ಒಟ್ಟು ನೋಟಗಳು

Thursday, March 30, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 21

 

ಗುರುನಾಥರಿಗೆ ಕೈತುತ್ತನ್ನಿತ್ತ ಮಹಾತಾಯಿ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।

ಗುರುನಾಥರನ್ನು ನಿಕಟವಾಗಿ ಕಂಡ ಹೇಮಕ್ಕ, ತಮಗೆ ನೆನಪಿರುವ ಗುರುನಾಥರ ಲೀಲೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದು ಹೀಗೆ. "ಎಲ್ಲಿಂದ ಎಲ್ಲಿಗೆ ಅಂತರಂಗದ ಸಂಬಂಧಗಳು ಬೆಸೆದಿರುವುದೋ ಅರಿಯೆವು. ಮೊದಲು ನಮ್ಮ ಮನೆಯ ಸನಿಹವಿದ್ದ ಒಂದು ಮನೆಗೆ ಗುರುನಾಥರು ಬಂದು ಹೋಗುತ್ತಿದ್ದರು. ಅವರನ್ನು ನೋಡಿದಾಗ ಏನೋ ಒಂದು ಭಕ್ತಿಭಾವ ಅವರ ಬಗ್ಗೆ ಮೂಡುತ್ತಿತ್ತು. ಗುರುನಾಥರ ಮಾತನ್ನು ಪದೇ ಪದೇ ಕೇಳಬೇಕೆನಿಸುತ್ತಿತ್ತು ಎದುರು ಮನೆಯವರಲ್ಲಿ ಬೇಡಿಕೊಳ್ಳುತ್ತಿದ್ದೆ ಗುರುನಾಥರು ಬಂದಾಗ ತಿಳಿಸಬೇಕೆಂದು. ಕಾಲ ಕೂಡಿ ಬಂತು. ಗುರುನಾಥರ ಕೃಪಾದೃಷ್ಟಿ ನನ್ನ ಮೇಲಾಯ್ತು. ನಮ್ಮದೊಂದು ಸಣ್ಣ ಮನೆ. ಆಗ ನಾನು ಗರ್ಭಿಣಿಯಾಗಿದ್ದೆ. "ನಿನಗೆ ಜನಿಸುವವಳು ದೇವಿಯ ಅಂಶಳು - ಅಲ್ಲದೆ ಈ ಜಾಗದಲ್ಲಿ ಅಮ್ಮನವರ ಗುಡಿಯಾಗುತ್ತದೆ" ಎಂದು ಭವಿಷ್ಯ ನುಡಿದರು. 1980ರಲ್ಲಿ ಬೆಂಗಳೂರಿನಿಂದ ಭದ್ರಾವತಿಗೆ ಟ್ರಾನ್ಸ್ ಫರ್ ಆಗಿ ಬಂದೆವು. ಅಂತಹದೇನೂ ಸಿರಿತನವಿರಲಿಲ್ಲ. ಗುರುನಾಥರು ಬಂದಾಗಲೆಲ್ಲಾ "ಇದು ಆ ದೇವಿಯದೇ ಜಾಗ. ಇಲ್ಲಿ ಆಕೆಯ ಶಕ್ತಿಯು ಅಡಗಿದೆ. ಇಲ್ಲಿ ಅವಳು ನೆಲೆ ನಿಂತು ಪ್ರಸಿದ್ಧಳಾಗಿದ್ದಾಳೆ" ಎಂದಾಗ ಇದೆಲ್ಲವನ್ನೂ ನಾವು ಕಲ್ಪಿಸಿಕೊಳ್ಳುವುದೂ ಅಸಾಧ್ಯವಾಗಿತ್ತು. ಗುರುನಾಥರು ಸರ್ವಸಮರ್ಥರು ಎಂದು ಸುಮ್ಮನಿದ್ದೆವು". 

ಗುರುನಾಥರ ನೆನಪುಗಳು ಮನದಲ್ಲಿ ಉಕ್ಕಿಬಂದಾಗ, ಅವರೊಡನಿದ್ದಾಗ ಸವಿದ ಆನಂದದ ಕ್ಷಣಗಳಿಂದ - ಹೇಮಕ್ಕ ಮಾತನಾಡದ ಸ್ಥಿತಿ ತಲುಪಿದರು. ಭಾವುಕತೆಯ ಒತ್ತಡದಿಂದ ಕೆಲ ಕ್ಷಣಗಳಲ್ಲಿ ಹೊರ ಬಂದು ಮುಂದುವರೆಸಿದರು. 

"ಗುರುನಾಥರು ಹೇಳಿದಂತೆ ನನಗೆ ಹೆಣ್ಣು ಮಗುವಾಯಿತು. ಇನ್ನು ಅಮ್ಮ ಅದು ಹೇಗೆ ಬರುತ್ತಾಳೋ ನಮಗೂ ತವಕ. ಇಷ್ಟರಲ್ಲಿ ಇಲ್ಲಿದ್ದ ನಾಲ್ಕಾರು ಬಾಡಿಗೆಯವರನ್ನು ಬಿಡಿಸಿ, ಮನೆಯನ್ನು ಯಾರಿಗೋ ಮಾರುವುದರಲ್ಲಿ ಓನರ್ ಇದ್ದರು. ಅದೇ ಸಮಯದಲ್ಲಿ ಗುರುನಾಥರು ನಮ್ಮ ಮನೆಗೆ ಬಂದವರು "ಹತ್ತು ಕೈ ಬದಲಾಗಲಿ.... ಸುಮ್ಮನಿರಿ... ಇದು ಅಮ್ಮನ ಸ್ಥಾನ. ಅವಳಿಗೇ ಅದು ಬಂದು ಸೇರುತ್ತದೆ. ಎಲ್ಲರೂ ದೇವಿಯ ಅರ್ಚನೆಗೆ ದೇವಾಲಯಕ್ಕೆ ಹೋಗುತ್ತಾರೆ. ಆದರೆ ನಿನ್ನ ಬಳಿ ಸೇವೆ ತೆಗೆದುಕೊಳ್ಳಲು ದೇವಿಯೇ ಬರುತ್ತಾಳೆ. ಈ ಮನೆ ದೇಗುಲವಾಗುತ್ತದೆ." ಎಂದರು ಗುರುನಾಥರು. 1991ನೇ ಇಸವಿ ಗುರುನಾಥರು ಶೃಂಗೇರಿಯಿಂದ ಪಾದುಕೆ ತಂದವರು ನಮ್ಮ ಮನೆಗೇ ಬಂದರು. ಸಣ್ಣ ಜಾಗದಲ್ಲಿ ಪೂಜೆ ಪುನಸ್ಕಾರಗಳಾಯಿತು. ನನ್ನನ್ನು ಬಾಯ್ತುಂಬಾ ಹೇಮಮ್ಮಾ, ಹೇಮಕ್ಕಾ ಎಂದು ಕರೆಯುತ್ತಿದ್ದರು. "ಕೈ ತುತ್ತು ಹಾಕು, ಕೈ ತುತ್ತಿನ ಮೇಲೆ ಪಕೋಡದ ಚೂರು ಇಡು" ಎಂದು ಕೇಳಿ ಊಟ ಮಾಡಿದರು. ಕೆಲವೊಮ್ಮೆ ಜಾಸ್ತಿ ಜನ ಅವರೊಂದಿಗೆ ಬಂದಾಗ ಎಲೆ ಹಾಕಿಸಿ ಬಡಿಸಲು ಹೇಳುತ್ತಿದ್ದರು. "ಅಮ್ಮ" ಎಂದು ಕೇಳಿ ನನ್ನ ಕೈ ತುತ್ತು ಪಡೆದು ಗುರುನಾಥರು, ನನ್ನ ಜನ್ಮವನ್ನು ಸಾರ್ಥಕಪಡಿಸಿದರು. ಅಂತಹ ಗುರು ಮುಂದೆ ಹುಟ್ಟುವುದಿಲ್ಲ, ಹಿಂದೆ ಹುಟ್ಟಿಲ್ಲವೇನೋ, ಎಂತಹ ಕರುಣಾಮಯಿ, ಪ್ರೇಮಮಯಿ, ಸರಳ ಜೀವಿ ನಮ್ಮ ಗುರುನಾಥರು". ಹೇಮಕ್ಕ ಮತ್ತೆ ಕೆಲ ಕ್ಷಣ ಭಾವುಕರಾಗಿ ಅಂದಿನ ದಿನಗಳ ಗುಂಗಿನಲ್ಲಿ ಮುಳುಗಿಬಿಟ್ಟರು. ಕೃಷ್ಣ ಪರಮಾತ್ಮನನ್ನು ಅನೇಕ ತಾಯಂದಿರು ಸಾಕಿ ಸಲಹಿದಂತೆ- ಶುದ್ಧ ಮನದ ಅನೇಕ ಭಕ್ತರಲ್ಲಿ ಕೈ ತುತ್ತು ಪಡೆದಿದ್ದಾರೆ. ಇತ್ತವರ ಭಾಗ್ಯವದು.


