ಒಟ್ಟು ನೋಟಗಳು

Sunday, April 30, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 52

 

ಅಂತರಂಗದ ಮಾತುಗಳು 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।



ಗುರುನಾಥರ ನುಡಿಗಳು ವೈದ್ಯರನ್ನು ದಿಗ್ಬ್ರಾಂತಗೊಳಿಸುವುದರ ಜೊತೆಗೆ ಯಾವ ಜನ್ಮದ ಸಂಬಂಧವೆಂದು ಚಿಂತಿಸುವಾಗ, ಗುರುನಾಥರು ನಗುತ್ತಾ 'ಇಲ್ಲಿ ಸ್ವಲ್ಪ ದೂರದಲ್ಲಿ ಒಂದು ಶನಿದೇವರ ದೇವಸ್ಥಾನವಿದೆ. ಆದಷ್ಟು ದಿವಸ ಅಲ್ಲಿಗೆ ಹೋಗಿ ಬಾ. ಎಲ್ಲಾ ತಾಪತ್ರಯಗಳೂ ಹರಿಯುತ್ತೆ' ಎಂದರು. 

ಭಕ್ತರಿಗೆ ಏನಾದರೂ ಹೇಳುವಾಗಲೂ ಗುರುನಾಥರು ಸುಲಭವಾದ, ಭಕ್ತರು ಭಕ್ತಿಯಿಂದ ಮಾಡಬಹುದಾದಂತಹ ಸರಳ ಕೆಲಸವನ್ನೇ ಹೇಳುತ್ತಿದ್ದರು. ಇಲ್ಲಿ ವೈದ್ಯರಿಗೂ ಸನಿಹದಲ್ಲಿರುವ ಶನಿದೇವರ ದೇವಸ್ಥಾನಕ್ಕೆ ಹೋಗಲು ತಿಳಿಸಿದರು. ಹೀಗೆ ಪರಿಚಯವಾದ ಗುರುನಾಥರು ಕಡೂರಿಗೆ ಬಂದಾಗಲೆಲ್ಲಾ ದರ್ಶನ ಕೊಡುತ್ತಿದ್ದು, ವೈದ್ಯರ ಕ್ಷೇಮ ಸಮಾಚಾರವನ್ನು ವಿಚಾರಿಸುತ್ತಿದ್ದರು. 

ಮುಂದೊಂದು ದಿನ ಗುರುನಾಥರ ಬಳಿ ಏನೋ ಹೇಳಿಕೊಳ್ಳಲು ಇವರು ಹೋದಾಗ, 'ನನಗೆಲ್ಲಾ ಗೊತ್ತಿದೆ ಸುಮ್ಮನಿರಪ್ಪಾ, ಬಂದಿಲ್ಲಿ ಸುಮ್ಮನೆ.....' ಎಂದು ನಿಲ್ಲಿಸಿಬಿಟ್ಟಿದ್ದನ್ನು ಅವರು ತಿಳಿಸಿದರು. 

ಮತ್ತೊಮ್ಮೆ ಗುರುನಾಥರು ಬಂದಾಗ, ಇವರನ್ನು ಪ್ರೀತಿಯಿಂದ ಡಾಕ್ಟರೇ ಎಂದು ಕರೆಯುತ್ತಾ 'ಅಲ್ಲಪ್ಪಾ, ನಿನ್ನೆ ರಾತ್ರಿ ನೀನು ಈ ರೀತಿ ಯೋಚನೆ ಮಾಡಿದ್ದು ನಿನ್ನಂತಹವನಿಗೆ ಸರಿ ಏನಪ್ಪಾ? ಏನೋ ಯೋಚನೆ ಮಾಡಿದ್ಯಲ್ಲಪ್ಪ ಯಾಕೆ?' ಎಂದು ಗುರುನಾಥರು ಪ್ರಶ್ನಿಸುವುದರ ಜೊತೆಗೆ ಅಂತರಂಗದ ಆಲೋಚನೆಗಳನ್ನೆಲ್ಲಾ ಅರಿತು ಎಚ್ಚರಿಸಿದಾಗ ವೈದ್ಯರು ಸಂಭ್ರಾಂತರಾಗಿದ್ದರು. ಸಕಾಲಿಕ ಪ್ರಜ್ಞೆ, ಎಚ್ಚರಿಕೆ ನೀಡಿ ನಿರ್ದೇಶಿಸುವ ಗುರುನಾಥರು ಅವರಿಗೆ ಸ್ವಯಂ ಶಿವಸ್ವರೂಪಿಯಾಗಿ ಕಂಡರು. 

'ಮುಂದಾಗುವುದು ಗೊತ್ತಾಗುವುದು ಅವಧೂತರಿಗೆ ಮಾತ್ರ. ಹಿಂದಿನದು ಯಾರಾದರೂ ಹೇಳಬಹುದು' ಎಂದು ಸ್ಮರಿಸುವ ಗೌರಿಶಂಕರ್ ಅವರೆನ್ನುತ್ತಾರೆ, 'ವೈಯಕ್ತಿಕ ಯೋಚನೆಗಳನ್ನೂ ಗುರುವಿನ ಬಳಿ ಮುಚ್ಚಿಡಲಾಗದು. ಗುರುವು ನಮ್ಮವನಾದಾಗಲೇ ಅಷ್ಟು ಅಂತರಂಗದ ವಿಚಾರವನ್ನು ನಿರ್ಭೀಡೆಯಾಗಿ ತಿಳಿಸುವುದು' ಎಂದ ಇವರು ಗುರುವಾಣಿಯನ್ನು ಹೀಗೆ ಸ್ಮರಿಸಿದರು. 'ಅಲ್ಲಯ್ಯ, ಯಾಕೆ ಹೀಗೆ ನೀನು ಯೋಚನೆ ಮಾಡಿದೆ?' ಎಂದು ಗುರುಗಳು ಕೇಳಿದಾಗ 'ಏನು ಮಾಡುವುದಪ್ಪ, ನಾನು ಪ್ರಾಪಂಚಿಕ. ಯೋಚನೆಗಳು ಬಂದು ಹೋಗುತ್ತವೆ' ಎಂದಿದ್ದರು. 

ಗುರುನಾಮ ಒಂದೇ ಸಾಕೆಮಗೆ 

ಅದಕ್ಕೆ ಗುರುನಾಥರು 'ನೀನು ಪ್ರಪಂಚದಿಂದ ಬಹುದೂರ ಬಂದಿದೀಯ. ಮತ್ಯಾಕೆ ಅಂತಹ ಯೋಚನೆಗಳು? ನೀನೇನು ಪ್ರಪಂಚದಲ್ಲಿದ್ದೀನಿ ಎಂದು ತಿಳಿದುಕೊಂಡಿದ್ದೀಯಾ? ಪ್ರಪಂಚ ನಿನ್ನಲ್ಲಿದೆ ಅನ್ನುವುದು ತಿಳಿದುಕೋ' ಎಂದು ಮಾರ್ಮಿಕವಾಗಿ ನುಡಿದರಂತೆ. 

ಎರಡು ಮೂರು ಸಾರಿ ಸಖರಾಯಪಟ್ಟಣಕ್ಕೆ ಹೋದಾಗಲೂ ವೈದ್ಯರಿಗೆ ಗುರು ದರ್ಶನವಾಗಲಿಲ್ಲ. ಆದರೆ ಇವರು ಅರಸೀಕೆರೆಯಲ್ಲಿ ಇದ್ದಾಗ ಪಾಂಡುರಂಗನ ದೇವಾಲಯದಲ್ಲಿದ್ದಾಗ ಅಲ್ಲಿಗೇ ಹೋಗಿ ಗುರುನಾಥರು ದರ್ಶನ ನೀಡಿ 'ನೀನು ಇಲ್ಲಿ ಇದೀಯಾ ಅಂತ ಗೊತ್ತಾಯಿತಪ್ಪಾ, ನೋಡಿಕೊಂಡು ಹೋಗೋಣ ಅಂತ ಬಂದೆ' ಅಂದರು. ಇದ್ಯಾಕೆ ನನಗಿಂತಹ ಕರುಣೆ ತೋರಿಸುತ್ತಾರೆಂಬುದೇ ವೈದ್ಯರಿಗೆ ಅರಿಯದಾಗಿತ್ತು. 

ಗುರುನಾಥರಿಗೆ ವೈದ್ಯರು ಏನಾದರೂ ನೀಡಿದರೆ ಅಲ್ಲಿ ಅಕ್ಕಪಕ್ಕದಲ್ಲಿದ್ದವರಿಗೆ ಕೊಟ್ಟು ಬಿಡುತ್ತಿದ್ದರು. ಒಮ್ಮೆ ಇದ್ದಕ್ಕಿದ್ದಂತೆ ಗುರುಗಳು 'ನೀನು ಇಲ್ಲಿ ಜಾಸ್ತಿ ದಿವಸ ಇರೋಲ್ಲ, ಪರಿಸ್ಥಿತಿ ಬಿಗಡಾಯಿಸುತ್ತೆ. ಆದರೆ ನೀನೇನೂ ಹೆದರಲ್ಲ. ಯಾಕೆಂದರೆ ಯಾವಾಗಲೂ 'ಓಂ ನಮಃ ಶಿವಪ್ಪ' ಅಂತಿರ್ತೀಯಲ್ಲಾ' ಎಂದು ಅಂತರಂಗ ಸಾಧನೆಯ ವಿಚಾರವನ್ನು ವೈದ್ಯರಿಗೆ ಹೇಳಿಬಿಟ್ಟರಂತೆ. 

