ಒಟ್ಟು ನೋಟಗಳು

Monday, November 7, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 34


ಗುರು ಕರುಣಾಳು 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ಆ ವ್ಯಕ್ತಿ ರಾಷ್ಟ್ರೀಯ ಪಕ್ಷ ಒಂದರಲ್ಲಿ ಪ್ರತಿನಿಧಿಯಾಗಿದ್ದು, ರಾಜ್ಯ ಸರ್ಕಾರದ ಹಲವು ಖಾತೆಗಳನ್ನು ನಿಭಾಯಿಸಿದ ಅನುಭವಿ. ಹಾಗೂ ಇದೀಗ ಸಂಸದರಾಗಿರುವರು. ಅದಕ್ಕೂ ಮುನ್ನ ನಡೆದ ಒಂದು ಚುನಾವಣೆಯಲ್ಲಿ ತನ್ನೆಲ್ಲ ಆಸ್ತಿಯನ್ನು ಅಡವಿಟ್ಟು ಚುನಾವಣೆ ಸ್ಪರ್ಧಿಸಿದ್ದ ಆತ ದಯನೀಯ ಸೋಲುಂಡು ಹತಾಶರಾಗಿ ಸಾಯಲು ತೀರ್ಮಾನಿಸಿದರು. ಅದಕ್ಕೂ ಮುನ್ನ ಗುರುನಾಥರ ದರ್ಶನ ಪಡೆಯಲೋಸುಗ ಬಂದರು. 

ಗುರುನಾಥರು "ಆ ವ್ಯಕ್ತಿ ಹೊರ ಹೋದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ದಿಟ" ಎಂದು ಮನಗಂಡು ಆತನನ್ನು ಎಂಟು ಹತ್ತು ದಿನಗಳ ಕಾಲ ತನ್ನ ಮನೆಯಲ್ಲಿಯೇ ಊಟೋಪಚಾರ ಮತ್ತು ಆಶ್ರಯ ನೀಡಿ ಆತ್ಮವಿಶ್ವಾಸ ತುಂಬಿ ಕಳಿಸಿದರು. ಇಂದು ಅದೇ ವ್ಯಕ್ತಿ ಸಂಸದರಾಗಿ ಆಯ್ಕೆಯಾಗಿರುವರು. 

ಹಾಗೆಯೇ ಚುನಾವಣಾ ಪೂರ್ವದಲ್ಲಿ ಹಲವಾರು ಪಕ್ಷಗಳ ಅಭ್ಯರ್ಥಿಗಳು ಆಶೀರ್ವಾದ ಬೇಡಿ ಬರುತ್ತಿದ್ದುದು ಸಾಮಾನ್ಯವಾಗಿತ್ತು. ಒಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೋರ್ವರು ಎರಡು ಬಾರಿ ಸತತವಾಗಿ ಚುನಾವಣೆಯಲ್ಲಿ ಸೋತು ಹತಾಶರಾಗಿದ್ದು ಕೊನೆಯ ಪ್ರಯತ್ನವಾಗಿ ಗುರುಕೃಪೆ ಬೇಕೆಂದು ಪ್ರಾರ್ಥಿಸಿದರು. ಅವರಿಗೆ ಸಿಹಿ ತಿನ್ನಿಸಿ ಒಂದು ಪೆನ್ ನೀಡಿದ ಗುರುನಾಥರು "ಈ ಬಾರಿ ನೀನೇ ಆಯ್ಕೆಯಾಗುವೆ. ಮುಂದೆ ಸಚಿವ ಆಗುವೆ. ಭವಿಷ್ಯದಲ್ಲಿ ಮುಖ್ಯಮಂತ್ರಿಯೂ ಆಗುವೆ" ಎಂದು ಆಶೀರ್ವದಿಸಿದರು. 

ಗುರುವಾಕ್ಯ ಪ್ರಮಾಣ ಎಂದಂತೆಯೇ ಆತ ಆಯ್ಕೆಯಾದರು. ಮಾತ್ರವಲ್ಲ ಸಚಿವರೂ ಆದರು. ಇದೀಗ ಸತತವಾಗಿ ಎರಡನೇ ಬಾರಿ ಆಯ್ಕೆಯಾಗಿ ಶಾಸಕರಾಗಿರುವರು. 

ಆಯ್ಕೆಯಾದ ನಂತರ ಗುರುದರ್ಶನಕ್ಕಾಗಿ ಬಂದಿದ್ದ ಅವರಿಗೆ ಗುರುವಿನ ಸಂದೇಶ ಹೀಗಿತ್ತು: "ನೋಡಯ್ಯಾ ಅಧಿಕಾರ ಮೈಮರೆಸದಂತೆ ಎಚ್ಚರ ವಹಿಸು. ಹಣ ಮಾಡಬೇಕೆಂದು ಇದ್ರೆ ಮಾಡು. ಆದರೆ ದುರಾಸೆ ಬೇಡ. 'ಮರೆಯಬೇಡ, ಮುರಿಯಬೇಡ, ಮೆರೆಯಬೇಡ' ಎಂಬ ಮೂರು ನಿಯಮ ಪಾಲಿಸಪ್ಪಾ ಸಾಕು" ಎಂದರು. 

ಇಂದು ಆ ವ್ಯಕ್ತಿ ಗುರುಕೃಪೆಯಿಂದ ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಿರುವರು. ಮಾತ್ರವಲ್ಲ ಒಂದು ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿರುವರು. ಇಂದು ಉನ್ನತ ಸ್ಥಾನದಲ್ಲಿದ್ದರೂ ಆ ವ್ಯಕ್ತಿಯ ಗುರು ಭಕ್ತಿ ಕಿಂಚಿತ್ತೂ ಬದಲಾಗಿಲ್ಲ. ಆದರೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಆ ವ್ಯಕ್ತಿ ವಿಪರೀತ ಹಣದಾಸೆಯಿಂದ ಅದನ್ನೇ ದಂಧೆ ಮಾಡಿಕೊಳ್ಳ ಹೊರಟಿದ್ದ ಅವರಿಗೆ ಗುರುನಾಥರು ನಂತರದಲ್ಲಿ ಅಷ್ಟಾಗಿ ದರ್ಶನ ನೀಡಲಿಲ್ಲ. ಒಮ್ಮೆ ಮಾತ್ರ "ಆಸೆ ಅತಿಯಾಯಿತು. ಸರಿಮಾಡ್ಕೋ" ಎಂದು ಗದರಿಸಿದ್ದರು. 

ಹಾಗೆಯೇ ಉತ್ತರ ಕರ್ನಾಟಕ ಭಾಗದ ಶಾಸಕರೋರ್ವರಿಗೆ ಗುರುನಾಥರು "ಸಚಿವರಾಗುವಿರಿ" ಎಂದಿದ್ದರು. ಹಾಗೆಯೇ ಆಯಿತು. ಆತ ಸಚಿವರಾಗಿದ್ದರೂ, ಗುರು ದರ್ಶನಕ್ಕೆ ಬಂದಾಗಲೆಲ್ಲ ಸ್ವತಃ ಕಾಫಿ ಮಾಡಿಕೊಟ್ಟು ಅಲ್ಲಿದ್ದವರು ಕುಡಿದ ಲೋಟಗಳನ್ನು ತೊಳೆದಿಟ್ಟು ಹೋಗುತ್ತಿದ್ದರು. ಶಿಕ್ಷಣ ಸಚಿವರಾಗಿದ್ದ ಅವರು ಇಂದಿಗೂ ಗುರು ಕೃಪೆಯಿಂದ ಸಜ್ಜನ ರಾಜಕಾರಿಣಿ ಎನಿಸಿರುವರು. 

ಒಮ್ಮೆ ಓರ್ವ ಮಂತ್ರಿಯ ಮನೆಗೆ ವಿಶ್ವ ವಿಖ್ಯಾತ ಮಠದ ಸನ್ಯಾಸಿಯೋರ್ವರು ಬರುವವರಿದ್ದರು. ದರ್ಶನಕ್ಕೆ ಅಲ್ಲಿಗೆ ತೆರಳಿದ ಗುರುನಾಥರು ಅಲ್ಲಿದ್ದವರಿಗೆಲ್ಲ ಊಟ, ಹಣ್ಣು ಹಂಚುತ್ತಿದ್ದರು. ಆಗ ಸಚಿವೆಯಾಗಿದ್ದ ಓರ್ವ ಮಹಿಳೆ ಸೀದಾ ಬಂದು, "ಯಾರು ನೀವು? ಇಲ್ಲೆಲ್ಲಾ ಹಂಚಬೇಡಿ" ಎಂದು ಗದರಿಸಿದರು. 