ಗುರುಪ್ರಸಾದ ಕರುಣಿಸಿದರೆ ತಿಳಿಯದ ನನ್ನ ಮೌಢ್ಯ 

"ನಾಲ್ಕು ದಿನಗಳ ಕೆಳಗೆ ಒಂದು ಪಂಚೆಯನ್ನು ದಾನ ತೆಗೆದುಕೊಂಡೆಯಲ್ಲಾ ಹೇಮಮ್ಮ". ಗುರುನಾಥರಿಗೆ ನಾನು ತೆಗೆದುಕೊಂಡಿದ್ದು ಅದು ಹೇಗೆ ತಿಳಿಯಿತು? ಎಂದು ಚಿಂತಿಸುತ್ತಿರುವಲ್ಲಿ "ಅದನ್ನು ತೆಗೆದುಕೊಂಡು ಬಾ" ಎಂದರು. ನಾನು ಬೀರುವಿನಿಂದ ತೆಗೆದುಕೊಂಡು ಬಂದೆ. ತಾವು ಉಟ್ಟಿದ್ದ ಪಂಚೆಯನ್ನು ಬಿಚ್ಚಿ ಹಾಕಿ ಆ ಹೊಸ ಪಂಚೆಯನ್ನುಟ್ಟುಕೊಂಡ ಗುರುನಾಥ ಹಳೆಯದನ್ನು ನನಗಿತ್ತರು. 

ಅರಿಯದ ಮೂಢಳಾದ ನಾನು "ಇದನ್ನು ಏನು ಮಾಡಲಿ ಗುರುನಾಥರೇ? ಮಡಿಸಿ ಮಡಿ ಮಾಡಿ ಕೊಡಲಾ?" ಎಂದು ಕೇಳಿದೆ. "ಬೇಡ ಇಲ್ಲೇ ಇರಲಿ. ಯಾಕಾಗಿ ಇಲ್ಲಿಟ್ಟು ಕೊಳ್ಳುವುದು". ಪೂರ್ವಾಪರಗಳ ಅರಿವಿಲ್ಲದೇ ಮತ್ತೆ ಕೇಳಿದೆ. "ಅದು ಸಮಯ ಬಂದಾಗ ಗೊತ್ತಾಗುತ್ತದೆ" ಎಂದರು. "ಎಲ್ಲಿಡಲಿ ಇದನ್ನು? ಎಲ್ಲಿ ಜತನವಾದ ವಸ್ತುಗಳನ್ನು ಇಡುತ್ತೀಯೋ ಅಲ್ಲಿಡು" ಎಂದಾಗ ನಾನು ಬೀರುವಿನಲ್ಲಿಟ್ಟ ಅವರುಟ್ಟ ಶೇಷ ವಸ್ತ್ರವನ್ನು ನಾನು ಮರೆತೇಬಿಟ್ಟಿದ್ದೆ. ಈಗ ನನಗನಿಸುತ್ತದೆ, ಗುರುನಾಥರು ನನ್ನ ಮೇಲೆ ಅದೆಷ್ಟು ಕರುಣೆ ಇಟ್ಟಿದ್ದರು ಎಂದು. ದೇವಿ ಬರುವ ಜಾಗಕ್ಕೆ ಜಗದ್ಗುರುಗಳ ಪಾದುಕೆ ತಂದರು. ದೇವಿ ಸಾನ್ನಿಧ್ಯ ದೊರಕುವ ಮೊದಲೇ ತಮ್ಮ ಶೇಷ ವಸ್ತ್ರವನ್ನು ಇಲ್ಲಿಟ್ಟು ಗುರು ಸಾನ್ನಿಧ್ಯವನ್ನು ಕರುಣಿಸಿದ್ದರು. ಅದು ಅವರನ್ನು ಕಳಕೊಂಡ ಮೇಲೆ ನನಗೆ ಅರಿವಾಯಿತು. ಆ ವಸ್ತ್ರವನ್ನು ಆರಾಧನೆಯಲ್ಲಿ ಪೂಜೆಗೆ ಇಡುವ ಕಾಲ ಬಂದಿತ್ತು. ಅವರು ದೇಹತ್ಯಾಗ ಮಾಡಿದ ನಂತರ ಒಂದು ಸಣ್ಣ ಆರಾಧನೆ ಮಾಡಬೇಕು, ಇಲ್ಲಿನ ಭಕ್ತರೆಲ್ಲಾ ಸೇರಿ ಗುರುನಾಥರ ಸ್ಮರಣೆ ಮಾಡಬೇಕೆಂದು ಅಂದು ಬೆಳಿಗ್ಗೆ ಚಿಂತಿಸುತ್ತಿದ್ದಾಗ, ಗುರುನಾಥರು ಮೆತ್ತಗೆ ತಲೆಯ ಹಿಂಭಾಗವನ್ನು ತಟ್ಟಿ "ನನ್ನ ವಸ್ತ್ರವನ್ನು ಕೊಟ್ಟಿದ್ದೆನಲ್ಲಾ ಮರೆತು ಬಿಟ್ಟೆಯಾ.... ಅದನ್ನು ಬಳಸುವ ಕಾಲ ಈಗ ಬಂದಿದೆ" ಎಂದು ಹೇಳಿದಂತೆ ಆಯಿತು. 

ಹೀಗೆ ಗುರುನಾಥರು, ಮರೆವಿನ ಮದ್ದಾಗಿ, ದಡ್ಡರ ಬುದ್ಧಿಮತ್ತೆಯಾಗಿ, ಆರ್ತರ ಆಧಾರವಾಗಿ - ಪ್ರಸಾದ ಕರುಣಿಸಿ, ಎಂದೆಂದೂ ನಿನ್ನೊಂದಿಗೆ ನಾನಿದ್ದೇನೆ ಎಂದು ಸಮಾಧಾನ ನೀಡುತ್ತಿದ್ದಾರೆ. ಲೋಕದ ಕಣ್ಣಿಗೆ, ಆರಾಧನೆ ನಡೆದರೂ ಇಲ್ಲಿಯೇ, ಈ ಮನೆಯಲ್ಲಿಯೇ ಅವರಿದ್ದಾರೆಂಬುದನ್ನು ಅನೇಕ ಸಾರಿ ಸಾಕ್ಷೀಕರಿಸಿದ್ದಾರೆ". ಹೇಮಮ್ಮಾ ಮತ್ತೆ ಕೆಲ ಹೊತ್ತು ಭಾವ ಪ್ರಪಂಚದಲ್ಲಿ ಮುಳುಗಿದರು. 

ಪ್ರಿಯ ಓದುಗ ಮಿತ್ರರೇ ಗುರು ನರನಲ್ಲ, ಗುರು ದೇಹವಲ್ಲ, ಭಾವ, ಅಲ್ಲವೇ? 

ನಮ್ಮ ನಿಮ್ಮನ್ನು ಈ ರೀತಿ ಸಂಯೋಜಿಸಿ ಸತ್ಸಂಗ ನಡೆಸುತ್ತಿರುವವರೂ, ಸತ್ಸಂಗಕ್ಕೆ ನಿರಂತರ ಗ್ರಾಸ ಒದಗಿಸುತ್ತಿರುವವರೂ ಅವರೇ ಎಂಬುದು ನಿಜವಲ್ಲವೇ? ಬನ್ನಿ ನಾಳೆಯ ಸತ್ಸಂಗಕ್ಕೆ - ನಿತ್ಯ ಸತ್ಸಂಗ ನಿರಂತರವಾಗಲಿ... ,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in 

Wednesday, March 29, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 20

 

ಎಂದೋ ಎಲ್ಲ ನಿರ್ಧಾರವಾಗಿರುತ್ತದೆ  


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।



ಭದ್ರಾವತಿಯ ಗುರುಭಕ್ತರೊಬ್ಬರಿಗೆ ಗುರುನಾಥರು ಫೋನಾಯಿಸಿದರು. "ನೀಲಕಂಠ ರಾವ್, ನಿಮ್ಮ ಮನೆಗೆ ಎರಡು ಶಿವಲಿಂಗಗಳು ಬರುತ್ತದೆ. ಅದಕ್ಕೆ ನಿಮ್ಮ ಮನೆಯಲ್ಲಿ ಮೊದಲ ಪೂಜೆಯಾಗಬೇಕು. ಬಂದವರಿಗೆ ಒಂದು ಚೂರು ತಣ್ಣಗೆ ಮಾಡಿ ಕೂಡಲೇ ಕಳುಹಿಸಿ ಕೊಡಬೇಕು". 

