ಒಟ್ಟು ನೋಟಗಳು

Monday, November 28, 2016

ಅರಕಲಗೂಡಿನಲ್ಲಿ ಮಾರ್ಗಶಿರ ಮಾಸದ ಅಖಂಡ ವೀಣಾ ಸದ್ಗುರು ನಾಮಸ್ಮರಣೆ ಕಾರ್ಯಕ್ರಮದ ಆಯೋಜನೆ 


ಮುಂದಿನ ತಿಂಗಳ ಅಂದರೆ 3-12-2016 (ಶನಿವಾರ) ಮತ್ತು  4-12-2016 (ಭಾನುವಾರ) ದಂದು ಹಾಸನ ಜಿಲ್ಲೆ, ಅರಕಲಗೂಡಿನ ಗುರುಬಂಧುಗಳಾದ ಶ್ರೀ.ಶಂಕರ್ ಅವರ ಸ್ವಗೃಹದಲ್ಲಿ ಮಾರ್ಗಶಿರ ಮಾಸದ ಅಖಂಡ ವೀಣಾ ಸದ್ಗುರು ನಾಮಸ್ಮರಣೆ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಗುರುಬಂಧುಗಳಿಗೂ ಆಹ್ವಾನವಿದ್ದು ಆಸಕ್ತ ಗುರುಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ. 

ಕಾರ್ಯಕ್ರಮ ನಡೆಯುವ ವಿಳಾಸ ಈ ಕೆಳಕಂಡಂತೆ ಇದೆ: 

ಶ್ರೀ.ಶಂಕರ್, 
ಮನೆ ಸಂಖ್ಯೆ: 32, ಕೆ.ಇ.ಬಿ. ರಸ್ತೆ, 
ಅರಕಲಗೂಡು, 
ಹಾಸನ ಜಿಲ್ಲೆ, ಕರ್ನಾಟಕ
ದೂರವಾಣಿ ಸಂಖ್ಯೆ : 89516 92648

Sunday, November 27, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 15


ಹಾಕಿದ ಜನಿವಾರವ ಸದ್ಗುರುನಾಥ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಮನುಷ್ಯ ಎಷ್ಟು ಅಧಿಕಾರ, ಹಣ, ಸೌಲಭ್ಯಗಳನ್ನು ಪಡೆದರೇನು?, ಗುರುಕರುಣೆ ದೊರಕದಿದ್ದರೆ ಕೆಲವೊಮ್ಮೆ ಎಲ್ಲವೂ ವ್ಯರ್ಥವೆನಿಸಿ, ಏನಿದೆ ಈ ಜೀವನದಲ್ಲಿ? ನಾನೇಕೆ ಬದುಕಬೇಕೆಂಬ ನಿರಾಶೆಯ ಭಾವನೆ ಜಾಗೃತವಾಗುವುದುಂಟು. ಅಂತಹ ಸಂದರ್ಭದಲ್ಲಿ ಈ ಜೀವನದಲ್ಲಿ ಬದುಕಿದ್ದೇನು ಪ್ರಯೋಜನ, ಇದನ್ನು ಕೊನೆಗಾಣಿಸಿ ಬಿಡಬಾರದೇಕೆಂಬ ಭಾವನೆ ಬರುವುದೂ ಉಂಟು. ಇಂತಹ ಭಾವನೆ ಒಬ್ಬ ಸಾತ್ವಿಕರ ಮನದಲ್ಲಿ ಇದ್ದಕ್ಕಿದ್ದಂತೆ ಮೂಡಿತು. ಬಚ್ಚಲಮನೆಯಲ್ಲಿ ಅವರಿಗೆ ಈ ಭಾವನೆ ಬಂದು ಏನೋ ಅವಘಡವಾಗುವುದರಲ್ಲಿ ಅಲ್ಲೊಂದು ರೂಪ ಅವರ ಕಣ್ಣಿಗೆ ಬಿಟ್ಟು. ಆ ಚೈತ್ಯನ್ಯಮಯ ರೂಪ ಸಾವಿನೆಡೆಯಿಂದ ಜೀವನದೆಡೆಗೆ ಇವರನ್ನು ಸೆಳೆದು ತಂದಿತು. ಅಲ್ಲಿ ಕಂಡ ಚೈತನ್ಯ ರೂಪಕ್ಕೆ ಅದಾವ ಜನ್ಮದ ನಂಟಿತ್ತೋ, ಆ ಚೈತನ್ಯಕ್ಕೆ ಇವರೇನು ಸೇವೆ ಮಾಡಿದ್ದರೋ ಗೊತ್ತಿಲ್ಲ. 

ಮುಂದೆ ಸ್ನೇಹಿತರೊಬ್ಬರು 'ಸಖರಾಯಪಟ್ಟಣದ ಅವಧೂತರನ್ನೂ ನಾವು ನೋಡಲು ಹೋಗುತ್ತಿದ್ದೇವೆ ಬರುತ್ತೀರಾ' ಎಂದಾಗ ಈ ದಂಪತಿಗಳೂ ಹೊರಟೇ ಬಿಟ್ಟರು. ಗುರುನಾಥರ ಮನೆಯ ಒಳಗೆ ಕಾಲಿಟ್ಟು ಗುರುನಾಥರಿಗೆ ನಮಸ್ಕರಿಸಿದಾಗ, ಅವರಿಗೆ ನಿನ್ನೆ ದರ್ಶನ ಕೊಟ್ಟ ಮಹಾತ್ಮರು, ತಮ್ಮನ್ನುಳಿಸಿದವರು, ಇವರೇ ಎಂದು ತಿಳಿದು ಅಪಾರ ಆನಂದವಾಯಿತು. ಗುರುನಾಥರು ಇವರನ್ನು ಹತ್ತಿರಕ್ಕೆ ಕರೆದು, ಜನಿವಾರವನ್ನು ಹಾಕಿದರು, ಹರಸಿದರು. ಜನಿವಾರವೆಂದರೆ ಮರುಜನ್ಮದ ಸಂಕೇತವೋ? ಬ್ರಹ್ಮಜ್ಞಾನ ಪ್ರಾಪ್ತಿಗೆ ದಾರಿಯೋ ಆ ಗುರುನಾಥರೇ ಬಲ್ಲರು. ಜನಿವಾರ ಧರಿಸಿದ ಕುಟುಂಬದಲ್ಲಿ ಜನಿಸಿದ ಇವರಿಗೆ ಗುರುನಾಥರು 'ಹಾಕಿದ ಜನಿವಾರವ, ಸದ್ಗುರುನಾಥ ನೂಕಿದ ಭಾವಬಾರವ' ಎಂಬ ನುಡಿಯಂತೆ ಅನುಗ್ರಹಿಸಿದ್ದರು. ಜ್ಞಾನಿಗಳಿಗೆ ಜಾತಿ ಮತಗಳ ಎಲ್ಲೆ ಎಲ್ಲಿದೆ? ಓದುಗ ಗುರುಭಕ್ತರೇ, ಹಿಂದೆಂದೂ ಗುರುನಾಥರನ್ನು ನೋಡೇ ಇರದ ಅವರಿಗೆ ಗುರುನಾಥರು ಕೃಪೆ ತೋರಿ, ಉದ್ಧರಿಸಿದ ಈ ರೀತಿ ನೋಡಿದರೆ ಗುರುನಾಥರು ಹೇಳುತ್ತಿದ್ದ ಮಾತೊಂದು ನೆನಪಿಗೆ ಬರುತ್ತದೆ. 'ಒಮ್ಮೆ ಅವನ ಮನೆಯ ಒಂದು ತೊಟ್ಟು ಹಾಲನ್ನು ಕುಡಿದರೆ ಜನ್ಮ ಜನ್ಮಗಳು ಅವನ ಉದ್ಧಾರ ಮಾಡುವ ಹೊಣೆ ನನ್ನ ಮೇಲೆ ಇರುತ್ತದೆ' ಎಂಬುದು ಅದೆಷ್ಟು ಸತ್ಯ. ಗುರುಸಂಬಂಧ, ಬಾಂಧವ್ಯ, ಗುರುಕರುಣೆ ಜನ್ಮ ಜನ್ಮಾಂತರದ ನಂಟೆಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ? ಅವರ ಕೃಪೆಯಾಯಿತೆಂದರೆ ಎಷ್ಟು ದೂರ ಇದ್ದರೇನು? ಯಾವ ಸ್ಥಿತಿಯಲ್ಲಿದ್ದರೇನು? ಹಿಡಿದೆಳೆದು ತಂದು, ತಮ್ಮ ಪಾದಕ್ಕೆ ಹಾಕಿಕೊಂಡು ಉದ್ಧರಿಸುವ ರೀತಿ ಅನನ್ಯ. 

ಪರಮಹಂಸನಾಗಿ ಹೋಗಿದ್ದಾನೆ 


ಶಿವಮೊಗ್ಗದಲ್ಲಿದ್ದ ಒಬ್ಬ ಗುರುಬಂಧುಗಳಿಗೆ ಗುರುನಾಥರ ಬಗ್ಗೆ ಅಪಾರ ಒಲವು ಇದ್ದಿತು. ದಿನ ಸಂಜೆ ಮಿತ್ರರು ಸೇರಿದಾಗ ಗುರುನಾಥರ ಚಿಂತನೆಯೇ ಅವರ ಹರಟೆಯ ವಸ್ತುವಾಗಿತ್ತು. ಹರಟೆ ಹೀಗೆ ಸತ್ಸಂಗವಾಗಿತ್ತು. ಅನೇಕ ಜನ ಸಾಮಾನ್ಯರೂ ಈ ಸತ್ಸಂಗದಿಂದ ಗುರುಭಕ್ತರಾಗಿ, ಗುರುನಾಥರ ಶಿಷ್ಯರಾಗಿ, ತಮ್ಮ ಜೀವನದ ಮಾರ್ಗವನ್ನೇ ಬದಲಿಸಿಕೊಂಡಿದ್ದರು. ದೀಪ ಒಂದರಿಂದ ಸಾವಿರ ದೀಪ ಬೆಳಗಿಸುವಂತೆ, ಸದ್ಗುರುನಾಥ ಲೀಲಾಮೃತ ಅದ್ಭುತವಾದುದನ್ನೇ ಮೆರೆದಿತ್ತು. 