ಆಗ ಅಲ್ಲೇ ಇದ್ದ ಗುರುನಾಥರು "ಏನಮ್ಮಾ ಚುನಾವಣೆಗೂ ಮುನ್ನ ಭೇಟಿಯಾದಾಗ ನಿನ್ನ ನಡವಳಿಕೆ ಹೇಗಿತ್ತು? ಈಗ ಸಚಿವೆಯಾದ ಮೇಲೆ ಹೇಗಿದ್ದೀಯಾ? ನಿನ್ನ ಹೆಸರೇನು ಹೇಳು? ಮುಂದಿನ ಚುನಾವಣೆಯಲ್ಲಿ ಅದೇ ಆಗ್ತೀಯಾ" ಎಂದರು. 

"ಗುರು ಮುನಿದರೆ ಹರನು ಕಾಯಲಾರ". ಆಕೆ ಮತ್ತೆ ಆಯ್ಕೆ ಆಗಲಿಲ್ಲ. ಹಾಗೂ ಇಂದಿಗೂ ರಾಜಕೀಯ ಸ್ಥಾನಮಾನಕ್ಕಾಗಿ ವ್ಯರ್ಥ ಪ್ರಯತ್ನ ಮಾಡುತ್ತಿರುವರು. ಗುರುನಾಥರು ಆಗಾಗ್ಗೆ ಹೇಳುತ್ತಿದ್ದ ಒಂದು ಮಾತು ಸದಾ ನೆನಪಾಗುತ್ತಿರುವುದು. ಅದೇನೆಂದರೆ: "ಈಶ ವರ ಅಂದ್ರೆ ಬೇಡಿದ್ದನ್ನು ಕೊಡುವವನು. ಅವನನ್ನು ನಂಬು. ಅವನಿಗೆ ನೀರು ಹಾಕು ನಿರಂತರವಾಗಿ. ಎಲ್ಲವೂ ಅವನೇ ನೋಡುವನು"....... ,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 



।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Sunday, November 6, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 33


ಕಟುಕರ ಪರಿವರ್ತನೆ  




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ಈ ಘಟನೆ ಚರಣದಾಸನಾದ ನಾನು ಗುರುನಿವಾಸಕ್ಕೆ ಬಂದ ಆರಂಭದಲ್ಲಿ ನಡೆದ ಘಟನೆ. ಆ ವ್ಯಕ್ತಿ ಜನರ ಗುಂಪಿನ ಮಧ್ಯದಲ್ಲಿ ಕುಳಿತಿದ್ದನು. ಎಲ್ಲರೂ ಗುರು ದರ್ಶನಕ್ಕಾಗಿ ಕಾಯುತ್ತಿದ್ದರು. ಆಯಾಸ ಪರಿಹಾರಕ್ಕಾಗಿ ಒಳಗೆ ಮಲಗಿದ್ದ ಗುರುನಾಥರು ಎದ್ದವರೇ ಹೊರಬಂದು ಗುಂಪಿನ ಮಧ್ಯೆ ಕುಳಿತಿದ್ದ ಆ ವ್ಯಕ್ತಿಯತ್ತ ಬೆರಳು ಮಾಡಿ: "ನೀ ಕೊಲೆ ಮಾಡಿದ ಆ ಹುಡುಗಿ ಇನ್ನೂ ಸತ್ತಿಲ್ಲ ಕಣೋ. ಹೋಗು ಕೈ ತೊಳ್ಕೋ. ಕೈ ಎಲ್ಲಾ ರಕ್ತವಾಗಿದೆಯಲ್ಲ" ಎಂದರು. 

ಇದನ್ನು ಕೇಳಿದ ಆ ವ್ಯಕ್ತಿ ಹೆದರಿ ಅಲ್ಲಿಂದ ಓಡಿ ಹೋದನು. ಗುರುನಾಥರೆಂದಂತೆಯೇ ಆ ವ್ಯಕ್ತಿ ಒಂದು ಹುಡುಗಿಯನ್ನು ಅತ್ಯಾಚಾರವೆಸಗಿ ಚಾಕುವಿನಿಂದ ಇರಿದು ಸಾಯಿಸಿ ಬಂದಿದ್ದನು. ಅದು ಅವನು ಮಾಡಿದ ಇಪ್ಪತ್ತಮೂರನೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣವಾಗಿತ್ತು. ತನ್ನ ಹದಿನಾರನೇ ವಯಸ್ಸಿನಿಂದ ಇದೇ ವೃತ್ತಿ ಮಾಡುತ್ತಾ ಬಂದಿದ್ದ ಅವನು ಬದುಕನ್ನು ಬದಲಾಯಿಸಿಕೊಳ್ಳಲು ಗುರುನಾಥರ ಕೃಪೆಗಾಗಿ ಬಂದಿದ್ದನು. 

ಆ ನಂತರ ತಡರಾತ್ರಿ ವಾಪಸಾದ ಆ ಯುವಕ ತಾನು ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ತಾನು ಒಳ್ಳೆಯ ಬದುಕು ಕಟ್ಟಲು ಆಶೀರ್ವದಿಸುವಂತೆ ಬೇಡಿದನು. ಮಾತ್ರವಲ್ಲ. ಪ್ರತೀ ವರ್ಷ ಅಕ್ಟೊಬರ್ ತಿಂಗಳಿನಲ್ಲಿ ತನ್ನ ಎಂಟು ಮಂದಿ ಸ್ನೇಹಿತರೊಂದಿಗೆ ಮುಂಬೈನಿಂದ ಬಂದು ಗುರುದರುಶನ ಮಾಡಿ ಹೋಗುತ್ತಿದ್ದರು. ಇಂದು ಅವರೆಲ್ಲರೂ ಉತ್ತಮ ಬದುಕು ನಡೆಸುತ್ತಿರುವರು. 

ಚರಣದಾಸನಾದ ನಾನು ಸಾಧನಾ ಸ್ಥಿತಿಯಲ್ಲಿದ್ದ ಗುರುಬಂಧುವಿನೊಂದಿಗೆ ಇರುತ್ತಿದ್ದೆ. ಅವರು ಸಾಧನಾವಸ್ಥೆಯಲ್ಲಿ ಮಲಗಿಯೋ ಅಥವಾ ಓಡಾಡುತ್ತಲೋ ಇರುತ್ತಿದ್ದರೂ ಸದಾ ಚಿಂತನೆಯಲ್ಲಿ ಮುಳುಗಿರುತ್ತಿದ್ದರು. 

ಒಮ್ಮೆ ನಾವು ಎದ್ದು ಹೊರ ಹೋಗಿ ಬರುವಷ್ಟರಲ್ಲಿ ಒಬ್ಬ ವ್ಯಕ್ತಿ ನಾವಿಬ್ಬರೂ ಮಲಗುವ ಮಂಚದ ಮೇಲೆ ಮಲಗಿದ್ದರು. ಗುರುಬಂಧು ಏನೂ ಮಾತನಾಡಲಿಲ್ಲ. ಚರಣದಾಸನಾದ ನಾನು ಮೊದಲೇ ಮುಂಗೋಪಿ, ದುರಹಂಕಾರ ಬೇರೆ. ಸಿಟ್ಟಿನಿಂದ ಆ ವ್ಯಕ್ತಿಯೆಡೆಗೆ ನೋಡಿದೆ. ಆ ನಂತರ ಆ ವ್ಯಕ್ತಿ ಎದ್ದು ಹೋದರು. 

ಆತ ತುಮಕೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು ಸ್ವಂತ ಊರಾದ ಶಿವಮೊಗ್ಗಕ್ಕೆ ವರ್ಗಾವಣೆ ಬೇಕಿದ್ದು ಆ ಉದ್ದೇಶಕ್ಕಾಗಿ ಗುರುನಿವಾಸಕ್ಕೆ ಬಂದಿದ್ದರು. ಆ ವ್ಯಕ್ತಿ ಪ್ರತಿಭಾವಂತರೂ ಆಗಿದ್ದು ಮೊದಲ ಬಾರಿ ಭೇಟಿಯಾದ ನಂತರ ಗುರುನಾಥರ ಸಹಚರರಾದ ನಮ್ಮಗಳನ್ನು ಕುರಿತು, "ಗುರುನಾಥರ ಜೊತೆ ಇರುವವರೆಲ್ಲರೂ ಅನಕ್ಷರಸ್ಥರು" ಎಂಬ ಮಾತನಾಡಿ ಹೋದರು . 

