಡುವೆ ಭಿನ್ನತೆ ಏಕೆ? ನಾನಂತೂ ಯಾರಲ್ಲೂ ಬೇಧವೆಣಿಸುವುದಿಲ್ಲ, ಎಂಬ ಅವರ ಉತ್ತರ ಕೇಳಿ ನಾನು ಆಶ್ಚರ್ಯಚಕಿತನಾದರೂ ತೋರಿಸಿಕೊಳ್ಳದೇ ಸುಮ್ಮನೆ ತಲೆಯಾಡಿಸಿದೆ. 

ನಂತರ ಅವರು ತಮ್ಮ ಕತೆ ಹೇಳತೊಡಗಿದರು. 

ನಾವು ಮೊದಲ ಬಾರಿ ಗುರುದರ್ಶನ ಮಾಡಿದಾಗ ಅವರು ಯಾರಿಂದಲೂ ಯಾವುದೇ ವಸ್ತುವನ್ನು ಸ್ವೀಕರಿಸುತ್ತಿರಲಿಲ್ಲ ಎಂಬುದನ್ನು ಕಣ್ಣಾರೆ ಕಂಡೆವು. ನಮಗಾದರೋ, ಗುರುಗಳಿಗೆ ಮಲಗಲು ಹಾಸಿಗೆ ತಂದುಕೊಡಬೇಕೆಂಬ ಮಹದಾಸೆ. ಅದನ್ನು ನಾನೇ ತಯಾರಿಸಿ ಕೊಡಬೇಕು, ಎಂದಿತ್ತಾದರೂ ಅವರು ಸ್ವೀಕರಿಸದಿದ್ದರೇನು ಮಾಡಲೀ ಎಂಬ ಭಯವಿತ್ತು. 

ಮನೆಗೆ ಬಂದ ನಾನು ಒಂದು ದಿನ ರಾತ್ರಿ ಮಲಗುವ ಮೊದಲು "ಗುರುಗಳೇ ನೀವು, ನಾವು ಸಿದ್ಧ ಮಾಡಿದ ಹಾಸಿಗೆಯನ್ನು ಸ್ವೀಕರಿಸುವಿರಾದಲ್ಲಿ ಅದನ್ನು ಸ್ವಪ್ನರೂಪದಲ್ಲಿ ತಿಳಿಸಿ, ನಾನು ಸಿದ್ಧ ಮಾಡಿ ತರುವೆ ಎಂದು ವಿನಮ್ರ ಭಕ್ತಿಯಿಂದ ಪಾರ್ಥಿಸಿ ಮಲಗಿದೆ. 

ಮರುದಿನ ಬೆಳಗಿನ ಜಾವ ನಾನು ಗುರುನಿವಾಸಕ್ಕೆ ಹೋದಂತೆ, ಅಲ್ಲಿ ಗುರುನಾಥರ ಜೊತೆಗಿದ್ದ ವ್ಯಕ್ತಿ ಗುರುನಾಥರಿಂದ ಸಮ್ಮತಿ ಪಡೆದು ನಾವು ತಂದ ಹಾಸಿಗೆಯನ್ನು ಸ್ವೀಕರಿಸಿದಂತೆ ಸ್ವಪ್ನವಾಯಿತು. ಬೆಳಿಗ್ಗೆ ಐದು ಗಂಟೆಗೆ ಎದ್ದವನೇ ಸ್ನಾನಾದಿ ಕಾರ್ಯ ಮುಗಿಸಿ ಗುರುಗಳನ್ನು ಪ್ರಾರ್ಥಿಸಿ ಹಾಸಿಗೆ ಸಿದ್ಧ ಪಡಿಸಿ ಅಂದು ಸಂಜೆ ಹಾಸಿಗೆಯೊಂದಿಗೆ ನೇರವಾಗಿ ಗುರುನಿವಾಸಕ್ಕೆ ತೆರಳಿದೆ. ಅಂದು ನೀವೂ ಅಲ್ಲಿ ಇದ್ದಿರಾದರೂ ಕೆಲಸ ಕಾರ್ಯದಲ್ಲಿ ಮಗ್ನರಾಗಿದ್ರಿ. ಹೆದರುತ್ತಾ ಒಳಬಂದು ನಿಂತ ನಮ್ಮನ್ನು ಅಲ್ಲಿಂದಲೇ ಗಮನಿಸಿದ ಗುರುನಾಥರು "ನೀವು ತಂದ ವಸ್ತುವನ್ನು ನಾನು ಸ್ವೀಕರಿಸುವೆ. ಅಲ್ಲೇ ಇಟ್ಟು ಬನ್ನಿ" ಎಂದು ಕರೆದರು. 

ನಂತರ ನೀವು (ಅಂದರೆ ನಾನು) ಬಂದು ಗುರುಗಳ ಅಣತಿಯಂತೆ ಆ ಹಾಸಿಗೆಯನ್ನು ಎತ್ತಿಕೊಂಡು ಮಂಚದ ಮೇಲಿಟ್ಟು ಆರತಿ ಬೆಳಗಿದಿರಿ. ಅದಾಗಲೇ ಅಲ್ಲಿ ಒಂದು ಅದ್ವೈತ ಪೀಠಕ್ಕೆ ಕಳಿಸಲೆಂದು ಸಕಲ ಭಿಕ್ಷಾ ಸಾಮಗ್ರಿಗಳನ್ನು ತಂದಿರಿಸಲಾಗಿತ್ತು. ಆ ನಂತರ ನಾವು ಅವರಿಗೆಂದು ತಂಡ ವಸ್ತುವನ್ನು ಬೇರೆಲ್ಲಿಗೋ ಕಳಿಸುವಿರೆಂದು ತಿಳಿದು ಮನಸ್ಸಿನಲ್ಲಿಯೇ ಬೇಸರಗೊಂಡಿದ್ದೇನು. ಆಗ ನನ್ನತ್ತ ಬಂದ  ಗುರುನಾಥರು ಹೀಗೆ ಹೇಳಿದರು. "ನಂಗೆ ಅಂತ ಕೊಟ್ಟ ಮೇಲೆ ಅದು ಎಲ್ಲಿಗೆ ಹೋದ್ರೂ ನಂಗೇ ಸೇರಿದಂತೆ" ಎಂದು ಹೇಳಿ ನಸುನಗುತ್ತಾ ನನ್ನ ಕೆನ್ನೆಯನ್ನು ಸವರಿದರು. 