ಈ ರೀತಿ ತಮ್ಮ 'ಹರಟೆ' ಯಿಂದ ತಮ್ಮ ಸ್ನೇಹಿತರನ್ನೂ ಗುರುನಾಥರ ಭಕ್ತರಾಗಿಸಿದ ಅವರು ಆಂಜನೇಯನ ಭಕ್ತರು. ಗುರುನಾಥರಿಗೆ ಇದರ ಅರಿವಾಗಿ 'ನೀನು ಆಂಜನೇಯನನ್ನು ನೋಡಬೇಕೆ.. ನೋಡಿಲ್ಲಿ' ಎಂದು ಆಂಜನೇಯನ ದರ್ಶನವನ್ನು ಮಾಡಿಸಿ ಪೂರ್ಣ ಅನುಗ್ರಹಿಸಿದರಂತೆ. ತಮ್ಮ ವೃತ್ತಿಯ ಜೊತೆಗೆ ಗುರುಭಕ್ತಿಯ ಪ್ರವೃತ್ತಿಯಿಂದ ಸಂಪ್ರೀತರಾದ ಅವರಿಗೆ, ಬೆಂಗಳೂರಿಗೆ ವರ್ಗವಾಯಿತು. ಅಲ್ಲಿಂದಲೇ ಸಂಜೆ ದೂರವಾಣಿಯಲ್ಲಿ ಗುರುನಾಥ ಸಂಕೀರ್ತನವೇ ನಡೀತಿತ್ತು. 

ಒಮ್ಮೆ ಈ ಗುರುಬಂಧುಗಳ ಗುರುಬಂಧುಗಳಿಗೆ ಗುರುನಾಥರು ತೀರ್ಥಹಳ್ಳಿಯ ಬಳಿ ಸಿಕ್ಕಿದರು. ತಮ್ಮ ಸ್ನೇಹಿತರಿಗೆ ವಿಚಾರ ತಿಳಿಸಲು ಇವರು ಶತ ಪ್ರಯತ್ನಪಟ್ಟರೂ ಅವರು ಸಿಗಲಿಲ್ಲ. ಬೆಂಗಳೂರಿನಲ್ಲಿ ಅಂದೇ ಅವರೊಂದು ಬಸ್ ಅಪಘಾತದಲ್ಲಿ ಇಹಲೀಲೆಯನ್ನು ಮುಗಿಸಿದ್ದರು. ವಿಷಯ ತಿಳಿದ ಇವರು ಮೈಸೂರಿಗೆ ಓಡಿದ್ದರು. ಅಲ್ಲಿ ತಿಳಿದ ವಿಚಾರವೆಂದರೆ ಹದಿನೈದು ದಿನಗಳ ಹಿಂದೆಯಷ್ಟೇ ಗುರುನಾಥರು ಅಲ್ಲಿಗೆ ಹೋಗಿ, ಮೂರು ದಿನಗಳು ನಿರಂತರ ಅವರೊಂದಿಗಿದ್ದು ಪೂರ್ಣಾಶೀರ್ವಾದ ಮಾಡಿ ಬಂದಿದ್ದರಂತೆ. ಆ ಜೀವ ಪರಮ ಸಂತೃಪ್ತಿಯನ್ನು ಪಡೆದಿತ್ತು. ಇಹಲೀಲೆ ಮುಗಿಸಿತ್ತು. ಗುರುನಾಥರೂ ನಂತರ ಬಂದು, ಮನೆಯವರನ್ನೆಲ್ಲಾ ಸಂತೈಸಿ, 'ಅವನು ಪರಮಹಂಸನಾಗಿ ಹೋಗಿದ್ದಾನೆ. ದುಃಖಿಸಬೇಡಿರೆಂದು' ಸಮಾಧಾನ ಮಾಡಿ ಬಂದಿದ್ದರಂತೆ. ಹೀಗೆ ಗುರುನಾಥರ ಲೀಲೆಯನ್ನು, ತಮಗೆ ಗುರುದರ್ಶನ ಮಾಡಿಸಿದವರ ವಿಚಾರವನ್ನು ತಿಳಿಸುತ್ತಾ ಅವರು ತಮ್ಮ ಅನುಭವವನ್ನು ಮುಂದುವರೆಸಿದರು. 

ಗುರು ನಿನ್ನೊಳಗೇ ಇದ್ದಾನೆ ನೋಡಿಕೋ 


'ಅಂದು ಮೊದಲ ಬಾರಿಗೆ ಸಖರಾಯಪಟ್ಟಣಕ್ಕೆ ನಮ್ಮ ಮಿತ್ರರು ಗುರುದರ್ಶನ ಮಾಡಿಸಲು ನನ್ನನ್ನು ಕರೆದೊಯ್ದಾಗ ಗುರುನಾಥರು ಊರಲ್ಲಿರಲಿಲ್ಲ. ಗುರುದರ್ಶನವಷ್ಟೇನು ಸುಲಭವೇ? ನಮ್ಮ ಮಿತ್ರರು 'ಬೇಲೂರಿಗೆ ಹೋಗೋಣ... ಬೆಣ್ಣೆಯ ಅಲಂಕಾರ ಚೆನ್ನಾಗಿರುತ್ತೆ' ಎಂದು ನಮಗೆ ಬೇಜಾರಾಗದಿರಲೆಂದು ನುಡಿದರು. ಮುಂದೆ ಎರಡನೇ ಬಾರಿಗೆ ಹೋದಾಗ ಗುರುನಾಥರು ಸಿಕ್ಕರು. ಅವರ ಒಂದೊಂದು ಭೇಟಿಯೂ ಒಂದೊಂದು ಪಾಠ, ಉಪದೇಶವಾಗುತ್ತಾ, ನಮ್ಮನ್ನವರು ತಿದ್ದುತ್ತಿದ್ದರು.

ನಾವು ಕಾರಿನೊಳಗಿನಿಂದ ಹಣ್ಣು ಹಂಪಲು ತರುವುದನ್ನು ಕಂಡು, ಓಡಿ  ಬಂದ ಅವರು 'ಅಲ್ಲಿ ಅವುಗಳ ಅವಶ್ಯಕತೆ ಇಲ್ಲ.. ಅವೇನೂ ಬೇಡವೇ ಬೇಡ... ತರಬೇಡಿ.... ನೀವು ತಯಾರು ಮಾಡಿದ್ದೀರಾ... ನೀವು ಕಷ್ಟಪಟ್ಟು ಬೆಳೆದಿದ್ದರೆ ತನ್ನಿ' ಎಂದು ಖಡಾಖಂಡಿತವಾಗಿ ನುಡಿದರು. ಒಂದು ಕ್ಷಣಕ್ಕೆ ನಮಗೆ ಪೆಚ್ಚಾದರೂ, ಆಂತರ್ಯದಲ್ಲಿದ್ದ ಸತ್ಯವಾದ 'ದುಡ್ಡುಕೊಟ್ಟು ಕೊಂಡು ತಂದು ಏನೂ ಗಿಟ್ಟಿಸುವುದುಅಸಾಧ್ಯ. ಅದಕ್ಕೆ ನಿಷ್ಕಲ್ಮಷ ಭಾವ ಭಕ್ತಿ ಬೇಕೆಂದು, ಹಣದ ಅಹಮಿಕೆ ಬೇಕಾಗಿಲ್ಲ, ಅದಿಲ್ಲಿ ನಡೆಯುವುದೂ ಇಲ್ಲವೆಂಬುದನ್ನು' ಮನಗಾಣಿಸಿದ್ದರು. 

ಮತ್ತೊಮ್ಮೆ ಹೋದಾಗ 'ಯಾರು ಯಾರು ಎಲ್ಲಿದ್ದಾರೋ ಅಲ್ಲೇ ಕುಳಿತಿರಿ' ಎಂದು ಅಲ್ಲೇ ಊಟ ಹಾಕಿಸುತ್ತಿದ್ದರು. ಪಕ್ಕದಲ್ಲಿ ಕುಳಿತ ಶ್ರೀಮಂತ ಹೆಣ್ಣು ಮಗಳೊಬ್ಬಳ ಪಕ್ಕ ಒಂದು ಕೀವು ಒಸರುತ್ತಿದ್ದ ನಾಯಿ ಇತ್ತು. ಅದು ಅವರ ಸನಿಹ ಬಂದಂತೆ ಅತ್ತ ಅತ್ತ ಅವರು ಜರುಗುತ್ತಿದ್ದರು. ಆದರೂ ಗುರುನಾಥರು ಅವರನ್ನು ಅಲ್ಲಿಯೇ ಕೂರಿಸಿ ಊಟ ಬಡಿಸಿ, ಪ್ರಾಣಿದಯೆ, ಭಗವಂತನ ಸೃಷ್ಠಿಯಲ್ಲಿ ಎಲ್ಲವೂ ಸುಂದರ, ಅದರಲ್ಲಿ ಅಸಹ್ಯ ಪಡುವುದೇನೂ ಇಲ್ಲ' ಎಂಬುದನ್ನು ಭಕ್ತರಿಗೆ ತಿಳಿಸಿದ್ದರು. 

ಗುರುನಾಥ ಸಂಕೀರ್ತನವನ್ನು ಮತ್ತೆ ಅವರು ಮುಂದುವರೆಸಿದರು. 'ಗುರು ಗುರು ಎಂದು ಎಲ್ಲೆಲ್ಲೋ ಏಕೆ ಅಲೆಯುತ್ತೀರಿ. ನಿಮ್ಮೊಳಗೆ ಗುರುವಿದ್ದಾನೆ. ಅದನ್ನು ಕಂಡುಕೊಳ್ಳಿ' ಎಂದಾಗ ಅವರ ಸರಳತೆ ನನಗೆ ಪ್ರಿಯವಾಯಿತು. 