ಕೆಲ ಕಾಲದ ನಂತರ ನಡೆದ ಕಾಲೇಜು ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿಭಾವಂತನಾಗಿದ್ದ ಆತ ಎಲ್ಲಾ ವಿಷಯಗಳಲ್ಲೂ ಅನುತ್ತೀರ್ಣರಾದರು. ಆನಂತರ ಗುರುನಾಥರು ಹಾಗೂ ಅವರೊಂದಿಗಿರುತ್ತಿದ್ದ ಸಹಚರರ ಬಗ್ಗೆ ಆತನಿಗಿದ್ದ ತಾತ್ಸಾರ ಭಾವ ಸ್ವಲ್ಪ ಕಡಿಮೆಯಾಯಿತಾದರೂ ಅಂದು ಗುರುನಾಥರ ಸಹಚರರ ಬಗ್ಗೆ ಆಡಿದ ಹಗುರ ಮಾತಿನಿಂದಾಗಿ ಇಂದಿಗೂ ಜೀವನದಲ್ಲಿ ನೆಲೆ ನಿಲ್ಲಲಾಗದೆ ಪರಿತಪಿಸುತ್ತಿರುವರು. 

ಹಾಗೆಯೇ ಇನ್ನೊಮ್ಮೆ ಮಹಾರಾಷ್ಟ್ರ ವಾಸಿಯಾಗಿದ್ದ ವ್ಯಕ್ತಿಯೋರ್ವರು ಗುರುನಿವಾಸಕ್ಕೆ ಬಂದಿದ್ದರು. ಆತ ಸಮುದ್ರ ಸಂಬಂಧಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಅನುಕೂಲವಾಗಿಯೇ ಇದ್ದರು. ಆದರೆ, ಇದ್ದಕ್ಕಿದ್ದಂತೆ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಹುಪಾಲು ಬರಿಗೈಯಾಗಿ ಗುರುಕೃಪೆಗಾಗಿ ಬಂದಿದ್ದರು. 

ಅವರಿಗೆ ಗುರುನಾಥರು ಒಂದು ಈರುಳ್ಳಿಯನ್ನು ಕೊಟ್ಟು, "ಇಟ್ಕೋ ಅದನ್ನು. ಇನ್ನ ಸಂಕಷ್ಟಗಳೆಲ್ಲವೂ ದೂರವಾಗುವುದು" ಎಂದು ಹೇಳಿ ಕಳುಹಿಸಿದರು. ಇಂದು ಆ ವ್ಯಕ್ತಿ ಸುಮಾರು ಏಳು-ಎಂಟು ಹಡಗುಗಳ ಒಡೆಯ. ಮಾತ್ರವಲ್ಲ. ಎಲ್ಲ ಸಂಕಷ್ಟಗಳನ್ನು ದಾಟಿ ಬಂದಿರುವರು. ಆತನ ಗುರುಭಕ್ತಿ ಎಂತಹದೆಂದರೆ ಇಂದಿಗೂ ಆತ ಗುರುನಾಥರು ಅಂದು ನೀಡಿದ್ದ ಈರುಳ್ಳಿಯನ್ನು ಮನೆಯ ಗರ್ಭಗುಡಿಯಲ್ಲಿಟ್ಟು ಪೂಜಿಸುತ್ತಿರುವರು. 

ಶಿವಮೊಗ್ಗ ವಾಸಿಯಾದ ಆ ವ್ಯಕ್ತಿ ಉತ್ತರ ಕರ್ನಾಟಕದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಪ್ರಸಿದ್ಧಿ ಹಾಗೂ ಹಣವನ್ನು ಸಂಪಾದಿಸಿದ್ದ ಆತ ಇದ್ದಕ್ಕಿದ್ದಂತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡರು. ಸಾಲಗಾರರು ಸಾಲ ವಾಪಸ್ ಮಾಡದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು. ಬೆದರಿದ ಆ ವ್ಯಕ್ತಿ ಹೋಟೆಲ್ ಮುಚ್ಚಿ ಶಿವಮೊಗ್ಗದಲ್ಲೇ ನೆಲೆಸಿದರು.

ಒಮ್ಮೆ ಯಾರಿಂದಲೋ ಗುರುನಾಥರ ಬಗ್ಗೆ ತಿಳಿದ ಆತ ನೇರವಾಗಿ ಗುರುಗಳಲ್ಲಿಗೆ ಬಂದು ಪ್ರಾರ್ಥಿಸಿದರು. ಆಗ ಗುರುನಾಥರು: "ಹಾಲು ಅಳೆಯುವ ಒಂದು ಪಾತ್ರೆ ತಂದು ಅದನ್ನು ಅಂಗಡಿ ಮುಂದೆ ತಲೆ ಕೆಳಗಾಗಿ ನೇತು ಹಾಕು. ನಿನ್ನ ಎಲ್ಲ ಸಮಸ್ಯೆಗಳೂ ಪರಿಹಾರವಾಗುವುದು ಹಾಗೂ ನಿನಗೆ ಬೆದರಿಕೆ ಹಾಕಿದವರೇ ನಿನ್ನ ಬೆಂಬಲಕ್ಕೆ ನಿಂತು ಹಣ ಸಹಾಯ ಮಾಡುವರು. ಚಿಂತಿಸಬೇಡ" ಎಂದು ಹರಸಿ ಕಳುಹಿಸಿಕೊಟ್ಟರು.

ಗುರುನಾಥರಂದಂತೆಯೇ ಇಂದು ಆ ವ್ಯಕ್ತಿ ಮತ್ತೆ ಹೋಟೆಲ್ ಆರಂಭಿಸಿದ್ದು, ಅಂದು ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಗಳೇ ಬಂದು, "ಸ್ವಾಮಿ, ನೀವೇನೂ ಚಿಂತಿಸಬೇಡಿ. ಹೋಟೆಲ್ ಮಾತ್ರ ಮುಚ್ಚಬೇಡಿ. ನಿಮಗೆ ಇನ್ನೂ ಹಣ ಬೇಕಿದ್ದಲ್ಲಿ ಕೊಡುತ್ತೇವೆ" ಎಂದು ಧೈರ್ಯ ತುಂಬಿದರಂತೆ. ಇಂದು ಆ ವ್ಯಕ್ತಿ ಬಹುಪಾಲು ಋಣಮುಕ್ತನಾಗಿದ್ದು ಉತ್ತಮ ಜೀವನ ನಡೆಸುತ್ತಿರುವರು. ಗುರುನಾಥರು ಹೇಳುವ ಪರಿಹಾರಕ್ಕೂ, ಇರುವ ಸಮಸ್ಯೆಗಳಿಗೂ ಪರಸ್ಪರ ಹೋಲಿಕೆಯೇ ಇರುತ್ತಿರಲಿಲ್ಲ. ಆದರೆ ಸಮಸ್ಯೆ ಪರಿಹಾರ ಶೀಘ್ರವಾಗಿ ಆಗುತ್ತಿತ್ತು. ಅದರ ಒಳಮರ್ಮ ಗುರುವಿಗಷ್ಟೇ ತಿಳಿದಿರುತ್ತಿತ್ತು. 

ಗುರು ಭಕ್ತಿ ಭಾವ ಪ್ರಿಯನೇ ಹೊರತು ಬಾಹ್ಯಾಡಂಭರ ಪ್ರಿಯನಲ್ಲ. ಸರಳತೆಯೇ ಅದರ ಮುಖ್ಯ ಲಕ್ಷಣ. ಈ ಗುಣಗಳು ಎಲ್ಲ ಜಾತಿ, ಮತ, ಅಂತಸ್ತು ಬೇಧಗಳನ್ನು ಮೀರಿದ್ದು.......,,,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Saturday, November 5, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 32


ಗುರುವೆಂದರೆ ಬೆಂಕಿ 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ಆ ವ್ಯಕ್ತಿ ನಾಡಿನ ಸಜ್ಜನ ರಾಜಕಾರಣಿ  ಎಂದು ಹೆಸರು ಪಡೆದಿದ್ದರು. ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾದವರು. ಪ್ರತಿ ಬಾರಿ ಚುನಾವಣೆಗೂ ಮುನ್ನ ಹಾಗೂ ಆಯ್ಕೆಯಾದ ನಂತರವೂ ಗುರುನಾಥರಲ್ಲಿ ಬಂದು ಆಶೀರ್ವಾದ ಪಡೆದು ಹೋಗುತ್ತಿದ್ದರು. 

ಒಮ್ಮೆ ಯಾವುದೋ ಸಮಸ್ಯೆ ನಿಮಿತ್ತ ಗುರುನಿವಾಸಕ್ಕೆ ಬಂದ ಆ ಸಂಸದರು ಗುರುನಾಥರನ್ನು ಕುರಿತು "ಸ್ವಾಮಿ, ನಿಮಗೆ ಹೇಗೂ ವಯಸ್ಸಾಯ್ತು. ನಿಮ್ಮ ಮನೆಯ ವಹಿವಾಟನ್ನು ನಿಮ್ಮ ಮಗನಿಗೆ ವಹಿಸಿ" ಎಂದು ಸಲಹೆಯನ್ನಿತ್ತರು. ಗುರುನಾಥರು ಅವರತ್ತ ಸುಮ್ಮನೆ ಒಮ್ಮೆ ನೋಡಿ ನಕ್ಕರು. 

