ಒಟ್ಟು ನೋಟಗಳು

Wednesday, January 3, 2024

ಎಲ್ಲೂ ಸಲ್ಲದವನು ಎಲ್ಲಿಯಾದರೂ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಎಲ್ಲೂ ಸಲ್ಲದವನು ಎಲ್ಲಿಯಾದರೂ ಸಲ್ಲುವನೆನುತ ಎಲ್ಲೆಲ್ಲೋ ಹುಡುಕಿ ಹೊರಟೆನು 
ಬಳಲಿ ಬೆಂಡಾಗಿ ದಾರಿ ಸಾಗದಾಗಿ ಉಸಿರು ಚೆಲ್ಲುತ ದಾರಿ ಕಾಣದೇ ಕುಳಿತೆನೋ.

ಏನಿದು ಬದುಕಿನ ಮರ್ಮ ತಿಳಿಯದೆ ಚಡಪಡಿಸಿ ಕೈ ಚೆಲ್ಲಿ ಕುಳಿತೆನೋ
ಯಾರ ಸಂಗಮಾಡಲಿ ಹೇಗೆ ವಿಷಯ ಅರಿಯಲಿ ಅರ್ಥವಾಗದೆ ಗಲಿಬಿಲಿಯಾದೆನೋ.

ವೇಷಧರಿಸಿ ನಾಮಧರಿಸಿ ಅಡಂಬರದಿ ಮೆರೆದು ಸೋತು ನಿಂತೆನೋ
ನಿನ್ನ ಇರುವ ಅರಿಯದೇ ವ್ಯರ್ಥ ಬದುಕು ನಡೆಸಿ ಸಮಯ ಕಳೆದೆನೋ.

ನಿಜ ಬಕುತರ ಸಂಗ ಗಳಿಸದೆ ಬರೀ ಅಂತೆಕಂತೆಗಳ ಸಂತೆಯಲಿ ಕಳೆದು ಹೋದೆನೋ
ನಿನ್ನ ತತ್ವ ಅರಿಯದೇ ಬದುಕಿನರ್ಥ ತಿಳಿಯದೇ  ಅಲ್ಪಮತಿಯಾದೆನೋ.

ನಾನೇನು ನಿನ್ನ ಸೇವಕನೇ ಮೆಚ್ಚಿನ ಶಿಷ್ಯನೇ ನನ್ನ ಹರಸೆಂದು ಬೇಡಲು
 ಸಖರಾಯಪುರದ ಮಹಾದೇವನು ನೀನೇ ಬೇಕಲ್ಲವೇ ಇದಕುತ್ತರ ಹೇಳಲು.

Tuesday, January 2, 2024

ಬೇಡಿ ಬೇಡಿ ಸಾಕಾಯ್ತು ಪದಗಳಲಿ ಗುರುವೇ - ಕೃಪೆ :ಶ್ರೀ. ಆನಂದ ರಾಮ್, ಶೃಂಗೇರಿ

ಬೇಡಿ ಬೇಡಿ ಸಾಕಾಯ್ತು ಪದಗಳಲಿ ಗುರುವೇ ಕರುಣೆ ಬಾರದೇ ಇನ್ನೂ
ಮೌನ ಧರಿಸಿ ಬೇಡುವ ಪರಿ ಅರಿತಿಲ್ಲ ನಾನು ಮಲಿನ ಭಾವ ಕಳೆಚಿಲ್ಲ ಇನ್ನೂ.

ಯಾರೋ ಭಜಿಸಿದರೆಂದು ನಿನ್ನ ಬೇಡುವರೆಂದು ನಾನೂ ಬೇಡ ಹೊರಟೆನೋ
ಭಾವ ಅರಿಯದೇ ಭಕ್ತಿ ಬೆರಸದೇ ತೋರಿಕೆಯ ಭಕುತಿ ತೋರುತಿಹೆನೋ.

ಬೇಡಿದೊಡೆ ಕೊಡಲಿಲ್ಲ ನೀನೆಂದು ಭಕುತಿ ಬದಲಾಗಿ ಸುಮ್ಮನೆ ಕಾಲ ಕಳೆದೆನೋ
ಕರ್ಮ ಕಳೆಯದೆ ದಾರಿ ತೋರದು ಅರಿವಿದ್ದರೂ ಮೂರ್ಕನಂತೆ ಕೂಗುತಿಹೆನೋ.

ಎಲ್ಲೆಲ್ಲೋ ಹುಡುಕುತಿಹ ಈ ಮನಕೆ ನಿನ್ನ ಇರುವಿಕೆಯ ಅರಿವು ಬೇಕಾಗಿದೆ
ಬಾವ ಶುದ್ದಿ ಇಲ್ಲದ ಈ ಮನಕೆ ನಿನ್ನ ದರುಶನ ಬಾಗ್ಯ ಸಿಗಬೇಕಾಗಿದೆ ಗುರುವೇ.

ಸಾಕೆನ್ನುವ ಮೊದಲೇ ಸಾರ್ಥಕಗೊಳಿಸು ಬದುಕನ್ನು ಬೇಡುವೆನು ಪ್ರಭವೇ
ನಿರರ್ಥಕ ಬದುಕು ಸಾಕು ಮಾಡು ನಿಜವ ತಿಳಿಸಿ ಹರಸೆನ್ನ  ಸಖರಾಯಪ್ರಭುವೇ.