ಹೀಗೆ ಅಪಾರವಾದ ಗುರುನಾಥರ ಪ್ರೀತಿಯ ಸಲಹೆಯನ್ನು ಅನುಭವಿಸಿದ, ಆಧ್ಯಾತ್ಮ ಸಾಧನೆಯ ಮಾರ್ಗದಲ್ಲಿ ಮಾರ್ಗದರ್ಶನ ನೀಡಿದ ಗುರುನಾಥರ ವಿಯೋಗ ಇವರಿಗೆ ಸಹಿಸಲಾರದ ದುಃಖವಾಗಿತ್ತು. 'ಅವನ ನೆನಪಿನಲ್ಲಿಯೇ ಇರಪ್ಪ' ಎನ್ನುವ ಗುರುನಾಥರ ಮಾತುಗಳನ್ನು ವೈದ್ಯರು ಮರೆತಿಲ್ಲ. ಗುರುದೇವ ಗುರುದೇವ ಎಂದು ಜಪ ಮಾಡುವ ಇವರಿಗೆ ಕನಸಿನಲ್ಲಿ ಇತ್ತೀಚೆಗಷ್ಟೇ ಬಂದರಂತೆ. ಇವರೆಲ್ಲೋ ಪುಷ್ಕರಣಿಯೊಂದರ ಬಳಿ ಕುಳಿತಾಗ ಅಲ್ಲಿಗೆ ಬಂದ ಗುರುನಾಥರು 'ಏನಪ್ಪಾ ಇಲ್ಲಿ ಕುಳಿತಿದ್ದೀಯಾ? ಯಾಕೆ ಯೋಚನೆ ಮಾಡುತ್ತಿದ್ದೀಯೋ ಮಹರಾಯ. ಏನು ಸಮಾಚಾರ?' ಎಂದು ಕೇಳಿದರು. ನಂತರ 'ದೇವರು ಒಳ್ಳೆಯದು ಮಾಡ್ತಾನೆ. ಯಾಕೆ ಚಿಂತೆ ಮಾಡ್ತೀಯೋ?' ಎಂದರು. 

ಬೆಳಗಾಗಿ ಹೋಗಿತ್ತು. ಗುರುನಾಥರು ಹೀಗೆ ಸ್ವಪ್ನದಲ್ಲಿ ಬಂದು ಹರಸಿಹೋದ ಘಟನೆಯನ್ನು ಆನಂದದಿಂದ ನಮ್ಮೊಂದಿಗೆ ಹಂಚಿಕೊಂಡ ಗೌರಿಶಂಕರ್ ಅವರು ಗುರುನಾಮ ಒಂದೇ ಜನ್ಮ ಸಾರ್ಥಕ ಸಾಧನವೆನ್ನುತ್ತಾರೆ. 

ಪ್ರಿಯ ಗುರುಬಾಂಧವರೇ, ಇಂದಿನ ಸತ್ಸಂಗ ಬಯಸದೇ ಬಂದ ಭಾಗ್ಯ. ಅದು ಎಲ್ಲರದಾಗಬಾರದೇಕೆ? ನಾಳೆ ಮತ್ತೆ ನಮ್ಮೊಂದಿಗಿರುವಿರಲ್ಲಾ. ನಾಳಿನ ನಿತ್ಯ ಸತ್ಸಂಗ ನಿರಂತರವಾಗಿರಲಿ..... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

Saturday, April 29, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 51

 

ಭಕ್ತಪ್ರೇಮಿ ಗುರುನಾಥರು 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ತಾವಲ್ಲಿಗೆ ಹೋದ ಪ್ರತಿ ಕ್ಷಣದಲ್ಲಿ ಗುರುನಾಥರು ಒಂದಲ್ಲ ಒಂದು ಪಾಠವನ್ನು ನೀಡುತ್ತಲೇ ಇದ್ದರು. ಆದರೆ ಅದು ಯಾರನ್ನೂ ಕುರಿತಾದುದಲ್ಲ. ಯಾರಿಗೆ ಬೇಕೋ ಅವರಿಗದು ಲಭ್ಯವಾಗುತ್ತಿತ್ತು. ಗುರುವಾಕ್ಯದಲ್ಲಿ ಶ್ರದ್ಧೆ ಭಕ್ತಿ ಇದ್ದಾಗ ಮಾತ್ರಾ. ಅವರ ಒಂದೊಂದು ನಡೆನುಡಿಯೂ ಅನುಕರಣೀಯವಾಗಿತ್ತು ಎನ್ನುವ, ಗುರುನಾಥರ ಈ ಭಕ್ತರ ಅನುಭವವನ್ನು ಸವಿಯೋಣ. 

"ಒಂದು ಊಟ ಹಾಕುವ ಸಂದರ್ಭದಲ್ಲೂ, ಬಂದವರನ್ನು ಆದರಿಸಿ ಸತ್ಕರಿಸುತ್ತಿದ್ದ ರೀತಿ ಎಂದರೆ - ಶುಭ್ರವಾದ ಜಾಗದಲ್ಲಿ ಕೂರಿಸಿ, ಎಲೆ ತೊಳೆದು, ರಂಗವಲ್ಲಿ ಇತ್ತು ಎದುರಿಗೆ ಅದಾರೋ ಕುಳಿತಿದ್ದುದಲ್ಲ, ಸಾಕ್ಷಾತ್ ಭಗವಂತನೇ ಕುಳಿತಿದ್ದಾನೆಂಬ ಭಾವನೆಯಿಂದ ಬಡಿಸುತ್ತಿದ್ದ ರೀತಿ ಅಲ್ಲಿ ಕಂಡುಬರುತ್ತಿತ್ತು. ಭಕ್ತರು ಏನೇ ತರಲಿ ಅದನ್ನು ಪ್ರೀತಿಯಿಂದ ಮುಟ್ಟಿ ಎಲ್ಲವನ್ನೂ ಎಲ್ಲರಿಗೂ ಹಂಚಿಸಿಬಿಡುತ್ತಿದ್ದ ನಿಸ್ವಾರ್ಥ ರೀತಿ, ಲವಲೇಶವೂ ಆಸೆ ಇಲ್ಲದ ಆ ರೀತಿ ಗುರುನಾಥರಿಗೆ ಮಾತ್ರ ಮೀಸಲೇನೋ!" 

"ಒಮ್ಮೆ ಮನೆಯಿಂದ ಒಂದಿಷ್ಟು ಉಪ್ಪಿಟ್ಟು ಮಾಡಿಸಿಕೊಂಡು ಹೋಗಿದ್ದೆ. ಗುರುನಾಥರ ಮುಂದಿಟ್ಟೆ, 'ಸ್ವೀಕರಿಸಿ ಗುರುಗಳೇ' ಎಂದಾಗ 'ನೀನೇ ಕೊಡಯ್ಯಾ ಒಂದು ಚೂರು.... ಬಾಕಿದು ಎಲ್ಲರಿಗೂ ಹಂಚಿಬಿಡು' ಎಂದರು. ಇಲ್ಲಾ ನೀವೇ ತೆಗೆದುಕೊಳ್ಳಿ ಎಂದೆ. 'ನಾ ತೆಗೆದುಕೊಂಡು ತಿಂದು ಎಂಜಲು ಮಾಡುವುದು ಬೇಡ... ನೀವೇ ಪ್ರಸಾದವನ್ನು ನನಗೂ ಕೊಟ್ಟು ಹಂಚಿ' ಎಂದರು. 'ಅಬ್ಬಾ.. ಏನಾಶ್ಚರ್ಯ, ಆ ತುತ್ತತುದಿಯ ಅಗ್ರಸ್ಥಾನದಲ್ಲಿದ್ದೂ ಗುರುನಾಥರು, ಒಬ್ಬ ಸಾಮಾನ್ಯರು ತಂದ, ತಿನ್ನುವ ವಸ್ತುವನ್ನು ಪ್ರಸಾದವೆಂದು ಸ್ವೀಕರಿಸುವ ದೊಡ್ಡ ಗುಣ ನಮಗೊಂದು ಪಾಠವಾಗಿತ್ತು". 

