ಒಟ್ಟು ನೋಟಗಳು

Sunday, October 14, 2018

ಗುರುನಾಥ ಗಾನಾಮೃತ 
ಗುರುಕರುಣೆಯೇ ಸತ್ಯ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಗುರುಕರುಣೆಯೇ ಸತ್ಯ 
ಅದನರಿಯುವ ನಿತ್ಯ ।।

ಕಷ್ಟವಿರಲಿ ಸುಖವಿರಲಿ‌
ಪೊರೆವ ಸದಾ ಕಣ್ರೆಪ್ಪೆಯಂತೆ ।
ದಟ್ಟಾಡವಿಯಲಿರಲಿ ಬಟ್ಟ ಬಯಲಲಿರಲಿ
ಸಲಹುವ ಸದಾ ತಾಯಿಯಂತೆ ।। ೧ ।।

ನಮ್ಮೆಲ್ಲಾ ನೋವು ಸಂಕಟಗಳು
ಗುರುವಿಗೆ ಅರಿವುಂಟು ।
ಮನವು ಪಕ್ವವಾದಾಗ ಅವ ಕೊಡುವ
ಫಲದಲಿ ಸುಖವುಂಟು ।। ೨ ।।

ಹೇಳಿಸಿಕೊಳ್ಳದೆ ಕೊಟ್ಟುಬಿಡುವನು
 ನಮಗೆ ಸೌಭಾಗ್ಯವನು ।
ನೋಯಿಸದೆ ಉಣಿಸಿಬಿಡುವನು 
ಮಧುರ ಪೀಯೂಷವನು ।। ೩ ।।

ಅವನ ಅಮೃತ ದೃಷ್ಟಿಯಲಿ
ಮೇಲುಕೀಳೆಂಬ ಭಾವವಿಲ್ಲ ।
ಅವನ ದರ್ಬಾರಿನಲಿ
ಬಡವ ಬಲ್ಲಿದನೆಂಬ ಭೇದವಿಲ್ಲ ।। ೪ ।।

ಗುರುನಾಮಕಿಂತ ಮಿಗಿಲಾದ 
ಅನ್ಯ ತಪವು ಇಲ್ಲ ।
ಗುರುತೋರಿದ ದಾರಿಗಿಂತ 
ಬೇರೆ ದಾರಿಯು ಇಲ್ಲ ।। ೫ ।।
ಗುರುನಾಥ ಗಾನಾಮೃತ 
ಶ್ರೀಪಾದನನು ನೆನೆಯದ ಮನವು ಯಾಕೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಶ್ರೀಪಾದನನು ನೆನೆಯದ ಮನವು ಯಾಕೆ
ಗುರುಪಾದವನು ನಮಿಸದ ಜೀವ ಯಾಕೆ ।।

ಇಹದ ಸುಖವನು ಬೇಡುವ ಕೈಗಳೇಕೆ
ದಾನವ ಮಾಡದ ಸಿರಿತನವೇಕೆ ।
ಗುರುಮೂರುತಿಯ ಕಾಣದ ಕಂಗಳು ಯಾಕೆ
ಅವರ ಮಾತನು ಆಲಿಸದ ಕಿವಿಗಳು ಯಾಕೆ ।। ೧ ।।

ಶ್ರೀಚರಣಕೆ ಬಾಗದ ಶಿರವು ಏಕೆ
ಗುರುವನು ಪೊಗಳದ ನಾಲಿಗೆ ಏಕೆ ।
ಶಬ್ದಗಳಲಿ ಅವನ ಕಾಣದ ಪಾಂಡಿತ್ಯವೇಕೆ
ಜೀವದೊಡೆಯನ ಸದಾ ಸ್ಮರಿಸದ ಜನುಮವೇಕೆ ।। ೨ ।।