ಮತ್ತೊಂದು ಸಂದರ್ಭದಲ್ಲಿ ಅದೇ ವ್ಯಕ್ತಿಯ ಮೇಲೆ ವಾಮಾಚಾರ ಪ್ರಯೋಗವಾಗಿತ್ತು. ಕಾಲಿನಲ್ಲಿ ವಿಪರೀತ ವ್ರಣವಾಗಿ ಯಾವುದೇ ವೈದ್ಯ ಉಪಚಾರಕ್ಕೂ ಗುಣವಾಗಿರಲಿಲ್ಲ. ಆಗ ಕೊನೆಯ ಪ್ರಯತ್ನವಾಗಿ ಗುರುವನ್ನು ನೆನೆಯುತ್ತಾ ಗುರುನಿವಾಸಕ್ಕೆ ಬಂದಾಗ ಯಾರನ್ನೂ ಮನೆಯೊಳಗೆ ಬಿಟ್ಟಿರಲಿಲ್ಲ. ಆಗ ಬೇಸರಗೊಂಡ ಇವರು ಗುರುವನ್ನು ನೆನೆಯುತ್ತಾ ಊರಿಗೆ ವಾಪಸಾದರು. ಅಂದು ರಾತ್ರಿ ಸ್ವಪ್ನದಲ್ಲಿ ದರ್ಶನ ನೀಡಿದ ಗುರುನಾಥರು ಇವರ ಕಾಲಿಗಾದ ಗಾಯವನ್ನು ಒತ್ತಿ ಸರಿಪಡಿಸಿ "ನೋಡಯ್ಯಾ, ಸ್ವಚ್ಛಗೊಳಿಸಿ ತೆಗೆದಿದ್ದೇನೆ" ಎಂದು ಹೇಳಿದಂತಾಯಿತು. 

ಅದಾಗಿ ಎರಡು ದಿನದಲ್ಲಿ ಭೀಕರವಾಗಿದ್ದ ಕಾಲಿನ ಗಾಯ ಒಣಗಲಾರಂಭಿಸಿತು. 

ಕೆಲ ದಿನಗಳ ನಂತರ ಗುರುನಾಥರನ್ನು ಭೇಟಿಯಾದಾಗ ಗುರುನಾಥರು "ನೀನು ಮನೆ ತಗೋಳ್ತೀಯಾ" ಅಂದ್ರು. ಆದರೆ ಅಂದು ವಾಸ್ತವವಾಗಿ ಅವರ ಆರ್ಥಿಕ ಸ್ಥಿತಿ ತುಂಬಾ ದುಸ್ತರವಾಗಿತ್ತು. ಆದ್ದರಿಂದ ಅವರು ಗುರುನಾಥರ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಮನೆ ಸಿಕ್ಕಿತು. ಆಗ ಮತ್ತೆ ಭೇಟಿಯಾದ ಗುರುನಾಥರು "ಹಣ ಹೇಗೋ ಹೊಂದುತ್ತೆ. ಕಣಯ್ಯಾ.." ಎಂದಿದ್ದರು. ಅಂತೆಯೇ ಗುರುಕೃಪೆಯಿಂದಾಗಿ ತಿಂಗಳ ನಂತರ ಬ್ಯಾಂಕ್ ಸಾಲ ದೊರೆತು ಮನೆ ಖರೀದಿಸಿದರು. ಗುರುನಾಥರು ಆಗಲೇ ಅವರಿಗೆ ಮನೆಯ ಬೆಲೆ ನಾಲ್ಕು ಕಾಲು ಲಕ್ಷ ಎಂದಿದ್ರು. ಅದು ಹಾಗೆಯೇ ಆಯಿತು. 

ಮನೆ ಖರೀದಿಸಿದ ಆ ವ್ಯಕ್ತಿಗೆ ಗಂಡು ಸಂತಾನವಿರಲಿಲ್ಲ. ಒಂದು ಮಗುವಾಗಿ ಸತ್ತಿತ್ತು. ಆಗ ಗುರುನಾಥರು ಒಂದು ಗಂಡು ಮಗುವಾಗುತ್ತೆ ಎಂದಿದ್ರು. ಅಂತೆಯೇ ನಡೆಯಿತು. ಆದರೆ ಆ ಮಗು ಸದಾ ಅನಾರೋಗ್ಯದಿಂದ ಬಳಲುತ್ತಿತ್ತು. ಇದು ಅವರ ಚಿಂತೆಗೂ ಕಾರಣವಾಗಿತ್ತು. ಆಗ ಮಗುವಿನ ಸಮಸ್ಯೆಯೊಂದಿಗೆ ಗುರುನಿವಾಸಕ್ಕೆ ಬಂದ ಇವರಿಗೆ ಗುರುನಾಥರು ಆ ಮಗುವಿನ ಫೋಟೋ ತೆಗೆಸಬೇಡ, ಎಲ್ಲವೂ ಸರಿಯಾಗುವುದು ಅಂದಿದ್ರು. ಆದರೆ ಯಾರೋ ಒಮ್ಮೆ ಆ ಮಗುವಿನ ಫೋಟೋ ತೆಗೆದಿದ್ರು. ಆನಂತರ ಮಗುವಿನ ಖಾಯಿಲೆ ಉಲ್ಬಣಗೊಂಡಿತ್ತು. ಈ ವಿಚಾರವಾಗಿ ಮತ್ತೊಮ್ಮೆ ಗುರುದರ್ಶನಕ್ಕೆ ಹೋದಾಗ ಗುರುಗಳು "ನಿಮಗೆ ಇನ್ನೊಂದು ಗಂಡು ಮಗುವಾಗುವುದು" ಎಂದಿದ್ರು. ಮೊದಲ ಮಗುವಿನ ಖಾಯಿಕ್ಲೆ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಿಸಲಾಯಿತು. ಅದೇ ಸಂದರ್ಭದಲ್ಲಿ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅನಾಥ ಗಂಡು ಮಗುವಿಗೆ ತಾಯಿ ಆಗುವ ಭಾಗ್ಯ ಇವರಿಗೆ ಸಿಕ್ಕಿತು. ಖಾಯಿಲೆ ಇದ್ದ ಮಗು ತೀರಿಕೊಂಡು ದುಃಖದ ಮಡಿಲಿನಲ್ಲಿದ್ದ ದಂಪತಿಗಳಿಗೆ ಸಿಕ್ಕೇ ಈ ಅನಾಥ ಮಗು ಗುರುನಾಥರೇ ಕಳುಹಿಸಿದರೇನೋ ಎಂಬಂತಾಗಿತ್ತು. ಇಂದು ಆ ಮಗು ಇವರ ಮಡಿಲಿನಲ್ಲಿ ಬೆಳೆಯುತ್ತಿದ್ದು ಈ ದಂಪತಿಗಳು ಅನುಭವಿಸಿದ ನೋವನ್ನೆಲ್ಲ ಮರೆಸಿಬಿಟ್ಟಿದೆ. 

