ಒಟ್ಟು ನೋಟಗಳು

Saturday, November 5, 2022

ಕಳೆದ ವಸಂತಗಳೆಷ್ಟೋ ನಿನ್ನ ನೆನೆಯದ ದಿನಗಳು ಇನ್ನೆಷ್ಟೋ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ಕಳೆದ ವಸಂತಗಳೆಷ್ಟೋ ನಿನ್ನ ನೆನೆಯದ ದಿನಗಳು ಇನ್ನೆಷ್ಟೋ
ಅಂತೆ ಕಂತೆಗಳ ಸಂತೆಯೊಳು ಬದುಕ ನಡೆಸಿ ನಿನ್ನ ಮರೆತ ದಿನವೆಷ್ಟೋ.

ಏನಿದು ಗುರುದೇವ ಏನಿದು ನಿನ್ನ  ಲೀಲಾ ಪರಿಯ ನಾ ತಿಳಿಯೆ
ನಾ ನಿನ್ನವನಲ್ಲದೇ ಹೋದರೆ ನೀ  ಎನ್ನ ಮನದೊಳು ಯಾಕೆ ನಿಂತಿರುವೆ.

ಭವರೋಗ ವೈದ್ಯನು ನೀನು ಭವ ಭಂದನ ಬಿಡಿಸುವವ ನೀನು
ಎಲ್ಲಾ ಕರ್ಮ ಮಾಡಿ ಕುಕರ್ಮಿಯಾದ ನಾನು  ನಿನ್ನ ಬೇಡುವ  ಅರ್ಹತೆ ನನಗೇನು.

ನಾ ಅರಿತು ಮಾಡುವ ಕರ್ಮಕೆ ಹೊಣೆಯಾರು ತಿಳಿಸು ಗುರುವೇ 
ಲೌಕಿಕದ ಬಣ್ಣಗಳ ವಿವಿಧ ವಾಸನೆಗಳ ಸುಳಿಯಿಂದ ದೂರಿಡೋ ಪ್ರಭುವೇ.

ನಾನು ನಾನಲ್ಲ ಯಾವುದೂ ನನದಲ್ಲ ಆದರೂ ಒಪ್ಪುವ ಮನವಲ್ಲ
ನೀನೇ ಎಲ್ಲಾ ನಿನ್ನ ಲೀಲೆಗೆ ಕೊನೆಯಿಲ್ಲ  ನಾ ಅರಿಯದೆ ಹೋದೆ ಸಖರಾಯಪ್ರಭುವೇ.

Friday, November 4, 2022

ಗುರುನಾಥ ಇರುವಾಗ ಅಭಯ ನೀಡುವಾಗ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಗುರುನಾಥ ಇರುವಾಗ ಅಭಯ ನೀಡುವಾಗ ಇನ್ಯಾಕೆ ಭಯವು ಹೇಳು ಮನವೇ
ನಿನ್ನ ದಾರಿ ಸರಿ ಎಂದಾಗ ನಿನ್ನ ಜೊತೆ ಗುರುವಿರುವಾಗ ಭಯವೆಂತು ನಾನರಿಯೇ.

ಅವನ ನಂಬಿದ ಮನವು ಅವನೇ ಎಲ್ಲಾ ಎಂಬ ಭಾವವು ಎನ್ನ ಕಾಪಾಡಿದೆ
ಅನುಮಾನದ ಒಂದು ಸುಳಿಯು ದೂರ ಮಾಡುವುದು ನಿನ್ನಿಂದ ಗುರುವೇ.

ಅವನ ನಾಮದ ಜಪವು ತರುವುದು ಮನಕೆ ಹೇಳಲಾರದ ಮುದವು
ಮನದ ಕಲ್ಮಶ ದ್ವೇಷ ಅಸೂಯೆಗಳ ತೊಳೆದು ಶುದ್ಧ ಭಾವ ಮೂಡುವುದು.

ಎಲ್ಲಾ ಅವನೆಂದಾಗ ನಾನೆಲ್ಲಿ ಉಳಿದೆ ಎಲ್ಲಾ ಅವನ ಪಾದ ಸೇರಿದವು
ಎಲ್ಲರೂ ನನ್ನವರೆಂಬ ಭಾವ ಎಲ್ಲರಲೂ ನೀನಿರುವ ಅರಿವು ಮೂಡಿದವು.

ಎಲ್ಲಾ ನಿನ್ನದಾದಾಗ ನನ್ನದೆಂಬುದು ಏನುಂಟು ತಿಳಿಸೋ ಪ್ರಭುವೇ
ಇಲ್ಲದಿರುವುದಕೆ ಹೊಡೆದಾಡಿ ಎಲ್ಲರಿಂದ ದೂರಾಗಿ ನಾ ಮಾಡುವದೆಂತೋ.

ಯಾರನೂ ಧೂಷಿಸದೆ  ಹಳಿಯದೆ ನಿನ್ನ ಭಜಿಸುವ ಮನ ನೀಡೋ ದೊರೆಯೇ
ಬದುಕು ಹಸನಗೊಳಿಸಿ ಮನವ ಶುದ್ದಿಗೊಳಿಸೋ ಸಖರಾಯ ಪ್ರಭುವೇ.