ಒಟ್ಟು ನೋಟಗಳು

Monday, September 13, 2021

ಬದುಕಿನ ಮುಸ್ಸಂಜೆಯಲಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬದುಕಿನ ಮುಸ್ಸಂಜೆಯಲಿ  ಸವೆಸಿದ  ದಾರಿ ನೆನಪಾಗಿ ಮನವು  ಭಾರವಾಯಿತೋ
ನಿನ್ನ ನೆನೆಯದಲೇ ಬದುಕು ನಡೆಸಿ ದಡ ಸೇರದ ನಾವೆಯಂತೆ ಗಾಳಿಗೆ ತೇಲಿತೋ|

ಬದುಕು ಮುಗಿದಿಲ್ಲ ಇನ್ನಾದರೂ ನಾಳೆಗೊಂದು ಅರ್ಥ ನೀಡಿ ನನ್ನ ಕರುಣಿಸೋ
ಅಲ್ಪರಲಿ ಅಲ್ಪನು ನಾನು ನಿನ್ನ ಕಣ್ಣಿಗೆ ಬಿದ್ದು ಹೆಜ್ಜೆ ಮುಂದಿಡಲು ಬೆಳಕ ತೋರೋ|

ಬದುಕಿಗೊಂದು ಅರ್ಥವೆನುವರು ಯಾವುದೂ ಅರಿಯದ ಮೂಡ ಜೀವಿಯು ನಾನೋ
ಸುಮ್ಮನೇ ಕಾಲ ಕಳೆದು ಲೌಕಿಕದಲಿ ಮಣ್ಣು ಹೊತ್ತು ಬರಡು ಬಾಳ ನಡೆಸಿದೆನೋ|

ಬದುಕು ನಡೆಸುವ ಬರದಿ ಬಾಳಿದುದೇ ಸರಿ ಎನುತ ಹಂಬಿನಲಿ ಹಾರಾಡಿದೆನೋ
ಬರೀ ಕಾಮವೇ ಕಾಂಚಾಣವೇ ಬದುಕೆನುತ  ಸಂತೆಯೊಳು  ಬದುಕಿ ಹಾಳಾದೆನೋ|

ಬದುಕು ಬರಡಾಗಿ ಬಾಡುವ ಮುನ್ನ ನಿನ್ನ ಪಾದಚರಣ ಬಯಸಿ ನಿನ್ನ ಮುಂದೆ ನಿಂತಿಹೆನೋ
ಕರುಣಿಸೆನೆಗೆ ಅಲ್ಪ ಸಮಯವಾದರೂ ಅರ್ಥ ಅರಿಯಲು ಓ ನನ್ನ ಸಖರಾಯಪುರದ ಗುರುನಾಥ|

Monday, September 6, 2021

ನಿನ್ನ ನಂಬಿಹೆನೋ ಗುರುವೇ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ನಿನ್ನ ನಂಬಿಹೆನೋ ಗುರುವೇ ಇನ್ನೆಷ್ಟು ತಡಮಾಡುವೆ ಎನ್ನ ಮೊರೆ ಕೇಳಲು
ನಿನ್ನಿಷ್ಟದಂತೆ ಎನ್ನ ನೀ ಹರಸುವಿಯಾದರೆ  ಉಸಿರ ಹಿಡಿದು ನಿನ್ನ ಕಾಯುವೆನೋ|

ಸುಲಭಕೆ ಒಲಿಯನು ಗುರುವು ಎಂಬುದ ಅರಿವಿಲ್ಲದೆ ಸುಮ್ಮನೆ  ಹಲಬುತಿಹೆನೋ
ಎಷ್ಟೋ ಸಾಧನೆಗೈವ ಬಕುತರ ಓರೆಹಚ್ಚಿ  ನೋಡುವ ನಿನ್ನ ಕಣ್ಣಿಗೆ ನಾ ಹೇಗೆ ಬೀಳುವೆನೋ|

ಏನು ಮಾಡಿಹೆನೆಂದು ಎನ್ನ ಸಲಹುವೆ ನೀನು ಸದಾ ನಿನ್ನನೇ ನೆನೆವರ ಗತಿಯೇನೋ
ಅತೀ ಅಲ್ಪನು ನಾನು ಮತಿಯೊಳು ಬರೀ ಭ್ರಮೆಯ ತುಂಬಿ ಕೂಗುತಿಹೆನೋ|

ಹೊಲಸ ಮೇಲಿನ ನೊಣದಂತೆ ಮಲಿನ ಮನದಿ ಬೇಡುವ ಪಾಮರನು ನಿನಗೆ ಬೇಡವಾದೆನೋ
ಹೊರಗೊಂದು ಒಳಗೊಂದು ಭಾವ ಹೊತ್ತು ನಿನ್ನ ಬೇಡಿದರೆ ಇನ್ನೆಲ್ಲಿ ಒಲಿಯುವೆ ನೀನು|

 ನಿನ್ನ ನೆನೆದರೆ  ಬದುಕಿನ ಭಯವಿಲ್ಲ ಹುಂಬತನಕೆ ನಿನ್ನಲಿ ಅಸ್ಪದವೇ ಇಲ್ಲವೋ
ಇನ್ನೆಲ್ಲಿ ಪೋಗಲಿ ನಾನು  ನಿನ್ನ ಚರಣವೇ ಗತಿ ಎನಗೆ ಓ  ಸಖರಾಯ ಪ್ರಭುವೇ|