"ಗುರುನಾಥರು ಫೋನು ಮಾಡಿಬಿಟ್ಟರು. ಅವರು ಪರೀಕ್ಷಿಸುವ ರೀತಿಯೇ ವಿಚಿತ್ರ. ಅಂಗಡಿಯಲ್ಲಿ ಅಪ್ಪ ಮಗ ಇಬ್ಬರೂ ಅದೇ ತಾನೇ ಬಾಗಿಲು ತೆರೆದಿದ್ದರು. ಇದರ ಜೊತೆಗೆ ಅವರ ಸಂಬಂಧಿಗಳ ಮರಣದ ಸೂತಕವೂ ಇವರಿಗೆ ಇತ್ತು. ಮನಸ್ಸು ಒಂದು ಕ್ಷಣ ಡೋಲಾಯಮಾನವಾಯಿತು. 'ಆಗುವುದಿಲ್ಲ ಗುರುಗಳೇ, ಹೀಗೆ ನಮಗೆ ಮೈಲಿಗೆ ಎಂದು' ಹೇಳಿಬಿಡೋಣವೇ ಎಂದು ಯೋಚಿಸುತ್ತಿದ್ದಂತೆ ಗುರುವಾಣಿಯೊಂದು ಥಟ್ಟನೆ ನೆನಪಿಗೆ ಬಂದಿತು. ಮೈಲಿಗೆ ಯಾರಿಗಯ್ಯಾ, ಈ ದೇಹಕ್ಕೋ, ಮನಸ್ಸಿಗೋ, ಆಡುವ ಮಾತಿಗೋ". 

ಮತ್ತೆ ಕ್ಷಣಾರ್ಧದಲ್ಲಿ ಅಂಗಡಿಯ ಬಾಗಿಲು ಹಾಕಿ ಮನೆಗೆ ಓಡಿ ಬಂದದ್ದಾಯಿತು. ಸ್ನಾನ ಮಾಡಿ ಶುಭ್ರವಸನ ಧರಿಸುವುದರಲ್ಲಿ ಎರಡು ಶಿವಲಿಂಗಗಳು ಮನೆಗೆ ಬಂದವು. ಹತ್ತು ಹದಿನೈದು ಜನ ಭಕ್ತರಿದ್ದರು. ಎಲ್ಲ ಮರೆತು ಗುರುವನ್ನು ನೆನೆಯುತ್ತಾ ಭಕ್ತಿ ಭಾವದಿಂದ ಆ ಶಿವಲಿಂಗಗಳಿಗೆ ಪೂಜೆ ಮಾಡಿ ಬಂದವರಿಗೆಲ್ಲಾ ಯತ್ಕಿಂಚಿತ್ ಸತ್ಕರಿಸಿ, ಗುರುಗಳು ಹೇಳಿದಂತೆ ಬೀಳ್ಕೊಡಲಾಯಿತು. ಮುಂದೆ ಆ ಶಿವಲಿಂಗಗಳಲ್ಲಿ ಒಂದು ಬಾಣಾವರದಲ್ಲಿ, ಮತ್ತೊಂದು ಅರಸೀಕೆರೆಯಲ್ಲಿ ಪ್ರತಿಷ್ಠಾಪಿಸಿದರು. 

ಹೀಗೆ ಗುರುನಾಥರು ನಮ್ಮನ್ನು ಪರೀಕ್ಷಿಸಲೋ, ಉದ್ಧಾರ ಮಾಡಲೋ ಹಲವು ಬಾರಿ ಇಂತಹ ಸದಾವಕಾಶಗಳನ್ನು ನಮಗೆ ಕಲ್ಪಿಸಿದ್ದಾರೆ. ಅದು ನಮ್ಮ ಪುಣ್ಯ. ಭಗವಂತನನ್ನು ಪೂಜಿಸಲು ದೇವಾಲಯಕ್ಕೆ ಎಲ್ಲಾ ಹೋಗುವುದು ವಾಡಿಕೆಯಾದರೆ, ಗುರುನಾಥರು ನಮ್ಮ ಮನೆಯ ಬಾಗಿಲಿಗೇ ಎರಡೆರಡು ಶಿವಲಿಂಗಗಳನ್ನು ಕಳಿಸಿ ಪೂಜಿಸುವ ಸದಾವಕಾಶ ಒದಗಿಸಿದ್ದಕ್ಕೆ ನಾವೆಷ್ಟು ಋಣಿಗಳಾಗಿದ್ದರೂ ಸಾಲದು. ಮುಂದೆ ಇದೇ ಮನೆಯಲ್ಲಿ ಗುರುವರ್ಯರೊಬ್ಬರ ಸಮಾಧಿಯೂ (ವೇದಿಕೆ) (ಶ್ರೀ ವಿರಜಾನಂದರ) ನಿರ್ಮಾಣವಾಗಿ ಇದೊಂದು ಮನೆಯಲ್ಲ ದೇಗುಲವಾಗಿಬಿಟ್ಟಿದೆ ಈಗ. ಬಹುಶಃ ಗುರುನಾಥರಿಗೆ 2008ರಲ್ಲೇ 2015ರಲ್ಲಿ ನಡೆಯುವ ಕಾರ್ಯ ತಿಳಿದಿತ್ತೇನೋ ಎನ್ನುತ್ತಾರೆ ಗುರುನಾಥರನ್ನು ಭಕ್ತಿ ಭಾವದಿಂದ ಸ್ಮರಿಸುತ್ತ ನೀಲಕಂಠರಾಯರು. 

ನಾನು ಹೇಳುವವರೆಗೆ ಏಳಕೂಡದು: 

ಗುರುಭಕ್ತರೊಬ್ಬರಿಗೆ, ಹತ್ತಿರದಲ್ಲೇ ಇರುವ ಮದುವೆಯ ಕರೆಯೋಲೆಯನ್ನು ಹಂಚುವ ಗುರುತರ ಜವಾಬ್ದಾರಿಯನ್ನು ಅವರ ಮನೆಯವರು ವಹಿಸಿದ್ದರು. ಬೆಳಗಿನ ಹತ್ತಕ್ಕೆಲ್ಲಾ ಮನೆಯಿಂದ ಹೊರಟ ಆ ಭಕ್ತರು, ಅವರ ಸೋದರತ್ತೆಯವರು ಗುರುನಾಥರಿಗೆ ಮೊದಲು ಆಹ್ವಾನ ಪತ್ರಿಕೆ ನೀಡಿ ಹೊರಡುವುದೆಂದು ಸಖರಾಯಪಟ್ಟಣದ ಗುರುನಾಥರ ಬಳಿ ಬಂದರು. 

ಗುರುಸ್ಥಾನಕ್ಕೆ ಬರುವುದಾಗಲೀ, ಅಲ್ಲಿಂದ ಹೊರಡುವುದಾಗಲೀ, ಎಲ್ಲ ಗುರುವಿನಿಚ್ಛೆಯಂತೆಯೇ ನಡೆಯುವುದು. ಬಂದ ಆ ಹೆಣ್ಣು ಮಗಳ ಪ್ರಕಾರ, ಗುರುವಿಗೆ ಆಹ್ವಾನ ಪತ್ರಿಕೆ ನೀಡಿ ನಮಸ್ಕಾರ ಮಾಡಿಬಿಟ್ಟರೆ ಮುಗಿಯಿತು. ಅಲ್ಲಿಂದ ಹೊರಡಬಹುದೆಂದು ಭಾವನೆ - ಜೊತೆಗೆ ಇನ್ನೂ ಅನೇಕ ಕಡೆ ಕಡೂರು, ಅರಸೀಕೆರೆಯ ಮನೆಗಳಿಗೆಲ್ಲಾ ಅಂದೇ ಪತ್ರಿಕೆ ಕೊಡುವ ಜವಾಬ್ದಾರಿಯಿತ್ತು. ಅದರ ಆತಂಕ ಬೇರೆ. 

ಆ ಹೆಣ್ಣು ಮಗಳು ಗುರುಗಳ ಮನೆಯಲ್ಲಿ ಕುಳಿತವರು "ಬರುತ್ತೀನಿ" ಎಂದು ಎದ್ದಾಗ "ಏಳಬೇಡಿ, ನಾನು ಹೇಳುವವರೆಗೆ ಅಲ್ಲೇ ಕುಳಿತಿರಿ, ಎದ್ದರೆ ಏನಾಗುತ್ತದೆಂದು ನಿಮ್ಮ ಸೋದರಳಿಯನ್ನ ಕೇಳಿರಿ" ಎಂದುಬಿಟ್ಟರು. 

