ಒಟ್ಟು ನೋಟಗಳು

Monday, April 30, 2018

ಗುರುನಾಥ ಗಾನಾಮೃತ 
ಎನ್ನ ಗುರುನಾಥನಂಥಾ ಗುರು ಇನ್ನೆಲ್ಲೋ
ರಚನೆ: ಅಂಬಾಸುತ 


ಎನ್ನ ಗುರುನಾಥನಂಥಾ ಗುರು ಇನ್ನೆಲ್ಲೋ
ಸೊಲ್ಲಿಲ್ಲವೋ ಸಲ್ಲಲಿತದ ಮಾತಿದೊ
ಶಿವವಲ್ಲಭೆಯ ಮೇಲಾಣೆ ಕಾಣೀರೊ ||ಪ||

ಕಟ್ಟಲಿಲ್ಲವೊ ಆಶ್ರಮವಾ ಈ ರಾಮನು
ಮುಟ್ಟಲಿಲ್ಲವೊ ಧನಕನಕಾದ ಕಟ್ಟನು
ಇಟ್ಟುಕೊಳ್ಳಲಿಲ್ಲವೊ ಪದವಿಯ ಪರಮತನ
ಗುಟ್ಟಾಗೇ ಇದ್ದನೋ ಬೆಟ್ಟ ಇವ ಕಾಣಿರೊ ||೧||

ದಟ್ಟಿ ಸುತ್ತಿಕೊಂಡು ದಿಟ್ಟನಾಗಿರುತಾನೆ
ಕೊಟ್ಟು ಕೊಟ್ಟು ಪಾಪ ಕಳೆದುಕೊ ಎನುತಾನೆ
ನಸುನಗುತಾನೇ ಅವ ಹುಸಿಮುನಿಸ ತೋರುತಾನೆ
ನಾನೆಂಬುದಾ ಬಿಡಿಸಿ ನರಕ ತಪ್ಪಿಸುತಾನೆ ||೨||

ಲೀಲೆ ತೋರುತ ಭಕುತ ಲಾಲನೆ ಮಾಡುತಾನೆ
ನೋವೆಲ್ಲವಾ ಮರೆಸಿ ನಕ್ಕುನಲಿಯಿಸುತಾನೆ
ಸದ್ಗುರುವೆ ಸರ್ವಸ್ವ ಅರಿಯಿರಿ ಎನುತಾನೆ
ಸತ್ ಚಿತ್ ಆನಂದ ರೂಪನಾಗಿ ಕಾಣುತಾನೆ||೩||

ಸಖರಾಯಪುರದೊಳು ನಿಜ ಸುಖದಾಯಕನಾಗಿ
ಶ್ರೀವೇಂಕಟಾಚಲ ನಾಮಾಂಕಿತನಾಗಿ
ಅಂಬಾಸುತಾದಿಯಾಗಿ ಸಕಲಾ ಭಕ್ತರ ಹರಸಿ
ಅವಧೂತ ಎನಿಸ್ಯಾನೋ ಎಮ್ಮ ಗುರುನಾಥ ಇವ ಕಾಣಿರೋ ||೪||
ಗುರುನಾಥ ಗಾನಾಮೃತ 
ಬಾರೋ ಗುರುರಾಯ ಕರುಣದಿ ಕಾಯೋ ಮಹನೀಯಾ
ರಚನೆ: ಅಂಬಾಸುತ 


ಬಾರೋ ಗುರುರಾಯ ಕರುಣದಿ ಕಾಯೋ ಮಹನೀಯಾ||ಪ||

ಮರೆವಿಗೆ ಮರೆವು ಕೊಟ್ಟು ಅರಿವಿನೊಳೆನ್ನನಿಟ್ಟು
ಆರನ್ನು ಬಿಡುವಂತೆ ನೀ ಹರಸೇ||೧||

ಬೇಧಕ್ಕೇ ಬಾಧೆಯಾಗಿ ಬೋಧರೂಪನಾಗಿ
ಬಾರಿ ಬಾರಿಗು ಎನ್ನ ಎಚ್ಚರಿಸೇ ||೨||

ಸಂಶಯವನ್ನಳಿಸೊ ಸ್ಥಿರತೆಯ ಉಳಿಸೊ
ಸರ್ವರೊಳು ನೀನಿಹೆ ಎಂಬುದ ತಿಳಿಸೇ ||೩||

ನಿಜಮೌನ ಮೆರೆದಾಡಲಿ ಮಾತು ಮರೆಯಾಗಲಿ
ಅನುಭವದಿಂದಲೇ ಸರ್ವವು ವೇದ್ಯವಾಗಿಸೆ ||೪||

ಆಕಾರವೊ ನಿರಾಕಾರವೊ ಆನಂದವ ತರಲಿ
ಅಜ್ಞಾನದಾ ಅರಿಯ ಎಂದೂ ಸೋಲಿಸಲು ||೫||

ಸಖರಾಯಪುರವಾದಿ ಸದ್ಗುರುನಾಥ
ಅಂಬಾಸುತ ನಿನ್ನ ದಾಸಾನುದಾಸಾ ||೬|
ಗುರುನಾಥ ಗಾನಾಮೃತ 
ಈತ ಸಂತನೋ 
ರಚನೆ: ಅಂಬಾಸುತ 