"ಕಷ್ಟಗಳು ಬರಬೇಕಯ್ಯ. ಕಷ್ಟಗಳು ಬಂದಾಗಲೇ ನಾವು * * ಮಾಡಿ, ಕಲ್ಮಶ ಮುಕ್ತರಾಗಿ ಆತನ ಸ್ಮರಣೆಯಲ್ಲಿ ಸಾಗುವುದು. ಬಂಗಾರ ಪುಟಕ್ಕಿಟ್ಟಾಗ ಮಾತ್ರವಲ್ಲವೇ ಶುದ್ಧವಾಗುವುದು?" ಎನ್ನುವ ಮಾತನ್ನು ಗುರುನಾಥರು ಆಗಾಗ್ಗೆ ಹೇಳುತ್ತಿದ್ದರು. ಇದು ಕಷ್ಟದಲ್ಲಿರುವವರಿಗೆ ಸಾಂತ್ವನ, ಧೈರ್ಯ ನೀಡುವ ಗುರುನಾಥರ ರೀತಿಯಾಗಿತ್ತು. ಗುರುನಾಥರ ಅನುಗ್ರಹಕ್ಕೆ ಎಲ್ಲ ಜಾತಿಯ ಅಲ್ಲ ಸ್ತರದ ಜನಗಳೂ ಬರುತ್ತಿದ್ದರು. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಗುರುನಾಥರು ಸಮತಾವಾದಿಗಳು. ಯಾವ ಪಂಚಾಗ, ನಕ್ಷತ್ರ, ತಿಥಿಗಳ ಲೆಕ್ಕವಿಲ್ಲದೇ ಮುಂದಾಗಬಹುದಾದ ಎಲ್ಲ ವಿಚಾರಗಳನ್ನು ಗುರುನಾಥರು ಹೇಳುತ್ತಿದ್ದರು. ಗುರುನಾಥರಿದ್ದಾರೆ ಎಂದರೆ ಅಲ್ಲಿ ಜನಜಂಗುಳಿಯೇ ಇರುತ್ತಿತ್ತು. ಸಖರಾಯಪಟ್ಟಣದಲ್ಲೂ ಹಾಗೇ. ಜನಗಳ ಓಡಾಟ ಅವರ ಮನೆಯ ಮುಂದಿತ್ತೆಂದರೆ ಗುರುಗಳು ಅಲ್ಲಿದ್ದಾರೆಂಬುದು ಖಚಿತ. ಬಂದವರು ಗುರುಗಳನ್ನು ದೇವರೆಂದು ಭಾವಿಸಿದ್ದರೆ , ಗುರುನಾಥರು ಭಕ್ತರನ್ನೇ ಪರಮಾತ್ಮನೆಂದು ಪೂಜಿಸಿ, ಆರಾಧಿಸಿ ಸತ್ಕರಿಸುವುದನ್ನು ಗುರುಮನೆಯಲ್ಲಿ ಕಾಣಬಹುದಿತ್ತು. ಭಕ್ತರ ಒಂದು ನೋವಿನ ಕೂಗಿಗೆ ಎಲ್ಲಿಂದ ಎಲ್ಲಿಗೋ ಹೋಗಿ ಭಕ್ತಗಣದ ನೋವನ್ನು ಪರಿಹರಿಸುತ್ತಿದ್ದ ಭಕ್ತ ಪ್ರೇಮಿ ಗುರುನಾಥರನ್ನು ಕಾಣುವುದು, ಅರಿಯುವುದು, ಅವರ ಕೃಪೆಗೆ ಪಾತ್ರರಾಗಲು ಜನುಮ ಜನುಮದ ಪುಣ್ಯ ಬೇಕು" ಎಂದು ತಮ್ಮ ಅನುಭವವನ್ನು ಡಾ.ಪ್ರಭುದೇವ ನಮ್ಮ ನಿತ್ಯ ಸತ್ಸಂಗಕ್ಕೆ ಹಂಚಿಕೊಂಡ ರೀತಿ ಇದು. 

ಬಯಸದೇ ಬಂದ ಭಾಗ್ಯ 

ಮನುಷ್ಯನಿಗೆ ನೋವು ಬರದೇ ಮರಕ್ಕೆ ಬರುತ್ತದೆಯೇ? ಅಂತೆಯೇ ಒಬ್ಬ ಗುರು ಭಕ್ತರು. ಅವರು ಕಡೂರಿನಲ್ಲಿ ವೈದ್ಯರಾಗಿ ವೃತ್ತಿ ನಡೆಸುತ್ತಿದ್ದರು. ತುಂಬ ಸಂಕಟದ ದಿನಗಳು ಬಂದೊದಗಿತು. ಏನು ಮಾಡುವುದೆಂದು ತೋಚಲಿಲ್ಲ. ಹತ್ತಿರದಲ್ಲಿರುವ ಬನಶಂಕರಿ ದೇವಸ್ಥಾನದ ಅರ್ಚಕ ಮಿತ್ರರಾದ ಸ್ವಾಮಿಯವರ ಮನೆಗಿವರು ಹೋಗುವುದು ವಾಡಿಕೆ. ಅಂತೆಯೇ ಅಂದೂ ಹೋಗಿ ತಮ್ಮ ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಿದ್ದಾಗ, ಆ ಮನೆಯ ಮಕ್ಕಳು 'ತಾತ ಬಂದರು... ತಾತ ಬಂದರು' ಎಂದು ಸಂತಸದಿಂದ ಕುಣಿಯುತ್ತಿದ್ದರು. ಈ ಸಂತಸ ಮಕ್ಕಳಿಗೆ ಮಾತ್ರವಲ್ಲ ಇವರಿಗೂ ಸಿಕ್ಕುವ, ಇವರ ಭವದ ನೋವುಗಳ ಬಿಡುಗಡೆಯ ಸಂತರಾಗಿ ಅವರು ಇವರ ಜೀವನದಲ್ಲಿ ಬಂದರು ಆ ತಾತ. ಅರ್ಚಕ ಮಿತ್ರರು 'ಹಾಂ ತಡೀರಿ, ಒಳ್ಳೆಯ ಸಮಯಕ್ಕೆ ನೀವೂ ಬಂದಿದ್ದೀರಿ, ಅವರೂ ಬಂದಿದ್ದಾರೆ. ನೀವಿನ್ನು ಚಿಂತಿಸಬೇಕಿಲ್ಲ' ಎಂದು ಆ ತಾತನ ದರ್ಶನ ಮಾಡಿಸಿದರು. ಒಂದು ತುಂಡು ಪಂಚೆಯುಟ್ಟು, ಮುಖದ ತುಂಬಾ ಗಡ್ಡ ಮೀಸೆಗಳೇ ತುಂಬಿರುವ, ದೈದೀಪ್ಯಮಾನವಾದ ಕಣ್ಣುಗಳನ್ನು ಹೊಂದಿದ್ದು, ಆ ಒಂದು ದೃಷ್ಟಿಯಲ್ಲೇ ಎಲ್ಲವನ್ನು ಅರಿತು ಬಿಡುವ ಒಬ್ಬ ಮಹಾನ್ ವ್ಯಕ್ತಿಯನ್ನು ಪರಿಚರಿಸಿದರು. ಯಾರವರು.. ? ಯಾರವರು? ಅವರು ಮತ್ತಾರಾಗಲು ಸಾಧ್ಯ? ನಮ್ಮ ನಿಮ್ಮ ಎಲ್ಲರ ನೆಚ್ಚಿನ ಗುರುನಾಥರೇ ಅವರಾಗಿದ್ದರು. ಅನೇಕರು ಕೇಳಿ, ಬಯಸಿ, ಶ್ರಮಪಟ್ಟು ಗುರುದರ್ಶನ ಪಡೆದರೆ, ಈ ವೈದ್ಯ ಗೌರಿಶಂಕರರಿಗೆ ಗುರುನಾಥರ ಕೃಪೆ, ಆಶೀರ್ವಾದ ಬಯಸದೇ ಬಂದ ಭಾಗ್ಯವಾಗಿತ್ತು. ಗೌರೀಶಂಕರನೇ ಗುರುನಾಥರ ರೂಪದಲ್ಲಿ ಬಂದು ಹರಸಿದ್ದರು. ಗುರುವಿನ ಮೊದಲ ನೋಟದ ರೀತಿಯನ್ನು ಪಂಡಿತ ಗೌರೀಶಂಕರರು ಹೀಗೆ ಹೇಳುತ್ತಾರೆ. 

