ಒಟ್ಟು ನೋಟಗಳು

Tuesday, May 10, 2022

ಬಲು ಸಡಗರದಿ ಬಂದು ಬೃಂದಾವನವ ಸುತ್ತಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬಲು ಸಡಗರದಿ ಬಂದು ಬೃಂದಾವನವ ಸುತ್ತಿ ಆನಂದದಿ ನಿಂತೆನೋ
ಎಂದೂ ಕಾಣದ ಅನುಭೂತಿ ಪಡೆದು ಮೈ ಮರೆತು ಭಜಿಸಿಹೆನೋ|

ಹರನೆಲ್ಲಿ ಹರನೆಲ್ಲಿ ಎನುತ ಮುದದಿ ಪಾಡುತ ಸಖರಾಯಧೀಶನ ಕಂಡೆನೋ
ಮಹದೇವ ತಾನಾಗಿ ಬಕುತರಾ ಪೊರೆಯುತ ಇದ್ದರೂ ಇಲ್ಲದಂತಿಹನೋ|

ಶಿವನೇ ತಾನಾಗಿ ಲೀಲೆಗಳ ತೋರುತ ಎಲ್ಲರೊಳಗೊಂದಾಗಿ ಬೆರೆತಿಹನೋ
ಪಂಚ ಭೂತಗಳೊಡೆಯ ತಾನಾದರೂ ಕಿಂಚಿತ್ತೂ ಗರ್ವ ತೋರನಿವನೋ|

ಎಲ್ಲಾ ಅವನ ಲೀಲೆ ಎನುತ ಎಲ್ಲಾ ಕಷ್ಟ ದೂರಮಾಡುತ ಮೌನದರಿಸಿಹನೋ 
ಎಲ್ಲಾ ಜೀವಿಗಳ ಒಡನಾಟದಿ ಅರಿವಿಲ್ಲದೇ ಎಲ್ಲರಲೂ ಅರಿವು ಮೂಡಿಸಿಹನೋ|

ಕರ್ಮ ಬಂಧನದ ಸಂಕೋಲೆ ಕಳಚುತ ನಿತ್ಯ ಸತ್ಯ ಸಾರಿ ಹೇಳಿಹನೋ
ಗುರುನಾಥ ಎಂದೊಡೆ ಅನಾಥ ಭಾವ ಸರಿಸಿ ನಿಮ್ಮೊಡನೆ ಇರುವೆನೆಂದನೋ|

Sunday, May 8, 2022

ಬಡವನಾದೆನು ನಾನು ಭಜಿಸದೇ ನಿನ್ನನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಬಡವನಾದೆನು ನಾನು ಭಜಿಸದೇ ನಿನ್ನನು ಪ್ರಭುವೇ  ಮನ್ನಿಸಿ ಹರಸೆನ್ನನು
ಬಕುತಿಯ ಸೋಗು ಧರಿಸಿಹೆ  ಲೌಕಿಕದ ಚಿಂತೆ ಕಾಡುತಿದೆ ಗುರುವೇ ಎನ್ನನು|

ಮನದ ಒಳಹೊಕ್ಕು ಭಾವನೆಗಳ ತಡಕಾಡಿ ಸೋತು ನಿಂತಿಹೆನೋ
ಬರೀ  ಪ್ರಲೋಭನೆಗಳ ಸುಳಿಯೊಳು ಮನ ಸಿಲುಕಿ ಅಂಧನಾಗಿಹೆನೋ|

ಭಾವಶುದ್ದಿಯ ಬಯಸಿ ಬಯಕೆಗಳ ಬದಿಗೊತ್ತಿ ಹೋರಾಡುತಿಹೆನೋ
ಅಲ್ಪ ಬುದ್ಧಿಯ ಜೀವಿಯು ನಾನು ಏನೂ ಅರಿವಿಲ್ಲದೇ ಕೊರಗುತಿಹೆನೋ|

ಮನವ ನಿನಗರ್ಪಿಸದೆ ಮತಿಯ ಮರ್ದಿಸದೆ ನೀ ಒಲಿಯಲಾರೆಯೇನೋ
ನನಗರಿಯದು ಗುರುವೇ ಬದುಕು ನಡೆಸುವ ಪರಿ ಸೋತು ಕೂಗುತಿಹೆನೋ|

ಬಣ್ಣದಾ ಬದುಕಿನ ರಂಗಿನಾ ಆಟ ಸಾಕು ನೀ ಒಮ್ಮೆ ದಯೆ ತೋರಬಾರದೇನೋ
ಸಖರಾಯ ದೊರೆಯೇ  ನಿನ್ನಂಗಳದಿ ನಾ ಬೇಡುತಾ ನಿಂತೆ ಹರಸಬಾರದೇನೋ|