ಈ ಎಲ್ಲ ಘಟನೆಗಳನ್ನು ವಿವರಿಸಿದ ಆ ವ್ಯಕ್ತಿ ತನ್ನ ಕೈ ಎತ್ತಿ ಮೇಲೆ ತೋರಿಸುತ್ತಾ ಎಲ್ಲವೂ ಆ ಗುರುವಿನ ಇಚ್ಛೆ ಎಂದು ನುಡಿದು ಕ್ಷಣಕಾಲ ಮೌನಕ್ಕೆ ಜಾರಿದರು....,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

Tuesday, February 21, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 140


    ಗ್ರಂಥ ರಚನೆ - ಚರಣದಾಸ 

ಕೂಡಿದಷ್ಟೂ ಹಿಂಸೆ.... ಕಳೆದಷ್ಟೂ..... 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಒಮ್ಮೆ ಶಿವಮೊಗ್ಗ ಜಿಲ್ಲೆಯವರಾದ ಓರ್ವ ಮಹಿಳೆ ತನ್ನ ಮಗನೊಂದಿಗೆ ಗುರುನಿವಾಸಕ್ಕೆ ಬಂದರು. ಅದಾಗಲೇ ವಯೋವೃದ್ಧೆಯಾಗಿದ್ದ ಆಕೆಯು ಬಂದ ಕಾರಣವೇನೆಂದು ಗುರುನಾಥರು ವಿಚಾರಿಸಲು ಆಕೆ ಹೀಗೆ ಹೇಳತೊಡಗಿದರು. 

"ಸ್ವಾಮೀ, ನಮ್ಮ ಯಜಮಾನರು ಸ್ವಲ್ಪ ಆಸ್ತಿ ಹೊಂದಿದ್ದು ಜೊತೆಗೇ ಪೌರೋಹಿತ್ಯವನ್ನು ಮಾಡುತ್ತಿರುವರು. ನಮಗೆ ಎರಡು ಗಂಡು ಹಾಗೂ ಮೂರು ಹೆಣ್ಣು ಮಕ್ಕಳಿರುವರು. ನಮ್ಮ ಯಜಮಾನರು ಶೃಂಗೇರಿಯ ಯತೀಶ್ವರರಾದ ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತೀತೀರ್ಥರ ಕಾಲದಲ್ಲಿ ಶ್ರೀ ಮಠದಲ್ಲಿ ಸೇವೆಯಲ್ಲಿದವರು. ನನಗಾದರೋ ವರದಹಳ್ಳಿಯ ಶ್ರೀ ಶ್ರೀ ಶ್ರೀ ಶ್ರೀಧರ ಸ್ವಾಮಿಗಳಿಂದ ರಾಮನಾಮ ಉಪದೇಶವೂ ಆಗಿದೆ. ಹೀಗಿದ್ದೂ ನನಗೆ ಜೀವನದಲ್ಲಿ ನೆಮ್ಮದಿ ಇಲ್ಲವಾಗಿದೆ. ಕಾರಣ ನನ್ನ ಎರಡನೇಯ ಮಗನು ಮನೋರೋಗಿಯಾಗಿರುವನು. ಆತ ಹೇಳಿದಂತೆ ಕೇಳುವುದಿಲ್ಲ. ವಿಪರೀತ ಸಿಟ್ಟು, ಸ್ನಾನ ಮಾಡಲು ಆರಂಭಿಸಿದನೆಂದರೆ  ಇಡೀ ದಿನ ಅದನ್ನೇ ಮಾಡುತ್ತಾನೆ. ಅವನ ನಡವಳಿಕೆ ಎಲ್ಲವೂ ವಿಪರೀತವಾದುದು. ಅವನಿಗಾಗಲೇ ವಯಸ್ಸು ದಾಟುತ್ತಿದ್ದು ಮದುವೆ ಆಗುತ್ತಾನೋ, ಇಲ್ಲವೋ ತಿಳಿಯುತ್ತಿಲ್ಲ. ತಾವು ಕೃಪೆ ಮಾಡಿ ಅವನ ಖಾಯಿಲೆ ಗುಣಪಡಿಸಬೇಕು" ಎಂದು ಪ್ರಾರ್ಥಿಸಿದರು. ಜೊತೆಗೆ ಅವನ ನಡವಳಿಕೆಗಳು ನನಗೆ ಹಿಂಸೆಯಾಗುತ್ತಿದೆ ಎಂದೂ ತಿಳಿಸಿದರು. 

ಕೂಡಲೇ ಗುರುನಾಥರು ಆಕೆಯನ್ನು ಕುರಿತು ಹೀಗೆ ಕೇಳಿದರು: "ನೋಡಮ್ಮಾ, ಈಗ ತಪ್ಪುಗಳಿಗೆಲ್ಲ ನಿನ್ನ ಮಗನೇ ಕಾರಣ ಎಂಬಂತೆ ಹೇಳುತ್ತಿದ್ದೀಯಲ್ಲ. ನೀನು ಜೀವನದಲ್ಲಿ ಏನೂ ತಪ್ಪು ಮಾಡಿಲ್ಲವೇ?" ಎನ್ನಲು ಆಕೆ ಇಲ್ಲವೆಂದು ಹೇಳಿದರು. ಆಗ ಇದ್ದಕ್ಕಿದ್ದಂತೆ ಸಿಟ್ಟಾದ ಗುರುನಾಥರು "ಏನಮ್ಮಾ, ಈ ನಿನ್ನ ಮಗ ನಿನ್ನ ಗರ್ಭದಲ್ಲಿದ್ದಾಗ ಆ ಮಗು ಬೇಡವೆಂದು ಮಾತ್ರೆ ತಿಂದಿದ್ದು ನೀನಲ್ಲವೇ?" ಎನ್ನಲು ಆಕೆ ಹೌದೆಂದು ಉತ್ತರಿಸಿದಳು. 

ಆಗ ಗುರುನಾಥರು ಸಿಟ್ಟಿನಿಂದ "ಸೃಷ್ಟಿಸುವ ಅಧಿಕಾರ ನಿನಗೆ ಇಲ್ಲವೆಂದ ಮೇಲೆ ಸಾಯಿಸುವ ಅಧಿಕಾರ ನಿನಗೆ ಕೊಟ್ಟವರು ಯಾರು?. ಗುರುವಿನ ಇಚ್ಛೆಗೆ ವಿರುದ್ಧವಾಗಿ ನಿಂತ ನೀನು ಈಗ ಅದರ ಫಲ ಬೇಡವೆಂದರೆ ಹೇಗೆ?" ಎಂದು ಪ್ರಶ್ನಿಸಿದರು. 

ಆಗ ಆ ವಯೋವೃದ್ಧೆ ತನ್ನ ತಪ್ಪಿನ ಅರಿವಾಗಿ, "ಈಗ ಮುಂದೇನು ಮಾಡಲಿ ಗುರುಗಳೇ?" ಎಂದು ಕೇಳಿದರು. ಅದಕ್ಕೆ ಗುರುಗಳು ಕೆಲವು ಪರಿಹಾರ ಮಾರ್ಗಗಳನ್ನು ತಿಳಿಸಿದರು. ಜೊತೆಗೆ "ಮುಂದೆ ಒಬ್ಬ ಗುರು ಬರುವನು. ಆಗ ಎಲ್ಲವೂ ಸರಿಯಾಗುವುದು" ಎಂದರು. ಇಂದು ಆ ಮಾತು ನಿಜವಾಗಿದೆ. 