ಈತ ಸಂತನೋ 
ಸುಮ್ಮನಿರುವ ಸಾಧಕನೋ ||ಪ||

ಸ್ವಂತವೆಲ್ಲವ ಬಿಟ್ಟವನೊ
ಸದ್ಗುರು ಚರಣವ ಹಿಡಿದವನೊ
ನಾಮಸ್ಮರಣೆ ಮಾಡಿಹನೊ
ಚಿದಂಬರ ಚಿದಂಬರ ಚಿದಂಬರ ಎನುತಿಹನೊ ||೧||

ದೇಹಭಾವ ಬಿಟ್ಟವನೊ
ಧೇಹಿ ಎನುತ ಜೋಳಿಗೆ ಹಿಡಿದವನೊ
ಎಲ್ಲರೊಳು ಭಗವಂತನ ಕಂಡಿಹನೊ
ಮಗುವಾಗಿ ತಾ ಕುಳಿತಹನೊ ||೨||

ಭಕ್ತಿಯೋಗ ಪೇಳಿಹನೊ
ಭಕ್ತರಿಗೆಲ್ಲ ತಾಯಿಯಾಗಿಹನೊ
ಸೇವೆಯೊಳು ಮುಂದಿಹನೊ
ಸಾಮಾನ್ಯಂತೆ ನಿಂತಿಹನೊ ||೩||

ಪದಕೆ ಮೀರಿದವನೊ ಇವನು
ಪೂರ್ಣರೂಪನಾಗಿ ಕಂಡಿಹನು
ವೀಣೆ ಪಿಡಿದು ಬಂದಿಹನೊ
ಎಮ್ಮ ಅಜ್ಞಾನವ ಕಳೆಯುತಿಹನೊ ||೪||

ಅಂಬಾತನಯ ಅಂಬಾತನಯ 
ಎನುತಲೆನ್ನ ಕೂಗಿಹನೊ
ತನ್ನ ಮಡಿಲೊಳೆನ್ನ ಇರಿಸಿ
ಗುರುವು ಕಾಯ್ವ ಎಂದಿಹನೊ ||೫||
ಗುರುನಾಥ ಗಾನಾಮೃತ 
ಗುರುನಾಥ ನೀನಾದೆ ನಮ್ಮ ಬಾಳಿಗೆ ಆಧಾರ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಗುರುನಾಥ ನೀನಾದೆ ನಮ್ಮ ಬಾಳಿಗೆ ಆಧಾರ 
ಎಂದೂ ಬಾಡದ ನಗುಮೊಗದ ಮಂದಾರ |
ಭವದಿ ನೀನಿತ್ತ ಬದುಕಿನಲಿ
ನಶ್ವರದಾ ಈ ಕಾಯದಲಿ |
ಕೈ ಬಿಡದೆ ನೀನೆಮ್ಮ ಕಾಪಾಡಿದೆ
ಗುರುನಾಥ ನೀನೆಮಗೆ ಬಂಧುವಾದೆ || ೧ ||

ಕಷ್ಟಗಳ ಮಳೆ ಸುರಿಯಲೀ 
ನೋವಿನ ಗುಡುಗು ಶಬ್ದಗೈಯಲಿ |
ಬೆಳಕಿನ ದಾರಿಯಾ ನೀ  ತೋರಿಸಿದೆ  
ಗುರುನಾಥ ನಮ್ಮನ್ನು ನೀನುಳಿಸಿದೆ || ೨ ||

ಜೀವನದಿ ಏನಾದರೂ ಬರಲಿ 
ಎಂತಾದರೂ ಕಳೆದು  ಹೋಗಲೀ |
ಬೊಗಸೆಯೊಡ್ಡಿ ಬೇಡುವೆನೊಂದು ಭಿಕ್ಷೆ
‌ಗುರುನಾಥ ನಮಗಿರಲೆಂದಿಗೂ ನಿನ್ನ ಕೃಪಾರಕ್ಷೆ || ೩ ||

Sunday, April 29, 2018

ಗುರುನಾಥ ಗಾನಾಮೃತ 
ಇಂಥಾ ಗುರುವ ಕಂಡಿರಾ ಜಗದಲ್ಲಿ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಇಂಥಾ ಗುರುವ ಕಂಡಿರಾ ಜಗದಲ್ಲಿ
ಇಂಥಾ ಗುರುವ ಕಂಡಿರಾ !

ಭಕ್ತರ ಭಾವ ಹೆಚ್ಚಿಸುವ ಅಜನಿವನು
ಆರ್ತರನು ಪಾಲಿಸೋ ಹರಿಯಿವನು |
ದುರಿತವ ದೂರಿಡುವ ಹರನಿವನು
ಸಕಲರನೂ ಪೊರೆಯೋ ಭಗವಂತನಿವನು || ೧ ||

ಜೀವಿಗಳ ಬೆಳಗುವ ಜೀವೇಶ್ವರನು
ಅರಿವನು ತೋರಿಸೋ ಭಾಸ್ಕರನು |
ಮನದಲಿ ಸದಾ ಭಜಿಸುವ ಗೌರೀಶ್ವರನು
ಬಂಧನವ ಕಳೆಯುವ ಮಹೇಶ್ವರನು   || ೨ ||