"ನನ್ನನ್ನು ನೋಡುತ್ತಲೇ ಗುರುನಾಥರು ಹಾಂ ಹಾಂ ಅಂದರು. ನನ್ನ ಎಲ್ಲ ಜಾತಕಗಳನ್ನೂ ತಿಳಿದವರಂತೆ ಚೆನ್ನಾಗಿದ್ದೀರಾ? ಎಂದು ನಕ್ಕರು. ನನ್ನ ಪರಿಚಯಿಸಲು ಅರ್ಚಕ ಮಿತ್ರರಾದ ಸ್ವಾಮಿಯವರು ಮುಂದೆ ಬಂದಾಗ 'ನೀನೇನು ಪರಿಚಯ ಮಾಡಿಕೊಡ್ತೀಯಾಯ್ಯ ಇವರನ್ನು... ನಿನಗೇನು ಗೊತ್ತಿದೆ ಇವರ ಬಗ್ಗೆ... ಹೇಳಲಾ ಎಲ್ಲಾ... ಎಷ್ಟು ಜನ್ಮಗಳಿಂದ ನಮ್ಮ ಸಂಬಂಧವಿದೆ' ... ಎನ್ನುತ್ತಾ.... 'ಆಯ್ತಲ್ಲಾ.. ಎಲ್ಲಾ ಇನ್ನು ಸರಿಯಾಗುತ್ತೆ. ಏನೂ ಚಿಂತೆ ಬೇಡ' ಎಂದು ಅದೆಷ್ಟೋ ಜನುಮಗಳ ಪರಿಚಯವಿರುವವರಂತೆ ಮಾತನಾಡಿಬಿಟ್ಟರು. ಮೊದಲ ನೋಟದಲ್ಲೇ ಜನುಮಜನುಮಗಳ ಅನುಬಂಧವಿದ್ದವರಂತೆ ಗುರುನಾಥರು ಮಾತನಾಡಿದಾಗ, ಅವರ ಒಂದು ನಗು, ಆಶೀರ್ವಾದ ವೈದ್ಯರ ಎಲ್ಲ ಚಿಂತೆ- ಬವಣೆಗಳನ್ನು ಹರಿಸಿಬಿಟ್ಟಿದ್ದವೇನೋ  ! ಅವರಂತೂ  ದಿಙ್ಮೂಢರಾಗಿದ್ದರು. 

ಪ್ರಿಯ ಓದುಗ ಗುರುಬಂಧುಗಳೇ, ಗುರು ಸಾಮರ್ಥ್ಯಕ್ಕೆ ಎಣೆ ಎಲ್ಲಿದೆ! ಕಾಲಾತೀತರಾದ ಆ ಗುರುನಾಥರರಿಯದೆ ಇರುವುದೇನು? ಅವರ ಒಂದು ಕೃಪಾ ನೋಟ, ಹೀಗೆ ಬಯಸದೇ ಬಂದ ಭಾಗ್ಯವಾದಂತೆ, ನಮ್ಮ ನಿತ್ಯ ಸತ್ಸಂಗಾಭಿಮಾನಿಗಳಿಗೂ ಗುರುಕೃಪೆ ಒದಗಲಿ... ನಾಳಿನ ಸತ್ಸಂಗಕ್ಕೆ ಬರುವಿರಲ್ಲಾ ಮಿತ್ರರೇ....  

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

Friday, April 28, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 50

 

ಭಲೇ, ಮೆಚ್ಚಿದೆ ನಿಮ್ಮ ತಾಳ್ಮೆಗೆ ! 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಅದೆಷ್ಟು ಹೊತ್ತು ಪ್ರಭುದೇವರು ಅಲ್ಲಿ ಕುಳಿತಿದ್ದರೋ, ಬಹುಶಃ ಅವರ ಮನ ಪ್ರತಿ ಕ್ಷಣವೂ ಗುರುನಾಥರ ಕರುಣೆಗಾಗಿ ತುಡಿಯುತ್ತಿದ್ದಿರಬೇಕು. ಇಷ್ಟರಲ್ಲಿ ಮನೆಯ ಒಳ ಭಾಗಕ್ಕೆ ಅದೆಲ್ಲೆಲ್ಲಿಂದ ಜನರು ಬಂದರೋ... ರಾತ್ರಿಯಾದರೂ ಹೊರಗಿನಿಂದ ಬರುವ ಜನಗಳಿಗೆ ಕಡಿಮೆ ಇಲ್ಲ. ಜೇನುಗೂಡಿಗೆ ಮುತ್ತಿದ ಜೇನು ನೊಣಗಳಂತೆ. ಇಲ್ಲಿ ಸಿಗುವ ಗುರುಕೃಪೆ ಎಂಬ ಸವಿಜೇನು ಸವಿಯುವುದಕ್ಕೆ ಹಗಲು ರಾತ್ರಿಗಳ ಭೇದವೇ ಇಲ್ಲ. ಒಮ್ಮೊಮ್ಮೆ ಗುರುನಾಥರೇ ತಡರಾತ್ರಿ, ಮಧ್ಯರಾತ್ರಿಗಳಲೆಲ್ಲಾ ತಮ್ಮ ಭಕ್ತರನ್ನು ಅರಸಿ ಬಂದು, ತಮ್ಮ ದಿವ್ಯ ವಾಣಿಯ ಸತ್ಸಂಗವೆಂಬ ಮಧುವನ್ನು ಹಂಚಿದ ಘಟನೆಗಳೂ ಇವೆ. 

ಪ್ರಭುದೇವ ಚರಿತ್ರೆಯತ್ತ ಬರೋಣ ಗುರುಬಂಧುಗಳೇ... ಅವರ ಮಾತನ್ನು ಕೇಳೋಣ. 

"ಬಂದವರನ್ನೆಲ್ಲಾ ಗುರುಗಳು ವಿಚಾರಿಸುತ್ತಿದ್ದರು. ಯಾರ್ಯಾರೋ ಏನೇನೋ ತಂದು ಕೊಡುತ್ತಿದ್ದರು. ಒಂದು ಚೂರನ್ನೂ ಅವರು ತೆಗೆದುಕೊಳ್ಳದೇ ತಂದವರ ಕೈಯಲ್ಲೇ ಎಲ್ಲವನ್ನೂ ಎಲ್ಲರಿಗೂ ಹಂಚಿಸಿಬಿಡುತ್ತಿದ್ದರು. ಅದು ಹಣ್ಣು ಹಂಪಲು ಇರಲಿ, ನೋಟುಗಳೇ ಇರಲಿ, ಯಾರ ಉಪಕಾರವೂ, ಋಣದ ಹೊರೆಯೂ ತಮಗೆ ಅಂಟದಂತೆ ಗುರುಗಳು ನಡೆದುಕೊಳ್ಳುತ್ತಿದ್ದ ರೀತಿಯನ್ನು ನೋಡಿದಾಗ ನನಗೆ ಬಹಳ ಸಂತೋಷವಾಯಿತು. ನಿಜವಾದ ಸದ್ಗುರುವಿನ ಬಳಿ ಬಂದಿದ್ದೇನೆ ಎಂಬ ಸತ್ಯ ಅರಿವಾಯಿತು. ಈ ಊರಿಗೆ ಬಂದು ಒಂದು ಸಂಬಂಧ ಕುದುರಿಸಲು ಅಸಫಲನಾದ ನಾನು ಗುರುಸಂಬಂಧವನ್ನು ಗಳಿಸಿಬಿಟ್ಟರೆ ಧನ್ಯನೆಂಬ ಭಾವದಿಂದ ಕುಳಿತೇ ಇದ್ದೆ. ಕಾಯುತ್ತಿದ್ದೆ. ಅದೆಷ್ಟೋ ಜನಗಳು ಬಂದು ಹೋಗುತ್ತಿದ್ದರು. ಎಲ್ಲರಿಗೂ ಊಟ ಹಾಕಿಸುತ್ತಿದ್ದರು. ನನಗೆ ಮತ್ತೊಮ್ಮೆ ಹಾಲನ್ನವನ್ನು ಬಡಿಸಿ ಉಣ್ಣಲು ಹೇಳಿದರು. ಎಲ್ಲ ನನ್ನ ಪ್ರಸಾದವಾಗಿದೆ, ಎಂದಾಗ 'ಇಲ್ಲಾ ತೆಗೆದುಕೊಳ್ಳಿ' ಎಂದು ಒತ್ತಾಯಿಸಿದರು. ಮತ್ತದನ್ನೂ ಸ್ವೀಕರಿಸಿದೆ. ಅಲ್ಲಿಯ ರೀತಿ ನೀತಿಗಳಿಗೆ ನಾನು ಹೊಸಬನಾಗಿದ್ದೆ. ಹೀಗೆ ಒಂದಾದ ಮೇಲೆ ಒಂದು 'ಪ್ರಸಾದ' ಗಳು ಬರುತ್ತಲೇ ಇದ್ದವು. 'ಗುರು ಅನುಗ್ರಹ' ವೆಂಬ ಪ್ರಸಾದ ಸಿಗುವ ಕಾಲವೂ ಸನ್ನಿಹಿತವಾಗಿತ್ತೇನೋ, ಗುರುನಾಥರು ಒಮ್ಮೆ ನನ್ನ ಕಡೆಗೆ ತಿರುಗಿ ಕರುಣಾಪೂರಿತ ನೇತ್ರರಾಗಿ 'ಭಲೇ ಮೆಚ್ಚಿದೆ ನಿಮ್ಮ ತಾಳ್ಮೆಗೆ..... ಇವತ್ತು ನೀವು ನನ್ನ ಪರೀಕ್ಷೆಯಲ್ಲಿ ಪಾಸಾಗಿಬಿಟ್ಟಿರಿ. ಗುರುವಿನ ಬಳಿ ಬಂದು ಗೆದ್ದಿರಿ' ಎಂದರು. ನಾನಾಗ ಎಂತಹ ಆನಂದದ ಅನುಭವದಲ್ಲಿ ಇದ್ದೆನೆಂದರೆ... ಸ್ವರ್ಗವೇ ಸಿಕ್ಕಂತಾಗಿತ್ತು ! ಗುರುಗಳ ಪಾದಕ್ಕೆರಗಿದೆ.... " 

ಪ್ರಭುದೇವರು ಕೆಲ ಕ್ಷಣ ಮೌನಕ್ಕೆ ಶರಣಾದರು. 