ಮತ್ತೂ ಮುಂದುವರೆದ ಗುರುಗಳು "ಮನೇಲಿ ಬೀರುವಿನಲ್ಲಿ ತುಂಬಿಟ್ಟಿರುವ ಪಾತ್ರೆ ಬಿಳೀ ಪಂಚೆಗಳನ್ನು ಕೊಟ್ಟು ಖಾಲಿ ಮಾಡು, ಕೂಡಿದಷ್ಟೂ ಹಿಂಸೆ ಜಾಸ್ತಿ" ಎಂದು ಹೇಳಿದರು. ಆಕೆ ಅಲ್ಲಿಂದ ಊರಿಗೆ ಬಂದು ಹಾಗೆಯೇ ನಡೆದುಕೊಂಡರು....,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

Monday, February 20, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 139


    ಗ್ರಂಥ ರಚನೆ - ಚರಣದಾಸ 

ಗುರುದರ್ಶನ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ನಂತರ ಕ್ಷಣಕಾಲ ಕಣ್ಣುಮುಚ್ಚಿ ಮೌನವಾದ ಆ ಮಹಾತಾಯಿ ಗತದಿನಗಳನ್ನು ನೆನಪಿಸಿಕೊಂಡು ಮತ್ತಷ್ಟು ಉತ್ಸಾಹದಿಂದ ಹೇಳು ಅನುವಾದರು. ಮತ್ತೆ 1995ರಲ್ಲಿ ಗುರುನಿವಾಸಕ್ಕೆ ಬಂದಾಗಲೂ ನನ್ನನ್ನು ಅನುಗ್ರಹಿಸಿದರು. 1997ರ ನಂತರ ನಾನು ಪದೇ ಪದೇ ಗುರುನಿವಾಸಕ್ಕೆ ಬರತೊಡಗಿದೆ. 

ಒಮ್ಮೆ ನನ್ನನ್ನು ಕರೆದು "ಜಗತ್ತನ್ನೇ ಗುರುವೆಂದು ಸ್ವೀಕರಿಸು. ಆಗ ಎಲ್ಲಾ ತಿಳಿಯುತ್ತೆ" ಅಂದರು. ಆದರೆ ಗುರು ಪದದ ಅರಿವಿರದ ನಾನು ಅವರೊಂದಿಗೆ ಪದೇ ಪದೇ ಸ್ನೇಹಿತನಂತೆ ಜಗಳವಾಡುತ್ತಿದ್ದೆ. ಇಂದು ಆ ಮಹಾತ್ಮನ ಹತ್ತಿರ ಎಷ್ಟು ಹಗುರವಾಗಿ ನಡೆದುಕೊಂಡೆ ಎಂದು ದುಃಖವಾಗುತ್ತದೆ ಎಂದು ನಿಟ್ಟುಸಿರಿಟ್ಟರು. 

ಚರಣದಾಸನಾದ ನಾನು ಅವರನ್ನು "ನೀವು ನಿಮ್ಮ ಲೌಕಿಕದ ವಿಷಯಗಳನ್ನು ಏನೂ ಕೇಳಲಿಲ್ಲವೇ?" ಎಂದೆ. 

ಅದಕ್ಕವರು "ಇಲ್ಲ.... ಎಂದೂ ಕೇಳಲಿಲ್ಲ.. ಹಾಗೂ ಗುರುಗಳೂ ಎಂದೂ ವಿಚಾರಿಸಲಿಲ್ಲ. ಆದರೆ ಒಮ್ಮೆ 2005 ರಲ್ಲಿ ನಮ್ಮೆಜಮಾನರನ್ನು ಕರೆದು "ಏನಯ್ಯಾ 10/1 ಕಾಣಿಸುತ್ತಾ ಇದೆ. ಆ ಜಾಗದ ದಾಖಲೆ ಸರಿ ಇಲ್ವಲ್ಲಾ?. ಸರಿಪಡ್ಕೊಳ್ಳಿ. ಇಲ್ಲಾಂದ್ರೆ ಮುಂದೆ ತೊಂದರೆ ಆಗುತ್ತದೆ"  ಅಂದಿದ್ರು. ಆದ್ರೆ ಅಂದು ನಾವು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅದರ ಫಲವಾಗಿ ಇಂದು ನಾವು ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ" ಎಂದು ವ್ಯಥೆಪಟ್ಟರು. 

ಒಮ್ಮೆ ಗುರುನಿವಾಸಕ್ಕೆ ಬಂದಾಗ ನಮ್ಮೆಜಮಾನರನ್ನು ಕರೆದು "ಏನಯ್ಯಾ ಹತ್ತು ದಿವಸ ಹೆಂಡತಿ ಬಿಟ್ಟು ಇರ್ತೀಯಾ?" ಎಂದು ಕೇಳಲು ನಮ್ಮ ಯಜಮಾನರು "ಹೂಂ" ಅಂದ್ರು. 

ನಂತರ ಗುರುಗಳು "ಆಯಿತು. ನಿನ್ನ ಮನೆ ಕಡೆ ನಾನು ನೋಡ್ಕೋತೀನಿ. ಹೋಗಿ ಬಾ" ಅಂದ್ರು. ನಂತರ ನಾನು ಗುರುನಿವಾಸದಲ್ಲೇ ಉಳಿದೆ. ಈ ಘಟನೆಗಳ ಹಿನ್ನೆಲೆಯಲ್ಲಿ ಇದ್ದು ಇರದಂತಿರಬೇಕು ಎಂದು ಕಲಿಸುತ್ತಿದ್ದ ಗುರುನಾಥರ ವಿಧಾನ ತುಂಬಾ ವಿಶಿಷ್ಟವಾದುದು. 

ಆ  ನಂತರ ನಮಗೆ ನಮ್ಮ ಕರ್ತವ್ಯವೇ ಗುರುವೆನಿಸತೊಡಗಿತು. ಆ ನಂತರ ವರ್ಷಕ್ಕೆ ಒಂದೆರಡು ಬಾರಿ ಮಾತ್ರ ಬರತೊಡಗಿದೆ ಎಂದರು. ಮತ್ತೊಮ್ಮೆ ಚಿಕ್ಕಮಗಳೂರಿನಲ್ಲಿ ಭೇಟಿಯಾಗಿದ್ದರು. ಆಗ "ನಾನು ನಿಮ್ಮನೆಗೆ ಬಂದೇ ಬರ್ತೀನಿ ಕಣಮ್ಮಾ...." ಎಂದು ರಾತ್ರಿ ಹತ್ತು ಗಂಟೆಯವರೆಗೂ ಜೊತೆಗೆ ಇರಿಸಿಕೊಂಡರು. ನಂತರ ಅನಾರೋಗ್ಯ ಕಾರಣದಿಂದಾಗಿ ಬರಲಾಗಲಿಲ್ಲ. ನಮ್ಮನ್ನು ಕಾರಿನವರೆಗೂ ಬಂದು ಕಳಿಸಿಕೊಟ್ಟಿದ್ದರು. 