ಗುರುಗಳು ಮನಸ್ಸು ಮಾಡಿದರೆ ಯಾವ ಕೆಲಸ ಏನು ಮಹಾ? ಜೊತೆಗೆ "ನಿಮ್ಮ ಮನೆಯಲ್ಲಿ ಮದುವೆ ಸುಖವಾಗಿ ನಡೆಯಲು ವೀಣಾವಾದನವನ್ನು ಕೇಳಿರಿ" ಎಂದಿದ್ದರು ಗುರುನಾಥರು. 

ಎರಡು ಗಂಟೆಯಾದರೂ ಅವರಿಲ್ಲಿಯೇ ಇರುವುದನ್ನು ಅರಿತ ಮನೆಯವರು "ನೀವು ಹೀಗೆ ಮಾಡಿದರೆ ಎಲ್ಲಾ ಆದಂತೆ" ಎಂದು ವ್ಯಂಗ್ಯವಾಡಿದರು. 

ಮುಂದೆ ಗುರುವಿನ ಆಜ್ಞೆಯಂತೆ ಅವರು ಹೊರಟಾಗ ಮೂರು ಗಂಟೆ. ಕಡೂರು, ಬೀರೂರು, ಅರಸೀಕೆರೆಯ ಎಲ್ಲ ಕರೆಗಳನ್ನು ಮುಗಿಸಿಕೊಂಡು ಅವರು ಸುಖವಾಗಿ ರಾತ್ರಿ ಹನ್ನೊಂದಕ್ಕೆ ಊರು ತಲುಪಿದರು. 

ಚಿಕ್ಕಮಗಳೂರಿನಂತಹ ಊರಿನಲ್ಲಿ ವೀಣಾವಾದಕರನ್ನೆಲ್ಲಿ ಹುಡುಕಿ ತರುವುದು. ಮನೆಯವರು ವೀಣಾವಾದನ ಕೇಳಬೇಕಲ್ಲ, ಎಂದು ಚಿಂತಿಸುತ್ತಾ ಟಿವಿ ಹಾಕಿದರೆ ಅದರಲ್ಲಿ ವೀಣಾವಾದನವೇ ಬರುತ್ತಿತ್ತಂತೆ. 

ಸಮಯದ ಮೇಲೆ ನಮ್ಮ ಹಿಡಿತವಿದೆ ಎಂಬುದು ಸುಳ್ಳು. ಎಲ್ಲವನ್ನು ಗುರುನಾಥರೇ ನಿರ್ಧರಿಸುವಾಗ ಎಲ್ಲವೂ ಸಕಾಲದಲ್ಲಿ ಸಾಗುತ್ತಿದ್ದಿತು. ಗುರುನಾಥರ ಶಿಷ್ಯರೊಬ್ಬರು "ಎಲ್ಲ ಸಮಯಕ್ಕಾಗಬೇಕು" ಎಂದು ಹೇಳುತ್ತಿದ್ದಾಗ ಗುರುನಾಥರು ನಗುತ್ತಾ "ಸಮಯ ಮುಹೂರ್ತಗಳು ಯಾರ ಕೈಯಲ್ಲಿದೆ. ಎಲ್ಲ ನಮ್ಮ ಭ್ರಮೆ, ಎಲ್ಲವೂ ಎಂದೋ ಪೂರ್ವ ನಿರ್ಧಾರವಾಗಿರುತ್ತದೆ. ನಾವದಕ್ಕೆ ಬದ್ಧರಾಗಿ ನಡೆಯುವುದಷ್ಟೇ ನಮ್ಮ ಕೆಲಸ" ಎನ್ನುತ್ತಿದ್ದ ಮಾತನ್ನಿಲ್ಲಿ ಸ್ಮರಿಸಬಹುದು. 

ಗುರುನಾಥರ ಮತ್ತಷ್ಟು ಸತ್ಸಂಗಕ್ಕಾಗಿ ನಾಳೆ ಬರುವಿರಲ್ಲಾ... ಮಿತ್ರರೇ....,  

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in 

Tuesday, March 28, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 19

 

ನಿನ್ನ ಕೆಲಸ ನಿನಗೆ ದೇವರು 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಗುರುನಾಥರ ಭಕ್ತರೊಬ್ಬರು ನಿರಂತರ ಗುರು ಗುಣಗಾನ ಮಾಡುತ್ತಾ ಒಂದು ಮದುವೆಗಾಗಿ ಚಿಕ್ಕಮಗಳೂರಿನತ್ತ ಹೊರಟಿದ್ದರು. ಇವರ ಮಾತುಗಳನ್ನು ಕೇಳಿದ ಆ ವಾಹನದಲ್ಲಿ ಇದ್ದವರಿಗೆ ಗುರುನಾಥರನ್ನು ನೋಡುವ ಪ್ರಬಲ ಇಚ್ಛೆಯಾಯಿತು. ಮದುವೆಯ ಮುಹೂರ್ತ ಮುಗಿಸಿ, ಭರ್ಜರಿ ಊಟ ಮಾಡಿಕೊಂಡು ಗುರುದರ್ಶನಕ್ಕಾಗಿ ಎಲ್ಲರೂ ಸಖರಾಯಪಟ್ಟಣಕ್ಕೆ ಸಾಗಿದರು. ಗುರುನಾಥರ ಮನೆಯಲ್ಲೂ ಒಂದು ಪೂಜೆ ನಡೆದು ಬಂದವರಿಗೆಲ್ಲಾ ಊಟ ಹಾಕುವ ಸಿದ್ಧತೆ ನಡೆದಿತ್ತು. ಗುರುನಾಥರು ಬಂದವರನ್ನೆಲ್ಲಾ ಪ್ರಸಾದಕ್ಕೆ ಬನ್ನಿರೆಂದರೆ, ಆತ ತಾನೇ ಉಂಡ ಅವರು, ಬಹುಶಃ ಗುರುಪ್ರಸಾದದ ಮಹಿಮೆಯ ಅರಿವಿಲ್ಲದೆಯೇ - "ಇಲ್ಲ ಎಲ್ಲಾ ಆಗಿದೆ" ಎಂದು ಬಿಟ್ಟರು. ಗುರುನಾಥರು ಈ ಭಕ್ತರನ್ನು ವಿಶೇಷವಾಗಿ ಎಂಬಂತೆ "ಏನೋ ನೀನು?" ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. "ಗುರುವೇ ನೀವು ಹೇಳಿದಂತೆ" ಎಂದು ಅವರು ತೋರಿಸಿದ ಜಾಗದಲ್ಲಿ ಕುಳಿತು ಬಿಟ್ಟರು. ಎಲ್ಲ ಮಡಿಯುಟ್ಟು ಕುಳಿತವರ ಪಂಕ್ತಿಯಲ್ಲಿ ಪ್ಯಾಂಟು ಧರಿಸಿದ ಇವರನ್ನೂ ಕೂರಿಸಿದಾಗ ಯಾರ್ಯಾರಿಗೆ ಏನೇನು ಇರಿಸು ಮುರಿಸಾಯಿತೋ? ಆ ಭಕ್ತರ ಜೊತೆಗೆ ಬಂದವರು "ಇವನೇನು ಮನುಷ್ಯನೋ ಬಕಾಸುರನೋ? ಈಗ ಹೊಟ್ಟೆ ಬಿರಿಯೇ ಉಂಡು ಮತ್ತೆ ಗುರುನಾಥರು ಹಾಕಿಸಿದ, ಎರಡೆರಡು ಸಾಯಿ ಬಡಿಸಿದ ಎಲ್ಲವನ್ನೂ ತಿನ್ನುತ್ತಾ ಇದ್ದಾನಲ್ಲ" ಎಂದು ನೋಡಿರಬಹುದು. 

ಗುರುನಾಥರು ಅದೇ ಪ್ರೀತಿಯಿಂದ ಎಲ್ಲರಿಗೂ ಬಡಿಸುವುದರ ಜೊತೆಗೆ, ಬಡಿಸುವವರು ಅವರ ಬಳಿ ಬಂದಾಗ ಎರಡೆರಡು ಸಾರಿ ನಿಂತು ಹಾಕಿಸುತ್ತಿದ್ದರು. ಎಲೆಯ ಮೇಲೆ ಬಂದಿದ್ದನ್ನೆಲ್ಲಾ ಸ್ವೀಕರಿಸುತ್ತಾ "ಗುರುವೇ ನೀನೀಡಿದ ಪ್ರಸಾದ" ವೆಂದು ಭಾವಿಸಿ ಆ ಭಕ್ತರು ತಿಂದೇ ಬಿಟ್ಟರು. ಏನೂ ಆಗಲಿಲ್ಲ. ಬೇರೆಲ್ಲಾದರೂ ಹೀಗೆ ತಿನ್ನಲೂ ಸಾಧ್ಯವಿರಲಿಲ್ಲ. ತಿಂದರೆ ಅರಗಿಸಿಕೊಳ್ಳುವುದೂ ಕಷ್ಟ. ಗುರುಕೃಪೆ ಎಲ್ಲವನ್ನೂ ಅರಗಿಸಿತ್ತು. 