'ಒಮ್ಮೆ ಭಾರಿ  ಮೊತ್ತದ ಹಣ, ನನಗೆ ಅನಿವಾರ್ಯವಾಗಿತ್ತು. ಅದನ್ನು ಹೇಗೆ ಹೊಂದಿಸುವುದೆಂಬ ಚಿಂತೆಯಲ್ಲಿದ್ದೆ. ಗುರುನಾಥರ ಕೃಪೆಯಾಯಿತೆಂಬಂತೆ, ನನ್ನ ಮಿತ್ರರೊಬ್ಬರು ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದು, ಅಲ್ಲಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಬಂದು ನನಗೆ ಹಣ ನೀಡಿ ಸಹಕರಿಸಿದ್ದರು. ಇದು ಆ ಗುರುನಾಥರ ಕರುಣೆ ಎಂದೇ ನನಗನಿಸಿದ್ದು. ಮತ್ತೊಮ್ಮೆ ನಾನು ಕಂಡ ವಿಚಿತ್ರವೆಂದರೆ, ಜಗದ್ಗುರುಗಳು ಸಖರಾಯಪಟ್ಟಣಕ್ಕೆ ಬರುತ್ತಾರೆಂದು ತಿಳಿದು ನಾವು ಶಿವಮೊಗ್ಗದಿಂದ ಹೊರಟೆವು. ನಮ್ಮ ಮಿತ್ರರು ಶೃಂಗೇರಿಯಿಂದ ಹೊರಟರು. ಭಾರಿ ಮಳೆ, ಹೇಗಪ್ಪಾ ಎಂದು ನಾವು ಚಿಂತಿಸುತ್ತಾ, ಸಖರಾಯಪಟ್ಟಣ ತಲುಪಿದಾಗ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಗದ್ಗುರುಗಳು ಬಂದು ಹೋಗುವವರೆಗೆ ಒಂದು ಹನಿ ಮಳೆ ಇರಲಿಲ್ಲ. ಇಲ್ಲಿ ಯಾರಿಗೆ ಏನೂ ತೊಂದರೆಯಾಗಿರಲಿಲ್ಲ. ಗುರುನಾಥರೆಂದರೆ, ಸಾಮಾನ್ಯರೇ? ಪ್ರಕೃತಿಯ ಮೇಲೆ ಅವರ ಪ್ರಭಾವ ಅದೆಷ್ಟಿತ್ತೆಂಬುದು ಎಲ್ಲರಿಗೂ ಅರಿವಾಗಿತ್ತು. ಗುರುನಾಥರ ವಿನಯಶೀಲತೆ, ಜಗದ್ಗುರುಗಳಿಗೆ ತೋರುವ ಗೌರವದಂತೆ, ಕೂಲಿಯಾಳುಗಳ ಜೊತೆ ಅವರ ವರ್ತನೆಯೂ ಎಷ್ಟು ಆಪ್ಯಾಯಮಾನವಾಗಿತ್ತೆಂದರೆ, 'ಅಯ್ಯಾ ಒಂದಷ್ಟು ಕಾಯಿ ಕಿತ್ತು ಕೊಡುತ್ತಿರುವನಯ್ಯ' ಎಂದು ಕೇಳುವ ರೀತಿ, ಕೆಲಸ ಮಾಡಿದವರಿಗೆ ಹಣ ನೀಡಿ' ನಿನಗೆ ಸಾಕಾಗುತ್ತೆನಯ್ಯಾ, ಇನ್ನೂ ಸ್ವಲ್ಪ ಬೇಕೇನಯ್ಯಾ' ಎಂದು ಪ್ರೀತಿಯಿಂದ ನುಡಿವ ರೀತಿ - ಅದು ಅವರಿಗೇ ಮೀಸಲು. ಗುರುನಾಥರ ಬಳಿ ಹೋದಾಗ ಅವರಾಡುತ್ತಿದ್ದ ಮಾತು ಯಾರಿಗೋ, ಎನಿಸುತ್ತಿದ್ದರೂ ಅದು ಯಾರನ್ನೋ ಕುರಿತಾಗಿಯೇ ಇರುತ್ತಿತ್ತು. ಅವರೆಷ್ಟು ಬೈದರೂ ಮತ್ತೆ ಮತ್ತೆ ಅವರ ಬಳಿ ಹೋಗಬೇಕೆಂಬ ಆಸೆಯೇ ಆಗುತ್ತಿತ್ತೇ ಹೊರತು ಬೇಸರವಾಗುತ್ತಿರಲಿಲ್ಲ. ಎಲ್ಲ ಬಲ್ಲವರಂತೆಯೇ ಗುರುನಾಥರು ಸರ್ವಾಂತರ್ಯಾಮಿಗಳೆಂಬುದಕ್ಕೆ ಈ ನಿದರ್ಶನ ಕೇಳಿ. ನಮ್ಮ ಸ್ನೇಹಿತರ ಸಹೋದರಿ ಅಮೇರಿಕೆಯಲ್ಲಿದ್ದರು. ಅವರು ಗುರುನಾಥರ ಭಕ್ತೆ. ಅಮೇರಿಕೆಯ ತಮ್ಮ ಮನೆಯಲ್ಲಿ ಅವರು ಗುರುನಾಥರ ಫೋಟೋ ಹಾಕಿಕೊಂಡಿದ್ದರು. ಆಕೆಯ ಯಜಮಾನರು ಗುರುನಾಥರ ಫೋಟೋ ನೋಡಿ ಏನೋ ಸಲ್ಲದ ಮಾತನಾಡಿದ್ದರಂತೆ. ಒಂದು ದಿನ ಗುರುನಾಥರು ಬೆಂಗಳೂರಿನ ಅವರ ಸಂಬಂಧಿಗಳ ಮನೆಗೆ ಹೋಗಿ 'ಏನಮ್ಮಾ ನಿನ್ನ ತಂಗಿಗೆ ಫೋನು ಮಾಡಿಕೊಡೆಂದು' ಅವಸರಿಸಿದಾಗ, ಫೋನಿನಲ್ಲಿ ಅಂತರ ರಾಷ್ಟ್ರೀಯ ಕರೆಗಳ ಕರೆನ್ಸಿ ಮುಗಿದಿರುವುದನ್ನು ಗಮನಿಸದೇ, ಡಯಲ್ ಮಾಡಿ ಗುರುನಾಥರಿಗೆ ನೀಡಿದರಂತೆ. ಇತ್ತಲಿಂದ ಗುರುನಾಥರು 'ಏನಮ್ಮ ನಿನ್ನ ಗಂಡ ನನಗೆ ಬಯ್ಯುತ್ತಾನಂತಲ್ಲ. ನಾನೇನು ತಪ್ಪು ಮಾಡಿದೀನಿ? ಅವನಿಗೆ ಕೊಡು, ಎಂದು ಅವರ ಜೊತೆಯೂ ಅದೆಷ್ಟೋ ಹೊತ್ತು ಮಾತನಾಡಿದಾಗ, ಆ ಮನುಷ್ಯ ಕರಗಿ ನೀರಾಗಿ ಗುರುನಾಥರ ಭಕ್ತರಾಗಿಬಿಟ್ಟರಂತೆ. ಈಗಲೂ ಅವರು ಗುರುನಾಥರ ಸ್ಮರಣೆಯಲ್ಲಿದ್ದಾರೆ. ಇದಕ್ಕಿಂತ ಆಶ್ಚರ್ಯವೆಂದರೆ, ಕರೆನ್ಸಿಯೇ ಇಲ್ಲದೆ ಗುರುನಾಥರು ಅಷ್ಟೊಂದು ಹೊತ್ತು ಹೇಗೆ ಮಾತನಾಡಿದರು. ಅಮೆರಿಕದಲ್ಲಾದದ್ದು ಇವರಿಗೆ ಹೇಗೆ ತಿಳಿಯಿತು. ಎಲ್ಲ ಅಯೋಮಯ. ಇದೇ ನಮ್ಮ ಗುರುನಾಥರು' ಎಂದು ಭಾವಪರವಶರಾಗುತ್ತಾರೆ ಅವರು.


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 54

ಕುರದ ಕತೆ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಶೃಂಗೇರಿಯ ದಕ್ಷಿಣಾಮ್ನಾಯ ಪೀಠಕ್ಕೆ ತುಂಬ ನಡೆದುಕೊಳ್ಳುತ್ತಿದ್ದ  ಅವರು ಜಗದ್ಗುರುಗಳು ಎಲ್ಲೇ ಹೋದರು ಆ ಸ್ಥಳಕ್ಕೆ ಭೇಟಿ ನೀಡುತ್ತಿದ್ದುದು ಸಾಮಾನ್ಯವಾಗಿತ್ತು. ಹಾಗೆ ಒಮ್ಮೆ ಜಗದ್ಗುರುಗಳು ಹಾಸನಕ್ಕೆ ಬಂದ ಸಂದರ್ಭ. 

ಅಲ್ಲಿದ್ದ ಭಕ್ತರೋರ್ವರ ಕೌಟುಂಬಿಕ ಸಮಸ್ಯೆ ಪರಿಹಾರಕ್ಕಾಗಿ ಸುಮಾರು 1-1/2 ಗಂಟೆಗೂ ಅಧಿಕ ಕಾಲ ಸುಡುಬಿಸಿಲಿನಲ್ಲಿ ಕಾಯುವ ರಸ್ತೆಯ ಮೇಲೆ ನಿಂತಿದ್ದರು. ಆ ಕಾರಣಕ್ಕಾಗಿ ತನ್ನೆರಡು ಅಂಗಾಲನ್ನು ಸುಟ್ಟುಕೊಳ್ಳಬೇಕಾಯಿತು. ಹಾಗೇ ಕಾಲುಗಳೆರಡೂ ಸುಟ್ಟು ಹೋದಾಗಲೂ ಕಿಂಚಿತ್ತೂ ವಿಚಲಿತರಾಗಲಿಲ್ಲ. 

ಆ ಕಾಲದಲ್ಲಿ ಸುಮಾರು ಎರಡು ತಿಂಗಳ ಕಾಲ ಚಿಕ್ಕಮಗಳೂರಿನಲ್ಲಿ ವಾಸವಾಗಿದ್ದರು. ಆಗ ತನ್ನ ಆರೈಕೆ ಮಾಡಲು ಚರಣದಾಸನಾದ ನಾನು ಇರಬೇಕೆಂದು ಬಹು ಅಪೇಕ್ಷಿಸಿದ್ದರಂತೆ. ಆದರೆ ನಾನು ಮನೆಯ ಇತರ ಕೆಲಸಗಳ ಕಡೆ ಗಮನ ಹರಿಸಿದ್ದರಿಂದ ದೈಹಿಕವಾಗಿ ಅವರ ಜೊತೆ ಇರಲಾಗಲಿಲ್ಲ. 

ಹಾಗೆಯೇ ಇನ್ನೊಮ್ಮೆ ಇದ್ದಕ್ಕಿದ್ದಂತೆಯೇ "ಇನ್ನು ಮೂರು ತಿಂಗಳು ನನ್ನ ಜೀವನ ಬಹಳ ಕಷ್ಟವಿದೆ. ಜೀವ ಹೋದರೂ ಆಶ್ಚರ್ಯವಿಲ್ಲ" ಎಂದಿದ್ದರು. ಅಂತೆಯೇ ಇದ್ದಕ್ಕಿದ್ದಂತೆ ಅವರ ಪೃಷ್ಠ ಭಾಗದಲ್ಲಿ ಒಂದು ಕುರ ವ್ರಣವಾಗಿ ಮಾರ್ಪಟ್ಟಿತು. 

ಆಗ ನನ್ನಿಂದ "ಒಂದು ಲೋಟ ಕಾಫಿ ತರಿಸಿ ಅರ್ಧ ಕುಡಿದ ಗುರುನಾಥರು ಉಳಿದರ್ಧವನ್ನು ನನಗೆ ಕುಡಿಯಲು ನೀಡಿದರು. ನಾ ಕುಡಿಯಲಾರಂಭಿಸಲು "ನನಗೆ ಬಂದ ಕುರವೆಲ್ಲ ನಿನಗೂ ಬರಲಿ" ಎಂದರು. 