"ಗುರುವೆಂದರೆ ಬೆಂಕಿ. ಅವರ ವೈಯಕ್ತಿಕ ವಿಚಾರಗಳಿಗಾಗಲಿ ಅಥವಾ ತನ್ನ ಕಾರ್ಯ ಬಿಟ್ಟು ಬೇರೆಯವರ ವಿಚಾರಕ್ಕೆ ಯಾರಾದರೂ ಮೂಗು ತೂರಿಸುವುದನ್ನು ಗುರುನಾಥರು ಎಂದಿಗೂ ಸಹಿಸುತ್ತಿರಲಿಲ್ಲ". 

ಆ ನಂತರ ಅಲ್ಲಿಂದ ಹೊರಟ ಆ ಸಂಸದರು ಮನೆ ತಲುಪುವ ಮುನ್ನವೇ ಇಪ್ಪತ್ತು-ಇಪ್ಪತ್ತೈದು ಬಾರಿ ಇದ್ದಕ್ಕಿದ್ದಂತೆಯೇ ಬೇಧಿ ಆಗತೊಡಗಿತು. ಮನೆ ತಲುಪಿ ವೈದ್ಯ ಮುಖೇನ ಮಾಡಿದ ಯಾವುದೇ ಔಷಧೋಪಚಾರಗಳು ಫಲಿಸಲಿಲ್ಲ. ಬೇರೆ ದಾರಿ ಕಾಣದೆ ತನ್ನವರೊಬ್ಬರನ್ನು ಗುರುನಿವಾಸಕ್ಕೆ ಕಳಿಸಿಕೊಟ್ಟರು. 

ಆಗ ಮಾತನಾಡುತ್ತಾ ಗುರುನಾಥರು "ಗುರು ಎಂದರೆ ಗುರು ಅಷ್ಟೇ. ನೀವು ಪ್ರತಿಯೊಬ್ಬರು ಇಲ್ಲಿಗೆ ಬಂದ ಉದ್ದೇಶ ಮರೆತು ಬೇರೆಡೆಗೆ, ನನ್ನ ಮನೆ ವಿಚಾರಕ್ಕೆ ಬಂದಲ್ಲಿ ವ್ಯತ್ಯಾಸವಾಗುವುದು. ಈ ಬಾಳೆಹಣ್ಣನ್ನು ಅವರಿಗೆ ಕೊಡು ಸರಿ ಹೋಗುವರು" ಎಂದು ಒಂದು ಬಾಳೆಹಣ್ಣನ್ನು ಕಳಿಸಿಕೊಟ್ಟರು. ನಂತರ ಅವರ ಆರೋಗ್ಯ ಸ್ಥಿತಿ ಸುಧಾರಿಸಿತು. ಆ ನಂತರ ಅವರು ಗುರುನಿವಾಸಕ್ಕೆ ಬಂದು ತನ್ನ ತಪ್ಪಿಗಾಗಿ ಗುರುಗಳಲ್ಲಿ ಕ್ಷಮೆಯಾಚಿಸಿದರು. 

ಹಾಗೆಯೇ ಇನ್ನೊಮ್ಮೆ ಗುರುನಾಥರ ದರ್ಶನಕ್ಕಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ತನ್ನ ಆಪ್ತ ಸಲಹೆಗಾರರನ್ನು ಕಳಿಸಿಕೊಟ್ಟರು. ಅಂದು ಬಹಳ ಜನರು ದರ್ಶನಕ್ಕಾಗಿ ಬಂದಿದ್ದರು. 

ಬಹಳ ಹೊತ್ತು ಕಾದರೂ ತನ್ನತ್ತ ತಿರುಗಿಯೂ ನೋಡದ ಗುರುನಾಥರನ್ನು ಕುರಿತು ಆ ವ್ಯಕ್ತಿ ಸಿಟ್ಟಿನಿಂದ "ಏನ್ ಸ್ವಾಮಿ, ಎತ್ತಿನ ಗಾಡೀಲಿ ಬಂದೋರಿಗೆಲ್ಲಾ ಮಾತಾಡಿಸಿ ಕಳಿಸುತ್ತಿದ್ದೀರಲ್ಲಾ. ನನ್ನ ಯಾಕೆ ಮಾತನಾಡಿಸಲ್ಲಾ?" ಎಂದು ಅಹಂಕಾರದಿಂದ ಕೇಳಿದರು. 

ಇದರಿಂದ ಸಿಟ್ಟಿಗೆದ್ದ ಗುರುನಾಥರು "ಹೌದಯ್ಯ, ನಾನು ಅಂತಹವರಿಗೆ ಮೊದಲು ಮಾತನಾಡಿಸೋದು. ಏನೀಗ? ಮಿಗಿಲಾಗಿ ನಾನೇನು ನಿನ್ನ ಗುರುವಲ್ಲ. ನಿಂಗೆ ತಾಕತ್ತೇನಾದ್ರೂ ಇದ್ರೆ ಈ ಹಣ್ಣನ್ನು ನಿಮ್ಮ ಮಠದ ಮಠಾಧಿಪತಿಗೆ ತಿನ್ನಿಸಿ ಆಮೇಲೆ ಬಾ ನೋಡೋಣ" ಎಂದು ಹೇಳಿ ಒಂದು ಮೂಸಂಬಿ ಹಣ್ಣನ್ನು ನೀಡಿದರು. 

ಆ ವ್ಯಕ್ತಿ ಅಲ್ಲಿಂದ ಹೊರಟು ತನ್ನ ಮಠದ ಆ ಪೀಠಾಧಿಪತಿಗೆ ತಿನ್ನಿಸಿದರು. ವಯೋವೃದ್ಧರಾಗಿದ್ದ ಆ ಮಠಾಧಿಪತಿ ಎರಡು ದಿನಗಳಲ್ಲಿ ದೇಹ ಬಿಟ್ಟರು. ಇದನ್ನು ಕಂಡು ದಿಗಿಲುಗೊಂಡ ಆ ವ್ಯಕ್ತಿ ಸೀದಾ ಗುರುನಾಥರಲ್ಲಿ ಬಂದು ಕ್ಷಮೆ ಯಾಚಿಸಿದರು. 

ಅಂತೆಯೇ ಇನ್ನೊಮ್ಮೆ, ಇಂದು ವಿಶ್ವ ವಿಖ್ಯಾತರಾಗಿರುವ ಆಶ್ರಮದ ಅಧಿಪತಿಯೊಬ್ಬರು ತನ್ನ ಕೆಲ ಶಿಷ್ಯರೊಂದಿಗೆ ಗುರುನಿವಾಸಕ್ಕೆ ಬಂದರು. ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಗುರುಗಳು ಮನೆಯ ತೋಟದಲ್ಲಿ ಬೆಳೆದ ಮಾವಿನ ಹಣ್ಣನ್ನು ತಿನ್ನಲು ನೀಡಿದರು. 

ಆ ನಂತರ "ವಿಶ್ವ ಪ್ರಸಿದ್ಧಿಯಾಗುವಿರಿ" ಎಂದು ಹರಸಿದರು. ಆ ನಂತರ ಬಾಣಾವರದ ವೇದಿಕೆಗೆ ಹೋಗಲು ಹೇಳಿ ತಾನೂ ಕೂಡ ಇನ್ನೊಂದು ವಾಹನದಲ್ಲಿ ಅಲ್ಲಿಗೆ ತಲುಪಿದರು. ಅಲ್ಲಿ ನಿಂತಿದ್ದ ಅವರೆಲ್ಲರಿಗೂ ಪ್ರದಕ್ಷಿಣೆ ಬಂದು ನಮಸ್ಕರಿಸಿದರು. ಇದನ್ನು ಕಂಡ ಆ ಆಶ್ರಮದ ಅಧಿಪತಿ ಹೀಗೆ ಹೇಳಿದರು: "ಗುರುಗಳೇ, ಇಂದಿಗೆ ನನ್ನಲ್ಲಿರುವ 'ನಾನು' ಎಂಬ ಅಹಂಕಾರ ನಾಶವಾಯಿತು". 

ಕೇವಲ ತನ್ನ ದೃಷ್ಠಿ ಮಾತ್ರದಿಂದ ಏನನ್ನು ಬೇಕಾದರೂ ನೀಡಲು ಶಕ್ತರಾಗಿದ್ದ ಗುರುನಾಥರು ಮನುಷ್ಯರನ್ನು ಅವರವರಿಗೆ ತಕ್ಕಂತೆ ದೋಷ ಸರಿಪಡಿಸಲು ಬಳಸುತ್ತಿದ್ದ ಭಿನ್ನ ಭಿನ್ನ ದಾರಿಗಳು ನಿಜಕ್ಕೂ ವಿಚಿತ್ರ. ಗುರು ವಾಕ್ಯದಂತೆಯೇ ಇಂದು ಆ ವ್ಯಕ್ತಿ ಜಗತ್ಪ್ರಸಿದ್ಧರಾಗಿರುವರು. 