ಹೊರಡುವಾಗ ಒಂದು ಚೀಲಕ್ಕೆ ವಿಳ್ಳೇದೆಲೆ, ಅಡಿಕೆ, ಹೂವು ಪ್ರಸಾದ, ಜಿಲೇಬಿ, ಮಾಡಿದ ಇತರ ಭಕ್ಷ್ಯಗಳನ್ನೆಲ್ಲಾ ಒಂದು ರೀತಿ ತುಂಬಿಸಿ ಕಳಿಸಿದರು. ಅದನ್ನೂ ಇವರು ಅವರ ಮಿತ್ರರೊಬ್ಬರಿಗೆ ನೀಡಿದರು. ಗುರುನಾಥರು ಅವರ ಮನೆಗೆ ಆಗಾಗ ಬರತೊಡಗಿದರು. ಒಮ್ಮೆ ಗುರುನಾಥರು ಅವರ ಮನೆಗೆ ಬಂದಾಗ, ಈ ಭಕ್ತರು ಕೆಲಸದ ಮೇಲೆ ಹೋಗಿದ್ದರು. ತಮಗೆ ಗುರುನಾಥರನ್ನು ಪರಿಚಯಿಸಿದ ವ್ಯಕ್ತಿಗೆ ಫೋನು ಮಾಡಿ ಹೇಳಬೇಕೆಂದು ಅದೆಷ್ಟು ಸಾರಿ ಪ್ರಯತ್ನಿಸಿದರೂ ಗುರುನಾಥರು ಬಿಡಲಿಲ್ಲವಂತೆ. 

ಏನು ಕಾರಣವಿರಬಹುದು? ಈ ಬಕಾಸುರನಂತೆ ಉಂಡ ಭಕ್ತನ ಮೇಲೆ ಮುನಿಸೋ? ಏಕೆ ಇವರನ್ನು ಕರೆಸಲು ಬಿಡಲಿಲ್ಲ? ಗುರುವಿನ ಎಲ್ಲ ಕಾರ್ಯಗಳ ಹಿಂದೆ ಶಿಷ್ಯನ ಹಿತ ಚಿಂತನೆಯೇ ಮೂಲವಾಗಿರುತ್ತದೆ ಎಂಬುದನ್ನು ಅರಿಯುವುದು ಕಷ್ಟ. 

ಆ ಗುರುಭಕ್ತರು ಒಂದು ಪ್ರಿಂಟಿಂಗ್ ಪ್ರೆಸ್ ನಲ್ಲಿ ಸಾಮಾನ್ಯ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಅದೊಂದು ನಿಯತಕಾಲಿಕ ಪತ್ರಿಕೆಯನ್ನು ಮುದ್ರಿಸುವ ಮುದ್ರಣಾಲಯ. ಅದರ ಮ್ಯಾನೇಜರ್ ಅವರೇ ಮುಷ್ಕರದಲ್ಲಿ ಶಾಮೀಲಾಗಿ ಅಂದು ಪತ್ರಿಕೆ ಮುದ್ರಣವಾಗದಂತಹ ಪರಿಸ್ಥಿತಿ ನಿರ್ಮಿಸಿದ್ದರು. 

ಇಂತಹ ಪರಿಸ್ಥಿತಿಯಲ್ಲಿದ್ದ ಗುರುನಾಥರ ಶಿಷ್ಯರಿಗೆ, ಗುರುನಾಥರು ಬಂದಿರುವ ಸುದ್ಧಿ ತಿಳಿದರೆ ಎಲ್ಲ ಬಿಟ್ಟು ಓಡಿ ಬರುತ್ತಿದ್ದುದು ನೂರಕ್ಕೆ ನೂರು ಸತ್ಯ. ಇದನ್ನೂ ಅಲ್ಲಿ ಕುಳಿತೇ ಗುರುನಾಥರು ಅರಿತಿದ್ದರು. 

ತಮ್ಮ ಜವಾಬ್ದಾರಿಯನ್ನು ಅರಿತ ಗುರುನಾಥರ ಶಿಷ್ಯರು, ಎಲ್ಲ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಪತ್ರಿಕೆಯ ಮುದ್ರಣ ನಿಗದಿತ ಅವಧಿಯಲ್ಲಾಗಿ ಪತ್ರಿಕೆ ಹೊರಬರುವಂತೆ ಅಲ್ಲಿದ್ದು ಶ್ರಮಿಸಿದರು. ಅಣ್ಣ ನೀಡುವ ಕಾಯಕಕ್ಕೆ ಗೌರವ ತಂದರು. 

ಮುಂದೆ ಇವರು ತಮ ಹುದ್ದೆಯಿಂದ ಬಡ್ತಿ ಹೊಂದಿ, ಆ ಜಾಗದ ಉನ್ನತ ಜವಾಬ್ದಾರಿಯ ಹುದ್ದೆ ಪಡೆದರು. ಈ ಹಿನ್ನೆಲೆಯಲ್ಲಿ ಗುರುನಾಥರ ಕೃಪೆಯೇ ಮೂಲ ಎನ್ನುವುದು ಇವರ ಭಾವನೆ. ಶಿಷ್ಯನ ಬಡ್ತಿ ಗುರುವಿಗೆ ಆನಂದ ತರದೇ?

ಅಂದು ಗುರುನಾಥರು ಬಂದಿರುವ ಒಂದು ಸಣ್ಣ ಸುದ್ದಿ ತಿಳಿದಿದ್ದರೆ, ಜವಾಬ್ದಾರಿಯನ್ನು ಬದಿಗೊತ್ತಿ ಇವರು ಓಡಿ ಬಿಡುತ್ತಿದ್ದರು. ತಮ್ಮ ಶಿಷ್ಯರು ಕರ್ತವ್ಯ ಪರಾಯಣರಾಗಿರಬೇಕೇ ಹೊರತು, ಕರ್ತವ್ಯ ಚ್ಯುತಿ ಮಾಡುವವರಾಗಿರಬಾರದು ಎಂಬುದೇ ಗುರುನಾಥರ ಭಾವ. "ಕರ್ಮಣ್ಯೇವಾಧಿಕಾರಸ್ಥೆ ಮಾ ಫಲೇಷು ಕದಾಚನ" ಎಂಬ ಗೀತೋಕ್ತಿಯಂತೆ ನಿಷ್ಕಾಮ ಕರ್ಮಾ ನಡೆದಾಗ ಗುರುನಾಥರು ಫಲ ದೊರಕಿಸದೆ ಇರುತ್ತಾರೆಯೇ? 

ಗುರುವಿನ ಮರ್ಮವರಿಯುವುದು ಅಸಾಧ್ಯ. ಎಲ್ಲ ನಡೆಯುವುದು ಅವರ ಇಚ್ಛೆಯಂತೆ, ನಾನು ಅವರ ಕೈನ ಸೂತ್ರದ ಗೊಂಬೆಗಳೆಂದರೆ ಯಾವುದೂ ಕಠಿಣವಾಗದು. ಮತ್ತೆ ಬನ್ನಿ ಓದುಗ ಮಿತ್ರರೇ.. ನಾಳಿನ ನಿತ್ಯ ಸತ್ಸಂಗಕ್ಕಾಗಿ... ಗುರುನಾಥರ ಕೃಪೆಗಾಗಿ....,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in 

Monday, March 27, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 18

 

ರೂಪ ಬೇರೆಯಾದರೂ ಒಳಗಿನ ಚೈತನ್ಯ ಒಂದೇ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಶಿವಮೊಗ್ಗದ ಒಬ್ಬ ಹೆಣ್ಣು ಮಗಳು, ಗುರು ಪರಂಪರೆ, ಸಾನ್ನಿಧ್ಯಗಳಿರುವ ಮನೆತನದಿಂದ ಬಂದವರು. ಹಲವಾರು ಗುರುಗಳ ದರ್ಶನವಾದರೂ ವಯೋಮಾನ, ಜೀವನಾನುಭವದ ಕೊರತೆಗಳಿಂದ, ಜೀವನದಲ್ಲಾವ ನೋವುಗಳನ್ನೂ ಕಾಣದಿದ್ದರಿಂದ ಮನವಿನ್ನೂ ಪಕ್ವವಾಗಿರಲಿಲ್ಲ. ಸದ್ಗುರುವಿನ ಸ್ವರೂಪವರಿಯದೆ ಮುಗ್ಧ ಸ್ವಭಾವ, ಭೋಳೆತನದಿಂದ "ಬೆಳ್ಳಗಿರುವುದೆಲ್ಲಾ ಹಾಲೆಂದು" ನಂಬುವ ಕಪಟವರಿಯದ ಮನದವರು. 