ಯಾರ ಹಂಗಿಗೂ ಸಿಗದವರು 

ಹೀಗೆ ಗುರುನಾಥರ ಸಂಬಂಧದ ತಂತು ಸಿಕ್ಕ ಮೇಲೆ ಪ್ರಭುದೇವರ ಜೇವನದ ಗತಿಯೇ ಬದಲಾಯಿತು. ಪ್ರೀತಿಯಿಂದ ಅದೆಷ್ಟೋ ವರ್ಷಗಳ ಸಂಬಂಧ ಇರುವಂತೆ ಗುರುನಾಥರು ತೋರಿಸುತ್ತಿದ್ದ ಪ್ರೀತಿಯನ್ನು ಅವರಿಂದೂ ನೆನೆಸುತ್ತ ಗುರುನಾಥರ ವಿಶಿಷ್ಟ ರೀತಿಯಾದ ಒಂದು ಘಟನೆಯನ್ನು ನಮ್ಮೊಂದಿಗೆ ಹಂಚಿಕೊಂಡರು. 

"ನಂತರ ಗುರುನಾಥರು, ನಾನು ಶಿವಮೊಗ್ಗದವನೆಂದಾಗ... ಅನೇಕರ ಹೆಸರು ಕೇಳಿದರು. ಅವರೆಲ್ಲರ ಪರಿಚಯವಿದೆ ಎಂದೆ. ಶಿವಮೊಗ್ಗದ ಒಬ್ಬ ಅಡಿಕೆ ಮಂಡಿಯ ಭಕ್ತರ ಮನೆಗೆ ಬರುತ್ತಿರುತ್ತೇನೆ ಎಂದಾಗ ಅಲ್ಲಿ ಬಂದು ಅವರ ನಂಬರ್ ತೆಗೆದುಕೊಂಡು ವಿಚಾರಿಸಿದಾಗ ಅವರು 'ಬರುತ್ತಾರಪ್ಪ.... ಯಾವಾಗ ಬರುತ್ತಾರೆ, ಹೇಗೆ ಬರುತ್ತಾರೆ... ಯಾವಾಗ ಇಲ್ಲಿಂದ ಹೊರಡುತ್ತಾರೆ ಎಂಬುದೇ ನಮಗೆ ತಿಳಿಯೋಲ್ಲ' ಅಂದುಬಿಟ್ಟರು. ಅದೊಂದು ದಿನ ಇದ್ದಕ್ಕಿದ್ದಂತೆ ಗುರುನಾಥರನ್ನು ನೋಡಬೇಕೆಂದು ಆ ಭಕ್ತರ ಮನೆಗೆ ಹೋದಾಗ ನನ್ನ ಅದೃಷ್ಟದೇವತೆ ಅಲ್ಲಿ ದರ್ಶನ ನೀಡಿದರು. ನಮ್ಮ ಬಂಧುಗಳನ್ನೆಲ್ಲಾ ಕರೆದೊಯ್ದೆ. ಭಜನೆ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಗುರುನಾಥರು ಅದು ಯಾವಾಗಲೋ ಅಲ್ಲಿಂದ ಮತ್ತೆಲ್ಲಿಗೋ ಹೊರಟು ಹೋಗಿದ್ದರು. ಗುರುನಾಥರನ್ನು ಕಾಣಬೇಕೆಂದನಿಸಿದಾಗ, ನಾನವರ ಬಳಿ ಹೋದಾಗ, ತುಂಬಾ ಪ್ರೀತಿಯಿಂದ ಹರಸಿ ಕಳಿಸುತ್ತಿದ್ದರು". 

"ಒಮ್ಮೆ ಅವರ ಕಾಲಿಗೆ ಏನೋ ತೊಂದರೆಯಾಗಿತ್ತು. ಭವರೋಗ ವೈದ್ಯರಿಗೆ ರೋಗವೇ? ಅದೊಂದು ಅವರ ಲೀಲಾ ನಾಟಕ. ನನಗವರ ಉಪಚಾರ ಸೇವೆ ಮಾಡುವ ಒಂದು ಅವಕಾಶ ನೀಡಿ ನನ್ನಲ್ಲಿ ಧನ್ಯತಾಭಾವ ಬೆಳೆಯಲು ಅವರೇ ರಚಿಸಿದ ಲೀಲೆ ಇರಬೇಕು. ಗುರುನಾಥರು ಲವಲೇಶದ ಹೊರೆಯನ್ನು ತಮ್ಮ ಮೇಲಿಟ್ಟುಕೊಳ್ಳದ ಮಹಾತ್ಮರಾಗಿದ್ದರು. ಅಂದು ಅವರು ತಮ್ಮ ಮಗನನ್ನು ಕರೆಸಿ ಹಣ್ಣು ಹಂಪಲು, ದುಡ್ಡುಗಳನ್ನಿಟ್ಟು 'ವೈದ್ಯರೇ, ನೀವಿದನ್ನು ತೆಗೆದುಕೊಳ್ಳಬೇಕು. ಬೇರೆ ಏನೂ ಹೇಳಬೇಡಿ' ಎಂದು ಕರುಣೆಯಿಂದ ಆಜ್ಞಾಪಿಸಿದಾಗ ನಾನು ಮೂಕವಿಸ್ಮಿತನಾಗಿದ್ದೆ. ಸ್ವೀಕರಿಸಿದೆ ಗುರುಪ್ರಸಾದವೆಂದು. ಏಕೆಂದರೆ ಅವರೇ ಎಲ್ಲೆಡೆಯೂ ಸಾರ್ವಭೌಮರು. ಅವರ ವಾಕ್ಯವೊಂದೇ ಎಲ್ಲೆಡೆ ಜಾರಿಯಾಗುವುದು. ಎಲ್ಲರ ಮೇಲೆ ಗುರುನಾಥರದೊಂದೇ ಪ್ರಭುತ್ವ, ಕರುಣೆ, ಅಪಾರ ಪ್ರೀತಿಯ ಸಾಮ್ರಾಜ್ಯ ನಡೆಯುವುದು, ಹೀಗೆನ್ನುತ್ತಾ ಮತ್ತೆ ಗುರುಕೃಪೆಯ ನೆನಪಾಗಿ ಅವರು ಗದ್ಗದಿತರಾದರು. 

ಪ್ರಿಯ ನಿತ್ಯ ಸತ್ಸಂಗ ಬಳಗದವರೇ, ಮೊದಲು ಕಠೋರವಾಗಿ ಕಂಡ ಗುರುನಾಥರು ತ್ವರಿತವಾಗಿ ಮೇಣದಂತೆ ಮೃದುವಾದುದೇಕೆ? ಬಹುಶಃ ಭಕ್ತರ ನಿಷ್ಕಲ್ಮಶ ಪ್ರೀತಿಯಿಂದಲೇ ಅಲ್ಲವೇ ! ಅಂತಹ ನಿಷ್ಕಲ್ಮಶ  ಪ್ರೀತಿಯನ್ನು ಗುರುವಿಗಾಗಿ ಧಾರೆ ಎರೆಯುತ್ತಾ ನಾವೂ ಆನಂದ ಹೊಂದೋಣ.... 