"ಮೊದಲು ಮನುಷ್ಯ ನಾನು ಅನ್ನೋದನ್ನು ಬಿಡಬೇಕು ಕಣಯ್ಯಾ. ಆಗಲೇ ಗುರು ಸಿಗೋದು ತಿಳೀತಾ?" ಎಂಬ ಗುರುನಾಥರ ಮಾತಿಗೆ ಇಂತಹ ಘಟನೆಗಳು ನಿದರ್ಶನವೆನಿಸುತ್ತದೆ........,,,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 



।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Friday, November 4, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 31


ಜಾತಿನಿಂದನೆ ಮೊಕದ್ದಮೆಯಿಂದ ಕಾಪಾಡಿದ ಕತೆ 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಅದು 2002 ಅಕ್ಟೋಬರ್ ಕಾಲ. ಅಡಿಕೆ ಕೊಯ್ಲಿನ ಸಂದರ್ಭ. ಸಖರಾಯಪಟ್ಟಣಕ್ಕೆ ಬಂದಿದ್ದೆ. ಇದ್ದಕ್ಕಿದ್ದಂತೆ ಗುರುನಾಥರು ಅಲ್ಲಿದ ಇತರ ಶಿಷ್ಯರನ್ನು ಕರೆದು "ಇನ್ನು ಇಪ್ಪತ್ತೊಂದು ದಿನ ಇವನನ್ನು (ನನ್ನತ್ತ ತೋರಿಸಿ) ಎಲ್ಲಿಗೂ ಹೋಗಲು ಬಿಡಬೇಡಿ ತಿಳೀತಾ?" ಎಂದು ನುಡಿದರು. ಚರಣದಾಸನಾದ ನಾನು ಅಲ್ಲಿಯೇ ಇದ್ದೆ. 

ಆ ಇಪ್ಪತ್ತೊಂದು ದಿನಗಳು ನನ್ನ ಕೆಲಸದ ಒತ್ತಡದಲ್ಲಿ ಸ್ನಾನವನ್ನೂ ಮಾಡಿರಲಿಲ್ಲ. ಆ ಎಲ್ಲಾ ಕಾಲವೂ ಅಡಿಕೆ ಕೊಯ್ಲಿನ ಕೆಲಸ ಹಾಗೂ ಗುರುನಾಥರು ಹೇಳಿದ್ದನ್ನು ಮಾಡುವುದರಲ್ಲಿಯೇ ಸಾಗುತ್ತಿತ್ತು. 

ಈ ಮಧ್ಯೆ ನಾನು ಊರಿಗೆ ಬಂದಿದ್ದಾಗ ಸಾಮಾನ್ಯವಾಗಿ ಸಂಘಟನೆಯೊಂದರಲ್ಲಿ ಸಕ್ರಿಯವಾಗಿರುತ್ತಿದ್ದೆ. ನನ್ನ ಏಳಿಗೆಯನ್ನು ಸಹಿಸದೆ ಕಾಲ ಸ್ಥಾಪಿತ ಹಿತಾಸಕ್ತಿಗಳು ಒಗ್ಗೂಡಿ ಚರಣದಾಸನಾದ ನಾನು ಹಾಗೂ ನನ್ನ ಕೆಲ ಮಿತ್ರರ ವಿರುದ್ಧ ಜಾತಿ ನಿಂದನೆ ಮೊಕದ್ದಮೆ ದಾಖಲಿಸಿದರು. ಇಂತಹ ದೂರುಗಳು ಬಂದಾಗ ಆರಕ್ಷಕರು ಆರೋಪಿಯನ್ನು ಯಾವುದೇ ವಿಚಾರಣೆ ನಡೆಸದೆ ಮೂರು ತಿಂಗಳು ಬಂದೀಖಾನೆಗೆ ಹಾಕಬಹುದಾಗಿತ್ತು. 

ಆದರೆ ಗುರುವಿನ ಅನುಗ್ರಹವಿದ್ದಿತು ಎಂದರೆ, ಎಂತಹ ಆಪತ್ತುಗಳೂ ಸಹ ದಾಟಬಹುದು. ಗುರು ದಾಟಿಸುವನು. ಆ ನಂತರ ನನ್ನ ಮಿತ್ರರನೇಕರ ಒತ್ತಡಕ್ಕೆ ಮಣಿದ ಪೋಲೀಸರು ಎಲ್ಲಾ ರಾಜಕೀಯ ಒತ್ತಡವನ್ನು ಬದಿಗೊತ್ತಿ ನನ್ನ ಹೆಸರನ್ನು ಕೈ ಬಿಟ್ಟಿದ್ದರು. ಮರುದಿನ ನಾನು ಊರಿಗೆ ಹೋದೆ. 

ಹಾಗೆಯೇ ಮತ್ತೊಮ್ಮೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭ ದತ್ತ ಜಯಂತಿಯ ಹಿಂದಿನ ದಿನವೆನಿಸುತ್ತದೆ. ಗುರುನಾಥರೊಂದಿಗೆ ಶೃಂಗೇರಿಗೆ ಬಂದಿದ್ದೆ. ಆಗಲೇ ನನ್ನ ಎರಡನೇ ಅಕ್ಕ ಹೆರಿಗೆ ನೋವಿನಿಂದ ಆಸ್ಪತ್ರೆ ಸೇರಿದ್ದನ್ನು ತಿಳಿದ ಚರಣದಾಸನಾದ ನಾನು ಶೃಂಗೇರಿಯಿಂದಲೇ ಊರಿಗೆ ತೆರಳಲು  ಯೋಚಿಸಿದೆ. 

ಕೂಡಲೇ ಚರಣದಾಸನಾದ ನನ್ನನ್ನು ಕರೆದ ಗುರುನಾಥರು "ಅಯ್ಯಾ ಊರಿಗೆ ಹೋಗು. ಆದರೆ, ಇಂದು ಮಾತ್ರ ಬೇಡಪ್ಪಾ. ಸಖರಾಯಪಟ್ಟಣ ತಲುಪಿ ಆ ನಂತರ ಬೇಕಿದ್ದರೆ ಹೋಗಿ ಬಾ" ಎಂದರು. "ಆಗಲಿ " ಎಂದ ನಾನು ಊರಿಗೆ ಹೋಗದೆ ಮರುದಿನ ನೇರವಾಗಿ ತೀರ್ಥಹಳ್ಳಿಯ ಆಸ್ಪತ್ರೆಗೆ ಹೋದೆ. ಎರಡು ದಿನಗಳಿಂದ ಅಲ್ಲಿಯೇ ಇದ್ದ ನನ್ನ ಸೋದರ ಹೇಳಿದ ಕತೆ ಕೇಳಿ ಗುರು ಕಾರುಣ್ಯದ ಮಹಿಮೆ ಸ್ವಲ್ಪ ತಿಳಿಯಿತು. ಅದೇನೆಂದರೆ, ಹಿಂದಿನ ದಿನ ನಮ್ಮ ಸಂಬಂಧಿಯೊಬ್ಬರನ್ನು ಸಂಘಟನೆಯೊಂದರಲ್ಲಿ ಸಕ್ರೀಯವಾಗಿದ್ದ ಕಾರಣ ಪೋಲೀಸರು ಬಂಧಿಸಿ ಬಳ್ಳಾರಿ ಜೈಲಿಗೆ ಕಳಿಸಿದರಂತೆ. ಪೋಲೀಸರ ಪಟ್ಟಿಯಲ್ಲಿ ನನ್ನ ಹೆಸರೂ ಇತ್ತಂತೆ. ನಾನು ಊರಿನಲ್ಲಿ ಇರಲಿಲ್ಲವಾದ ಕಾರಣ ಸುಮ್ಮನಾದರಂತೆ. 

ಗುರು ಇಷ್ಟೆಲ್ಲಾ ನನ್ನನ್ನು ಕಾಪಾಡುತ್ತಿದ್ದಾಗ್ಯೂ ಪ್ರಪಂಚದ ಆಕರ್ಷಣೆಗೆ ಬಿದ್ದ ಚರಣದಾಸನಾದ ನಾನು ದಿನ ನಿತ್ಯ ಗುರುನಾಥರೊಂದಿಗೆ ಜಗಳವಾಡುತ್ತಿದ್ದೆ. ಆದರೆ ಅವರ ಮತ್ತು ನನ್ನ ನಡುವೆ ಇದ್ದ ಪ್ರೀತಿಯ ವಿಶ್ವಾಸದ ಸೆಲೆ ಬಹುಶಃ ಇಂದಿನದಂತೂ ಅಲ್ಲ. ಜನ್ಮಗಳ ಬಗ್ಗೆ ಅರಿವಿಲ್ಲದಿದ್ದರೂ ರೂಢಿಯಂತೆ ಹೇಳುವುದಾದರೆ, ಈ ಬಾಂಧವ್ಯ ಜನ್ಮ ಜನ್ಮಾಂತರದ್ದು ಎನ್ನಬಹುದು. 