ಜ್ಞಾನವ ನೀಡುವ ಬ್ರಹ್ಮನಿವನು 
ಪ್ರಣವದ  ಪ್ರಮತಿಯ ಚತುರ್ಮುಖನು |
ಆತ್ಮ ಸಾಕ್ಷಾತ್ಕರಿಸುವ ಸೃಷ್ಟಿಕರ್ತನು
ಎಲ್ಲರಲೂ ನೆಲೆಸಿಹ ಸನಾತನನು || ೩ ||

ಶುಭಯೋಗ ತರುವ ಯೋಗೀಂದ್ರನು
ಚಿತ್ಸುಖ ಕೊಡುವ ಚಿನ್ಮಯನು |
ಭಕ್ತಭಾವಗಮ್ಯನಾದ ಸುರೇಶನು 
ಭಕ್ತರ ಪಾಲಿಸುವ ಭುಜಗಶಯನನು || ೪ ||

ಗುರುನಾಥ ಗಾನಾಮೃತ 
ಪರಿಹರಿಸೊ ಈ ಭವದಾ ಬಾಧೆಯನ್ನೂ
ರಚನೆ: ಅಂಬಾಸುತ 


ಪರಿಹರಿಸೊ ಈ ಭವದಾ ಬಾಧೆಯನ್ನೂ
ಬೇಡೆ ಇನ್ಯಾರನೂ ನೀನೇ ಗತಿ ಎನಗೇ ||ಪ||
ನಿನ್ನ ಹೊರತೆನಗೆ ಯಾರಿಲ್ಲ ಪ್ರಭುವೆ
ನೀನೇ ಆತ್ಮದ ಸಖನು ನೀನೇ ಸುಖದಾತನು||ಅ.ಪ||

ದೀನತನದಲಿ ನಿನ್ನ ಸನ್ನಿಧಿಗೆ ಬಂದಿಹೆನೊ
ಭವದ ಬಹು ಭಾರವನು ಹೊತ್ತು ತಂದಿಹೆನೋ
ಬಳಲಿಹೆನೊ ದೊರೆಯೋ ಬಾಳಲಾರೆನು ಹೀಗೆ
ಕರಿಯ ಕೆಳಗಿರುವಾ ಇರುವರಯಂತೇ ||೧||

ತಾಸಿಪ್ಪತ್ತು ದುಖಃ ನಾಲ್ಕೇ ತಾಸು ಸುಖ
ಆ ಸುಖವೊ ದುಖಃಕ್ಕೆ ಮೂಲವಾಗಿಹುದಯ್ಯ
ಸತಿಸುತರು ಸಿರಿ ಬಯಸಿ ಸೊರಗಿಹರು ಅಯ್ಯೋ
ಸೊಡಲ ಮುತ್ತಿಕ್ಕುವಾ ಪತಂಗದಂತಲೀ ||೨||

ಹರನ ನೆನೆಯದ ಜ್ವರವು ಹರಿನಿಂಧೆ ಹಲವು
ಕುಲಗುರುವ ಜಾಡಿಸಿದಾ ದೋಷದಾ ಬರವು
ದೇಹಿ ಎಂದವರಿಗೆ ಇಕ್ಕಾದ ಬಹು ಶಾಪವೂ
ಇದಕೆಲ್ಲ ಕಾರಣ ಈ ಭವಸಂಸಾರವೂ ||೩||

ಸಖರಾಯಪುರಾಧೀಶ ಶ್ರೀವೇಂಕಟಾಚಲ
ಅವಧೂತ ಅಸಾಮಾನ್ಯ ಅಪ್ರಮೇಯಾ
ಅಂಬಾಸುತ ನಾ ನಿನ್ನಡಿಯಲಿ ಬೇಡಿಹೆನೊ
ಈ ಕೋರಿಕೆಯ ಕೇಳೊ ಕನಿಕರಿಸೊ ಮಹರಾಯಾ ||೪||
ಗುರುನಾಥ ಗಾನಾಮೃತ 
ಬಾಗಿಲೊಳು ಬಿದ್ದಿಹಾ ಯಾಚಕನು ನಾನು
ರಚನೆ: ಅಂಬಾಸುತ 


ಬಾಗಿಲೊಳು ಬಿದ್ದಿಹಾ ಯಾಚಕನು ನಾನು
ಅವಧೂತ ಗುರುನಾಥ ಪೊರೆಯಯ್ಯ ನೀನು ||ಪ||

ಬೇಡಲು ತಿಳಿಯೋಲ್ಲ ಅತಿಮೂಢ ನಾನು
ಹಿತವನ್ನೇ ನೀಡಿ ಹರಸುವವ ನೀನು ||೧||

ಹಸಿವಿಲ್ಲದೆ ಹುಸಿಯಿಲ್ಲದೆ ಬಂದಿಹೆನೊ ನಾನು
ಭಕ್ತಿರಸವನ್ನಿತ್ತು ದರುಶನ ನೀಡೋ ನೀನು ||೨||

ಧನ ಕನಕ ದೊರೆತನವ ಬೇಡೋಲ್ಲ ನಾನು
ದೀನರಕ್ಷಕ ಆಶ್ರಯ ನೀಡೋ ನೀಡೋ ನೀನು ||೩||

ಸಖರಾಯಪುರವಾಸೀ ಸದ್ಗುರುನಾಥ ನೀನು
ವಾಣೀಪ್ರಿಯ ದಾಸಿ ನಿನ್ನ ಚರಣದೊಳಿಹೆ ನಾನು ||೪||

Saturday, April 28, 2018

ಗುರುನಾಥ ಗಾನಾಮೃತ 
ನಾಥನೇ ಗುರುನಾಥನೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ನಾಥನೇ ಗುರುನಾಥನೇ  
 ನೊಂದಿಹ ಭಕುತರಿಗೆ ಬೆಳಕ ತೋರಯ್ಯಾ |
ದೇವನೆ ಮಹದೇವನೇ 
ಸಾಧಕರಿಗೆ ಅದ್ವೈತ ಸುಧೆಯ ಉಣಿಸಯ್ಯಾ ||

