ಒಟ್ಟು ನೋಟಗಳು

Friday, April 23, 2021

ನನ್ನೊಳಗಿಹ ಏನನೋ ಹುಡುಕುತಿಹೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನನ್ನೊಳಗಿಹ ಏನನೋ ಹುಡುಕುತಿಹೆ ನೀ ಸರಿ ದಾರಿ ತೋರೋ ಗುರುವೇ
ಹುಡುಕಾಟದಲಿ ನನ್ನ ಇರುವನೇ ಮರೆತಂತಾಗಿ ಕಳೆದು ಹೋಗದಿರಲಿ ಪ್ರಭುವೇ|

ಅದು ಯಾಕೆಂದು  ತಿಳಿದರೂ ನೀ ಎಮಗೆ ತಿಳಿಸುವ ಪರಿ ನಾ ಅರಿಯದಾದೆ 
ಭ್ರಮೆಯ ಕೂಪದೊಳು ಮನವ ನಿಲ್ಲಿಸಿ ಪರಿ ಪರಿಯಲಿ ಲೀಲೆ ತೋರುವುದೇ|

ಆಸೆ ಅಮಿಷಗಳ ಸುಳಿಯಲಿ ಮನ ಸಿಲುಕಿಸಿ ಮುಸಿ ನಗುತ ಕುಳಿತೆಯಲ್ಲ
ಮನವ ಮರ್ಧಿಸಿ ಹೊರ ಹೊಮ್ಮುವ ಭಾವಗಳ ಜೊತೆ ನಾ ಸಿಲುಕಿದೆನಲ್ಲಾ|

ತುಸು ರುಚಿಯ ತೋರಿ ಬೊಗಸೆ ಹಿಡಿದಾಗ ಬರೀ ಭಾವಗಳ ತುಂಬಿದೆಯಲ್ಲ
ಬರೀ ಭಾವಿಸುತಲೇ ನಿನ್ನ ಸೇವಿಸುವ ಈ ಜೀವಕೆ ನಿಜ ದಾರಿ ನೀ ತೋರಲಿಲ್ಲ

ಎಲ್ಲವನೂ ಕರುಣಿಸುವ ಗುರುನಾಥ ನೀನು ಈ ಪರಿಯಲಿ ಕಾಡಿಸುವೆಯಲ್ಲ
ಶರಣಾಗಿ ಬಂದಿಹ ಈ ಅಲ್ಪ ಜೀವಕೆ ತುಸು ಕರುಣೆ ಸಾಕೆಂದು ಸಖರಾಯಪ್ರಭುವಿಗೆ ಬೇಡುವೆನಲ್ಲ|

Sunday, April 11, 2021

ಎಲ್ಲೆಲ್ಲೂ ಹುಡುಕಿದೆ ಸಿಗದ ನೆಮ್ಮದಿಗೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಲ್ಲೆಲ್ಲೂ ಹುಡುಕಿದೆ ಸಿಗದ ನೆಮ್ಮದಿಗೆ ಸನಿಹ ಇದ್ದರೂ ಅರಿಯಾದಾದೆ ಗುರುವೇ
ಯಾರೋ ನುಡಿದರು ಎಂದು ಇನ್ನೆಲ್ಲೋ ಕಳೆದು ಹೋದೆ ನಿನ್ನ ಕಾಣದೇ ಪ್ರಭುವೇ|

ಒಮ್ಮೆ ನೆನೆದರು ಸಾಕು ನೀ ತುಂಬುವ ಶಕುತಿ ಎಲ್ಲವನೂ ಗೆಲ್ಲಲು ಸಾಕು ದೊರೆಯೇ
ನಿನ್ನ ಭಜಿಸಲು ದೊರೆವುದು ಮನಕೆ ನಿರಂತರ ಬಲವು ಇತರ ಚಿಂತೆ ನನಗೇಕೆ ಗುರುವೇ|

ಹಸಿವು ನೀರಡಿಕೆ ಈ ಮಿಥ್ಯ ದೇಹದ ಚಿಂತೆ ನಿನ್ನ ಇರುವಿನ ಅರಿವು ಸದಾ ನೀಡಲಿ ನಿಶ್ಚಿಂತೆ
ಮನೆ ಮಠ ಆಸ್ತಿ ಅಡವಿನ ಆಸೆಯ ಬಲೆಯಿಂದ ದೂರಿರಿಸಿ  ನೀಡೆನೆಗೆ  ನಿನ್ನದೇ ಚಿಂತೆ|

ಸಂಸಾರ ನೌಕೆಯ ಪಾಮರ ನಾವಿಕನು ನಾನು ಉದ್ಧರಿಸಿ ದಡ ಸೇರಿಸು ಎನ್ನನು
ಮಕ್ಕಳು ಮರಿಗಳೆಂದು ನಿತ್ಯ ಜೀವನದಿ ಹೋರಾಡುತ ನಿನ್ನನೇ ಮರೆತೆ ನಾನು|

ಮುಖವಾಡ ಧರಿಸಿ ಹೆತ್ತವರನೇ ದೂರುತ ಮಿಥ್ಯದ ಬೆನ್ನತ್ತಿ ಹೋಗಿಹೆನು ನಾನು
ನಿತ್ಯ ಸತ್ಯದ ಅರಿವು ನೀಡೆಂದು ಕೂಗುತ ಸಖರಾಯಪುರದ ನಿನ್ನಂಗಳದಿ ನೆಂತಿಹೆನು ನಾನು|