ನಾಳಿನ ಸತ್ಸಂಗಕ್ಕೆ ಗುರುನಾಥರು ಅದಾವ ಭಕ್ತಿ ಎಂಬ ಹೋಳಿಗೆಯೂಟವನ್ನು ನಮ್ಮ ಜೋಳಿಗೆಗೆ ನೀಡುತ್ತಾರೋ! ನಾಳೆಯೂ ಬನ್ನಿ, ಎಲ್ಲರೂ ಒಟ್ಟಾಗಿ ಆ ಗುರುಕೃಪಾ ಭಿಕ್ಷೆಯನ್ನು ಪಡೆದು ಅನುಭವಿಸೋಣ. ಬರುವಿರಲ್ಲವೇ? 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

Thursday, April 27, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 49

 

ಹೆಣ್ಣಿನ ಸಂಬಂಧವಲ್ಲ ಬೆಳೆದದ್ದು ಗುರುಬಾಂಧವ್ಯ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


'ಗುರುವನ್ನು ಅರಿಯುವುದು ಕಷ್ಟ' ವೆಂಬುದನ್ನು ಪ್ರಾತ್ಯಕ್ಷಿಕವಾಗಿ ಕಂಡ ಭಕ್ತರೊಬ್ಬರು, ಅಂದು ಸಖರಾಯಪಟ್ಟಣಕ್ಕೆ ಸಂಜೆ ಏಳರ ಸಮಯಕ್ಕೆ ಗುರುನಾಥರ ದರ್ಶನಾಕಾಂಕ್ಷಿಯಾಗಿ, ಅವರ ಮನೆಯ ಒಳಗೆ ಅಡಿ ಇಟ್ಟಿದ್ದರು. ಬರುವ ಮೊದಲೇ ಪಕ್ಕದ ಅಂಗಡಿಯಲ್ಲಿ ಗುರುನಾಥರು ಊರಲ್ಲಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಸನಿಹದ ಅಂಗಡಿಯಲ್ಲಿ ಪಡೆದಿದ್ದರು. ಮನೆಯೊಳಗೆ ಕಾಲಿಟ್ಟಾಗ ಒಬ್ಬ ವ್ಯಕ್ತಿ ಬಂದು 'ಯಾರು ಬೇಕು' ಎಂದು ಪ್ರಶ್ನಿಸಿದಾಗ, ಈತ 'ಅದೇ ವೆಂಕಟಾಚಲಯ್ಯ ಸ್ವಾಮಿಗಳು ಬೇಕು. ಅವರನ್ನು ನೋಡಲು ಬಂದಿದ್ದೇನೆ' ಎಂದರು. ಆದರೆ ಎದುರಿಗಿದ್ದ ವ್ಯಕ್ತಿ 'ಇಲ್ಲಿ ಅಂತಹವರು ಯಾರೂ ಇಲ್ಲ' ಎಂದಾಗ ಮತ್ತೆ ಅನುಮಾನಗೊಂಡ ಇವರು ನಿಂತೇ ಇದ್ದರು. 'ಹೇಳಿದೆನಲ್ಲಾ ಮತ್ಯಾಕೆ ನಿಂತಿದ್ದೀರಿ.. ಇಲ್ಲಿ ವೆಂಕಟಾಚಲನೆಂಬೋರು ಯಾರೂ ಇಲ್ಲ.. ಯಾವ ಸ್ವಾಮಿಗಳೂ ಇಲ್ಲಿಲ್ಲ... ಹೊರಡಿ ಹೊರಡಿ' ಎಂದು ಕಠೋರವಾದ ನುಡಿ ಕೇಳಿ ಬಂದಾಗ... ಮಾಡುವುದಿನ್ನೇನು? ಅವರು ಅನುಮಾನ ಪಡುತ್ತಲೇ ಹೊರಟು... ಮತ್ತೆ ಬಂದದ್ದು ಅಂಗಡಿಗೆ. 'ಏನು ಸ್ವಾಮಿ ವೆಂಕಟಾಚಲ ಗುರುಗಳು ಹೇಗಿದ್ದಾರೆ... ನಾನವರನ್ನು ಇದುವರೆವಿಗೂ ನೋಡಿಲ್ಲ' ಎಂದಾಗ ಆತ 'ಗಡ್ಡ ಬಿಟ್ಟಿದ್ದಾರೆ. ಒಂದು ಪಂಚೆ ಉಟ್ಟಿದ್ದಾರೆ.... ಬಹಳ ಸರಳರು' ಎಂದುಬಿಟ್ಟ. 

ಓಹೋ ನಾನು ನೋಡಿರುವುದು ಗುರುನಾಥರನ್ನೇ. ಮೌಖಿಕವಾಗಿಯೂ ಮಾತನಾಡಿದರೂ.... ನನ್ನ ಗ್ರಹಚಾರ ಕಳೆದಿಲ್ಲವೇನೋ... ಸದ್ಗುರುವಿನ ದರ್ಶನವಾಯಿತು, ಆದರೆ ಕೃಪೆಯಾಗಿಲ್ಲ.. ಬಿಡಬಾರದು ಹಿಡಿದುಕೊಳ್ಳಬೇಕು.. ಎಷ್ಟೇ ನಿಷ್ಟೂರವಾಗಿ ಅವರು ನುಡಿದರೂ ಗುರುಪಾದ ಸಿಗಲೇಬೇಕೆಂದು ಅವರು ಮನದಲ್ಲೇ ನಿರ್ಧರಿಸಿ, ಅಂಗಡಿಯವನೊಂದಿಗೆ 'ಮತ್ತೇಕೆ ಅವರು ಇದ್ದೂ ಇಲ್ಲವೆಂದರು?' ಎಂದು ಕೇಳಿದಾಗ 'ನಿಮ್ಮ ಅದೃಷ್ಟ ಅದು ಇಷ್ಟೇ ಇತ್ತು, ಎಂದು ಕಾಣುತ್ತದೆ' ಎಂದುಬಿಟ್ಟರು ಅಂಗಡಿಯವರು. 

ಶಿವಮೊಗ್ಗದ ಡಾ.ಪ್ರಭುದೇವ ಅವರು ಗುರುನಾಥರ ಹೆಸರನ್ನು ಕೇಳಿದ್ದರು. ಅವರ ಮಹಿಮೆಯ ಅಲೌಕಿಕ ವಿಚಾರಗಳ ಪ್ರಭಾವ ಅವರ ಮೇಲಾಗಿತ್ತು. ಒಮ್ಮೆ ಒಂದು ಹೆಣ್ಣು ನೋಡಲು ಸಖರಾಯಪಟ್ಟಣಕ್ಕೆ ಹೋದಾಗ ಹೆಣ್ಣಿನ ಕಡೆಯವರನ್ನು ವಿಚಾರಿಸಿದಾಗ 'ವೆಂಕಟಾಚಲಯ್ಯ ಗುರುಗಳು ಈ ಊರಲ್ಲಿದ್ದಾರೆ... ಆದರೆ ಈ ಊರಿನವರಿಗಿಂತ ಬೇರೆ ಕಡೆಯಿಂದ ಜನ ಬರುತ್ತಾರೆ.. ನಾವು ಹೋಗುವುದು ಕಡಿಮೆ' ಎಂದಿದ್ದರು. ಮುಂದೆ ಆ ಸಂಬಂಧ ಆಗಿಬರಲಿಲ್ಲ. ಗುರುನಾಥರನ್ನು ಕಾಣುವ ಹಂಬಲ ಮಾತ್ರಾ ಮಹತ್ತಾಗಿ ಗುರು ಸಂಬಂಧವನ್ನು ಬೆಳೆಸಿಕೊಳ್ಳಬೇಕೆಂಬ ಅದಮ್ಯವಾದ ಬಯಕೆಯಂತೂ ಪ್ರಭು ದೇವರ ಮನದಲ್ಲಿ ಆಳವಾಗಿ ಬೇರೂರಿತ್ತು. 

ಮರಳಿ ಯತ್ನವ ಮಾಡು 


ಒಂದು ಸಾರಿ ಫೇಲಾದವೆಂದು ಓದುವುದನ್ನೇ ಬಿಟ್ಟರೆ, ನಮಗೆ ಹಾನಿಯೇ ಹೊರತು, ವಿದ್ಯೆಗೇನಾಗದು. ತಪ್ಪಾದನ್ನು ತಿದ್ದಿಕೊಂಡು, ಕೊಂಚ ಪ್ರಯತ್ನ ಮಾಡಿದಾಗ ಒಳ್ಳೆಯ ಫಲ ಸಿಕ್ಕೇ ಸಿಗುತ್ತದೆ. ನಮ್ಮ ಪ್ರಭುದೇವರು ಗುರುವಿನ ಪರೀಕ್ಷೆಯಲ್ಲಿ ಪಾಸಾದ ರೀತಿಯನ್ನು... ಬನ್ನಿ ಗುರುಬಾಂಧವರೇ ಅವರ ಬಾಯಿಂದಲೇ ಕೇಳೋಣ. 