ನಾನದಕ್ಕೆ "ಸಂತೋಷದಿಂದ ಸ್ವೀಕರಿಸುವೆ" ಎಂದೆನು. 

ಅದಾಗಿ ನಾನು ತೋಟಕ್ಕೆ ಹೋಗಿ  ಬರುವಷ್ಟರಲ್ಲಿ ಬಲಗಾಲ ಗಂಟಿನಲ್ಲಿ ಒಂದು ಕುರ ಎದ್ದಿತು. ಹಾಗೆ ದೇಹದ ಈತರ ಏಳು ಭಾಗಗಳಲ್ಲಿ ಕುರವೆದ್ದಿತು. ಇತ್ತ ಗುರುನಾಥರ ದೇಹದ ಸ್ಥಿತಿಯಂತೂ ಶೋಚನೀಯವಾಗಿತ್ತು. ಕೂರಲಾಗುತ್ತಿರಲಿಲ್ಲ. ನಡೆಯಲೂ ಮಲಗಲೂ ಆಗುತ್ತಿರಲಿಲ್ಲ. ಜೊತೆಗೆ ಜೊತೆಯಲ್ಲಿದ್ದ ಭಕ್ತರ ಅತಿಯಾದ ಚಿಕಿತ್ಸೆಗಳಿಂದ ಬಹುಶಃ ಮೂರು ತಿಂಗಳ ಕಾಲ ಆ ದೇಹ ಅನುಭವಿಸಿದ ಯಾತನೆ ವರ್ಣನಾತೀತ. ಹಾಗಿದ್ದೂ ಗುರುನಾಥರು ಒಂದಿನಿತೂ ವಿಚಲಿತರಾಗಲಿಲ್ಲ, ಹಾಗೂ ತನ್ನ ದೇಹವನ್ನು ತನ್ನಿಚ್ಚೆಯಂತೆ ಹಿಂಸಿಸುತ್ತಿದ್ದ ಭಕ್ತರಿಗೂ ಏನೂ ಆಕ್ಷೇಪಣೆ ವ್ಯಕ್ತಪಡಿಸಿರಲಿಲ್ಲ. 

"ನನಗೆಂತದಯ್ಯಾ ಸುಖ-ದುಃಖ? ಚಳಿ-ಮಳೆ... ? ಎಲ್ಲವೂ ಒಂದೇ ಕಣೋ" ಅಂತ ಆಗಾಗ್ಗೆ ಮಾರ್ಮಿಕವಾಗಿ ನುಡಿಯುತ್ತಿದ್ದರು. 

ಆ ಮೂರು ತಿಂಗಳಲ್ಲಿ ಸುಮಾರು ಎರಡು ತಿಂಗಳ ಕಾಲ ನನ್ನನ್ನು ಯಾವ ಕಾರಣಕ್ಕೂ ಅವರ ಜೊತೆ ಇರಲು ಬಿಟ್ಟಿರಲಿಲ್ಲ. ಜೊತೆಗಿದ್ದ ಕೆಲವರು ಗುದದ್ವಾರ ಹಾಗೂ ಇತರೆಡೆ ವಿಪರೀತ ಸುಟ್ಟು ಹಾಕುವ ತನಕ ನನ್ನನ್ನು ದೂರ ಕಳಿಸಿದ್ದರು. 

ಆ ನಂತರ ನನ್ನನ್ನು ಹತ್ತಿರ ಬಿಟ್ಟುಕೊಂಡರು. ಬಹುಶಃ ನಾನು ಜನರ ಈ ವಿಪರೀತದ ನಡವಳಿಕೆಯನ್ನು ಖಂಡಿಸುತ್ತಿದ್ದೆ ಎಂಬ ಕಾರಣಕ್ಕೋ ಏನೋ ಸದಾ ನನ್ನನ್ನು ದೂರವಿಟ್ಟಿದ್ದರೆನಿಸುತ್ತದೆ. ಆನಂತರ ಸಂಪೂರ್ಣವಾಗಿ ಗುಣಪಡಿಸಲು ನನಗೆ ಅವಕಾಶ ನೀಡಿದ್ದು ನನ್ನ ಭಾಗ್ಯವೆನಿಸುತ್ತದೆ. 

ನನ್ನ ತಾಳ್ಮೆ ಪರೀಕ್ಷೆಗೆ ಆಗಾಗ್ಗೆ ನಾವಿಬ್ಬರೇ ಇದ್ದಾಗ ಹೇಳುತ್ತಿದ್ದರು. ಜೊತೆಗಿದ್ದವರು ಆ ದೇಹವನ್ನು ಮನಸೋ ಇಚ್ಛೆ ಹಿಂಸಿಸುತ್ತಿದ್ದಾಗಲೂ "ನೀ ಮಾಡಿದ ಆರೈಕೆಯಿಂದ ಬಹಳ ಹಿತವಾಯಿತು ಕಣಪ್ಪಾ.... " ಅನ್ನುತ್ತಿದ್ದರೇ ವಿನಃ ಯಾವ ಕಾರಣಕ್ಕೂ ಅವರಿಗೆ ನೋವು ಮಾಡುವ ಮಾತಾಡ್ತಿರಲಿಲ್ಲ. 

ನಾನು ಈ ಕುರಿತು ಕೇಳಿದರೆ, "ಅವರಿಗೆ ಈ ದೇಹದ ಮೇಲೆ ಅದೊಂದೆ ಆಸೆ ತಾನೇ? ಈಡೇರಿಸಿಕೊಳ್ಳಲಿ ಬಿಡಯ್ಯಾ" ಅನ್ನುತ್ತಿದ್ದರು. ಅಷ್ಟರ ಮಟ್ಟಿಗೆ ದೇಹ ಭಾವವನ್ನು ಪೂರ್ಣ ತೊರೆದಿದ್ದರು. 

ಮತ್ತೊಮ್ಮೆ ಅರಸೀಕೆರೆಯಲ್ಲಿ ಭಕ್ತರೋರ್ವರ ಮನೆಯಲ್ಲಿದ್ದಾಗ ಅವರ ದರ್ಶನಕ್ಕಾಗಿ ಬೆಂಗಳೂರಿನಿಂದ ಕೆಲವು ಪ್ರಖ್ಯಾತ ವೈದ್ಯರುಗಳು ಬಂದಿದ್ದರು. ಅವರು ಗುರುನಾಥರ ದೇಹ ಸ್ಥಿತಿಯನ್ನು ಪರೀಕ್ಷಿಸಬಯಸಿದರಂತೆ. ಅದಕ್ಕೆ ಸಮ್ಮತಿಸಿದ ಗುರುನಾಥರು ಸುಮ್ಮನೆ ಮಲಗಿದರು. 

ಪರೀಕ್ಷೆ ಆರಂಭಿಸಿದ ವೈದ್ಯರುಗಳಿಗೆ ಗುರುನಾಥರ ನಾಡಿ ಬಡಿತ ಹಿಡಿಯಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. 

ಕೆಲ ಪರೀಕ್ಷೆ ನಡೆಸಿ ಕೆಲ ಗಂಟೆಗಳ ಕಾಲ ಪ್ರಯತ್ನಿಸಿದರೂ ಏನನ್ನೂ ಕಂಡು ಹಿಡಿಯಲಾಗದ ವೈದ್ಯರುಗಳು ದಿಗ್ಬ್ರಾಂತರಾಗಿದ್ದರು. ಗುರುನಾಥರು ಮಾತ್ರ ನಗುತ್ತಾ "ಏನ್ ಡಾಕ್ಟ್ರೇ? ನಾಡಿ ಬಡಿತ ಸಿಗ್ತಿಲ್ವ?" ಎಂದು ಪ್ರಶ್ನೆ ಕೇಳ್ತಾ ಜೊತೆಗೇ  ವೈದ್ಯರ ವೈಯಕ್ತಿಕ ಸಮಸ್ಯೆಗಳನ್ನು ಕೇಳಿ ಪರಿಹಾರ ಸೂಚಿಸುತ್ತಿದ್ದರು. 

ಇತ್ತ ವೈದ್ಯರು ನಾಡಿ ಬಡಿತವೇ ಇರದ ದೇಹ ಬದುಕಿರಲು ಹೇಗೆ ಸಾಧ್ಯವೆಂದು ಯೋಚಿಸುತ್ತಿದ್ದರು. ಇದನ್ನರಿತ ಗುರುನಾಥರು ತನ್ನ ಕೈಯನ್ನೊಮ್ಮೆ ಜಾಡಿಸಿ "ಈಗ ನೋಡಿ ನಾಡಿ ಸಿಗುತ್ತೆ" ಅಂದ್ರಂತೆ. ಅಂತೆಯೇ ಆ ವೈದ್ಯರಿಗೆ ನಾಡಿ ಬಡಿತ ಸಿಕ್ಕಿತಂತೆ. 

ಈ ಘಟನೆ, "ದೇಹ ಭಾವವನ್ನು ಮೀರಿದ ಒಂದು ಶಕ್ತಿ ಇದೆ ಎಂಬುದನ್ನು ಜಗತ್ತಿಗೆ ತಿಳಿಸುತ್ತದೆ ಅಲ್ಲವೇ?" ......,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Saturday, November 26, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 14


ಮತ್ತೆ ಬಂದಾವೆ ಆ ಸುದಿನ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಬಹಳ ವರ್ಷಗಳು ಗುರುನಾಥರೊಂದಿಗೆ ಇರುವ, ಅವರ ಸೇವೆ ಮಾಡುವ ಅವಕಾಶ ದೊರೆತ ನಾಗೇಶ್ ಅವರು ಹೀಗೆನ್ನುತ್ತಾರೆ. 'ನಮಗಾಗ ಏನೂ ತಿಳಿದಿರಲಿಲ್ಲ. ಆದರೂ ಅವರ ಜೊತೆಗಿರುವುದೇ ಒಂದು ಸಂತಸದ ಸಂಗತಿ ಯಾಗಿರುತ್ತಿತ್ತು. ನಾವೊಂದಿಬ್ಬರು ಅವರ ಮನೆಯ ಮುಂದೆ ಕೂರುತ್ತಿದ್ದೆವು. ಜನ ನಮ್ಮನ್ನು ಹಕ್ಕಬುಕ್ಕರೆಂದು ಹಾಸ್ಯ ಮಾಡುತ್ತಿದ್ದರು. ಆಮೇಲೆ ನಾನು ಕಾರು ಓಡಿಸುತ್ತಿದ್ದೆ. ವಾರಗಟ್ಟಲೇ 'ನಡಿಯಯ್ಯಾ ಹೋಗೋಣ' ಎಂದು ಅವರೊಂದಿಗೆ ಕರೆದುಕೊಂಡು ಹೋಗುತ್ತಿದ್ದರು. ಅತ್ಯಂತ ಸ್ನೇಹ ಪ್ರೀತಿಗಳಿಂದ ನೋಡಿಕೊಳ್ಳುವುದರ ಜೊತೆಗೆ, ನಮಗೆ ಯಾವ ಕೊರತೆಯೂ ಆಗುತ್ತಿರಲಿಲ್ಲ. ಎಲ್ಲರನ್ನೂ ಬಿಟ್ಟು ನಮ್ಮನ್ನು ತಮ್ಮ ಬಳಿ ಇಟ್ಟುಕೊಂಡ ಅವರಿಗೇನೂ ಲಾಭವಾಗದಿದ್ದರೂ, ಗುರುನಾಥರು ನಮ್ಮ ತೊಂದರೆಗಳನ್ನು ನಿವಾರಿಸಿ, ರಕ್ಷಿಸುವುದಕ್ಕೋಸ್ಕರವೇ ನಮಗೆ ಆ ಅವಕಾಶ ಒದಗಿಸಿದ್ದಾರೇನೋ ಎನಿಸುತ್ತೆ' ಎಂದು ಭಕ್ತಿಯಿಂದ ಗುರುನಾಥರನ್ನು ಸ್ಮರಿಸುತ್ತಾರೆ. 