ಸ್ಥಿರಚಿತ್ತವಿರದ ತಪವು ಯಾಕೆ
ಗಣನೆಯೇ ಮಾಡುವ ಜಪವು ಯಾಕೆ ।
ಆಚಾರವಿಲ್ಲದ ನಾಲಿಗೆ ಏಕೆ
ಸ್ಥಿರಮುಕ್ತಿಸುಖವ ಬೇಡದ ಜೀವನವೇಕೆ ।। ೩ ।।
ಗುರುನಾಥ ಗಾನಾಮೃತ 
ಗಡ್ಡಧಾರಿ  ಇವನು ತುಂಡು ದಟ್ಟವನು  ಉಟ್ಟವನು ಯೋಗಿ ಇವನು
ರಚನೆ: ಆನಂದರಾಮ್, ಶೃಂಗೇರಿ  


ಗಡ್ಡಧಾರಿ  ಇವನು ತುಂಡು ದಟ್ಟವನು  ಉಟ್ಟವನು ಯೋಗಿ ಇವನು
ಶಿವನ ಅವತಾರ ಇವನು ಎಲ್ಲೆಲ್ಲೂ ಇಹನು ಇವನೇ ಸಾಂಬಶಿವನು|

ಇಲ್ಲೇ ಇರುವನೆಂದು ಬಲು ಕಾತುರದಿ ಕಾಣಲು ಬಂದಾಗ ಕಾಣನಿವನು
ಕರ್ಮ ಕಳೆಯದೆ ದರುಶನವೀಯನು ಅವನ  ಅಣತಿ ಇಲ್ಲದೆ  ಸಿಗನಿವನು|

ಪೊಳ್ಳು ಬಕುತಿಗೆ ಎಂದೂ ಒಲಿಯನು ನಿಜ ಬಕುತಿಗೆ ಸುಲಭನಿವನು ।
ಆಡಂಬರವ ಬೇಡನಿವನು ಸಹಜ ಪ್ರೀತಿಗೆ  ಸದಾ  ಒಲಿಯುವನು|

ಮರುಗುವನು ಬಕುತರ ಬವಣೆಗೆ ಸದಾ ಅವರ ಕಾಯ್ವನು
ಶುದ್ದ ಮನದಿ ಬದುಕ ನಡೆಸಿ ಅನ್ಯರ ವಿಚಾರ ಬೇಡವೆಂದನು|

ಸಾಧನೆ ಬಯಸಿ ಬರುವ ಭಕುತಗೆ  ತನ್ನದೆಲ್ಲ ಧಾರೆಎರೆಯಲು ಸಿದ್ದನಿವನು
ಲಾಕಿಕ ಬದುಕಿನ ಬವಣೆ ನೀಗುತ ಜೀವನದ ಅರ್ಥ ತಿಳಿಸಿದನಿವನು|

ಮನ್ನಿಸುವನು ಪಾಮರರನು ಎಚ್ಚರಿಸಿ  ಉದ್ದರಿಸಿ ಹರಸಿ ಕಲಿಸುವನು
ಭವರೋಗ ವೈದ್ಯನಿವನು ಸಕಲ ಜೀವಿಗಳ  ಸಲಹಿ ಹರಸುವನು|
ಗುರುನಾಥ ಗಾನಾಮೃತ 
ನಾನು ಭಜಿಸುವೆ ನನ್ನ ಗುರುದೇವನ ಆನಂದಘನನ ಅವಧೂತನ
ರಚನೆ: ಆನಂದರಾಮ್, ಶೃಂಗೇರಿ  


ನಾನು ಭಜಿಸುವೆ ನನ್ನ ಗುರುದೇವನ ಆನಂದಘನನ ಅವಧೂತನ
ಕಾಲಾತೀತನ ದೇಹಾತೀತನ ಸರ್ವ ದುರಿತ ಪರಿಹಾರಕನ ಗುರುವರನ|