'ರಾತ್ರಿ 7:30 ರ ಸಮಯ. ಮತ್ತೆ ನಾನು ಅದ್ಯಾವುದೋ ಪ್ರಬಲ ಇಚ್ಛೆಯಿಂದ ಗುರುನಾಥರ ಮನೆಯೊಳಗೆ ಕಾಲಿಟ್ಟೆ. ಮತ್ತೆ ಎರಡನೆಯ ಬಾರಿ ದರ್ಶನವಾಯಿತು. ಗುರುನಾಥರು ಹೇಳಿದೆನಲ್ಲಾ ಮತ್ಯಾಕೆ ಬಂದಿರಿ... ನಡೀರಿ' ಎಂದರು. 'ಇಲ್ಲಾ ಸ್ವಾಮಿ ನಿಮ್ಮನ್ನೇ ನೋಡಬೇಕೆಂದು ಬಂದಿದ್ದೀನಿ' ಎಂದು ಭಕ್ತಿಯಿಂದ, ಧೈರ್ಯದಿಂದ ಹೇಳಿದೆ. 'ಅಲ್ಲಿ ಕುಳಿತುಕೊಳ್ಳಿ' ಎಂದು ಹೇಳಿ ಅದ್ಯಾರಿಗೋ 'ಒಂದು ಲೋಟ ಬಿಸಿ ಹಾಲನ್ನು ಇವರಿಗೆ ತಂದು ಕೊಡಿ' ಎಂದು ಹೇಳಿ ಒಳ ನಡೆದರು. ಬಹುಶಃ ರಾತ್ರಿಯ ಎಂಟು ಗಂಟೆಯಾಗಿತ್ತು. ಊಟದ ಸಮಯವೇನೋ ಕೈಯಲ್ಲಿ ಹಾಲು ಹಿಡಿದು ಕುಳಿತ ನಾನು ಗುರುವಿನ ಕೃಪೆಯಾಗದ ಹೊರತು ಕುಡಿಯಬಾರದೆಂದು ಕೈಯಲ್ಲಿ ಲೋಟ ಹಾಗೆಯೇ ಹಿಡಿದು ಸ್ವಲ್ಪ ಹೊತ್ತು ಕುಳಿತಿದ್ದೆ. ಒಳಗಿನಿಂದ ಬಂದ ಒಬ್ಬರು 'ನೀವು ಹಾಲು ಕುಡಿಯಬೇಕು. ಅವರು ಹೇಳಿದ ಮೇಲೆ ಮುಗಿಯಿತು.... ನೀವು ಹಾಲು ಕುಡಿಯಿರಿ' , ಎಂದು ಒತ್ತಾಯಿಸಿದರು. ಗುರುವೆಂದು ನಂಬಿ ಬಂದ ಮೇಲೆ ಗುರುವಾಕ್ಯವನ್ನು ಶಿರಸಾವಹಿಸುವುದು ನನ್ನ ಮೊದಲ ಕರ್ತವ್ಯವೆಂದು ಭಾವಿಸಿದ ನಾನು ಹಾಲನ್ನು ಭಕ್ತಿಯಿಂದ ಕುಡಿದೆ. ಅಲ್ಲಿ ಒಳಗೆ ಕುಳಿತೇ ಇಲ್ಲಿ ಏನು ನಡೆದಿದೆ ಎಂದು ಬಲ್ಲವರಾಗಿ, ಅದಕ್ಕೆ ತಕ್ಕ ಆಣತಿಯನ್ನು ಗುರುನಾಥರು ಮಾಡಿದ್ದರು. ಮೊದಲು ಕಂಡಾಗ ಗುರುನಾಥರು ಆಡಿದ ಮಾತಿಗೂ ಈಗ್ಗೂ ಸಾಕಷ್ಟು ವ್ಯತ್ಯಾಸವಿತ್ತು. ಗುರುಕರುಣೆ ನನಗೆ ಅಮೃತವನ್ನೇ ನೀಡಿದ್ದರು. ಊರಿಗೆ ವಾಪಸ್ಸು ಹೋಗದೇ, ಮತ್ತೆ ನಾನು ಇಲ್ಲಿಗೆ ಬಂದದ್ದು, ಆ ದಿನ ಶಿವಮೊಗ್ಗದಿಂದ ನಾನು ತುಮಕೂರಿಗೆ ಹೋಗಬೇಕಾದವನು ಬಹುಶಃ ನಾನು ಬಂದದ್ದಲ್ಲ, ಅವರೇ ನನ್ನನ್ನು ಇಲ್ಲಿಗೆ ಕರೆಸಿದ್ದೇ ಇವರು ಇರಬೇಕು' ಎನ್ನುತ್ತಾರೆ ಅವರು. 

ಪ್ರಿಯ ಗುರುಬಂಧುಗಳೇ..... ಇಂದಿನ ಸತ್ಸಂಗದಲ್ಲಿ ಗುರುಪರೀಕ್ಷೆಯ ಸೊಗಸಾದ ಘಟನೆಯ ಆಸ್ವಾದ ನಮಗಾಗಿದೆ. ಮುಂದೆ ಗುರುನಾಥರು ಏನು ಮಾಡಿದರು? ಅವರ ಮತ್ಯಾವ ಮುಖ ಅನಾವರಣಗೊಂಡಿತು? ಪರೀಕ್ಷೆಯ ಫಲಿತಾಂಶವೇನು ಬಂತು, ಎಂಬುದನ್ನು ಅರಿಯಲು ನಾಳಿನ ನಿತ್ಯ ಸತ್ಸಂಗಕ್ಕೆ ಬರುವಿರಲ್ಲಾ..... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

Wednesday, April 26, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 48

 

ಕರೆದದ್ದು ಶ್ರೀಕಾಂತರು ದರ್ಶನವಿತ್ತದ್ದು ಗುರುನಾಥರು 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।

ನನಗೇನು ಗುರುತತ್ವದ, ಗುರುಮಹಿಮೆಯ ಗಂಧ ಗಾಳಿ ಇರಲಿಲ್ಲ. ಗುರುನಾಥರನ್ನಂತೂ ಕಂಡೇ ಇರಲಿಲ್ಲ. ಆದರೆ ಭಜನಾ ಮಂಡಳಿಗಳಲ್ಲಿ ಅನನ್ಯವಾಗಿ ಹಾಡುವುದು ನನಗೆ ಪ್ರಿಯವಾದ ಕಾರ್ಯವಾಗಿತ್ತು. ಅದು ನನಗೇನು ಶಾಂತಿಯನ್ನು ಕೊಡುತ್ತಿತ್ತೋ, ನನಗಂತೂ ತಿಳಿದಿರಲಿಲ್ಲ. ನನಗರಿವಿಲ್ಲದೆ ಅದೆಷ್ಟು ಗುರುಗಳ ದೇವರ ನಾಮ ನನ್ನ ಬಾಯಿಂದ ಬರುತ್ತಿತ್ತೋ ಒಮ್ಮೆ ಒಂದು ದಿನ ಕನಸಿನಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಬಾಲಕರಂತಿರುವ, ಶ್ರೀಪಾದ ಶ್ರೀವಲ್ಲಭರಂತಹ ಗುರುವರ್ಯರೊಬ್ಬರು ಕನಸಿನಲ್ಲಿ ಬಂದು, 'ನಾನೀಗ ಹೊಸದುರ್ಗದಲ್ಲಿದ್ದೇನೆ. ಬಂದು ನನ್ನನ್ನು ಕಾಣು' ಎಂದು ಹೇಳಿದಂತಾಯ್ಹಿತು. ನಮ್ಮ ಗುಂಪಿನ ಸತೀಶ ಗುರೂಜಿಯವರನ್ನು ಈ ವಿಚಾರವಾಗಿ ಕೇಳಿದೆ. ಈ ಹೊಸದುರ್ಗದ ಯತಿವರ್ಯರು ಯಾರು? ಅವರೇಕೆ ನನಗೆ ಆಶೀರ್ವದಿಸುತ್ತಿದ್ದಾರೆ. ಅವರನ್ನು ನೋಡುವುದು ಹೇಗೆ? ಎಂದವರನ್ನು ಕೇಳಿದಾಗ ಅವರು 'ಕೃಷ್ಣಯೋಗಿಂದ್ರ ಸರಸ್ವತಿಗಳ ಆರಾಧನೆಗೆ ನಾವೆಲ್ಲಾ ಬಾಣಾವರಕ್ಕೆ ಹೋಗುತ್ತಿದ್ದೇವೆ. ಹಾಗೆ ಸಖರಾಯಪಟ್ಟಣಕ್ಕೆ ಹೋಗಿ ಅಲ್ಲೊಬ್ಬ ಅವಧೂತರಿದ್ದಾರೆ. ಅವರನ್ನು ಕಂಡು ನಂತರ ಹೊಸದುರ್ಗಕ್ಕೆ ಹೋಗೋಣ' ಎಂದರು. ನಾನು ಅವರಿಂದ ಪ್ರೇರಿತನಾಗಿ ಹೊರಟೆ. ನನಗೆ ಕನಸಿನಲ್ಲಿ ಕಂಡದ್ದು - ಶ್ರೀಕಾಂತ ಗುರೂಜಿ. ಆದರೆ ನನಗೆ ದರ್ಶನ ಕೊಟ್ಟವರು ಸಖರಾಯಪಟ್ಟಣದ ಅವಧೂತರು. ಕೇಳದೇ, ಪ್ರಯತ್ನಪಡದೇ ಗುರುನಾಥರ ದರ್ಶನವಾದ ಕಥೆಯನ್ನು ಬೆಂಗಳೂರಿನ ಒಬ್ಬ ಭಜನಾ ಪಟು, ಗುರುಭಕ್ತರಾದ ಶ್ರೀ ನಂಜುಂಡ ಅವರು ನಮ್ಮ ನಿತ್ಯ ಸತ್ಸಂಗಕ್ಕಾಗಿ ಹಂಚಿಕೊಂಡರು. 