'ಒಮ್ಮೆ ಒಬ್ಬರ ಮನೆಗೆ ಒಂದಿಷ್ಟು ಹಣ್ಣನ್ನು ಕೊಟ್ಟು ಬರಲು ನಮ್ಮನ್ನು ಅವರು ಕಳಿಸಿದ್ದರು. ನಾವು ಕಾರಿನಲ್ಲಿ ಹೊರಟೆವು. ಸಖರಾಯಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನದ ಸನಿಹದ ಭಟ್ಟರ ಮನೆಯ ಬಳಿ ಒಂದು ಮನೆಯ ಮುಂದೆ ಬಿಳಿಯ ಹಸು ಬಂದಿತು. ಅಲ್ಲಿ ನೋಡಿದರೆ ಆ ಹಸುವಿಗೆ ಗುರುನಾಥರು ಬಾಳೆಹಣ್ಣು ನೀಡುತ್ತಿದ್ದರು. ಅರೆ ಇದೇನು ನಾವು ಅಲ್ಲಿಂದ ಹೊರಡುವಾಗ ಮನೆಯಲ್ಲೇ ಇದ್ದರು. ಈಗ ನೋಡಿದರೆ ಇಲ್ಲಿ ಹಸುವಿಗೆ ಬಾಳೆಹಣ್ಣು ತಿನ್ನಿಸುತ್ತಿದ್ದರಲ್ಲ ಅಂದೆ. ಅದಕ್ಕೆ ನನ್ನ ಜೊತೆಗೆ ಬಂದವರು, 'ನಿನಗೆಲ್ಲೋ ಬ್ರಾಂತು. ನಾವು ಮನೆಯಿಂದ ಹೊರಡುವಾಗ ಗುರುನಾಥರು ಜಗಲಿ ಮೇಲೆ ಕೂತಿದ್ದನ್ನು ನೋಡಿದ್ದೇವೆ' ಎಂದು ನನ್ನನ್ನೇ ದಬಾಯಿಸಿ ಬಿಟ್ಟರು. ಮುಂದೆ ವಾಪಸ್ಸು ಬಂದು ಈ ವಿಚಾರವನ್ನು ಗುರುನಾಥರ ಬಳಿ ಹೇಳಿದಾಗ 'ಅವರ ಮನೆಯಲ್ಲಿ ಹೋಗಿ ಕೇಳಿ' ಎಂದರು. ಹೋಗಿ ಕೇಳಿದಾಗ, ಆ ಮನೆಯವರು 'ಈಗ ತಾನೇ ಗುರುನಾಥರು ನಮ್ಮ ಮನೆಗೆ ಬಂದು ಕಾಫಿ ಕುಡಿದು ಹೋದರು' ಎಂದಾಗ ಎಲ್ಲರೂ ಆಶ್ಚರ್ಯಪಟ್ಟರು. ಇದೇ ಸಮಯಕ್ಕೆ ಸಾಗರದ ಗುರುನಾಥರ ಮಗಳು, ಲ್ಯಾಂಡ್  ಫೋನಿಗೆ ಫೋನ್ ಮಾಡಿ 'ಏನಮ್ಮ ಅಪ್ಪಾಜಿ ಸಾಗರದ ಇಂಥವರ ಮನೆಗೆ ಈಗ ಬಂದಿದ್ದರಂತೆ. ನಮ್ಮ ಮನೆಗೆ ಬರದೇ ಹೋಗಿದ್ದೀರಲ್ಲಾ' ಎಂದಾಗ, ಇತ್ತಲಿಂದ 'ಅವರು ಇಲ್ಲೇ ಇದ್ದಾರೆ. ಈ ಊರಲ್ಲೇ. ಅಲ್ಲಿಗೆ ಹೇಗೆ ಬರುತ್ತಾರೆ' ಎಂದು ಉತ್ತರಿಸಿದಾಗ ಅವರ ಮಗಳು ಯಜಮಾನರೊಂದಿಗೆ ಗಾಡಿಯಲ್ಲಿ ಹೋಗಿ ನೋಡಿದಾಗ ಗುರುನಾಥರು ಅಲ್ಲಿಯೂ ಇದ್ದರಂತೆ. ಹೀಗೆ ಒಂದೇ ಸಮಯದಲ್ಲಿ ಹಲವು ಕಡೆ ಪ್ರಕಟವಾಗುತ್ತಿದ್ದುದು ಗುರುನಾಥರ ಲೀಲೆಗಳಲ್ಲಿ ಒಂದಾಗಿತ್ತು' ಎನ್ನುತ್ತಾರೆ.

ಮತ್ತೊಂದು ದಿವಸ ಗುರುನಾಥರು ನಮ್ಮೊಂದಿಗೆ ಕಾರಿನಲ್ಲಿ ಹೊರಟರು. ಯಾವ ಕಡೆ ಹೋಗಬೇಕೆಂಬುದನ್ನು ಅವರೇ ಹೇಳುತ್ತಿದ್ದರು. ನಾನು ಸುಮ್ಮನೆ ಡ್ರೈವಿಂಗ್ ವೀಲ್ ಹಿಡಿದು ಕುಳಿತಿರುತ್ತಿದ್ದೆ. ರಾತ್ರಿ ಹನ್ನೆರಡು ಮೀರಿರಬಹುದು. ಎಡಕ್ಕೆ ತಿರುಗಿಸು - ಬಲಕ್ಕೆ ಹೋಗಲಿ ... ಸೀದಾ ಹೋಗ್ತಾನೇ ಇರು. ಗುರುನಾಥರ ಆದೇಶ ಪಾಲಿಸುವುದೊಂದೇ ನಮ್ಮ ಕೆಲಸ. ಇದ್ದಕ್ಕಿದ್ದಂತೆ ಆ ಕಗ್ಗಾರುಕತ್ತಲೆಯಲ್ಲಿ ಒಂದು ಮನೆಯ ಮುಂದೆ ಕಾರು ನಿಲ್ಲಿಸಲು ಹೇಳಿದರು. 'ಮನೆ ಬಳಿ ಹೋಗಿ ಬಾಗಿಲು ತಟ್ಟಯ್ಯಾ' ಎಂದರು. ನಮಗೆ ಹೆದರಿಕೆಯಾಯ್ತು. ಆದರೂ ಹೋಗಿ ಬಾಗಿಲು ತಟ್ಟಿದೆವು. ಒಳಗೆ ದೀಪಗಳು ಬೆಳಗಿದವು. 'ಯಾರು ಎಂಬ ದನಿ ಬಂತು'. ಗುರುನಾಥರು 'ಜೋರಾಗಿ ಹೋಗಿ ಹೇಳಯ್ಯಾ ನಾವು ಬಂದಿದೀವಿ ಅಂತ, ಯಾಕೆ ಹೆದರುತ್ತೀಯಯ್ಯಾ' ಅಂದರು. ಅದೇ ರೀತಿ ಮಾಡಿದೆವು. ಮನೆಯ ಎಲ್ಲಾ ದೀಪಗಳು ಬೆಳಗಿದವು. ಮನೆಯವರೆಲ್ಲಾ ಹೊರಬಂದರು. ಆ ಸರಿರಾತ್ರಿಯಲ್ಲಿ ಗುರುನಾಥರನ್ನು ಕಂಡ ಅವರ ಸಡಗರ ಹೇಳತೀರದು. ಕೂಡಲೇ ಒಳಗೆ ಹೋಗಿ ನೀರು ತಂದು ನೆಲ ಸಾರಿಸಿ, ರಂಗವಲ್ಲಿಯನ್ನಿಟ್ಟು, ಆನಂದಬಾಷ್ಪಗಳೊಡನೆ ಆರತಿ ಎತ್ತಿ, ಗುರುಗಳನ್ನು ಅವರು ಬರಮಾಡಿಕೊಂಡ ಸಂಭ್ರಮ ನೋಡಬೇಕು. 'ಅಪ್ಪಾ ಬರ್ತೀನಿ... ನಿಮ್ಮನೆಗೆ ಬರ್ತೀನಿ ಎಂದು ಹೇಳುತ್ತಿದ್ದವರು ಅಂತೂ ಈ ದಿನ ಬಂದಿರಲ್ಲಾ' ಎಂದು ಆ ಮನೆ ಮಂದಿಯೆಲ್ಲಾ ನಮಸ್ಕರಿಸಿ ಸ್ವಾಗತಿಸಿ ಸತ್ಕರಿಸಿದ್ದನ್ನು ಮರೆಯುವಂತಿಲ್ಲ' ಎಂದು ನೆನೆಸಿಕೊಂಡರು. ತಮ್ಮ ಭಕ್ತರಿಗೆ ಆ ಮಧ್ಯರಾತ್ರಿಯಲ್ಲಿ ದರ್ಶನವಿತ್ತ ಮರ್ಮವೇನೋ ತಿಳಿಯದು. ಆದರೆ ನಮಗೆಲ್ಲಾ ಗುರುನಾಥರೆಂದರೆ ಭಕ್ತರ ಮನದಲ್ಲಿ ಎಂತಹ ಶ್ರದ್ಧಾ ಭಕ್ತಿಗಳಿವೆ ಎಂಬುದರ ಅರಿವಾಗಿತ್ತು.