ಪೂಜಿಪ ಪರಿ ಅರಿಯದೆ ಮನ ಹೇಳುವಂತೆ ನಿನ್ನ ಪೂಜಿಸುವೆನು
ಮನದಾಳದ ನೋವುಗಳ ಬದಿಗಿರಿಸಿ ಶುದ್ದ ಮನದಿ ನಿನ್ನ ಬೇಡುವೆನು|

ವಿಧಿಯ ಅದಿಪತಿಯ ಕುಕರ್ಮ ಪರಿಹಾರಕನ ಮನ ತುಂಬಿ ಪಾಡುವೆನು
ಸುಲಭದಲಿ  ಕಷ್ಟಗಳ ಹೊಡೆದೋಡಿಸಿ ಭಕ್ತರ ಕಾಯುವವನ ನೆನೆವೆನು|

ಎಲ್ಲರಾಗುರು ಇವನು ಬೇಧವ ತೋರನು ತನ್ನವರೆಂದು ಸಲಹುವನು
ಮೆಚ್ಚಿದ ಬಕುತರ ಸಲಹಲು ಸಮಯವ ನೋಡದೆ ಅಲ್ಲೇ ದರುಶನ ನೀಡುವನು|

ಭಾವುಕ ಬಕುತರ ಮನದೊಳು ತಾ ನೆಲೆಸಿ ಆನಂದವ ನೀಡುವನು
ನಿಜ ಭಕುತರ ಸಂಗದಿ ತಾ ಇದ್ದು ಮುಕುತಿಯ ದಾರಿಯ ತೋರುವನು|
ಗುರುನಾಥ ಗಾನಾಮೃತ 
ಎಲ್ಲವೂ ಅವನದೆಂದಿರಿ ಕಾಣುವ ಮತ್ತೆಲ್ಲಾ ಮಿಥ್ಯವೆಂದಿರಿ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ಎಲ್ಲವೂ ಅವನದೆಂದಿರಿ ಕಾಣುವ ಮತ್ತೆಲ್ಲಾ ಮಿಥ್ಯವೆಂದಿರಿ ಗುರುವೇ
ನಿಮ್ಮ ನಂಬಲು ಬೇರಾವ ಸತ್ಯದ ಅರಿವಿನಗೊಡವೆ ಎನಗೆ ಬೇಡ ಗುರುವೇ|

ನನ್ನದೆಂಬುದು  ಬರೀ ಭ್ರಮೆಯು ಎರಡೂ ಒಂದಾದಾಗ  ಏನೂ ಇಲ್ಲವೋ
ಗುರುವಾಕ್ಯ ಹೊರತು ಬೇರೇನು ಬೇಡವೋ ಎಮಗೆ ನೀವೇ ಎಲ್ಲವೂ|

ಎಂಟು ಮೆಟ್ಟಿಲ ಏರಿ ಗುರುಕರುಣೆ ತೋರಿದೊಡೆ ಎಲ್ಲಾ ಲೀನವೋ
ಸದ್ಗುರು ದೊರೆತು ಕೈ ಹಿಡಿದು ಅಹಂ ಅಳಿಸಿದೊಡೆ ಅವನಲೇ ಎಲ್ಲವೂ|

ಶುದ್ದ ಮನವೊಂದೆ ಮಹಾದೇವನಿಗೆ ಪ್ರಿಯವೆಂದಿರಿ ಗುರುವೇ
ಎನ್ನ ಮನದ ಮಾತಿನಲಿ ನಿತ್ಯ ನಿನದೇ ಧ್ಯಾನ ತುಂಬಿರಲಿ ಗುರುವೇ|

ಬೇಡುವ ಮನದಾಳದಿ ತುಂಬಿರಲಿ ನಿಸ್ವಾರ್ಥದ  ಬೇಡಿಕೆಗಳು
ಉಸಿರು ಉಸಿರಲೂ ತುಂಬಿರಲಿ ನಿಮ್ಮ ನಾಮವು ಗುರುವೇ|