ಅವರು ಕಾಲವಾದ ಮೂರನೇ ದಿನ ಬೆಳಿಗ್ಗೆ 11-45ರ ಸಮಯವಿರಬಹುದು. ನಮ್ಮ ಯಜಮಾನರು "ಬಾ ನೋಡು, ಗುರುನಾಥರು ಬಂದಿದ್ದಾರೆ" ಎಂದು ಕೂಗಿ ಕರೆಯತೊಡಗಿದರು. ನಾನು ಹೋದೆ. ನಮ್ಮ ಕಛೇರಿಯ ಕುರ್ಚಿಯಲ್ಲಿ ಕರುಣಾಳು ಗುರುನಾಥರು ಸಜೀವವಾಗಿ ಕುಳಿತಿದ್ದು ಕಾಣಿಸಿತು. ನಾವಿಬ್ಬರೂ ನಮಸ್ಕರಿಸಲು, ಕೈ ಎತ್ತಿ ಮುಗುಳ್ನಗುತ್ತಾ ಆಶೀರ್ವದಿಸಿದ ಗುರುನಾಥರು ಅದೃಶ್ಯರಾದರು. 

"ನಿಮ್ಮನೆಗೆ ಬಂದೆ ಬರ್ತೀನಿ" ಎಂಬ ವಾಕ್ಯವನ್ನು ಉಳಿಸಿಕೊಂಡ ಗುರುಕರುಣೆಯನ್ನು ಕಂಡು ನಮಗೆ ಕಣ್ಣೀರು ಬಂತು, ಎಂದು ಕ್ಷಣಕಾಲ ಮೌನಕ್ಕೆ ಶರಣಾದರು. 

ಮತ್ತೆ ಮುಂದುವರೆದು "ಹೀಗಿರಲು ಆ ನನ್ನೊಡೆಯ ನನ್ನೊಂದಿಗೆ ಇಲ್ಲ ಎಂದು ಹೇಗೆ ಹೇಳಲಿ" ಎಂದು ಪ್ರಶ್ನಿಸಿ, ಇಂದು ನಾನು ಈ ಮನೆಯ ನಾಲ್ಕು ಗೋಡೆಯನ್ನು ಬಿಟ್ಟು ಎಲ್ಲಿಗೂ ಬರಲಿಚ್ಛಿಸುತ್ತಿರಲಿಲ್ಲ. ಕಾರಣ ಆ ನನ್ನೊಡೆಯನ ಅನಂತ ಕರುಣೆ, ಪ್ರೀತಿ ಎಲ್ಲವೂ ಇಲ್ಲೇ ಇದೆಎಂದೆನಿಸುತ್ತಿದೆ. ಇಷ್ಟು ಹೇಳಿ ಗುರುಗಳು ದರ್ಶನ ಕೊಟ್ಟ ಕುರ್ಚಿಯನ್ನು ದಿಟ್ಟಿಸಿ ಮನಸಾರೆ ವಂದಿಸಿ "ಇಷ್ಟೇ ಕಣಪ್ಪಾ ನಂಗೆ ನನ್ನ ಗುರು ನೀಡಿದ ಭಿಕ್ಷೆ. ನಾ ಹೇಳಿದ್ದೆಲ್ಲವೂ ಅವನ ಪಾದಕ್ಕೆ ಸಮರ್ಪಣೆ" ಎಂದು ಹೇಳಿ ಕಣ್ತುಂಬಿಕೊಂಡರು. 

ಆ ದಂಪತಿಗಳ ಅತಿಶಯವಿರದ ಮಾತು, ನಡವಳಿಕೆ ಹಾಗೂ ಸಮರ್ಪಣಾ ಮನೋಭಾವ ನನ್ನಂತಹ ಹಠಮಾರಿಗೆ ಒಂದು ಪಾಠವೆನಿಸಿತು. ಆ ದಂಪತಿಗಳಿಗೆ ಮನದಲ್ಲೇ ವಂದಿಸಿದೆ. 

"ನಿನಗೆಲ್ಲವೂ ಆಗಿ ಹೋಗಿದೆ. ಸಾಧ್ಯವಾದಾಗ ವೇದಿಕೆ ಮತ್ತು ಪಾದುಕಾಪೂಜೆ ಮಾಡು ಸಾಕು. ಬೇರೇನೂ ಬೇಡ ಅಂತ ಗುರುನಾಥರು ನನಗೆ ಹೇಳಿದರು. ಆಮೇಲೆ ನಾನು ಪೂಜಿಸುತ್ತಿದ್ದ ಎಷ್ಟೋ ವಿಗ್ರಹಗಳನ್ನು ಕೊಟ್ಟು ಬಿಟ್ಟೆ. ನನ್ನ ದೇಹಾಲಯದಲ್ಲೇ ಅವನ ಪ್ರತಿಷ್ಠೆ ಮಾಡಿದ ಮೇಲೆ ಬೇರೆಲ್ಲಾ ಏಕೆ ಎಂಬುದೇ ನನ್ನ ನಂಬಿಕೆ". 

"ಗುರುವೆಂಬ ದೇಹವನ್ನು  ಎಷ್ಟು ಬಾರಿ ನೋಡಿದರೂ ನಮ್ಮೊಳಗಿನ ನಾವು ಬದಲಾಗದ ಮೇಲೆ ಏನು ಉಪಯೋಗ?. ಆ ಸ್ಥಳದ ಬಗ್ಗೆ ಮನಸ್ಸಿಗೆ ಬಂದರೆ ಸಾಕು. ಅದುವೇ ಭಾಗ್ಯ. ಅದೇ ಜ್ಞಾನ ಸ್ನಾನ. ನಾನು ಸದಾ ಗುರುನಾಥರು ನನಗೆ ಅನುಗ್ರಹಿಸಿದ ಅನುಭವಗಳನ್ನು ಮೆಲುಕು ಹಾಕುತ್ತಾ ಇರುತ್ತೇನೆ. ಹಾಗಾಗಿ ಎಲ್ಲಿದ್ದರೂ ಅವನ ಕೃಪಾದೃಷ್ಟಿ ನಮ್ಮ ಮೇಲೆ ಇರುವುದೆಂಬ ದೃಢನಂಬಿಕೆಯಲ್ಲಿ ನಾನಿರುವೆ" ಎಂಬ ಆ ಮಹಾತಾಯಿಯ ಮಾತನ್ನು ಮನನ ಮಾಡುತ್ತಾ ಆ ದಂಪತಿಗಳಿಗೆ ನಮಸ್ಕರಿಸಿ ಚರಣದಾಸನಾದ ನಾನು ಅಲ್ಲಿಂದ ಹೊರಟುಬಂದೆ.....,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

Sunday, February 19, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 138


    ಗ್ರಂಥ ರಚನೆ - ಚರಣದಾಸ 

ಅಭಿಷೇಕ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಚರಣದಾಸನಾದ ನಾನು, ನನ್ನ ಗುರುನಾಥರು ಕರುಣಾ ಸಮುದ್ರ ಎಂದು ಈ ಹಿಂದೆಯೂ ಹೇಳಿದ್ದೆ. ಕಾರಣ ಪ್ರತೀ ಹಂತದಲ್ಲೂ ನನಗೆ ತಮ್ಮ ಪವಾಡಗಳ ಮೂಲಕ ವಿಶಿಷ್ಠವಾದ ಜೀವನಾನುಭವವನ್ನು ನೀಡಿದ್ದಾರೆ. ಹಾಗೆಯೇ ಈಗ ಹೇಳ ಹೊರಟಿರುವ ಘಟನೆ ತುಂಬಾ ವಿಶಿಷ್ಠವಾದುದು ಎಂಬುದು ನನ್ನ ಅನಿಸಿಕೆ. 