 ಬಂಧುವೇ ಆತ್ಮಬಂಧುವೇ
ನಿಸ್ವಾರ್ಥದಿ ನೆಡೆವರಿಗೆ ರಕ್ಷಕನಾಗಯ್ಯಾ |
ಸಾಗರನೇ ದಯಾಸಾಗರನೇ
ನನ್ನಂತರಂಗವನು  ಶುದ್ಧಿಯನೆ ಮಾಡಯ್ಯಾ ||

ಈಶನೇ ಸರ್ವೇಶನೇ
ನಿಜಗೃಹದ ದಾರಿಯ ತೋರಯ್ಯಾ |
ವಂದ್ಯನೇ ಅಭಿವಂದ್ಯನೇ 
ಸೇವೆಯ ಭಾಗ್ಯವ ಕರುಣಿಸಯ್ಯಾ ||
ಗುರುನಾಥ ಗಾನಾಮೃತ 
ಸಕ್ರೆಪಟ್ನದ ಸದ್ಗುರುನಾಥ ಸಮರ್ಥನಿದ್ದಾನೆ
ರಚನೆ: ಅಂಬಾಸುತ 


ಸಕ್ರೆಪಟ್ನದ ಸದ್ಗುರುನಾಥ ಸಮರ್ಥನಿದ್ದಾನೆ
ಬೋಧ್ನೆ ಮಾಡ್ತಾ ತನ್ ಭಕ್ತ್ರಿಂದ ಸಾಧ್ನೆ ಮಾಡ್ಸ್ತಾನೆ ||ಪ||

ಆಸೆ ಹಿಂದೆ ಆತಂಕೈತೆ ಬಿಡ್ರೋ ಎಂದಾನೆ
ಹಿಡಿ ಗುರುಪಾದ್ವ ಆನಂದೈತೆ ಎಂದು ನಕ್ಕಾನೆ ||೧||

ಹೆತ್ತೌವ್ರೇ ಹಿರಿದೈವ ಹತ್ತು ದೇವ್ರ್ಯಾಕೆ ಅಂದೌನೆ
ಕೆಟ್ದೇನೈತೆ ಎಲ್ರೊಳ್ಗು ಸರಿ ಕಾಣ್ ಅಂದಾನೆ ||೩||

ಮಾತ್ ಬಿಟೌವ್ನೇ ಯೋಗಿ ಕಟ್ಟುಕೊಂಡೌನೇ ಭೋಗಿ
ರಟ್ಟೆ ತಟ್ಟೆ ಬಟ್ಟೆ ಮೂಟೆ ಬಿಟ್ಟೌನೇ ತ್ಯಾಗಿ ಎಂದಾ ||೩||

ಕೂಡಿಟ್ಟಿದ್ದು ಕೆಟ್ಹೋಗುತ್ತೆ ಕಟ್ಕೊಳ್ತೀ ಪಾಪ
ಹಂಚ್ದೋನ್ ಪುಣ್ಯ ಹೆಚ್ಚಾಗುತ್ತೆ ತಿಳ್ಕೊಳ್ರೋ ಪಾಪ ||೪||

ಆಡಿದ್ದನ್ನೇ ಮಾಡೋನು ಲೋಕ್ದೊಳ್ಗೇ ಹೆಚ್ಚೂ
ಸುಳ್ಳು ಪೊಳ್ಳು ಅನ್ನೋನು ಹಚ್ತಾನೆ ಕಿಚ್ಚೂ ||೫||

ಅನ್ನ ನೀರು ನೀಡೋದ್ರಲ್ಲೇ ಆನಂದ ಅಪ್ಪ
ಚೌಕಾಶೀಲಿ ಏನೇ ತಂದ್ರೂ ನೀನಾಗ್ತಿ ಬೆಪ್ಪ ||೬||

ಧರ್ಮ ಕರ್ಮದ್ ಮರ್ಮ ತಿಳಿರೊ ದಡ್ರಾಗ್ಬೇಡ್ರೋ
ಮುಟ್ಟು ಮೈಲ್ಗೆ ಮಡಿ ಅಂತಾ ಮರುಳಾಗ್ಬೇಡ್ರೋ ||೭||

ಸತ್ ಮೇಲ್ ಮಾಡಿದ್ರೇನ್ ಬಂತ್ರೋ ಭಕ್ಷ್ಯಭೋಜ್ಯನಾ
ಇದ್ದಾಗ್ ಬೀದಿಗ್ ಹಾಕಿ ಹೋದಾಗ್ ಲಕ್ಷ ಖರ್ಚನ್ನ ||೮||

ಬ್ರಹ್ಮನ್ ಕಾಣ್ರೋ ಒಳಗಿದ್ದಾನೆ ಅರಿವಿನ ರೂಪದಲ್ಲೀ
ಅದ್ನ ತೋರ್ಸೊ ಗುರುವನ್ ಹಿಡಿರೊ ನಿತ್ಯ ನೇಮದಲಿ ||೯||