ನಾನು ಅಲ್ಲಿಗೆ ಹೋದ ಹೊಸತರಲ್ಲಿ ಅವರಾಡಿದ ಒಂದು ಮಾತು ನೆನಪಿಗೆ ಬರುತ್ತದೆ. "ಅಯ್ಯಾ, ನೀ ಎಲ್ಲೇ ಹೋಗು. ಕೆಳಗೆ ಬೀಳದಂತೆ ಎಳೆದು ತರುತ್ತೇನೆ. ಧೈರ್ಯವಾಗಿರು" ಎಂಬ ಮಾತು ಪದೇ ಪದೇ ಮನದಲ್ಲಿ ಸುಳಿದಾಡುವುದು.....,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 



।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Thursday, November 3, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 30


400 ವರ್ಷದ ಪಾದುಕೆ  




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ಬಾಣಾವರದಲ್ಲಿ ಸುಮಾರು 400 ವರ್ಷ ಹಿಂದೆ ವಾಸವಿದ್ದು ಸಜೀವ ಸಮಾಧಿಯಾದ ಯತಿಯೋರ್ವರ ಸಮಾಧಿ ಇದ್ದು ಗುರುನಾಥರು ಆಗಾಗ್ಗೆ ಅಲ್ಲಿಗೆ ಹೋಗಿ ಬರುತ್ತಿದ್ದರು. ಮಾತ್ರವಲ್ಲ ತನ್ನ ದರ್ಶನಕ್ಕೆ ಬಂದವರನ್ನೂ ಅಲ್ಲಿಗೆ ಕಳಿಸುತ್ತಿದ್ದರು. 

ಅದು 400 ವರ್ಷ ಹಿಂದೆ ಬದುಕಿ ಸಾಧನೆಗೈದ ಕೃಷ್ಣ ಯೋಗೇಂದ್ರ ಎಂಬ ಯತಿವರೇಣ್ಯರ ಸಮಾಧಿ. "ಸಜೀವ ಸಮಾಧಿಯಾಗಿದ್ದ" ರೆಂದು ಗುರುನಾಥರು ಆಗಾಗ್ಗೆ ಹೇಳುತ್ತಿದ್ದರು. ಒಮ್ಮೆ ಅರಸೀಕೆರೆಯಲ್ಲಿ ವಾಸವಿದ್ದ ಗುರುಭಕ್ತರೊಬ್ಬರನ್ನು ಕರೆದು "ಬಾಣಾವರದ ಯತಿವರೇಣ್ಯರ ಪಾದುಕೆಗಳಿವೆ. ಅದನ್ನು ಹುಡುಕಬೇಕು ಕಣಯ್ಯಾ" ಎಂದಿದ್ದರು. 

ಕೆಲಕಾಲ ಕಳೆದ ಮೇಲೆ "ಚಿಕ್ಕ ತಿರುಪತಿಯಲ್ಲಿರುವ ಒಂದು ಜಾಗದಲ್ಲಿ ಪಾದುಕೆ ಇದೆ. ಕೇಳು, ಹುಡುಕಲು ಸಹಕರಿಸುವರು" ಎಂದು ಕಳಿಸಿದರು. ಹಾಗೆ ಹುಡುಕಿದಾಗ ಅಟ್ಟದ ಮೂಲೆಯಲ್ಲಿ ಪಾದುಕೆಗಳು ಸಿಕ್ಕವು. ಅವು ಇಂದಿಗೂ ಅರಸೀಕೆರೆಯ ಒಬ್ಬ ಭಕ್ತರ ಮನೆಯಲ್ಲಿ ಪೂಜಿಸಲ್ಪಡುತ್ತಿದೆ. 

ಅಂತೆಯೇ ಇನ್ನೊಂದು ದಿನ ಎಂದಿನಂತೆಯೇ ಚರಣದಾಸನಾದ ನಾನು ಗುರುನಾಥರು ನನ್ನ ಕೆಲಸವನ್ನು ಮಾಡಿಸಿಕೊಡಲಿಲ್ಲವೆಂದು ಜಗಳವಾಡುತ್ತಿದ್ದೆ. ರಾತ್ರಿ ನನ್ನನ್ನು ಕರೆದು "ಶಿವಮೊಗ್ಗಕ್ಕೆ ಹೋಗಿ ಬಾ" ಎಂದರು. 

ಗುರು ಬಂಧುಗಳ ಕಾರಿನಲ್ಲಿ ಹೋಗಲು ಸಿದ್ಧನಾಗಿದ್ದರೂ ಕೆಲಸ ಮಾಡಿಕೊಡಲಿಲ್ಲವೆಂದು ಸಿಟ್ಟು ಮಾಡಿಕೊಂಡು ನಿಂತಿದ್ದೆ. ಊಟವನ್ನೂ ಮಾಡಿರಲಿಲ್ಲ. ಗುರುನಾಥರು ಬಂದು "ಊಟ ಮಾಡಯ್ಯಾ" ಎಂದರು. ನಾನು ಸಿಟ್ಟಿನಿಂದ "ಬೇಡ" ಅಂದೆ. ಎರಡು ಬಾರಿ ಕೇಳಿದರೂ ಬೇಡವೆನ್ನಲು ಗುರುನಾಥರು "ಆ ದೇಹ ನಿಂದಲ್ಲ ನಂದು. ಅದಕ್ಕೆ ಊಟ ಹಾಕಲು ನಿನ್ನ ಎಂತ ಕೇಳೋದು?" ಎಂದು ಹೇಳಿ ತಟ್ಟೆಗೆ ಊಟ ಹಾಕಿ ಕೊಟ್ಟರು. ಗುರುನಾಥರ ಮಮತೆಯ ಸವಿಯುಂಡಿದ್ದ ಚರಣದಾಸನಾದ ನಾನು ಮುನಿಸಿನಿಂದಲೇ ಊಟ ಮಾಡಿದೆ. 

ನಂತರ ಶಿವಮೊಗ್ಗದ ಗುರು ಬಂಧುಗಳ ಮನೆಗೆ ಹೋಗಿ ಮಲಗಿದೆ. ರಾತ್ರಿ ಹೀಗೊಂದು ಸ್ವಪ್ನವಾಯಿತು: "ನಮ್ಮೂರಿನಲ್ಲಿರುವ ಒಂದು ಹಳ್ಳದ ಬದಿಯಲ್ಲಿ ಚರಣದಾಸನಾದ ನಾನು, ಗುರುನಾಥರು ನಿಂತಿದ್ದು ಅಲ್ಲಿ ಎರಡು ಜೊತೆ ಪಾದುಕೆಗಳಿದ್ದು, ನಾನು ಅವು ಯಾರ ಪಾದುಕೆಗಳೆಂದು ಗುರನಾಥರಲ್ಲಿ ಕೇಳಲು, ಅವು ನಿನಗೆ ಸಂಬಂಧಿಸಿದ್ದೇ ಕಣೋ" ಎಂದಂತೆ ಸ್ವಪ್ನವಾಯಿತು. 

ನಂತರ ಬೆಳಿಗ್ಗೆ ಎದ್ದು ಸಖರಾಯಪಟ್ಟಣಕ್ಕೆ ಬಂದು ಅಲ್ಲಿಂದ ಗುರುನಾಥರಿದ್ದ ಚಿಕ್ಕಮಗಳೂರಿನ ಗುರುಬಂಧುವೊಬ್ಬರ ಮನೆಗೆ ಬಂದು ತಲುಪಿ ಸ್ವಪ್ನದ ವಿಚಾರ ತಿಳಿಸಿದೆ. ಕೂಡಲೇ ಗುರುನಾಥರು ನೇರವಾಗಿ ಅದ್ವೈತ ಪೀಠಕ್ಕೆ ಹೋಗಿ ಜಗದ್ಗುರುಗಳಲ್ಲಿ ಅವರ ಒಂದು ಜೊತೆ ಪಾದುಕೆ ನೀಡುವಂತೆ ವಿನಂತಿಸಲು ತಿಳಿಸಿದರು. 

ಅದು ನವರಾತ್ರಿಯ ಸಮಯ. ಚರಣದಾಸನಾದ ನಾನು ಅದ್ವೈತ ಪೀಠಕ್ಕೆ ಹೋಗಿ ಶ್ರೀ ಶ್ರೀ ಗಳಲ್ಲಿ ವಿನಂತಿಸಿದೆ. ಕೂಡಲೇ ತಮ್ಮ ಪಾದುಕೆಗಳನ್ನಿತ್ತು ಅನುಗ್ರಹಿಸಿದರು. 