ಚರಣದಾಸನಾದ ನಾನು ಮಂಗಳೂರು ಮೂಲದ ಆ ದಂಪತಿಗಳನ್ನು ಅಪರೂಪಕ್ಕೊಮ್ಮೆ ಗುರುನಿವಾಸದಲ್ಲಿ ನೋಡಿದ ನೆನಪಿತ್ತು ಅಷ್ಟೆ. ಇತ್ತೀಚೆಗೆ ನನ್ನ ಬಂಧು ಒಬ್ಬರು ಕರೆಮಾಡಿ ಹೀಗೆಂದರು:- "ನೋಡು, ಮಂಗಳೂರು ಸಮೀಪ ಓರ್ವ ದಂಪತಿಗಳಿದ್ದು ಅವರು 1970 ರಿಂದಲೂ ಗುರುನಾಥರ ಪ್ರಭಾವಕ್ಕೆ ಒಳಗಾದವರಂತೆ. ನಿನ್ನ ಮೂಲಕ ಗುರುಚರಿತ್ರೆ ಬರೆಸಲ್ಪಡುತ್ತಿರುವುದರಿಂದ ಉಪಯೋಗವಾದೀತೆಂದು ಅವರ ವಿಳಾಸ ತೆಗೆದುಕೊಂಡಿರುವೆ. ತಗೋ" ಎಂದು ನುಡಿದು ದೂರವಾಣಿ ಸಂಖ್ಯೆ ನೀಡಿದರು. 

ಚರಣದಾಸನಾದ ನಾನು ಆ ಸಂಖ್ಯೆಗೆ ಕರೆಮಾಡಿ ನನ್ನ ಪರಿಚಯ ತಿಳಿಸಿದೆ. ಆ ಕೂಡಲೇ ಅತ್ತ ಕಡೆಯಿಂದ ಬಂದ ಉತ್ತರದಿಂದ ನಾನು ಕ್ಷಣಕಾಲ ಭಾವಪರವಶನಾದೆ. ಕಾರಣ ಗುರುಕಾರುಣ್ಯದಿಂದ ಅವರು ನನ್ನ ಮೇಲೆ ಇಟ್ಟ ಅಭಿಮಾನ ಅಂತಹದಿತ್ತು. 

ಒಂದು ಭಾನುವಾರ ಅವರ ಮನೆಗೆ ಬರಲು ತಿಳಿಸಿದರು. ಅಂತೆಯೇ ಅಲ್ಲಿದ ಹೋದ ನನ್ನನ್ನು "ಗುರುನಾಥರ ಶಿಷ್ಯ" ನೆಂಬ ಕಾರಣಕ್ಕಾಗಿ ಪಾದಪೂಜೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ನಾನು ಅವರಿಗೆ ನಮಸ್ಕರಿಸಿ ವಿನಮ್ರವಾಗಿ ಪಾದಪೂಜೆಯನ್ನು ನಿರಾಕರಿಸಿದೆ. ನಂತರ ಮಾತಿಗಿಳಿದ ನಾನು ಗುರುನಾಥರೊಂದಿಗಿನ ನಿಮ್ಮ ಅನುಭವವನ್ನು ತಿಳಿಸಬೇಕೆಂದು ವಿನಂತಿಸಿದೆ. 

ಆ ಮಹಾತಾಯಿ ಮುಗುಳ್ನಗುತ್ತಾ "ನೋಡಪ್ಪಾ ನಿಂಗೆ ಗೊತ್ತಿರುವಂತೆ ನಾನು ಗುರುನಿವಾಸಕ್ಕೆ ಬಂದಿದ್ದು ಬಹಳ ಕಡಿಮೆ. ಆದರೂ ಆ ಅವಧಿಯಲ್ಲಿ ಆ ನನ್ನೊಡೆಯ ನನಗೆ ನೀಡಿದ ಅನುಭವ ಅನನ್ಯವಾದುದು. ಅದರಲ್ಲಿ ಕೆಲವೊಂದನ್ನು ತಿಳಿಸುವೆ" ಎಂದು ಗುರುವೆಂಬ ರಸಾನುಭವವನ್ನು ಬಡಿಸಲು ಅನುವಾದರು. 

ನಮಗೆ ಮೊಟ್ಟಮೊದಲು ಗುರುನಾಥರ ದರ್ಶನವಾದದ್ದು 1970ರಲ್ಲಿ. ಅದಕ್ಕೂ ಕೆಲ ವರ್ಷಗಳಿಂದ ನಮ್ಮಲ್ಲಿ ಮಳೆಯಾಗದೆ ತೋಟಗದ್ದೆಗಳೆಲ್ಲವೂ ಒಣಗಿ ಹೋಗಲಾರಂಭಿಸಿತ್ತು. ಕೆಲವರ ಸಲಹೆಯಂತೆ ಕಿಗ್ಗದ ಋಷ್ಯಶೃಂಗರಿಗೆ ಅಭಿಷೇಕ ಮಾಡಿಸುವುದೆಂದು ಯೋಚಿಸಿದ್ದೆವು. ಆ ಸಮಯ ನಮ್ಮಲ್ಲಿ ಹಲವು ವರ್ಷಗಳಿಂದ ಪೂಜೆ ಮಾಡಿಕೊಂಡಿದ್ದು ನಂತರದಲ್ಲಿ ಸಖರಾಯಪಟ್ಟಣದಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬರ ಸಲಹೆಯಂತೆ ಬಲ್ಲಾಳೇಶ್ವರನಿಗೆ ಅಭಿಷೇಕ ಮಾಡಿಸುವುದೆಂದು ತೀರ್ಮಾನಿಸಿದೆವು. 

ನಮ್ಮ ಮೂರು ಕಾರುಗಳು ಹಾಗೂ ಆಳು-ಕಾಳು ಸಕಲ ಸಾಮಗ್ರಿಗಳೊಂದಿಗೆ ಬಲ್ಲಾಳೇಶ್ವರ ದೇಗುಲಕ್ಕೆ ತಲುಪಿದೆವು. ಹನ್ನೊಂದು ಜನ ಪುರೋಹಿತರು ಸೇರಿ ಏಕಾದಶ ರುದ್ರಾಭಿಷೇಕ ಅದ್ದೂರಿಯಾಗಿ ನಡೆಯಿತು. ಮಂಗಳಾರತಿ ಆದ ನಂತರ ಪೂಜೆ ಮಾಡುತ್ತಿದ್ದ ವ್ಯಕ್ತಿ ಕ್ಷಣಕಾಲ ಧ್ಯಾನಾಸಕ್ತರಾದರು. ನಂತರ ಆ ವ್ಯಕ್ತಿ ನಮ್ಮನ್ನು ಬಲವಂತವಾಗಿ ಅವರ ಮನೆಗೆ ಕರೆದೊಯ್ದು ಆದರಿಸಿ ನಂತರ ಬಸ್ ನಿಲ್ದಾಣದವರೆಗೂ ಕಳಿಸಿ ವಾಪಸಾದರು. ಆ ವ್ಯಕ್ತಿ ದೇಗುಲದ ಆಡಳಿತಾಧಿಕಾರಿಯೂ ಹೌದೆಂದು ನಂತರ ತಿಳಿದು ಬಂತು. 