ಅಂಬಾಸುತನ ಈ ಪದಕೆಲ್ಲಾ ಕಾರಣನಾಗೌವ್ನೇ
ಅವ್ನ ನೋಡಿ ಮುಸಿ ಮುಸಿ ಅಂತಾ ಒಳಗೇ ನಕ್ಕೌನೇ ||೧೦||
ಗುರುನಾಥ ಗಾನಾಮೃತ 
ಯಾಕೆ ಬರಿ ಮಾತು ಪದಗಳಲಿ ನನ್ನ ಗುರುವ ನೆನೆವೆ
ರಚನೆ: ಆನಂದರಾಮ್, ಶೃಂಗೇರಿ  


ಯಾಕೆ ಬರಿ ಮಾತು ಪದಗಳಲಿ ನನ್ನ ಗುರುವ ನೆನೆವೆ
ಅಂತರಂಗ ಶುದ್ದಿಗೊಳಿಸಿ ಮೌನದಿ ಬಜಿಸು ಮನವೇ|

ಗುರುವಿಗೆ  ನೀಡಲು ಏನೂ ಇಲ್ಲಾ ಎಂದೆನಿಸ ಬೇಡ
ಭಕ್ತಿಯಲಿ ಬೇಡಿದರೆ ಅವನೇ ನೀಡುವನು ಎಲ್ಲಾ|

ಆ ಪಾದ ನೆನೆದರೆ ಮನಕೆ ಶಾಂತಿ ದೊರುವುದೆಲ್ಲಾ
ಮತಿ ಹೀನನು ನಾನು ಸುಮ್ಮನೇ ಕಾಲ ಕಳೆದನಲ್ಲಾ|

ಊರೂರು ಸುತ್ತಿದರೂ ಸಿಗಲಿಲ್ಲ ಆ ನನ್ನ ಗುರುವು
ಬಳಿ ಇದ್ದರೂ ಅರಿವಾಗಲು  ತಡವಾಯ್ತು ಗುರುವು|

ಕರ್ಮ ಕಳೆಯದೇ ಯಾರಿಗೂ ನೀ ಸಿಗುವವನಲ್ಲಾ
ನಿಜ ಬಕುತನ ಹರಸಿ ಜೊತೆ ಬಂದು ಕಾಯ್ವೆಯಲ್ಲಾ|

ಆಡಂಬರದ ಬಕುತಿಯ ಎಂದೂ ನೀ ಒಪ್ಪುವವನಲ್ಲ
ನಿನ್ನೆದುರು ತೋರಿಕೆಯ ಬಕುತಿಗೆ ಮನ್ನಣೆಯೇ ಇಲ್ಲಾ|
ಗುರುನಾಥ ಗಾನಾಮೃತ 
ಬರಿದಾದ ಮನದಲಿ ನಿನ್ನ ನಾಮ ಮೂಡಿ ಬರಲು
ರಚನೆ: ಆನಂದರಾಮ್, ಶೃಂಗೇರಿ  


ಬರಿದಾದ ಮನದಲಿ ನಿನ್ನ ನಾಮ ಮೂಡಿ ಬರಲು
ತಡ ಮಾಡದೆ ಮೈ ಮರೆತು ನಿನ್ನ ಜಪಿಸುವೆ ಗುರುವೇ|

ಇದು ಎನ್ನ ಸುಕೃತವೋ ಕಾಯಕವೋ ಅರಿವಿಲ್ಲಾ
ನಿರಂತರ ನಿನ್ನ ಬಜಿಸುವ ಬಾವ ನೀಡೋ ಗುರುವೇ|

ಅರಿವಿರದೇ ನಾ ಮಾಡಿದ ಕರ್ಮಗಳು ನೂರಾರು
ಪರಿಹರಿಸಿ ಉದ್ಡರಿಸು ಬೇಡಲು ಎನ್ನ ಗುರುವೇ  |

ಹರಿ ಹರರೂ ಬೇಡಿದರು ಕೊಡಲೊಲ್ಲರು ಎಲ್ಲಾ
ನೀ ನೀಡಿದರು ಈ ಪಾಮರಗೆ ಅರಿವಾಗಲೇ ಇಲ್ಲಾ|

ನಾನು ನಾನೆಂಬ ಅಹಂ ದೇಹದಲಿ ತುಂಬಿದೆಯಲ್ಲಾ
ಎಲ್ಲಾ ನೀನೆಂಬುದು ಅರಿವಾಗಾದೆ ಹೋಯಿತಲ್ಲಾ"|

ಕಪಟ ಮನಕೆ ಕುಹುಕ ನುಡಿಗೆ ಮನ್ನಣೆಯೇ ಇಲ್ಲಾ
ಶುದ್ದ ಬಾವಕೆ ಬೇಡದೆಯು ನೀ ಹರಸುವೆಯಲ್ಲ|

ನಿನ್ನ ಕಾಯಕ ನೀ ಮಾಡು ದುರಾಸೆ ಬೇಡವೆಂದಿರಲ್ಲಾ
ನಿಮ್ಮೊಳಗಿನ ಆನಂದ ಎಲ್ಲೆಲ್ಲೊ ಹುಡುಕದಿರಿ ಎಂದ|

Friday, April 27, 2018

ಗುರುನಾಥ ಗಾನಾಮೃತ 
ನಿನ್ನಂತರಂಗದೊಳಿಹ ಗುರುನಾಥನು
ರಚನೆ: ಅಂಬಾಸುತ 


ನಿನ್ನಂತರಂಗದೊಳಿಹ ಗುರುನಾಥನು
ನಿನ್ನತನ ಕಳೆದುಕೊಂಡಾಗ ಅವ ಕಾಣ್ವನು
ಸತ್ ಚಿತ್ ಆನಂದ ರೂಪನು ಅವನು
ನಿತ್ಯ ನಿರ್ಮಲ ಮನದಾರಾಧನೆಗೆ ಒಲಿವನು ||