ಅವರ ಸಹೋದರಿಯ ಮನೆಗಿವರು ಹೋದಾಗ, ಕರ್ಮಧರ್ಮ ಸಂಯೋಗವೆಂಬಂತೆ ಗುರುನಾಥರ ದರ್ಶನ ಪ್ರಾಪ್ತಿಯಾಯಿತು. ತನ್ನ ಹಾಡಿನ ಸೇವೆಯ ಮುಖಾಂತರ ಗುರುನಾಥರಿಗೆ ಪ್ರಿಯವಾದ ಅಕ್ಕ ಗುರುನಾಥರ ಬಳಿ ಕುಳಿತು ಹಾಡುತ್ತಿದ್ದರು. ತಂಗಿ ದೂರದಲ್ಲಿ ಕುಳಿತಿದ್ದಳು. ಗುರುನಾಥರಿಗೆ ಅದೇನು ಕರುಣೆ ಬಂತೋ, ಅಥವಾ ಈ ಮುಗ್ಧೆ ಮುಂದಾವುದೋ ಸಂಕಟದ ಸುಳಿಯಲ್ಲಿ ಸಿಕ್ಕಬಹುದೆಂದು ಅರಿತೋ ಏನೋ, ಅವರನ್ನು ತಮ್ಮ ಬಳಿಗೆ ಕರೆದು ಪ್ರೀತಿಯಿಂದ ಆಶೀರ್ವದಿಸಿದರು. "ನಿನಗೇನು ಬೇಕಮ್ಮ, ಏನು ಹುಡುಕುತ್ತಿದ್ದೀಯಾ" ಎಂದು ಅಂತಃಕರಣದಿಂದ ಪ್ರಶ್ನಿಸಿದರು. 

"ಸದ್ಗುರುವನ್ನು ಗುರುಗಳೇ" ಎಂದರಿವರು. ಕೂಡಲೇ ಗುರುನಾಥರು "ನೀನು ಏನನ್ನು ನೋಡುತ್ತಿದ್ದೀ?" ಎಂದು ಪ್ರಶ್ನೆ ಕೇಳಿ ಆಶೀರ್ವದಿಸಿದರು. ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಮೌಢ್ಯ ಹರಿಯಬೇಕಲ್ಲ. ಆದರೂ ಗುರುನಾಥರ ಕರುಣೆ ಇವರ ಮೇಲಾಯಿತು- ಅದಾಕೆಗೆ ಈಗ ತಿಳಿಯಲಿಲ್ಲ. 

ಮುಂದೆ ಆಗಬಹುದಾದ ಅನಾಹುತದಿಂದ, ಬಹುಶಃ ಗುರುನಾಥರ ಕೃಪೆಯಿಂದ ಬಚಾವಾದರು. ಇಂದು ಆಯಾಚಿತವಾಗಿ ಗುರುನಾಥರ ಫೋಟೋ, ಪುಸ್ತಕಗಳು ಅವರ ಬಳಿ ಬಂದು ಧೈರ್ಯ, ಸ್ಥೈರ್ಯ, ಸಂತಸಗಳನ್ನೆಲ್ಲಾ ನೀಡಿವೆ. ಇಂದು ಆಕೆಯೂ ಗುರುನಾಥರ ಅನನ್ಯ ಭಕ್ತೆಯಾಗಿದ್ದಾರೆ . "ಸದ್ಗುರುವನ್ನಲ್ಲವೇ ನೀನು ನೋಡುತ್ತಿರುವುದು ಎಂದು ಗುರುನಾಥರು ಒತ್ತಿ ಹೇಳಿದರೂ ನನಗಾಗ ತಿಳಿಯುವ ಸಾಮರ್ಥ್ಯವೇ ಇರಲಿಲ್ಲ. ಆದರೂ ಗುರುನಾಥರು ನನ್ನ ಮೇಲೆ ಕೃಪೆ ತೋರಿದ್ದಾರೆ. ಎಂತಹ ಕರುಣಾಳುಗಳು" ಎಂದು ಮನದಲ್ಲೇ ನಮಿಸುತ್ತಾರೆ. ದರ್ಶನ ಮಾತ್ರವೇ, ಸ್ಮರಣ ಮಾತ್ರದಲ್ಲೇ ಭಕ್ತರನ್ನು ಉದ್ಧರಿಸುವ ಭಕ್ತೋದ್ಧಾರಕರಲ್ಲವೆ. 

ಗುರುನಾಥರನ್ನು ಕಾಣಲಾಗಲಿಲ್ಲವಲ್ಲಾ 

ಭದ್ರಾವತಿಯ ತಾಯಿಯೊಬ್ಬರು ಗುರುನಾಥರ ಪ್ರಭಾವಕ್ಕೆ ಒಳಗಾಗಿ ಎರಡು ಮೂರು ಬಾರಿ ಗುರುನಾಥರು ಬಂದಿದ್ದಾರೆಂದು ತಿಳಿದು ಆ ಸ್ಥಳಕ್ಕೆ ಹೋದರೂ ಗುರುನಾಥರ ದರ್ಶನವಾಗಿರಲಿಲ್ಲ. ಆ ತಾಯಿ ಯಾರ ಬಳಿಯೂ ತನ್ನ ದುಃಖವನ್ನು ತೋಡಿಕೊಳ್ಳದೇ ಮನದಲ್ಲೇ ಕೊರಗುತ್ತಿದ್ದರು. ಇಷ್ಟರಲ್ಲಿ ಅವರು ಬೆಂಗಳೂರಿಗೆ ಹೋಗಿ ನೆಲೆಸಿದರು. ದಿನ, ವರ್ಷಗಳು ಉರುಳಿದವು. "ಸದ್ಗುರುನಾಥ ಲೀಲಾಮೃತ" ವೆಂಬ ಪುಸ್ತಕವನ್ನು ತೆಗೆದುಕೊಂಡು ಹೋದ ನಾನು, ಅವರ ಮಗನಿಗೆ ಕೊಟ್ಟೆ. ನನ್ನ ಕೆಲಸಕ್ಕೆ ನಾನೆತ್ತಲೋ ಹೋಗಿ ಬರುವಾಗ ಮಧ್ಯಾನ್ಹ ಒಂದಾಗಿತ್ತು. 

ಆ ತಾಯಿಯ ಮುಖದಲ್ಲಿ ಉಕ್ಕಿದ ಸಂತಸ - ಸಂಭ್ರಮ ಕಂಡು ನನಗೆ ಆಶ್ಚರ್ಯವಾಯಿತು. ಸ್ನಾನ ಮಾಡಿ ಬಂದವರು ದೇವರ ಪೂಜೆಗೆಂದು ಹೋಗಿ ಅಲ್ಲಿ ಗುರುನಾಥರ ಮುಖಪುಟವಿರುವ ಪುಸ್ತಕ ತೆಗೆದು ಓದುತ್ತಾ ತನ್ಮಯರಾಗಿಬಿಟ್ಟರು. ಮತ್ತೊಮ್ಮೆ ಗುರುನಾಥರ ದರ್ಶನವಾಗಲಿಲ್ಲವೆಂಬ ನೋವು ಅವರ ಮನದಲ್ಲಿ ಜಾಗೃತವಾಯಿತು. 

ನನ್ನ ಬಳಿ ಮಾತನಾಡಿ ಎಲ್ಲ ತೋಡಿಕೊಂಡರು. "ಚಿಂತಿಸಬೇಡಿ ಅಮ್ಮ ಗುರುನಾಥರು ಎಲ್ಲೂ ಹೋಗಿಲ್ಲ. ಎಲ್ಲೆಡೆ ಇದ್ದಾರೆ. ಪುಸ್ತಕದ ರೂಪದಲ್ಲಿ ನಿಮಗೆ ಸಂತಸ ನೀಡಿದ್ದಾರೆ. ಅವರು ಮನಸ್ಸು ಮಾಡಿದರೆ ಏನೂ ಸಾಧ್ಯ" ಎಂದು ನನಗೆ ತಿಳಿದುದನ್ನು ಹೇಳಿದೆ. 

ಅದೇ ಸಮಯಕ್ಕೆ "ಲೀಲಾಮೃತ" ಪುಸ್ತಕ ತೆಗೆದುಕೊಂಡು ಹೋಗಲು ಅನಂತಣ್ಣ (ಅನಂತರಾಮ್ - ಬೆಂಗಳೂರು) ಆ ಮನೆಗೆ ಬಂದರು. ಅವರದು ಊಟವಾಗಿರಲಿಲ್ಲ. ಶಂಕರಮಠದಲ್ಲಿ ನಾಳಿನ ಯಾವುದೋ ಕಾರ್ಯಕ್ರಮದ ಉಸ್ತುವಾರಿಯಲ್ಲಿದ್ದವರು, ಅಲ್ಲಿ ಹತ್ತಾರು ಜನ ಊಟ ಮಾಡಿರೆಂದು ಹೇಳಿದರೂ ಕೇಳದೆ ಮನೆಗೆ ಹೋಗಿ ಊಟ ಮಾಡುವೆನೆಂದು ಹೇಳಿ ಹೊರಟು ಬಂದಿದ್ದರು. 