ನಾವು ಐದು ಗಂಟೆ ಪ್ರಯಾಣಿಸಿ ನಮ್ಮ ಮನೆ ತಲುಪಿದಾಗ ಆಶ್ಚರ್ಯ ಕಾದಿತ್ತು. ನಮ್ಮ ಜಮೀನಿನ ಒಂದೂವರೆ ಕಿಲೋಮೀಟರ್ ಸುತ್ತುಮುತ್ತಲಿನಲ್ಲಿ ಧಾರಾಕಾರ ಮಳೆಯಾಗಿ ಕೆರೆ ಕೋಡಿ ಬಿದ್ದಿತ್ತು. ಹಾಗೂ ದೇಗುಲದಲ್ಲಿ ಪೂಜೆ ಮಾಡಿದ ಆ ವ್ಯಕ್ತಿ ಧ್ಯಾನಸ್ತರಾದ ಸಮಯದಲ್ಲೇ ಇಲ್ಲಿ ಮಳೆ ಆರಂಭವಾಗಿ ಮೂರುವರೆ ಇಂಚು ಮಳೆಯಾಗಿತ್ತು. ತದ ನಂತರ ಒಂದೆರಡು ವರುಷ ನಿರಂತರವಾಗಿ ಬಲ್ಲಾಳೇಶ್ವರನ ಸೇವೆ ಮಾಡಿಸುತ್ತಿದ್ದೆವು. ಆ ನಂತರ ನನ್ನ ವೈಯಕ್ತಿಕ ಕೆಲಸಗಳಿಂದಾಗಿ ಸಖರಾಯಪಟ್ಟಣಕ್ಕೆ ಹೋಗಲಾಗಲಿಲ್ಲ. ನನ್ನ ಬಂಧುಗಳು ಮಾತ್ರ 1982 ರವರೆಗೂ ಪ್ರತಿ ವರ್ಷ ಸಖರಾಯಪಟ್ಟಣಕ್ಕೆ ಹೋಗಿ ಬರುತ್ತಿದ್ದರು. ಆ ನಂತರ ನಾವು ಮನಿಆರ್ಡರ್ ಮೂಲಕ ಹಣ ಕಳಿಸಲಾರಂಭಿಸಿದೆವು. 

ಆ ನಂತರ ನಾವು ಸಖರಾಯಪಟ್ಟಣಕ್ಕೆ ಬಂದದ್ದು ಬಹುಶಃ 1994 ರಲ್ಲಿ ಎನಿಸುತ್ತದೆ. 

1994 ರಲ್ಲಿ ಅದ್ವೈತ ಪೀಠದ ಶ್ರೀ ಶ್ರೀ ಶ್ರೀಯವರು ಗುರುನಿವಾಸಕ್ಕೆ ಬಂದಿದ್ದರು. ಅಲ್ಲಿಗೆ ಹೋಗಿದ್ದ ನಮ್ಮಲ್ಲಿ ಅಡುಗೆ ಮಾಡಿಕೊಂಡಿದ್ದ ಕೆಲ ಹುಡುಗರು ಕರೆಮಾಡಿ "ಸಖರಾಯಪಟ್ಟಣದಲ್ಲಿ ಒಬ್ಬರು ಗುರುಗಳಿದ್ದಾರೆ. ಭೂತ-ಭವಿಷ್ಯಗಳನ್ನು ಇದ್ದಂತೆಯೇ ಹೇಳ್ತಾರೆ. ನೀವೊಮ್ಮೆ ನೋಡಬೇಕು ಅವರನ್ನ" ಎಂದು ಒತ್ತಾಯಿಸುತ್ತಿದ್ದರು. ನಾನು ಎಂದಿನಂತೆ ಒಮ್ಮೆ ಧ್ಯಾನಕ್ಕೆ ಕುಳಿತೆ. ಆದರೆ ನನ್ನ ಮನಸ್ಸು ಸ್ಥಿರವಾಗಲಿಲ್ಲ. ಪದೇ ಪದೇ ಸಖರಾಯಪಟ್ಟಣಕ್ಕೆ ಹೋಗಲೇಬೇಕೆಂದು ಅನಿಸತೊಡಗಿತು. ನನ್ನ ಪತಿಗೆ ವಿನಂತಿಸಿ ಪತಿಯೊಂದಿಗೆ ಸಖರಾಯಪಟ್ಟಣಕ್ಕೆ ಬಂದೆ. ಬಲ್ಲಾಳೇಶ್ವರ ದೇಗುಲದ ಆಡಳಿತಾಧಿಕಾರಿಯಾಗಿದ್ದ ವ್ಯಕ್ತಿಯ ಮನೆಗೆ ಬಂದು "ಇಲ್ಲಿ ಯಾರಪ್ಪಾ ಗುರುಗಳು" ಎಂದು ಯೋಚಿಸುತ್ತಾ ಒಳಬಂದೆ. 

ಕೆಲಕ್ಷಣದಲ್ಲಿ ಒಳಗೆ ಮಲಗಿದ್ದ ವ್ಯಕ್ತಿಯೊಬ್ಬರು ಎದ್ದು ಬಂದು "ಯಾರು ನೀವು" ಎಂದು ಕೇಳಿ, "ಹೋ... ನೀವು ಮಂಗಳೂರಿನವರಲ್ವೇ? ಇಷ್ಟು ವರ್ಷದ ನಂತರ ಈಗ ದಾರಿ ಸಿಕ್ತಾ... ?" ಎಂದು ನುಡಿದು ಅಲ್ಲೇ ಮೇಲಿದ್ದ ಒಂದು ಚೀಟಿಯನ್ನು ತೆಗೆದು "ನೀವು ಕಳಿಸಿದ್ದ ಮುನ್ನೂರು ರೂಪಾಯಿ ಇಲ್ಲಿದೆ. ಹೆಂಗಪ್ಪಾ ಕಳಿಸೋದು ಅಂತಿದ್ದೆ. ಈಗ ನೀವೇ ಬಂದ್ರಿ, ಒಳ್ಳೆಯದು" ಎಂದು ನುಡಿದು ಆ ಹಣವನ್ನು ನಮ್ಮ ಕೈಗಿತ್ತರು. 

ಅಷ್ಟು ವರ್ಷದ ನಂತರವೂ ಅವರು ನಮ್ಮನ್ನು ನೆನಪಿಟ್ಟುಕೊಂಡಿದ್ದನ್ನು ನೋಡಿ ನಮಗೆ ಆಶ್ಚರ್ಯವಾಯಿತು. 