ಡಾಂಭಿಕತೆ ಆಡಂಬರವನೆಂದಿಗೂ ಸಹಿಸನು
ಧರ್ಮಮೀರಿದವರಿಗೆಲ್ಲಾ ಅವ ನಾರಸಿಂಹನು
ಶುದ್ಧಮನದಿ ಕೂಗಿ ಕರೆಯೆ ಓಗೊಡುವನು
ತಾಯಿಯಂತೆ ಒಡಲಿನಲ್ಲಿ ಇರಿಸಿ ಪೊರೆವನು ||

ನೀನೇ ಎಲ್ಲಾ ಎಂದಾಗ ಕರವ ಪಿಡಿವನು
ಭವಸಾಗರ ದಾಟಿಸೊ ನಾವೀಕನಾಗುವನು
ಸಗುಣನು ನಿರ್ಗುಣನು ಅವ ಸ್ವಾತ್ಮಾರಾಮನು
ಆತ್ಮಾರಾಮನಾ ಆರಾಧಿಪ ಅವಧೂತನು ||

ಸಂತಸೇವೆ ಮಾಡಿ ತೋರಿ ಹೀಗಿರಬೇಕೆಂದನು
ಸ್ವಂತಿಕೆ ಇದ್ದಾಗಲೇ ನೀ ಸೋಲುವುದು ಎಂದನು
ಚಿತ್ ಅಂಬರವಾಗಿಸೊ ಮಂತ್ರದೀಕ್ಷೆ ನೀಡಿಹನು
ಎಮ್ಮಗೆಲ್ಲ ಚಿದಂಬರನಾಗಿಯೇ ಕಂಡಿಹನು ||

ಮಾನಸಪೂಜೆಯ ಮಹತ್ವವನ್ನೇ ಪೇಳಿದವನು
ಪರಮಹಂಸಾಶ್ರಮಿಗಳಿಗೂ ಧರ್ಮಬೋಧೆ ಮಾಡಿದನು
ಪುಣ್ಯಚರಿತ ಪುಣ್ಯನಾಮ ಪುಣ್ಯರೂಪನು ಇವನು
ನಮ್ಮ ಪಾಲಿಸುವ ಪರಬ್ರಹ್ಮ ಮೂರುತಿಯಾಗಿಹನು ||

ನಕ್ಕರಿವನು ಶ್ರೀಹರಿ ಮುನಿದಾದ ನರಸಿಂಹ
ನಾದ ವೇದ ಬೋಧರೂಪ ಎಮಗವನು ಪುರುಷಸಿಂಹ
ಪಾಲ್ಗಡಲ ಸಂಜಾತೆ ಇವನ ಮಾತ ಕೇಳಿಹಳು
ಶೃಂಗೇರಿ ಪುರವಾಸಿ ಇವನೊಳು ನಲಿದಾಡಿಹಳು ||

ಅನ್ನಪೂರ್ಣೆಯ ಅಖಂಡತೆ ಇವನಿರುವಲ್ಲಿ
ಅನ್ನ ನೀರು ಇವನಿಂದಲೇ ಎಮಗೆ ಈ ಭುವಿಯಲಿ
ಕೊಟ್ಟು ಕೊಂಡು ಮತ್ತೆ ಕೊಟ್ಟು ನಮ್ಮ ಪರೀಕ್ಷಿಸುವನು
ಸೋತ ಜೊಳ್ಳನೆಲ್ಲ ತೂರಿ ಗಟ್ಟಿಕಾಳ ಬೇಯಿಸುವನು ||

ಭಾವಚಿತ್ರ ಬೇಡಿದಾಗ ಭಾವವೇ ಮೇಲೆಂದನು
ಭಾಗಿಸುವುದ ಬಿಟ್ಟು ಬಾಗಿ ನೆಡೆಯಿರಿ ಎಂದನು 
ಭೋಗವೇ ಭಾಗ್ಯವಲ್ಲ ಬಾಧೆ ಅದರಿಂದಲೆಲ್ಲ
ತ್ಯಾಗ ಮಾಡು ಯೋಗ ಹೊಂದು ಎಂದು ಸದಾ ಅಂದಿರಲ್ಲ ||

ಪೊಗಳಲು ಅಸಾಧ್ಯ ಸಾಧಕರಿಗೆ ಇವ ಸಾಧ್ಯ
ಸಾತ್ವಿಕರ ಮನದಾಳದ ಮಾತೊಳು ಇವ ವೇದ್ಯ
ಮಾನಸ ಸಂಚಾರಿ ಇವನು ಮುನಿದರೆ ದುಸ್ಸಾಧ್ಯ
ಮಾತಿನೊಳು ಮಂತ್ರವಿಟ್ಟು ಎಮಗಿತ್ತಿಹ ಖಾದ್ಯ ||