ನನ್ನಿಂದ ಪುಸ್ತಕ ಪಡೆದು ಹೊರಡಲನುವಾದಾಗ, ಮನೆಯವರು ಬಿಡಲೊಪ್ಪರು. ಕೊನೆಗೆ ಪೂರ್ವಾಪರಗಳ ವಿಚಾರ ಮಾಡಿದಾಗ ಎಲ್ಲ ಗುರುಬಂಧುಗಳೆಂಬುದರ ಅರಿವಾಯಿತು. ಬಲವಂತವಾಗಿ ಊಟಕ್ಕೆ ಎಬ್ಬಿಸಿ, ಭಕ್ತಿಭಾವದಿಂದ ಆ ತಾಯಿ ಉಣಬಡಿಸಿದರು. ಶ್ರೀ ಸದ್ಗುರುನಾಥರೇ ಅವರ ಮನೆಗೆ ಬಂದಷ್ಟು ಸಂತಸ ಆ ತಾಯಿಗಾಗಿತ್ತು. ಅನಂತಣ್ಣನವರನ್ನು ಕಂಡಾಗ ಸದ್ಗುರುನಾಥರನ್ನು ಕಂಡಷ್ಟು ಸಂತಸಪಟ್ಟು, ಮನೆ ಮಂದಿಯನ್ನೆಲ್ಲಾ ನಮಸ್ಕರಿಸಲು ತಿಳಿಸಿ ಸಂಭ್ರಮಿಸಿದರು. ಯದ್ಭಾವಂ ತದ್ಭವತಿ, ಅಂತೂ ಆ ತಾಯಿಯ ಮನದ ಕೊರಗಾಗಿ ಉಳಿದ ಗುರುನಾಥರ ದರ್ಶನದ ಆಸೆ ಹೀಗೆ ಪೂರೈಸಿತ್ತು. 

ಪ್ರಿಯ ಓದುಗ ಮಿತ್ರರೇ, ಗುರುನಾಥರು ಇಹ ಲೀಲೆಯನ್ನು ತೊರೆದ ಮೇಲೂ ಕಾಶಿಯಲ್ಲಿ, ಜಗನ್ನಾಥದಲ್ಲಿ ತಮ್ಮ ಭಕ್ತರಿಗೆ ದರ್ಶನ ಇತ್ತಿದ್ದಾರೆ. ಭಾವುಕರಿಗೆ ನಿರಾಸೆಯಾಗದು, ರೂಪ ಭಿನ್ನವಾದರೇನು ಅವರೊಳಗಿನ ಚೈತನ್ಯ ಮಾತ್ರ ಗುರುನಾಥರದೇ ಅಲ್ಲವೇ. ಪ್ರಿಯ ಓದುಗ ಬಾಂಧವರೇ, ನಾಳೆಯೂ ನಮ್ಮೊಂದಿಗಿರಿ....,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in 

Sunday, March 26, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 17

 

ಅಂತರಂಗದ ಭಾವಕ್ಕೆ ಬಂದ ಉತ್ತರಗಳು 

 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಗುರುನಾಥರ ಬಳಿ ಬರುತ್ತಿದ್ದ ಭಕ್ತರ ಸಂಖ್ಯೆ ಅಪಾರವಾಗಿದ್ದಂತೆ ವಿಭಿನ್ನ ರೀತಿಯ ಗುರುಭಕ್ತರುಗಳೂ ಇರುತ್ತಿದ್ದುದನ್ನೂ ಕಾಣಬಹುದು. ಬಂದವರ ಭಕ್ತಿ, ಭಾವ, ಅವರ ಪರಿಶುದ್ಧತೆ, ಪರಿಪಕ್ವತೆಗೆ ಅನುಗುಣವಾಗಿ ಗುರುನಾಥರು ಕಂಡುಬರುತ್ತಿದ್ದರು. 

"ಅವರವರ ಭಕುತಿಗೆ ಅವರವರ ಭಾವಕ್ಕೆ ಅವರವರ ತೆರನಾಗಿ ಇರುತಿಹನು ಶಿವಯೋಗಿ" ಎಂಬ ಮಾತನ್ನು ಗುರುನಾಥರಿಗಾಗಿಯೇ ರಚಿಸಿದಂತಿದೆ. ಅವರೊಂದು ಪರಿಶುಭ್ರ ಕನ್ನಡಿಯಾಗಿದ್ದರೆಂಬುದು ಅನೇಕರ ಅಭಿಪ್ರಾಯ. 

ಅವರ ಬಳಿ ಸ್ವಾಮಿ ರಾಮಕೃಷ್ಣರ ಬಳಿ ಬಂದ ನರೇಂದ್ರನಂತಹ ಶಿಷ್ಯರೂ ಬರುತ್ತಿದ್ದರು. ಅವರು ಹೇಳಿದುದೇ ವೇದವಾಕ್ಯವೆಂದು ನಂಬಿ ಸರ್ವ ಜಂಜಾಟಗಳಿಂದ ಪಾರಾಗುವವರೂ ಬರುತ್ತಿದ್ದರು. 

ಗುರುನಾಥರು ಮಾತ್ರ, ಎಲ್ಲರ ಮನ ಓದುವ ಜಾದೂಗಾರರಾಗಿದ್ದರು. ಆ ಮನದಲ್ಲಿ ಕುಹಕವಿಲ್ಲದ ಕೇವಲ ಪರಿಶುದ್ಧತೆ ಭಾವ ತುಂಬಿದೆ ಎಂಬುದರ ಅರಿವಾದಾಗ - ಶಿಷ್ಯನ ಮನದಲ್ಲಿ ಮೂಡಿದ ಪ್ರಶ್ನೆಗಳಿಗೆ ಸಾಂದರ್ಭಿಕವೆಂಬಂತೆ - ಯಾರಿಗೋ ಹೇಳಿದಂತೆ ಉತ್ತರಗಳನ್ನು ನೀಡಿ ಸಂಶಯ ದೂರವಾಗಿಸುತ್ತಿದ್ದರು. 

ಗುರುನಾಥರು ಒಮ್ಮೆ ಅವರಿಗಿಂತ ಚಿಕ್ಕವರಾದ ಅವರ ಬಂಧುಗಳ ಕಾಲು ಒತ್ತುತ್ತಾ ಸೇವೆ ಮಾಡುತ್ತಿರುವುದನ್ನು ಈ ಭಕ್ತರು ಕಂಡು - ಗುರುನಾಥರೇಕೆ ಈ ರೀತಿ ಸೇವೆ ಮಾಡುತ್ತಾರೆಂಬ ಸಂಶಯ ಮನದಲ್ಲಿ ಮೂಡಿತು. ಆದರೂ ಗುರುನಾಥರನ್ನು ಕೇಳುವ ದ್ರಾಷ್ಟ್ಯ ತೋರಿಸಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಗುರುನಾಥರು "ಭೂಮಿಗೆ ತಂದ ಮೇಲೆ ನಮ್ಮದು ಕೆಲವೊಂದು ಜವಾಬ್ದಾರಿಗಳು ಇರುತ್ತವಯ್ಯಾ, ಸೇವೆಯಾಗಿರಬಹುದು, ಸಲಹುವುದಾಗಿರಬಹುದು ಜವಾಬ್ದಾರಿಯಿಂದ ಕೆಲಸ ಮಾಡದೆ ಇದ್ದರೆ ಬಾಕಿ ಉಳಿಸಿಕೊಳ್ಳಬೇಕಾಗುತ್ತದೆ" ಎಂದುಬಿಟ್ಟರು. 

ಮತ್ತೊಮ್ಮೆ ಗುರುನಾಥರು, ಈ ರೀತಿ ಅವಿರತ ಬರುವ ಭಕ್ತರ ಬಾಧೆಗಳನ್ನು ಸಂಕಷ್ಟವನ್ನೂ ದೂರ ಮಾಡುತ್ತಾರೆ. ಬಂದವರಿಗೆಲ್ಲಾ ಒಂದೊಂದು ಸುಲಭ ಮಾರ್ಗ ತೋರಿಸಿ ಉದ್ಧರಿಸುತ್ತಾರೆ. ಆದರೆ ತಮ್ಮವರನ್ನೇಕೆ, ತಮ್ಮ ಶಕ್ತಿ ಬಳಸಿ ಉದ್ಧರಿಸಿ ಸುಖ ಮುಖವಾಗಿಸಬಾರದು? ಎಂಬ ಚಿಕಿತ್ಸಕ ಪ್ರಶ್ನೆ ಆ ಭಕ್ತರಲ್ಲಿ ಮೂಡಿತು. 