ಮತ್ತು ಮುಂದುವರೆದು "ನೋಡಮ್ಮಾ, ಊರಿನೋರೆಲ್ಲಾ ಸೇರಿ ನನಗೆ ಲಫಂಗ, ಮನೆಹಾಳ ಎಂದು ಹೀಯಾಳಿಸಿ ದೇಗುಲದಿಂದ ಹೊರಹಾಕಿದ್ರು.. ಅಲ್ಲೇ ಒಂದು ಕೊಡ ನೀರು ತಂದು ಅರ್ಧ ಆ ಶಿವನ ತಲೆಗೆ ಹಾಕಿ ಉಳಿದರ್ಧ ನಂಗೆ ಹಾಕಿಕೊಂಡು ಇಂದಿಗೆ ನನ್ನ ನಿನ್ನ ಋಣ ಹರೀತು ಎಂದು ಶಿವನಿಗೆ ಕೈಮುಗಿದು ಹೊರಬಂದೆ" ಎಂದು ಮಾತು ನಿಲ್ಲಿಸಿದರು. 

ನಾನು ನನ್ನ ಮೂಢ ಮನಸ್ಸು ಇಂತಹ ಮಹಾತ್ಮನನ್ನು ಗುರುತಿಸಲಿಲ್ಲವಲ್ಲ ಎಂದು ನನ್ನನ್ನೇ ಹಳಿದುಕೊಂಡೆ. ನನ್ನ ಕೈಹಿಡಿದು ದೇವರ ಮನೆಗೆ ಕರೆದೊಯ್ದು ಪಾದುಕೆಗೆ ಆರತಿ ಮಾಡಿಸಿ ನಂತರ ನಾವು ದಂಪತಿಗಳಿಗೆ ಆದರದಿಂದ ಉಣಬಡಿಸಿದರು. ನಾನು ಗುರುನಾಥರಲ್ಲಿ ಪಾದಪೂಜೆ ಮಾಡಬಹುದೇ ಎಂದು ಕೇಳಲು ಮರುಮಾತನಾಡದೇ ಒಪ್ಪಿಕೊಂಡರು. 

ಅದುವರೆಗೂ ಯಾರ ಹತ್ತಿರಾನೂ ಪಾದಪೂಜೆ ಮಾಡಿಸಿಕೊಳ್ಳದವರು ನಮಗೆ ಅನುಮತಿ ಕೊಟ್ಟರು. ಇದು ಅಲ್ಲಿದ್ದವರಿಗೆಲ್ಲಾ ಆಶ್ಚರ್ಯವೆನಿಸಿತ್ತು. ನಂತರ ನಮ್ಮನ್ನು ಹರಸಿ ಕಳಿಸಿಕೊಟ್ಟರು. ಆ ನಂತರ ನಾನು ಆ ಹದಿನೈದು ವರ್ಷಗಳಲ್ಲಿ ಗುರುನಿವಾಸಕ್ಕೆ ಬಂದಿದ್ದು ಕೇವಲ ಐದಾರು ಬಾರಿ ಮಾತ್ರ ಎಂದು ಕ್ಷಣಕಾಲ ಮೌನಕ್ಕೆ ಜಾರಿದರು. 

ಚರಣದಾಸನಾದ ನಾನು ಈ ವಿಚಾರ ಗೊತ್ತಿದ್ದರೂ ಏಕೆ ಹಾಗೆಂದು ಅವರತ್ತ ದಿಟ್ಟಿಸಿದೆ. 

ಆಕೆ, "ಗುರುವನ್ನು ಎಷ್ಟು ಬಾರಿ ನೋಡಿದರೂ ನಮ್ಮೊಳಗಿನ ದೋಷಗಳನ್ನು ಬದಲಿಸಿಕೊಳ್ಳದಿದ್ದರೆ ಆ ದರ್ಶನಕ್ಕೆ ಯಾವುದೇ ಅರ್ಥವಿಲ್ಲ. ಅವರ ಒಂದು ದೃಷ್ಟಿಯಲ್ಲೇ ನನ್ನ ದೋಷಗಳನ್ನು ತಿದ್ದಲು ಬೇಕಾದ ಎಲ್ಲವೂ ಸಿಕ್ಕಿತು. ಅಂದಮೇಲೆ ಆ ಭಾವದಲ್ಲಿ ನಿರಂತರವಾಗಿ ನಿಲ್ಲಬಯಸಿದೆ. ಭಾವಗುರು ಸಿಕ್ಕಮೇಲೆ ಅಲ್ಲಿಗೆ ಬರಬೇಕಾದ ಅವಶ್ಯಕತೆ ನನಗೆ ಕಂಡುಬರಲಿಲ್ಲ ಎಂದು ಸುಮ್ಮನಾದರು. 

ನಾವು ಹೊರಡುವಾಗ ನಮ್ಮನ್ನು ಕರೆದು "ಸಧ್ಯದಲ್ಲೇ ಚಂದ್ರಶೇಖರ ಭಾರತಿಗಳ ಆರಾಧನೆ ಇದೆ. ಬರಬೇಕು ಅಂದ್ರು ಮತ್ತು ಆಗಾಗ್ಗೆ ಬರ್ತಾ ಇರಿ" ಅಂದ್ರು. 

ಗುರುವಿನ ದೃಷ್ಟಿ ಬಿದ್ದರೆ ಸಾಕು ಕಣಯ್ಯಾ.. ಏನು ಬೇಕಾದ್ರೂ ಸಿಕ್ಕಿ ಬಿಡುತ್ತೆ ಎಂದು ಗುರುನಾಥರು ಆಗಾಗ್ಗೆ ನಮಗೆ ಹೇಳುತ್ತಿದ್ದ ಮಾತು ಈ ಘಟನೆಯನ್ನು ನೋಡಿದಾಗ ಚರಣದಾಸನಾದ ನನಗೆ ನೆನಪಿಗೆ ಬಂತು. 

ನಮ್ಮದು ಅವಿಭಕ್ತ ಕುಟುಂಬವಾದ್ದರಿಂದ ನನಗೆ ಹೆಚ್ಚಿನ ಜವಾಬ್ದಾರಿ ಇತ್ತು. ಜೊತೆಗೆ ಗುರುವೆಂಬ ಪದದ ಅರ್ಥವನ್ನೂ ಅರಿಯದಿದ್ದ ನಾನು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಹೊರಟುಬಿಟ್ಟೆ. ಆಮೇಲೆ ನೋಡಿ, ಅದ್ಯಾಕೋ ತಿಳೀತಿರಲಿಲ್ಲ. ಪದೇ ಪದೇ ಗುರುದರ್ಶನ ಮಾಡಲೇಬೇಕೆಂಬ ಹಂಬಲ ಶುರುವಾಯಿತು ಎಂದು ನುಡಿದು ಕ್ಷಣಕಾಲ ಮೌನವಾದರು.....,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।