ದರುಷನಗೈದವರಾ ಪುಣ್ಯಕಿಲ್ಲ ಸರಿಸಾಟಿ
ಕಾಣದವರ ಮನವೆಂದರೆ ಅದು ಸಂಸಾರದ ಕಟಕಟಿ
ಸೋತು ನಿಂತರವನ ಮಂದೆ ಗೆಲ್ಲಿಸುವನು ಮುಂದೆಂದು
ಬೀಗಿ ಬಾಗದಿದ್ದರೆ ಬಾಧಿಸುವನು ಎಂದೆಂದು ||

ಈಶ್ವರ ಇಚ್ಚೆಯಂತೆ ನೆಡೆವುದೆಲ್ಲ ಎಂದವನು
ಗ್ರಹತಾರೆಗಳ ಸಂಚಾರವ ಹಿಡಿದಿಹನವನು
ಬ್ರಹ್ಮಭಾವ ನೀಡಿ ಭಕ್ತರ ಉದ್ಧಾರ ಮಾಡಿದವನು
ಸತ್ಯವೇ ಬ್ರಹ್ಮವೆಂದು ಸರ್ವರಿಗೂ ತೋರಿದವನು||

ಮೇಘ ಕರಗಿತು ಸಾಗರ ಶಾಂತವಾಯಿತು
ಇವನ ಕಣ್ರಪ್ಪೆಯ ಸಂಚಾರಕೆ ತಲೆದೂಗಿತು
ಸಕಲ ಜೀವ ರಾಶಿಯೂ ಇವಗೆ ತಲೆಬಾಗಿತು
ಸಕಲೈಶ್ವರ್ಯವೂ ಇವನ ಮಾತ ಕೇಳಿತು ||

ಗುರುವೆನ್ನಲೇ ಇವನಾ ಅರಿವೆನ್ನಲೆ ಇವನಾ
ತಂದೆ ತಾಯಿ ಆತ್ಮಬಂಧು ಎನ್ನಲೇ ಇವನಾ
ಸಖರಾಯ ಸಖರಾಯ ಎನ್ನಲೇ ಇವನಾ
ನಿಜ ಅಂತರಂಗದೊಡೆಯ ಎನ್ನಲೇ ಇವನಾ ||

ಹಾಡಿದೊಡೆ ಕಿವಿಗೆ ಇಂಪು ಅನುಭವಿಸೇ ಇವನ ಕಂಪು
ಕಾಡಿ ಬೇಡಿ ಅವನ ಕರುಣೆ ಪಡೆದಾಗಲೇ ಮನತಂಪು
ಮನದ ಮಡಿಯಿಂದ ಮೆಲುದನಿಯೊಳವನ ನಾಮ ನುಡಿಯೆ
ಕಾಡಿಸಿ ಬೇಡಿಸಿಕೊಳ್ಳದೆ ಬರುವನವ ನಿನ್ನ ಹರಸೆ ||

ತಾಳಕೆ ಸಿಗದಾ ಪದವಿದು ಭಾವದ ಬಾಗಿನವು
ಭಕ್ತಿಯಿಂದ ಮನನ ಮಾಡೆ ನಿಜಭಾಗ್ಯವಾ ಕೊಡುವುದು
ಪಲ್ಲವಿ ಚರಣಗಳೆಂಬ ಆದಿ ಅಂತ್ಯ ಇದರಲಿಲ್ಲ
ಕಾರಣ ಗುರು ಆದ್ಯಂತರಹಿತ ಮರೆಯೊ ಹಾಗಿಲ್ಲ ||

ಅಂಬಾಸುತನ ಅಸ್ಥಿತ್ವ ಇವನ ಪದಗಳಿಂದ
ಪದಕೆ ಕಾರಣ ಗುರುವರನ ಕರುಣೆಯಿಂದ
ಲೋಪದೋಷಗಳಿಗೆಲ್ಲಾ ಕಾರಣವಿಲ್ಲಿ ನಾನು
ಲೋಕಮಾನ್ಯ ಲೋಕದೊಡೆಯ ಗುರುನಾಥನವನು ||
ಗುರುನಾಥ ಗಾನಾಮೃತ 
ನಿನ್ನ ಚರಣಸೇವೆಯಿಂದೆಂದಿಗೂ  ದೂರಮಾಡದಿರಯ್ಯಾ ಗುರುವೇ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ನಿನ್ನ ಚರಣಸೇವೆಯಿಂದೆಂದಿಗೂ  ದೂರಮಾಡದಿರಯ್ಯಾ ಗುರುವೇ 
ನಿನ್ನ ದಯಾಭಿಕ್ಷೆಯಿಂದಾ ಎಂದಿಗೂ ದೂರ‌ಮಾಡಬೇಡಯ್ಯಾ ನನ್ನ ದೊರೆಯೇ ||

ನಿನ್ನ ಪದಪೂಜೆಯೆನಗೆ ಸದಾ ದೊರಕಲಿ ಪ್ರಭುವೇ
ನಿನ್ನ ವಚನಾಮೃತಪಾನವು  ಸದಾ ಕೇಳಲಿ‌ ನನಗೆ |
ನಿನ್ನ ಚರಣಸ್ಪರ್ಶದ ಧೂಳಿರಲಿ ಸದಾ ಮನೆಗೆ 
ನಿನ್ನ ಅನವರತ ಸ್ತುತಿಯು ಚೈತನ್ಯನೀಡಲಿ ಮನಕೆ || ೧ ||