ಗುರುಕರುಣೆ ಯಾರಿಗೆ ಯಾವಾಗ ಹೇಗಾಗುತ್ತದೋ ಬಲ್ಲವರಾರು. ಮಧ್ಯರಾತ್ರಿಯಲ್ಲಿ ಬಂದರೂ, ಬೇಸರಿಸದೆ, ಗುರುವನ್ನು ಆದರಿಸಿ ಸತ್ಕರಿಸಿದ ಆ ಭಕ್ತರಿಗೂ ಗುರುನಾಥರಿಗೂ ಅದಾವ ಅನುಬಂಧವಿತ್ತೋ, ಆ ಸರಿ ರಾತ್ರಿಯಲ್ಲೇ ಗುರುನಾಥರು ಅದೇಕೆ ಹೀಗೆ ಬಂದರೋ.... ಅದು ಚಿದಂಬರ ರಹಸ್ಯವೇ.

ಕರೆದವರ ಮನೆಗೆ ಬರುವ ಕರುಣಾಳು ನಮ್ಮ ಗುರುನಾಥರು ಎನ್ನುತ್ತಾ ಮತ್ತೊಂದು ಅನುಭವವನ್ನು ಹೀಗೆ ತೆರೆದಿಟ್ಟರು. 'ಶಿವಮೊಗ್ಗದಲ್ಲಿ ಒಬ್ಬ ಅರಣ್ಯಾಧಿಕಾರಿಗಳಿದ್ದರು. ಆ ಪತಿ ಪತ್ನಿಯರು ಗುರುನಾಥರಿಗೆ ತುಂಬಾ ನಡೆದುಕೊಳ್ಳುತ್ತಿದ್ದರು. ಒಂದು ದಿವಸ ರಾತ್ರಿ ಹತ್ತೂವರೆಗೆ, ಅವರ ಮನೆಗೆ ಗುರುನಾಥರು ಇದ್ದಕ್ಕಿದ್ದಂತೆ, ಯಾರಿಗೂ ತಿಳಿಸದೇ ಬಂದಿದ್ದರು. ಮನೆಯೊಡತಿಗೆ ಗುರುನಾಥರು ಹೀಗೆ ಬಂದದ್ದು ಅಪಾರ ಸಂತಸ ತಂದಿತ್ತು. ಅವರು ಬಿಕ್ಕುತ್ತಾ 'ಅಪ್ಪಾ ನೀವು ಬಂದಿರಿ... ಸಧ್ಯ ನನ್ನ ಮನಸ್ಸಿಗೆ ನೆಮ್ಮದಿ ಸಿಕ್ಕಿತು. ಬೆಳಗಿನಿಂದ ಏಕೋ ಏನೋ ತುಂಬಾ ದುಗುಡ, ನೋವು, ಸಹಿಸಲಾಗದ ಆತಂಕವಾಗುತ್ತಿತ್ತು. ನಮ್ಮ ಮನೆಯವರಿಗೆ ಬೇರೆ ಆರೋಗ್ಯ ಸರಿ ಇರಲಿಲ್ಲ' ಎಂದು ವಿನಂತಿಸಿಕೊಂಡಾಗ, 'ಏನಿಲ್ಲ ಕಣಮ್ಮ ಈಗ ಹುಷಾರಾಗಿದ್ದರೆ ಕಣಮ್ಮ. ಏನೂ ಚಿಂತೆ ಮಾಡಬೇಡ.. ಎಲ್ಲಾ ಸರಿಯಾಗಿದೆ. ಇನ್ನೊಂದು ಸ್ವಲ್ಪ ಹೊತ್ತು ಬಿಟ್ಟು ನಿಮ್ಮ ಮನೆಯವರಿಗೆ ಫೋನು ಮಾಡಿ ಕೇಳಿಕೊಳ್ಳಮ್ಮ' ಎಂದರು. ಅದರಂತೆಯೇ ಫೋನು ಮಾಡಿ ಕೇಳಿದಾಗ ತಿಳಿದ ವಿಚಾರವೆಂದರೆ ಬೆಳಗಿನಿಂದ ಸ್ವಲ್ಪ ಎದೆ ನೋವು ಬಂದು ಸುಸ್ತಾಗಿದ್ದರಂತೆ. 'ಈಗ ಎಲ್ಲಾ ಕಡಿಮೆಯಾಗಿದೆ, ಆರಾಮವಾಗಿದ್ದೇನೆ, ಏನೂ ಯೋಚಿಸಬೇಡ' ಎಂದು ಉತ್ತರ ಬಂದಿತ್ತು.

ಹೀಗೆ ಗುರುನಾಥರು ತಮ್ಮ ಭಕ್ತರ ಸಂಕಟ ಸಮಯದಲ್ಲಿ ಸ್ವತಃ ಅಲ್ಲಿಗೆ ಧಾವಿಸಿ ಬರುವುದು, ಭಕ್ತರ ಬವಣೆಗಳನ್ನು ದೂರ ಮಾಡುವುದು ನಡೆದೇ ಇತ್ತು' ಎನ್ನುತ್ತಾರೆ.

ಗಾಳಿಯಲ್ಲಿ ಗಾಡಿ ಓಡಿಸಿದ ಗುರುನಾಥರು 


ಸುಮಾರು 1992ರಲ್ಲಿ ನಡೆದ ಒಂದು ಘಟನೆಯನ್ನು ನೆನೆಸಿಕೊಂಡು ಅವರು ಮತ್ತೆ ತಮ್ಮ ನೆನಪಿನ ಸುರಳಿಗಳನ್ನು ಬಿಚ್ಚಗೊಡಗಿದರು. "ಅವಾಗ ನನ್ನ ಬಳಿ ಒಂದು ಹಳೆಯ ಕಾರು ಇತ್ತು. ಒಂದು ಲೀಟರ್ ಪೆಟ್ರೋಲ್ ಗೆ ಆರು ಕಿಲೋಮೀಟರ್ ಕೊಡುತ್ತಿತ್ತು. ನನ್ನ ಹತ್ತಿರ ದುಡ್ಡು ಇರ್ತಿರಲಿಲ್ಲ. ಗುರುನಾಥರೇ ಆಗೀಗ ದುಡ್ಡು ಕೊಡುತ್ತಿದ್ದರು. ಪೆಟ್ರೋಲ್ ನಲ್ಲಿ ಸ್ಟಾರ್ಟ್ ಮಾಡಿ ಸೀಮೆಎಣ್ಣೆಗೆ ಚೇಂಜ್ ಮಾಡಿಕೊಂಡು ಓಡಿಸುತ್ತಿದ್ದೆ. ಸಖರಾಯಪಟ್ಟಣದಲ್ಲಿ ನನ್ನ ಕಾರು ಅಂದಕೂಡಲೇ ಜನ 'ಸೀಮೆಎಣ್ಣೆ ಗಾಡಿ ಬಂತು ನೋಡು' ಅನ್ನುತ್ತಿದ್ದರು. ಒಂದು ದಿನ ಬೆಳಿಗ್ಗೆ ಏಳೂ ಏಳೂವರೆ ಇರಬಹುದು. ಗುರುನಾಥರ ಜೊತೆ ಕಾರಿನಲ್ಲಿ ಹೊರಟೆವು. ಬನಶಂಕರಿ ದೇವಸ್ಥಾನದ ಹತ್ತಿರ ಬರುವಲ್ಲಿ ಸೀಮೆಎಣ್ಣೆಯೂ ಇಲ್ಲದೇ  ಕಾರು ನಿಂತಿತು. ಹಿಂದೆ ಕುಳಿತ ಗುರುನಾಥರು 'ನಡೀ ನಡೀ ಹೋಗು' ಎಂದರು. ಸೀಮೆಎಣ್ಣೆ ಖಾಲಿಯಾಗಿರುವುದನ್ನು ಗುರುನಾಥರಿಗೆ ತಿಳಿಸಿದೆ. 'ನೀನೇನ್ ಯೋಚನೆ ಮಾಡಬೇಡ' ಎಂದರು. ನನಗೋ ಪರಮಾಶ್ಚರ್ಯ. ಕಾರು ಒಂದೇ ಸಮನೆ ಓಡುತ್ತಿದೆ... ಸೀಮೆಎಣ್ಣೆಯೂ ಇಲ್ಲದೇ , ಯಗಚಿಯ ಊರ ಹತ್ತಿರ ಬಂದಿದ್ದೆವು. ಹಾಗೇ  ಸುಮ್ಮನೆ ಕುತೂಹಲದಿಂದ ರೇರ್ ಮಿರರ್ ನಲ್ಲಿ ನೋಡಿದಾಗ ಗುರುನಾಥರು ಉಟ್ಟಿದ್ದ ತುಂಡು ಪಂಚೆ ಕಿಟಕಿಯಿಂದ ಗಾಳಿಯಲ್ಲಿ ಹಾರುತ್ತಿದ್ದುದು ಕಂಡು ಬಂದಿತು. ಅಷ್ಟರಲ್ಲಿ ಊರಬಳಿ ಬಂದ ಕಾರು ನಿಂತಿತು. ತುಂಡು ಪಂಚೆ ಸೊಂಟಕ್ಕೆ ಸುತ್ತಿಕೊಂಡು ಗುರುಗಳು ಕಾರಿನಿಂದಿಳಿದು ಕೈ ಉಜ್ಜುತ್ತಿದ್ದರು. ಅಷ್ಟರಲ್ಲಿ ಅಲ್ಲಿ ಕಂಡ, ಗುರುನಾಥರ ಬಂಧುಗಳು, ಗುರುಗಳ ಕ್ಷೇಮ ಸಮಾಚಾರ ವಿಚಾರಿಸಿ 'ನಿಮ್ಮನ್ನೇ ನೋಡಲು ಬರಬೇಕೆಂದು ಹೊರಟಿದ್ದೆ. ನೀವೇ ಬಂದುಬಿಟ್ಟಿರಿ' ಎಂದರು. ಅವರಿಂದ ಐದು ಲೀಟರ್ ಸೀಮೆಎಣ್ಣೆ ತರಿಸಿದ ಗುರುನಾಥರು ಪಯಣವನ್ನು ಮುಂದುವರೆಸಿದರು.

ಏನೂ ಇಲ್ಲದೇ ಕಾರನ್ನು ಈ ರೀತಿ ಓಡಿಸಿದುದು ಸಾಮಾನ್ಯರಿಗೆ ತರ್ಕಕ್ಕೆ ನಿಲುಕದ ವಿಷಯವಾದರೂ ಗುರುನಾಥರಿಗೆ ಅದೆಲ್ಲಾ ಏನೂ ಅಲ್ಲ. ಜೊತೆಗಿದ್ದವರಿಗೆ ಗುರುನಾಥರ ಸಾಮರ್ಥ್ಯವನ್ನರಿಯಲು ಇಂತಹ ಘಟನೆಗಳು ನೆರವಾದೀತು.