"ನಮ್ಮ ಮನೆಯಲ್ಲಿಯೂ ಒಂದು ಜೊತೆ ಪಾದುಕೆ ಇರಬಾರದೇ?" ಎಂಬ ನನ್ನ ಮನೋಭಿಲಾಷೆಯನ್ನು ಗುರುನಾಥರು ಈ ರೀತಿ ಪೂರ್ಣಗೊಳಿಸಿದರು. 

ಕೆಲವು ಕಾಲದ ನಂತರ "ಪಾದುಕೆ ನೀಡುವ ಹಾಗೂ ಪಾದುಕಾಪೂಜೆ ಮಾಡಿಸುವ ಉದ್ದೇಶವೇನು ಗುರುಗಳೇ?" ಎಂದು ಪ್ರಶ್ನಿಸಿದೆ. ಅದಕ್ಕೆ ಗುರುನಾಥರು "ಸಣ್ಣವನಾಗು, ಪಾದುಕೆಯಾಗು, ಸದಾ ವಿನೀತ ಭಾವದಲ್ಲಿರು" ಎಂದು ಉತ್ತರಿಸಿದರು. .......,,,,,,,,,,


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 



।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।





Wednesday, November 2, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 29


ಆ ವ್ಯಕ್ತಿ ಇಂಜಿನಿಯರ್ ಆದದ್ದು 



                                                    
                                       ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
                                            ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।



ಚಿಕ್ಕಮಗಳೂರಿನವರಾದ ಆ ವ್ಯಕ್ತಿ ಅಪ್ಪ ಅಮ್ಮಂದಿರ ಏಕೈಕ ಪುತ್ರ. ತಂದೆ ಅನಾರೋಗ್ಯವಿದ್ದು, ತಾಯಿ ಗುರುಗಳ ಪರಮ ಭಕ್ತೆ. ಅವರ ಆರ್ಥಿಕ ಸ್ಥಿತಿ ಸಾಮಾನ್ಯವಾಗಿತ್ತು. 

ಆತ ಕಷ್ಟಪಟ್ಟು ಸರ್ಕಾರ ಕೊಡಮಾಡುವ ಶಿಕ್ಷಣಕ್ಕೆ ಸಾಲ ಪಡೆದು ಇಂಜಿನಿಯರಿಂಗ್ ಓದುತ್ತಿದ್ದನು. ಕಾಲೇಜಿನಲ್ಲಿ ನಡೆವ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ದೇಶದ ಪ್ರತಿಷ್ಠಿತ ಕಂಪನಿಯೊಂದು ಅವರನ್ನು ಆಯ್ಕೆ ಮಾಡಿ ಆನಂತರ ತಿರಸ್ಕರಿಸಿತ್ತು. ಇದರಿಂದ ಆ ವ್ಯಕ್ತಿ ಬಹಳ ನೊಂದಿದ್ದು ಸಖರಾಯಪಟ್ಟಣಕ್ಕೆ ಬಂದಿದ್ದರು. 

ಆತ ಬಂದಾಗಲೆಲ್ಲ ಗುರುನಾಥರು ಇರಲಿ, ಬಿಡಲಿ ಮನೆಯ ಮೆಟ್ಟಿಲಿಗೆ ನಮಸ್ಕರಿಸಿ ಮನೆಯ ಶೌಚಾಲಯ ತೊಳೆದು ಹೋಗುತ್ತಿದ್ದರು. ಒಮ್ಮೆ ಸಿಕ್ಕ ಗುರುನಾಥರು ಅವರನ್ನು ಕರೆದು ತಾನು ಹಾಕಿದ್ದ ಜನಿವಾರವನ್ನು ತೆಗೆದು ಆ ವ್ಯಕ್ತಿಗೆ ಹಾಕಿ "ನೀನು ಗೆದ್ದೆ  ಹೋಗಿ ಬಾ" ಎಂದು ಕಳಿಸಿದರು. ಇಂದು ಆ ವ್ಯಕ್ತಿ ಹಿಂದೆ ತಿರಸ್ಕರಿಸಲ್ಪಟ್ಟ ಅದೇ ಕಂಪನಿಗೆ ಕೆಲಸಕ್ಕೆ ಸೇರುವಂತಾಗಿ ಉತ್ತಮ ಜೀವನ ನಡೆಸುತ್ತಿರುವರು. 

ಹಾಗೆಯೇ ಇನ್ನೊಮ್ಮೆ ಬೇಲೂರಿನಿಂದ ಬರುತ್ತಿದ್ದ ಓರ್ವ ವ್ಯಕ್ತಿ ರಾಜ್ಯ ಖಜಾನೆ ಇಲಾಖೆಯ ಕೆಲಸಕ್ಕೆ ಅರ್ಜಿ ಹಾಕಿ ಗುರುನಾಥರ ಆಶೀರ್ವಾದ ಪಡೆಯಲು ಬಂದಿದ್ದರು. 

ಆ ವ್ಯಕ್ತಿಯನ್ನು ಕರೆದ ಗುರುನಾಥರು "ಆ ವ್ಯಕ್ತಿ ಮೌಖಿಕ ಪರೀಕ್ಷೆ ನಡೆವುದು ಮೇಲಂತಸ್ತಿನ ಮಹಡಿಯಲ್ಲಿ. ಅಲ್ಲಿಗೆ ಹೋಗಲು ಎಷ್ಟು ಮೆಟ್ಟಿಲುಗಳಿರುವುದು. ಪರೀಕ್ಷೆ ಮಾಡುವವರು ದಪ್ಪಗಿರುವ ಓರ್ವ ಮಹಿಳೆ ಹಾಗೂ ಅವರು ಇಂತಿಂತಹ ಪ್ರಶ್ನೆ ಕೇಳುವರು. ಮತ್ತು ನೀನು ಆಯ್ಕೆ ಆಗುತ್ತಿ ಹೋಗಿ ಬಾ" ಎಂದು ಆಶೀರ್ವದಿಸಿ ಕಳುಹಿಸಿದರು. ಅವರಂದಂತೆಯೇ ಎಲ್ಲವೂ ಚಾಚೂ ತಪ್ಪದೆ ನಡೆದಿದ್ದು ಇಂದು ಆ ವ್ಯಕ್ತಿ ಬೇಲೂರಿನಲ್ಲೇ ಕೆಲಸದಲ್ಲಿರುವರು. 

ಚಿಕ್ಕಮಗಳೂರಿನ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯಲ್ಲಿ ವೃತ್ತಿಯಲ್ಲಿದ್ದ ಇಬ್ಬರು ಗುರುನಾಥರ ದರ್ಶನಕ್ಕಾಗಿ ಆಗಾಗ್ಗೆ ಬರುತ್ತಿದ್ದರು. ಅದರಲ್ಲಿ ಒಬ್ಬಾತ ಉಪನಿರೀಕ್ಷಕ ಹುದ್ದೆಗಾಗಿ ಇಲಾಖಾ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದರು. ಮೊದಲ ಬಾರಿ ಅನುತ್ತೀರ್ಣರಾಗಿದ್ದು ಎರಡನೇ ಬಾರಿ ಅರ್ಜಿ ಸಲ್ಲಿಸಿ ಅಲ್ಲಿಂದ ಗುರುಗಳ ಅನುಗ್ರಹಕ್ಕಾಗಿ ಬಂದರು. 

ಅವರಿಗೆ ಗುರುನಾಥರು ಅಲ್ಲಿ ಕೇಳುವ ಪ್ರಶ್ನೆಗಳನ್ನು ತಿಳಿಸಿ ಆಶೀರ್ವದಿಸಿ ಕಳಿಸಿದರು. ಎಲ್ಲವೂ ಅಂತೆಯೇ ನಡೆದು ಇಂದು ಗುರುಕೃಪೆಯಿಂದ ಆತ ಉಪನಿರೀಕ್ಷಕ ಹುದ್ದೆಯಿಂದ ವೃತ್ತನಿರೀಕ್ಷಕ ಹುದ್ದೆಗೆ ಬಡ್ತಿ ಹೊಂದಿರುವರು. 

ಇವೆಲ್ಲವೂ "ಗುರುವಾಕ್ಯ ಪ್ರಮಾಣ ಕಣಯ್ಯಾ" ಎಂದು ಆಗಾಗ್ಗೆ ಹೇಳುತ್ತಿದ್ದ ಗುರುನಾಥರ ಮಾತಿಗೆ ಕೆಲವು ಉದಾಹರಣೆಗಳು ಮಾತ್ರ........,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।



Tuesday, November 1, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 28


ಗುರು ಪ್ರಸಾದ 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಇದಾದ ನಂತರ ನಿಟ್ಟುಸಿರಿಟ್ಟು ಆ ತಾಯಿ ಮತ್ತೆ ಇನ್ನಷ್ಟು ಉತ್ಸಾಹದಿಂದ ಹೀಗೆ ಹೇಳತೊಡಗಿದರು. 