ಭವದ ಬವಣೆಯು ಬಾಧಿಸದಿರಲಿ ನಮಗೆ
ನೀನೇ ಬೇಕೆಂಬ  ಭಾವ ಸ್ಥಿರವಾಗಿರಲೆಮಗೆ |
ನಿನ್ನ ನಾಮವೇ ನೀರು ಅಶನವಾಗಲೀ ಎಮಗೆ 
ನಿನ್ನ ಕಾರುಣ್ಯಮೂರ್ತಿಯು ಹೃದಯದಿ ಸದಾ ತುಂಬಿರಲೆನಗೆ || ೨ ||
ಗುರುನಾಥ ಗಾನಾಮೃತ 
ನಗುತಲಿ ಕುಳಿತಿಹರು ಗುರುನಾಥ ಮರದ ನೆರಳಲ್ಲಿ
ರಚನೆ: ಆನಂದರಾಮ್, ಶೃಂಗೇರಿ  


ನಗುತಲಿ ಕುಳಿತಿಹರು ಗುರುನಾಥ ಮರದ ನೆರಳಲ್ಲಿ
ಬರುವ ಭಾವುಕ ಭಕುತರ ಬವಣೆ ತೀರಿಸುತಲಿ|

ಆ ನಗೆಯ ಹಿಂದಿದೆ ನಾ ಅರಿಯದ ಏನೋ ಮರ್ಮ
ಎನಗೆ ತಿಳಿದಿದೆ  ಅನ್ನುತ  ನಾ ಮಾಡಿದ ಆ ಕರ್ಮ|

ದೂರ ನೋಡುತ ಎಲ್ಲರ ಅರಿವಿನೊಳು ಇರುವಾತ
ಸುಮ್ಮನೆ ತಿಳಿಯದವನಂತೆ ಮೌನದಿ ಕುಳಿತನೀತ|

ಮೂಕ ಪ್ರಾಣಿಯ ಸನಿಹ ಬಯಸುವ ಗುರುನಾಥ
ಶುದ್ದ ಮನದ ಬಕುತಿಯ ತೋರೆಂದರು ಅವಧೂತ|

ಅವರ ಅಣತಿ ಇಲ್ಲದೆ  ಯಾರೂ ಇಲ್ಲಿ ಸಲ್ಲುವರಿಲ್ಲ
ನಿನ್ನ ಅರಿವಿಲ್ಲದೆ  ಮುಗುದ ಭಕುತಿಗೆ ಒಲಿವನೀತ|

ನಂಬಿ ನಡೆದರೆ  ಗುರುವ ಬಯವಿಲ್ಲಾ ಎಂದನೀತ
ನಂಬದಲೇ ಭ್ರಮೆಯಲಿ ಬದುಕದಿರು ಎಂದನೀತ|

ಹಂಗಿನ ಬಕುತಿ ತೋರಿಕೆಯ ಭಕುತಿ ಬೇಡ ಎಂದರು
ನಿನ್ನ  ಅರಿವಿನಾಲಯಕೆ ದಾರಿ ತೋರುವೆ ಎಂದರು|
ಗುರುನಾಥ ಗಾನಾಮೃತ 
ಕರುಣೆಯಿಂದ ಧರಣಿ ಆಳಿದ ಸದ್ಗುರು ಮಹಾರಾಜ
ರಚನೆ: ಆನಂದರಾಮ್, ಶೃಂಗೇರಿ  


ಕರುಣೆಯಿಂದ ಧರಣಿ ಆಳಿದ ಸದ್ಗುರು ಮಹಾರಾಜ
ಸಖರಾಯಪುರವೆಂಬ ಪುಣ್ಯ ಭೂಮಿಯಲಿ ಜನಿಸಿದ|

ನಿಜ ಬಕುತರ ಸಲಹುತಾ ನಿಜಾನಂದ ನೀಡುತಲಿ
ದೇಹಿ ಎಂದವರ ಕೈ ಬಿಡದೇ ನಿತ್ಯವೂ ಹರಸುತಲಿ|

ಸಾಧಕರ ಹುಡುಕತಲಿ ಬಳಿ ಬಂದವರ ಕರುನಿಸುತ 
ನಿತ್ಯ ಸತ್ಯದಾ ಅರಿವ ತೋರುತ  ಸರಿದಾರಿ ತೋರುತ|

ವಿಧಿಯ ಅರಿವು ಮೂಡಿಸುತ ಎಲ್ಲರ ಎಚ್ಚರಿಸುತ
ಅಹಂ ತೊರೆದು ಬಾಳಿ ದಿನದ ಬದುಕು ನಡೆಸೆನ್ನುತ|

ಗುರುವಿನ ಅರಿವು ಕಡು ಪಾಪಿಗೂ ಗದರಿ ನೀಡುತ
ತನ್ನ ಇರುವು ಕಾಲಾತೀತವೆಂದು ನಿತ್ಯವೂ ಸಾರುತ|

ದತ್ತನೂ ನೀವೇ ಸದ್ಗುರುವೂ ನೀವೇ ಎಂದೆನುತ
ನಿಮ್ಮ ಪಾದಕೆ ನನ್ನ ಶಿರವಿತ್ತು ನಿತ್ಯವೂ ನಮಿಸುತ|