ಕೆಲ ಕ್ಷಣದಲ್ಲಿ ಗುರುನಾಥರ ಬಾಯಿಂದ ಬಂದ ಮಾತುಗಳೆಂದರೆ "ಅದೇನು ಮಹಾ ಅಲ್ಲ. ನನ್ನ ಬಳಿ ಬರುವ ಭಕ್ತರು ನಾನಿನ್ನು ಕಷ್ಟ ಸಹಿಸಲಾರೆ. ನೀನೆ ಗತಿ ಎಂದು ಬರುತ್ತಾರೆ, ಕರ್ಮಗಳನ್ನು ಮುಂದು ಹಾಕುವ, ನಾನೇ ಹೊರುವ ಮೂಲಕ ಅವರನ್ನು - ಅವರ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ಆದರೆ, ನಮ್ಮ ಸಮಸ್ಯೆಗಳೇ ಬೇರೆ ಯಾರೇ ಆಗಲಿ ಅವರವರ ಪ್ರಾರಬ್ಧಗಳನ್ನು, ಕರ್ಮವನ್ನು ಅನುಭವಿಸಿಯೇ ಸವೆಸಬೇಕು. ಅದನ್ನು ಮುಂದಕ್ಕೆ ಹಾಕಿದಷ್ಟೂ ಚಕ್ರಬಡ್ಡಿ, ಸುಸ್ತಿ ಬಡ್ಡಿಯ ಸಮೇತ ತೀರಿಸಬೇಕಾಗುತ್ತದೆ. ಅದಕ್ಕಾಗಿ ಸುಮ್ಮನಿದ್ದೇನೆ. ಎಲ್ಲ ಸವೆದಾಗ ಪ್ರಕಾಶ ಪ್ರಕಟವಾಗುತ್ತಯ್ಯಾ: ಎಂದು ಮಾರ್ಮಿಕವಾಗಿ ನುಡಿದರಂತೆ. 

ಮತ್ತೊಂದು ಸಾರಿ ಅರ್ಹತೆಯಿಲ್ಲದವರು, ದೊಡ್ಡ ಹೆಸರಿನಿಂದ ಗುರುನಾಥರ ಮನೆ ಬಾಗಿಲಿಗೆ ಬಂದರು. ದೊಡ್ಡ ಪೀಠಾಧಿಪತಿಗಳು  - ಕೂಡಲೇ ಗುರುನಾಥರು ಅವರನ್ನೂ ಸ್ವಾಗತಿಸಿ, ಸತ್ಕಾರ ಮಾಡಿ ನಮಿಸಿದರು. ಗೌರವ ತೋರಿದರು. ಇದನ್ನೆಲ್ಲಾ ನೋಡುತ್ತಿದ್ದ ಶಿಷ್ಯರ ಮನದಲ್ಲಿ, "ಅರ್ಹತೆ - ಪರಿಶುದ್ಧತೆ ಇಲ್ಲದವರಿಗೆ ನೇರವಾಗಿ, ಮುಖ ಮೋರೆ  ನೋಡದೆ ಅಂದು ಬಿಡುವ ಗುರುನಾಥರು - ಹೀಗೇಕೆ ವರ್ತಿಸಿದರು. ಅದೂ ಅಲ್ಲದೆ ಒಳಗೆ ಕರೆದೊಯ್ದು ಅಂತರಂಗದ ಮಾತುಕತೆಗೂ ಅವಕಾಶ ಮಾಡಿಕೊಟ್ಟರಲ್ಲ" ಎಂಬ ಪ್ರಶ್ನೆಗಳು ಮನದಲ್ಲಿ ಮೂಡಿದವು. 

ಸ್ವಲ್ಪ ಹೊತ್ತಿನಲ್ಲಿ ಗುರುನಾಥರೆಂದರು. "ಅಂತರಂಗದಲ್ಲಿ ಸಂಭಾಷಣೆ, ಆದರ, ಗೌರವಾಗಳೇನೂ ನಡಿಯಲಿಲ್ಲಯ್ಯಾ. ನಾನು ಬಾಗಿಲು ಹಾಕಿ ಹಿಂತಿರುಗುವುದರಲ್ಲಿ ಅವರು ನನ್ನ ಕಾಲು ಹಿಡಿದಿದ್ದರು ಅಷ್ಟೇ. ಶಿಷ್ಟಾಚಾರವನ್ನು ಮೀರದೆ ಮನೆಗೆ ಬಂದವರನ್ನು ಆದರಿಸಿ ಸತ್ಕರಿಸುವುದು ನಮ್ಮ ಧರ್ಮವಲ್ಲವೆನಯ್ಯಾ" ಎನ್ನುತ್ತಾ ಒಬ್ಬ ಸಂಸಾರಿಯ ಜೀವನ ಧರ್ಮವೇನೆಂಬುದನ್ನು ಸರಳವಾಗಿ ತೋರಿಸಿದ್ದರು. 

ಒಮ್ಮೆ ಈ ಭಕ್ತರು ಬೇರೊಬ್ಬರ ಸಹವಾಸ ಮಾಡುವುದರಲ್ಲಿ ನಿರತರಾಗಿದ್ದರು. ಆದರೂ ಮನಸ್ಸಿನಲ್ಲಿ ಇದರ ಪರಿಣಾಮವೇನಾಗಬಹುದು ಎಂಬ ಚಿಂತೆ ಇತ್ತು. ಶಿಷ್ಯರ ಮನದ ಮಾತನ್ನರಿತ ಗುರು "ನೋಡಯ್ಯಾ, ಆ ಸಹವಾಸ ಖಂಡಿತಾ ಬೇಡ. ನನಗೆ ಕೊಡಲಿ, ಸೌದೆ, ಬೆಂಕಿ ಕಂಡು ಬರುತ್ತಿದೆ. ದೂರವಿದ್ದಷ್ಟೂ ನಿನ್ನ ಸೌಖ್ಯವಿದೆಯಯ್ಯಾ" ಎಂದುಬಿಟ್ಟರು. ಶಿಷ್ಯರ ಗ್ರಹಚಾರ ಸರಿ ಇರಲಿಲ್ಲವೋ, ಯಾರದೋ ಋಣ ತೀರಿಸಬೇಕಿತ್ತೋ, ಅಂತೂ ಆ ಸಹವಾಸದಿಂದ ಲಕ್ಷಾಂತರಗಳನ್ನು ಕಳೆದುಕೊಂಡಿದ್ದು ಅಲ್ಲದೆ, ಸಾಕಷ್ಟು ಮಾನಸಿಕ, ದೈಹಿಕ ನೋವುಗಳನ್ನೂ ಅನುಭವಿಸಿ, ಮತ್ತೆ ಗುರುನಾಥರ ಪಾದ ಹಿಡಿದರು. 

ಒಮ್ಮೆ ಎಡವಿದ ಮೇಲಾದರೂ ಬುದ್ಧಿ ಬಂದಿತು ಎಂಬಂತೆ, "ಗುರುನಾಥ ನೀನೇ ಗತಿ, ನೀನೇ ಮತಿ, ನೀನೇ ಸ್ವಾಮಿ" ಎಂದು ಹಾಡುತ್ತಾ ಅವರು ನಿಶ್ಚಿಂತರಾಗಿದ್ದಾರೆ. ಗುರುನಾಥರ ಒಂದೂ ಭಾವಚಿತ್ರವೂ ಅವರ ಬಳಿ ಇಲ್ಲ. ಆದರೆ ಹೃದಯದಲ್ಲಿ ಗುರುನಾಥರ ಭದ್ರ ನೆಲೆಯನ್ನವರು ಉಳಿಸಿಕೊಂಡಿದ್ದಾರೆ. "ಭಾವಚಿತ್ರ ಹಾಕಿಕೊಂಡು ನಾವಿಂಥವರ ಶಿಷ್ಯರೆಂದು ಜಗಜ್ಜಾಹೀರಾತು ಮಾಡಿಕೊಳ್ಳಬೇಕೆ?" ಎಂದು ಪ್ರಶ್ನಿಸುತ್ತಾರೆ. "ಲೋಕೋಭಿನ್ನರುಚಿ" ಎಂಬ ಮಾತಿದೆ - ಎಲ್ಲ ಪ್ರಶ್ನೆಗೆ ಅವರೇ ಉತ್ತರಿಸುತ್ತಾರೆ. 

ಮಿತ್ರರೇ, ನಾಳಿನ ಸಂಚಿಕೆಗೆ ನಮ್ಮೊಂದಿಗಿರಿ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 


ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in