Tuesday, October 2, 2018

ಗುರುನಾಥ ಗಾನಾಮೃತ 
ನಾನೆಂತ ಮನುಜನೋ ಮನದಮಾತ ಅರಿಯದೆ ಮರುಗುತಿಹೆನೊ
ರಚನೆ: ಆನಂದರಾಮ್, ಶೃಂಗೇರಿ  


ನಾನೆಂತ ಮನುಜನೋ ಮನದಮಾತ ಅರಿಯದೆ ಮರುಗುತಿಹೆನೊ
ನಿನ್ನ ನಾಮವ ಜಪಿಸದೇ ಅಂಧನಾಗಿ ಬದುಕಬಂಡಿ ನಡೆಸಿಹೆನೋ|

ಮೂಡನಂತೆ ಅಲ್ಲಿ ಇಲ್ಲಿ ಅಲೆದು ನಿನ್ನ ಅರಿಯದಾದೆ  ತಿಳಿಯದಾದೆ
ಬಳಿಯಿದ್ದರೂ ನಿನ್ನ ಬೇಡದಲೆ  ಇನ್ನೆಲ್ಲೋ ಕಾಲ ಕಳೆದು ಸೋತುಹೋದೆ|

ಜೀವನದ ಪಾಠವ ಮನಕೆ ನಾಟುವ ನುಡಿಯಲಿ ತಿಳಿಸುತ ಹರಸಿದೆ
ಕೊಂಕು ನುಡಿಯದೇ ಬದುಕ ಡೊಂಕನು ತಿದ್ದಿ ದಾರಿ ತೋರಿದೆ|

ಬೇಡದಲೇ ಬಂದು ನೋವ ನೀಗಿ ಹರಸುವ ದೇವ ನೀನಲ್ಲವೇ
ನಿಜ ಬಕುತನ ಬದುಕ ಬವಣೆ ನೀಗಿ ಮನಶಾಂತಿ ನೀಡುವ ಗುರುವಲ್ಲವೇ|

ಗುರು ನಂಬಿ ನಡೆದು ಬದುಕ ಹಸನು ಮಾಡಿಕೊಳ್ಳಿ ಎಂದಿರಿ ನೀವು
ನಡೆ ನುಡಿಯಲಿ ನಿಗವಹಿಸಿ ಶುದ್ದ ಮನದಿ ಬದುಕ ನಡೆಸ ಬೇಕು ನಾವು|
ಗುರುನಾಥ ಗಾನಾಮೃತ 
ವರ್ಣಿಸಲೆಂತೋ ನಿನ್ನ ಮಹಿಮೆಯ ದೇವನೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ವರ್ಣಿಸಲೆಂತೋ ನಿನ್ನ ಮಹಿಮೆಯ ದೇವನೇ
ಪದಗಳೇ ಸಾಲದಾಗಿದೆ ಮಹಾಮಹಿಮನೇ ||

ಮನುಜರೂಪದಿ ಕಾಣುತಿಹ ದೇವನೇ
ನಮ್ಮ ದೈವವೇ ನೀನಾಗಿರುವೆ ಪ್ರಭುವೇ |
ಅವಿದ್ಯೆಯ ಕರಗಿಸುವ ಗುರುವೇ
ಬ್ರಹ್ಮತತ್ತ್ವವ ಬೋಧಿಸುವ ಬಂಧುವೇ || ೧ ||

ಯಶೋದೆಗೆ ಕೃಷ್ಣನು ಬ್ರಹ್ಮಾಂಡ ತೋರಿದ ರೀತಿ
ಅಚ್ಯುತನು ಅರ್ಜುನಗೆ ದಿವ್ಯಕಂಗಳಾ ನೀಡಿದ ರೀತಿ |
ಅಂತರಂಗದಾ ಕಣ್ಣು ತೆರೆಯೋ ಪ್ರಭುವೇ
ಅರಿವಿನ ಸಾಕ್ಷಾತ್ಕಾರ ಮಾಡಿಸೋ ಬಂಧುವೇ || ೨ ||