ಮ್ಯಾಜಿಸ್ಟ್ರೇಟರೇ ಇವತ್ತು ಬರುವುದಿಲ್ಲ 


ಇದ್ದಕ್ಕಿದ್ದಂತೆ ಗುರುನಾಥರ ಜೊತೆ ಎಲ್ಲೆಂದರಲ್ಲಿಗೆ ಹೋಗಿಬಿಡುತ್ತಿದ್ದೆ. ಅದೇ ರೀತಿ ಮೈಸೂರಿಗೆ ತಮ್ಮ ಬಂಧುಗಳ ಮನೆಗೆ ಒಮ್ಮೆ ನನ್ನನ್ನು ಕರೆದೊಯ್ದರು. ಸುಮಾರು ಮೂರು ದಿನಗಳಾಗಿರಬಹುದು. ಆಗ ನಾನು ಗುರುನಾಥರೊಂದಿಗೆ 'ನಾಳೆ ಬೆಂಗಳೂರಿಗೆ ಹೋಗಿ ಕೋರ್ಟ್ ಕೆಲಸ ಅಟೆಂಡ್ ಮಾಡಬೇಕಿದೆ. ಹೋಗಲೇಬೇಕಿದೆ' ಎಂದೆ. ಅದಕ್ಕೆ ಗುರುನಾಥರು 'ನೀನ್ ಹೋಗ್ ಏನ್ ಮಾಡ್ತೀಯಯ್ಯಾ' ಎಂದರು. ಆದರೂ ಹಠ ಹಿಡಿದ ನನ್ನನ್ನು ಒಂದು ತೆಂಗಿನಮರದ ಬಳಿ ಕರೆದೊಯ್ದು ಮೂರು ಪ್ರದಕ್ಷಿಣೆ ಮಾಡಿಸಿ, ಕಳಿಸಿಕೊಟ್ಟರು. ಹತ್ತೂವರೆಗೆ ಕೋರ್ಟ್ ಬಳಿ ಹೋದೆ. ಹನ್ನೊಂದು ಗಂಟೆಗೆ 'ಇವತ್ತು ಮಾಜಿಸ್ಟ್ರೇಟರು ರಜಾ ಇದ್ದಾರೆ' ಎಂದು ತಿಳಿಸಿ, ಮುಂದಿನ ಡೇಟನ್ನು ಕೊಟ್ಟರು. ಇನ್ನೊಮ್ಮೆ 'ಹೋಗಯ್ಯಾ, ನೀನು ಕಾರ್ಪೋರೇಟರ್ ಆಗ್ತೀಯಾ' ಎಂದು ಗುರುನಾಥರೆಂದರು. ಅದರಂತೆಯೇ ನಾನು ಚಿಕ್ಕಮಗಳೂರಿನ ನಗರಸಭೆಯ ಸದಸ್ಯನಾದೆ.

ಗುರುನಾಥರ ವಾಣಿ ಎಂದರೆ ಅದಕ್ಕೆ ಹುಸಿಯೇ  ಇಲ್ಲ. ಅನೇಕ ಜನ ರಾಜಕಾರಣಿಗಳು ಗುರುನಾಥರ ಬಳಿ ಬಂದು ತಮ್ಮ ರಾಜಕೀಯ ಭವಿಷ್ಯವನ್ನು ಕೇಳಿದಾಗ ಗುರುನಾಥರು ನುಡಿದಂತೆ ಎಲ್ಲವೂ ನಡೆದಿರುವುದನ್ನವರು ಸ್ಮರಿಸುತ್ತಾರೆ.

ಅನೇಕ ಮಠದ ಗುರುಗಳಿಗೆ, ಸಂತರಿಗೆ ಬಂದ ದೈಹಿಕ ಕಾಯ್ಲೆ ಕಸಾಲೆಗಳಿಗೆ ಗುರುನಾಥರು ತಮ್ಮದೇ ಆದ ರೀತಿಯಲ್ಲಿ ಚಿಕಿತ್ಸೆ ಮಾಡಿ ಅವರ ದೇಹದ ಭಾದೆಗಳನ್ನು ದೂರ ಮಾಡಿದ್ದಾರೆ. ಕ್ಯಾನ್ಸರ್ ಬಂದು ತಾವಿನ್ನು ಉಳಿಯುವುದಿಲ್ಲ ಎಂದು ಹೆದರಿದ್ದ ಒಬ್ಬ ಭಕ್ತರು ಗುರುನಾಥರ ಬಳಿ ಬಂದಾಗ ಮೂರು ದಿನ ನಾನು ಹೇಳುವವರೆಗೆ ಈ ಜಾಗ ಬಿಟ್ಟು ಕದಲಬೇಡಿ' ಎಂದು ಕೂರಿಸಿ ತಾವು ಅದೇ ರೀತಿ ಕುಳಿತು, ಮಾರನೆಯ ದಿನ ಆ ಭಕ್ತರಿಗೆ ಬೆಳಗಿನ ಉಪಹಾರ ಮಾಡಿಸಿ, ಮತ್ತೊಮ್ಮೆ ಚೆಕ್ ಮಾಡಿಸಿಕೊಂಡು ಬರಲು ತಿಳಿಸಿದರು. ಆಸ್ಪತ್ರೆಯಿಂದ ಬಂದ ರಿಪೋರ್ಟ್ ನಲ್ಲಿ ಕ್ಯಾನ್ಸರಿನ ಯಾವ ಕುರುಹೂ ಇರಲಿಲ್ಲವಂತೆ. ಹೀಗೆ ಗುರುನಾಥರ ಒಂದೊಂದು ಲೀಲ್ಗಳೂ ಅಸಾಮಾನ್ಯವಾದವುಗಳಾಗಿದ್ದವು' ಎನ್ನುತ್ತಾರೆ.

ಶಿವಮೊಗ್ಗಕ್ಕೆ ಹೋಗಬೇಡ 


ಅಂದು ಗುರುನಾಥರ ಶಿಷ್ಯರೊಬ್ಬರಿಗೆ ಅನಿವಾರ್ಯ ಕೆಲಸದ ಮೇಲೆ ಶಿವಮೊಗ್ಗಕ್ಕೆ ಹೋಗಬೇಕಿತ್ತು. ಈ ವಿಚಾರವನ್ನು ಗುರುನಾಥರಲ್ಲಿ ಅರಿಕೆ ಮಾಡಿಕೊಂಡಾಗ 'ಬೇಡಯ್ಯಾ ಇವತ್ತು ನೀನು ಶಿವಮೊಗ್ಗಕ್ಕೆ ಹೋಗಬೇಡ' ಎಂದರು.

'ಇಲ್ಲ ಗುರುನಾಥರೇ ನಾನು ಹೋಗಲೇಬೇಕಿದೆ' ಎಂದಾಗ ಹಾಗಾದರೆ ಬಾ ಇಲ್ಲಿ, ಎಂದು ಅವರನ್ನು ಬಿಳಿ ಎಕ್ಕದ ಗಿಡದ ಬಳಿ ಕರೆದೊಯ್ದು, ಪ್ರದಕ್ಷಿಣೆ ಮಾಡಿಸಿ, ಒಂದು ತೆಂಗಿನಕಾಯಿ ತರಿಸಿ, ಅದನ್ನು ಮಂತ್ರಿಸಿ, ಒಂದು ಚೀಲಕ್ಕೆ ಹಾಕಿ ಆ ಚೀಲವನ್ನು ತಮ್ಮ ಶಿಷ್ಯರ ಬಗಲಿಗೆ ಹಾಕಿ, ಶಿವಮೊಗ್ಗದಿಂದ ಬರುವವರೆಗೆ ಯಾವ ಕಾರಣಕ್ಕೂ ತೆಗೆಯಲೇ ಬಾರದೆಂದು' ಎಚ್ಚರಿಸಿ ಕಳಿಸಿದರು. 'ನೀನು ಬರುವವರೆಗೆ ಇಲ್ಲೇ ಕುಳಿತಿರುತ್ತೇನೆಂದು' ಕುಳಿತುಬಿಟ್ಟಿದ್ದರು.

ಬಸ್ ನಲ್ಲಿ  ಹೊರಟ ಆ ಬಂಧುಗಳು ಇನ್ನೇನು ಶಿವಮೊಗ್ಗ ತಲುಪಬೇಕಿದ್ದಾಗ ಹರಿಗೆ ಬಳಿ ಬಹು ದೊಡ್ಡ ಆಕ್ಸಿಡೆಂಟ್ ಗೆ ಒಳಗಾದರು. ಅಕ್ಕಪಕ್ಕದ ಒಂದಿಬ್ಬರು ಸ್ಥಳದಲ್ಲೇ ಸಾವನ್ನು ಕಂಡಿದ್ದರು. ಗುರುನಾಥರ ಶಿಷ್ಯರಿಗೆ ಸಣ್ಣಪುಟ್ಟ ತರಚು ಗಾಯವಾಗಿತ್ತು. ಹಲ್ಲು ಮುರಿದುಹೋಗಿತ್ತು. ವ್ಯಾನಿನಲ್ಲಿ ಅವರನ್ನು ಆಸ್ಪತ್ರೆಗೆ ಕಳಿಸಲಾಗಿತ್ತು.

ಶಿವಮೊಗ್ಗದ ಕೆಲಸವೂ ಸರಿಯಾಗಲಿಲ್ಲವೆಂದು ವಾಪಸ್ಸು ಅಂದೇ  ಹೊರಟು ಸಖರಾಯಪಟ್ಟಣಕ್ಕೆ ಇವರು ಬಂದಾಗ ಮೈ ಕೈ ತಡವಿ ಗುರುಗಳಿವರ ನೋವನ್ನು ಪರಿಹರಿಸಿದ್ದರು. ಗುರುನಾಥರು 'ಅಂತೂ ಬದುಕಿ ಬಂದು ಬಿಟ್ಟ, ಬದುಕಿ ಬಂದುಬಿಟ್ಟ' ಎನ್ನುತ್ತಿದ್ದರಂತೆ. ಇದು ಯಾರನ್ನು ಕುರಿತಾಗಿ ಹೇಳಿದ್ದೆಂಬುದನ್ನು ಶಿವಮೊಗ್ಗಕ್ಕೆ ಹೋದವರು ವಾಪಸ್ ಬಂದಾಗ ತಿಳಿಯತಂತೆ. ಹೀಗೆ ತಮ್ಮನ್ನು ನಂಬಿದವರನ್ನು ಮೃತ್ಯುವಿನಿಂದಲೂ ಪಾರು ಮಾಡುವ ಗುರುನಾಥರ ಕರುಣೆಗೆ ಕೊನೆ ಎಲ್ಲಿದೆ.