ನೋಡಿ ಒಮ್ಮೆ ನಾಲ್ಕೈದು ದಿನಗಳಿಂದ ಇದ್ದಕ್ಕಿದ್ದಂತೆ ನನಗೆ ವಿಪರೀತ ಬಲಗೈ ಸೆಳೆತ ಹಾಗೂ ನೋವಾಗುತ್ತಿತ್ತು. ಗುರುನಾಥರು ಚಿಕ್ಕಮಗಳೂರಿನ ಭಕ್ತರ ಮನೆಯಲ್ಲಿರುವರೆಂದು ತಿಳಿದು ಅಲ್ಲಿಗೆ ದೌಡಾಯಿಸಿದೆ. ಇದಕ್ಕೂ ಮೊದಲು ವೈದ್ಯಕೀಯ ಪರೀಕ್ಷೆ ನಡೆಸಲಾಯಿತಾದರೂ ವೈದ್ಯರಿಗೆ ಕೈ ನೋವಿನ ಕಾರಣ ತಿಳಿಯಲಿಲ್ಲ. ನನ್ನ ಕಂಡೊಡನೆಯೇ ಗುರುನಾಥರು ನಗುತ್ತಾ "ಏನು ನಾಲ್ಕೈದು ದಿನದಿಂದ ಕಾಣಲಿಲ್ಲವಲ್ಲಾ?" ಅಂದ್ರು ನಗುತ್ತಾ .... ನಾನು ನನ್ನ ಕೈ ನೋವಿನ ವಿಚಾರ ತಿಳಿಸಲು ಕೂಡಲೇ ನನ್ನ ಕೈ ಮುಟ್ಟಿ "ಈ ಕೈನಾ? ನಿಂಗೇನಾಗುತ್ತೆ ಬಿಡು...." ಅಂದ್ರು. ಅದೇ ಕೊನೆ. ನನ್ನ ಕೈ ನೋವು ಹೆಸರಿಲ್ಲದಂತೆ ಮಾಯವಾಗಿತ್ತು. 

ಮತ್ತೊಮ್ಮೆ ನನ್ನ ಮಗನ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತ್ತು. ನಾನು ನನ್ನ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಗುರುನಿವಾಸಕ್ಕೆ ಬಂದ್ರೆ ಅಲ್ಲಿ ವಿಪರೀತ ಜನಜಂಗುಳಿ. ನನಗೆ ಮಾತಾಡಲು ಅವಕಾಶ ಸಿಗುತ್ತೋ ಇಲ್ಲವೋ ಅಂತ ಆತಂಕದಿಂದ ಕಣ್ಣೀರಿಟ್ಟೆ. ಕೂಡಲೇ ನನ್ನನ್ನು ಗದರಿಸಿ ಕುಳಿತುಕೊಳ್ಳಲು ಹೇಳಿದರು. ಸುಮಾರು ಒಂದೂವರೆ ಗಂಟೆ ನಂತರ "ನಿನ್ನ ಮಗನಿಗೆ ಯಾವ ತರಹದ ಸಮಸ್ಯೆ ಇಲ್ಲ. ಕೇವಲ ಕಾಲಿನ ಮಂದಿ ಹಾಗೂ ತಲೆ ಹಿಂಬದಿ ನೋವು ಬರುವುದು ಅಷ್ಟೇ" ಅಂದು ಅಲ್ಲಿದ್ದ ಜನರತ್ತ ತಿರುಗಿ "ನೋಡಿ, ಸ್ಕ್ಯಾನ್ ಮಾಡಿದೀನಿ. ಫೀಸ್ ಕೊಡ್ಬೇಡ್ವೇ ನಂಗೆ?" ಎಂದರು ನಸು ನಗುತ್ತಾ... ನಂತರ ಗುರುವಿನ ಅನುಗ್ರಹದಿಂದ ನನ್ನ ಮಗನ ಖಾಯಿಲೆ ದೂರಾಯ್ತು. ಇನ್ನೇನಾದ್ರೂ ಹೇಳಿ ಎಂಬಂತೆ ನಾನು ಅವರನ್ನು ದಿಟ್ಟಿಸಲು ಅವರು ನಸುನಕ್ಕು ಮತ್ತೆ ಮಾತು ಮಂದುವರೆಸಿದರು. 

ಮತ್ತೊಮ್ಮೆ ನನ್ನ ಮಗನ ಸಲುವಾಗಿ ಬೆಳಗಾವಿಗೆ ಹೋಗಬೇಕಾಯ್ತು. ಈ ವಿಷಯ ತಿಳಿದು ಗುರುಗಳು "ಹೊರಡೋ ದಿನ ಬೆಳಿಗ್ಗೆ ಚಿತ್ರಾನ್ನ ಮಾಡಿಕೊಂಡು ಹೋಗಿ ಹಂಚು" ಅಂದಿದ್ರು. ನಾ ಹೊರಡೊ ಗಡಿಬಿಡಿಲಿ ಸ್ವಲ್ಪ ಮಾಡಿಕೊಂಡೋದೆ. ಬೆಳಗಾವಿ ತಲುಪಿದ ನಂತರ ಚಿತ್ರಾನ್ನ ಹಂಚುವ ಸಲುವಾಗಿ ರಸ್ತೆಗೆ ಬಂದು ನಿಂತಾಕ್ಷಣ ಅಲ್ಲಿದ ಜನರೆಲ್ಲಾ ಚಪ್ಪಲಿ ಬಿಚ್ಚಿಟ್ಟು ಕೈಮುಗಿದು ಪ್ರಸಾದವೆಂಬಂತೆ ಚಿತ್ರಾನ್ನ ಸ್ವೀಕರಿಸುತ್ತಿದ್ದ ರೀತಿ ಆ ನನ್ನೊಡೆಯ ಸದಾ ನಮ್ಮೊಡನಿರುವನೆಂಬ ಭಾವವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಗುರುಕೃಪೆಯಿಂದ ಬಂದ ಕೆಲಸವೂ ಸರಾಗವಾಗಿ ನಡೆಯಿತು...." ಎಂದು ನುಡಿದು ಕ್ಷಣ ತಡೆದು ಇನ್ನು ನನ್ನ ಮನದ ನೆನಪೆಂದರೆ ಒಮ್ಮೆ ನಾನು ಯಾವುದೋ ಕಾರ್ಯ ನಿಮಿತ್ತ ದಿಢೀರನೆ ಬೆಂಗಳೂರಿಗೆ ಹೋಗಬೇಕಾಯ್ತು. ಗುರುನಾಥರಿಗೆ ತಿಳಿಸದೇ ಹೊರಟು ಬಿಟ್ಟೆ. ಎರಡು ಮೂರು ದಿನದ ನಂತರ ಗುರುದರ್ಶನಕ್ಕೆ ಬಂದೆ. ನನ್ನ ನೋಡಿ ಗುರುಗಳು ಏನು? ಎರಡು ಮೂರು ದಿನಗಳಿಂದ ಕಾಣೆಯಾಗಿದ್ರಲ್ಲಾ? ಎಂದು ಪ್ರಶ್ನಿಸಿದರು. 

ಆ ಕ್ಷಣವೇ ನಿನ್ನ ಮುಂದೆ ಗುರುವಿಗೆ ತಿಳಿಸದೇ ಎಲ್ಲಿಗೂ ಹೋಗಬಾರದು ಅಂತ ತೀರ್ಮಾನಿಸಿದೆ. ಕಾರಣ ಆ ಗುರು ಪ್ರತಿ ಕ್ಷಣವೂ ನಮ್ಮನ್ನು ಗಮನಿಸಿ ರಕ್ಷಿಸಿ ಕಾಯುತ್ತಿರುವನೆಂಬುದು ನಮ್ಮ ನಂಬುಗೆ. ಆ ನಂಬುಗೆಯಲ್ಲೇ ನಮ್ಮ ಜೀವನ.... ಎಂದು ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಾ ಮೌನವಾದರು ಆ ತಾಯಿ. 

"ನಿನ್ನ ಅರಿವೆಂಬ ನೆರಳೇ ಗುರು" ಎಂಬ ಗುರುವಾಕ್ಯವನ್ನು ನೆನೆಯುತ್ತಾ ನಾನು ಆ ದಂಪತಿಗಳಿಗೆ ಕೈಮುಗಿದು ಹೊರಬಂದೆ.....,,,,,,,  


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 



।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।