ಕನಕನಾಗಿ ತಿರುಗಿ ನಿಂತ ಕೃಷ್ಣ ಪ್ರಭು 

ಕೃಷ್ಣಯೋಗಿಂದ್ರ ಸರಸ್ವತಿಗಳ ಆರಾಧನೆ ಮುಗಿಸಿ ಇವರ ಗುಂಪು ಸಖರಾಯಪಟ್ಟಣಕ್ಕೆ ಬಂದಾಗ,. ಗುರುನಾಥರ ಮನೆ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಕೊನೆಗೆ ಹೋದ ಇವರಿಗೆ, ಬಾಗಿಲಿನ ತುದಿಯಲ್ಲಿ ಕೊನೆಯ ಸಾಲಿನಲ್ಲಿ ಸ್ಥಳ ಸಿಕ್ಕಿತು. ಅಲ್ಲಿಯವರೆಗೆ ಗುರುನಾಥರನ್ನು ಕಂಡಿರದ ನಾನು ಅವಧೂತರ ಆಗಮನಕ್ಕಾಗಿ ಕಾಯುತ್ತಿದ್ದೆ. ಹೊರಗಿನಿಂದ ಬಂದ ಅವಧೂತರು, ಮನೆಯ ಒಳಗೆ ಕಾಲಿಡುತ್ತಿದ್ದಂತೆ, ಒಂದು ಕುರ್ಚಿಯನ್ನು ತರಿಸಿಕೊಂಡು ಬಾಗಿಲಿನಲ್ಲಿಯೇ ಕುಳಿತುಬಿಟ್ಟರು. 'ಎಲ್ಲರೂ ಇತ್ತ ಕಡೆ ತಿರುಗಿ ಕುಳಿತುಕೊಳ್ಳಿರಿ' ಎಂದರು. ಕೊನೆಯ ಸಾಲಿನಲ್ಲಿದ್ದು, ಗುರುನಾಥರನ್ನು ದೂರದಿಂದ ಕಾಣಬೇಕಲ್ಲ ಎಂದು ಚಿಂತಿಸುತ್ತಿದ್ದ ಇವರು ಮೊದಲ ಸಾಲಿಗೆ ಬಂದುಬಿಟ್ಟಿದ್ದರು. ಗುರುವಿನ ಅತಿ ಹತ್ತಿರದಲ್ಲಿ ಕುಳಿತು ಅವರ ಪ್ರೇಮಮಯ ದೃಷ್ಟಿಯನ್ನು ಆಸ್ವಾದಿಸುವ ಕರುಣೆಯು ನಂಜುಂಡ ಅವರಿಗೆ ಸಿಕ್ಕಿತು. 

ಅಲ್ಲಿ ಉಡುಪಿಯಲ್ಲಿ ಕನಕನ ಮೊರೆಗೆ ಕೃಷ್ಣನೇ ಕನಕನ ಕಡೆಗೆ ಮುಖ ಮಾಡಿ ತಿರುಗಿ ನಿಂತುಬಿಟ್ಟ. ಇಲ್ಲಿ ಗುರುನಾಥರು ಭಕ್ತನ ಮಾನಸಿಕ ಬೇಡಿಕೆಯನ್ನು ಈ ರೀತಿ ತೀರಿಸಿರಬೇಕೇನೋ ಅನ್ನಿಸದಿರದು. 

'ಸದ್ಗುರು ಚರಣ ಆತ್ಮಾರಾಮ' ಎಂಬ ಭಜನೆ ಇದ್ದಕ್ಕಿದ್ದಂತೆ ನಂಜುಂಡ ಅವರಿಂದ ಹೊರಬಂದಿತು. ಹಾಡನ್ನು ಕೇಳಿದ ಗುರುನಾಥರು ತಮ್ಮ ಮತ್ತೊಬ್ಬ ಭಕ್ತರಿಂದ 'ತೀರ್ಥಯಾತ್ರೆಗೆ ಫಲ ಒಂದು' ಎಂಬ ಹಾಡನ್ನು ಹಾಡಿಸಿದರು. 

ಹೀಗೆ ಹಾಡುಗಳ ವಿನಿಮಯವಾದಾಗ, ಬಾಕಿಯೆಲ್ಲಾ ಭಕ್ತರನ್ನು ಕಳಿಸಿ ಇವರ ಗುಂಪನ್ನು ಮಾತ್ರಾ ಅಲ್ಲೇ ಕೂರಿಸಿಕೊಂಡು ಇಪ್ಪತ್ತು ನಿಮಿಷಗಳವರೆಗೆ ಗುರುತತ್ವದ ಬಗ್ಗೆ ಮಾತನಾಡಿದರಂತೆ. ಗುರುವನ್ನು ನೋಡಲು ನಾವು ಬಂದಿದ್ದೇವೆ ಎಂಬುದನ್ನರಿತ ಅವರು 'ಗುರುವನ್ನು ನೋಡುವುದು ಅಂದ್ರೆ ಏನು? ದೇಹವನ್ನು ನೋಡುವುದು ಗುರುದರ್ಶನವಲ್ಲ. ಗುರುವಿನ ಶಕ್ತಿ, ಭಾವನೆಯನ್ನು ಕಾಣುವ ಪ್ರಯತ್ನ ಮಾಡಬೇಕು' ಎಂದು ಗುರುದರ್ಶನದ ಸೂಕ್ಷ್ಮತೆಯನ್ನು ಗುರುನಾಥರು ಅತ್ಯಂತ ಸರಳವಾಗಿ ತಿಳಿಸಿದರು. 

ಯಾವ ಗುರುವಾಗಲೀ ಅವರೊಳಗಿರುವ ತತ್ವಶಕ್ತಿ ಎಲ್ಲವೂ ಒಂದೇ, ಆದರೆ ಆಕಾರದಲ್ಲಿ ವಿಭಿನ್ನವಾಗಿ, ವಿಭಿನ್ನ ರೂಪದಲ್ಲಿ ದರ್ಶನವಾಗುತ್ತದೆ. 

ನಂತರ ನಂಜುಂಡ ಅವರು ಹೊಸದುರ್ಗಕ್ಕೆ ಹೋದಾಗ ಅದೇ ಬಾಲರೂಪದ ಸದ್ಗುರು ಶ್ರೀ ಶ್ರೀಕಾಂತಾನಂದರ ದರ್ಶನವಾಯಿತು. "ಅದೇ ಮೊದಲ ಬಾರಿಗೆ ನಾನವರನ್ನು ಕಂಡಿದ್ದಾದರೂ 'ನಂಜುಂಡನಿಗೇಕೋ ನನ್ನ ಮೇಲೆ ಇವತ್ತು ಭಕ್ತಿ, ಪ್ರೀತಿಗಳು ಬಂದುಬಿಟ್ಟಿದೆಯಪ್ಪಾ... ಬಾ' ಎಂದು ಶ್ರೀಕಾಂತಾನಂದ ಗುರೂಜಿಯವರು ಪ್ರೀತಿಯಿಂದ ಸ್ವಾಗತಿಸಿದರು". 

ಹೀಗೆ ಶ್ರೀಕಾಂತ ಗುರೂಜಿಗಳನ್ನು ನೋಡಲು ಹೊರಟವರಿಗೆ ಗುರುನಾಥರ ದರ್ಶನವಾದದ್ದಾಗಲೀ, ಕೋಮಾರನಹಳ್ಳಿಯ ಶಂಕರಲಿಂಗನ ಭಕ್ತೆ ಪಾರ್ವತಮ್ಮನವರಿಗೆ ಗುರುನಾಥರು ತಾನೇ ಶಂಕರಲಿಂಗನೆಂದು ತೋರಿಸಿದ್ದು, ಮತ್ತೆ ಕೆಲವೆಡೆ ಕೃಷ್ಣಯೋಗಿಂದ್ರ ಸರಸ್ವತಿಗಳು ತಾವೇ ಎಂದು ಗುರುನಾಥರು ತೋರಿಸಿರುವ ವಿಚಾರಗಳು ನಿಮಗೆಲ್ಲಾ ತಿಳಿದದ್ದೇ ಆಗಿದೆ. 

ಗುರುನಾಥರ ಲೀಲೆಗಳು ಅನನ್ಯ, ಅನಂತ. ಅರಿಯಲು ಅಸಾಧ್ಯವಾದುದು. 

ಗುರುವೆಂದರೆ ಒಬ್ಬನೇ. ಹಲವು ರೂಪಗಳಲ್ಲಿ ಅಲ್ಲಲ್ಲಿ ಕಂಡುಬರುವ ಗುರುವನ್ನು ಅರಿಯಲೂ ಆ ಗುರುನಾಥರ ಕರುಣೆ ಬೇಕೇ ಬೇಕಲ್ಲ. 

ಗುರುಬಾಂಧವರೇ, ಗುರುನಾಥರ ಲೀಲೆಗಳ ನಿತ್ಯ ಸತ್ಸಂಗ ನಾಳೆಯೂ ಸಾಗಲಿದೆ. ಎಂದಿನಂತೆ ಬರುವಿರಲ್ಲಾ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in