ಮತ್ತೊಮ್ಮೆ ಈ ಭಕ್ತರು, ಇಬ್ಬರು ಮಕ್ಕಳ ಚೌಲಕರ್ಮ, ಹಾಗೂ ಉಪನಯನಗಳ ಬಗ್ಗೆ ಗುರುನಾಥರನ್ನು ಕೇಳಿದಾಗ, ಬೇಗ ಮಾಡಿ ಮುಗಿಸಿ, ಎಂದು ಅವಸರಿಸಿದರಂತೆ. ಯಾವುದೇ ಸೌಕರ್ಯಗಳನ್ನು ಮಾಡಿಕೊಂಡಿಲ್ಲಾ ಎಂದರೂ ನಾನಿದ್ದೇನೆ, ಹೇಳಿದ ದಿವಸವೇ ಮಾಡಿಬಿಡಯ್ಯಾ ಎಲ್ಲಾ ಆಗುತ್ತೆ ಎಂದು ಗುರುನಾಥರು ಭರವಸೆ ನೀಡಿದರಂತೆ. ಅದು ಹಾಗೇ ಎಲ್ಲವೂ   ಹೂವಿನ ಸರವೆತ್ತಿದಂತೆ ಮುಗಿಯಿತು.

ಮಗನ ಉಪನಯನ ಅದ್ದೂರಿಯಾಗಿ ಆಯಿತು. ಎಲ್ಲರ ಊಟವೂ ಮುಗಿಯಿತು. ಆದರೆ ವಟುವಿನ ತಂದೆ ತಾಯಿಗಳು ಮಾತ್ರಾ ಎಷ್ಟೊತ್ತಾದರೂ ಊಟ ಮಾಡಲೊಪ್ಪಲಿಲ್ಲ. ಏಕೆಂದರೆ ಅವರು ಮನದಲ್ಲಿ ದೃಢ ನಿಶ್ಚಯ ಮಾಡಿಬಿಟ್ಟಿದ್ದರಂತೆ. 'ಇಷ್ಟೆಲ್ಲಾ ನಿಂತು ನಡೆಸಿದ ಗುರುನಾಥರು ಬಂದು ಊಟ ಮಾಡುವವರೆಗೆ ನಾವು ಊಟ ಮಾಡುವುದಿಲ್ಲ' ಎಂದು.

ಗುರುನಾಥರಿಗೆ ತಿಳಿಯದ ವಿಚಾರ ಯಾವುದಿದೆ. ಮಧ್ಯಾನ್ಹವೂ ಕಳೆಯಿತು. ಇದ್ದಕ್ಕಿದ್ದಂತೆ ಗುರುಗಳ ಆಗಮನವಾಗಿಯೇ ಬಿಟ್ಟಿತು. 'ನಡಿಯಯ್ಯಾ ನನಗೆ ಗೊತ್ತು. ನಾನು ಬರದಿದ್ದರೆ ನೀವಿಬ್ಬರೂ ಉಪವಾಸವಿರುತ್ತೀರಿ ಅಂತ.... ಎಲ್ಲಿ ಎಲೆ ಹಾಕಿ' ಎಂದು ತಾವೂ ಕುಳಿತು ಊಟ ಮಾಡಿ ಇವರಿಗೂ ಊಟ ಮಾಡಿಸಿದರಂತೆ.

ಮುಂದೊಂದು ದಿನ.... ಆ ಮನೆಯೊಡತಿಗೆ ಅನೇಕ ವರ್ಷಗಳಿಂದ ಬರುತ್ತಿದ್ದ ಹೊಟ್ಟೆ ನೋವಿನ ವಿಚಾರ ಗುರುಗಳಿಗೆ ತಿಳಿಯಿತು. ಎಲ್ಲೆಲ್ಲೂ ದೊಡ್ಡ ದೊಡ್ಡ ಡಾಕ್ಟರಿಗೆ ತೋರಿಸಿ ಚಿಕಿತ್ಸೆ ಮಾಡಿಸಿದ್ದರೂ ಹೊಟ್ಟೆ ನೋವು ಹೋಗಿರಲಿಲ್ಲ. ಅಂದು ಅವರ ಮನೆಗೆ ಬಂದ ಗುರುನಾಥರು, ಏನೋ ಚಿಕಿತ್ಸೆ ಮಾಡಿದರು. 'ನೋಡಯ್ಯ ನಾಳೆ ಬೆಳಿಗ್ಗೆ ಮುಂಚೆ, ಮಂಜು ಮುಸುಕಿರುವಾಗಲೇ ನಿನ್ನ ಹೆಂಡತಿಯು ಧರಿಸಿರುವ ಕುಪ್ಪಸವನ್ನು ತೆಗೆದುಕೊಂಡು ಹೋಗಿ ಊರ ಹೊರಗಿನ ಬಸವನಹಳ್ಳಿ ಕೆರೆಯಲ್ಲಿ ಎಸೆದು ಬಂದು ಬಿಡು. ಹಿಂದೆ ತಿರುಗಿ ನೋಡಬೇಡ ಎಂದರಂತೆ. ಗುರುವಾಕ್ಯ ಪ್ರಮಾಣವೆಂದು ನಂಬಿದ ಆ ಭಕ್ತರು ಅದೇ ರೀತಿ ನಡೆದುಕೊಂಡರು. ಈಗ ಹೊಟ್ಟೆ ನೋವು ಒಂದು ದಿನವೂ ಬಂದಿಲ್ಲ. ಭವರೋಗ ವೈದ್ಯನಾದ ಗುರುನಾಥರಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುತ್ತಾರೆ, ಆ ದಂಪತಿಗಳು. ಇಂದು ಗುರುನಾಥರ ನಾಮಸ್ಮರಣೆಯಲ್ಲಿ ಅತ್ಯಂತ ಸುಖವಾಗಿದ್ದಾರೆ ಅವರುಗಳು.

ಬೆಂಗಳೂರು ಕಡೆಗೆ ಹೋಗಿಬಿಡು 


ಆ ಮನೆಯ ಯಜಮಾನನಿಗೆ ಗುರುನಾಥರು 'ನೋಡಯ್ಯಾ ನಾಗೇಶ ನೀನು ಊರು ಬಿಟ್ಟು ಬೆಂಗಳೂರು ಕಡೆ ಹೋಗಯ್ಯ ಒಳ್ಳೆಯದಾಗುತ್ತೆ' ಎಂದರಂತೆ. ಇವರು 'ಗುರುನಾಥರೇ ಚಿಕ್ಕಮಗಳೂರೆಲ್ಲಿ, ಬೆಂಗಳೂರೆಲ್ಲಿ' ಎಂದು ಬೆದರಿದಾಗ 'ಬೆಂಗಳೂರಲ್ಲದಿದ್ದರೂ ಅದರ ಸನಿಹದ ಊರಾದ ತುಮಕೂರಿಗಾದರೂ ಆಯ್ತು' ಎಂದರು. ಗುರುನಾಥರ ಕೃಪೆಯಿಂದ ಅವರಲ್ಲಿ ಒಳ್ಳೆಯ ಸ್ಥಿತಿ ತಲುಪಿದ್ದಲ್ಲದೇ, ಶಿವಗಂಗೆಯ ಶ್ರೀಗಳ ಪರಿಚಯ, ಶಿವಗಂಗಾ ಸಂಸ್ಥಾನದ ಶ್ರೀರಕ್ಷೆಯನ್ನು ಕೊಡಿಸಿ, 'ಇವನನ್ನು ನೀವು ಮುಂದುವರೆಸಿಕೊಂಡು ಹೋಗಬೇಕು. ಬಹಳ ವಿನೀತನಾಗಿರುತ್ತಾನೆ. ನಂಬಿಕೆಯ ವ್ಯಕ್ತಿ' ಎಂದು ಗುರುನಾಥರು ಶಿವಗಂಗೆಯ ಶ್ರೀಗಳಿಗೆ ಪರಿಚಯಿಸಿ ಹಲವು ಸಾಧು ಸಂತರ, ಗುರುಗಳ ನಿರಂತರ ಸಹವಾಸ ದೊರಕುವಂತೆ ಗುರುನಾಥರು ಕರುಣಿಸಿದ ವಿಚಾರವನ್ನವರು ಸ್ಮರಿಸುತ್ತಾರೆ.



ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 



।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 53

ಅಮ್ಮ ಸತ್ತ ದಿನ ಯುಗಾದಿ ರಂಗೋಲಿ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಅಂದು ಯುಗಾದಿ. ನನಗೆ ವಿಷಯ ತಿಳಿದಾಕ್ಷಣ ಬೆಂಗಳೂರಿನಿಂದ ಮಧ್ಯಾನ್ಹ 1:30 ರ ರೈಲಿನಲ್ಲಿ ಸಖರಾಯಪಟ್ಟಣಕ್ಕೆ ಹೊರಟು ಸಂಜೆ 6:30 ಕ್ಕೆ ತಲುಪಿದೆ. ಆದಾಗ ತಾನೇ ಗುರುನಾಥರ ತಾಯಿಯ ಶವವನ್ನು ಮನೆಯಿಂದ ತೋಟಕ್ಕೆ ಸಂಸ್ಕಾರಕ್ಕಾಗಿ ಕೊಂಡೊಯ್ಯುತ್ತಿದ್ದರು. ನಾನು ಸೀದಾ ತೋಟಕ್ಕೆ ಹೋದೆ. 

ಗುಂಡಿ ತೋಡಲು ಜನರ ಅಭಾವವಿತ್ತು. ಬಂದಾಕ್ಷಣ ನನ್ನನ್ನು ಕರೆದು "ಬಾರಯ್ಯ ಕೆಲಸಕ್ಕೆ ಕೈ ಹಾಕು" ಅಂದ್ರು. 

ಮೂರನೇ ದಿನ ನನಗೊಂದು ಹಿತ್ತಾಳೆ ಪಾತ್ರೆ ದಾನ ನೀಡಿದ್ದು ಅದು ಇಂದಿಗೂ ನನ್ನೊಂದಿಗಿದೆ. ಯುಗಾದಿಯ ಹಿಂದಿನ ದಿನ ರಾತ್ರಿ ತೀರಾ ಅಸ್ವಸ್ಥರಾಗಿದ್ದ ತಾಯಿಯನ್ನು ಕುರಿತು, "ಆಯ್ತಲ್ಲಾ ಎಲ್ಲವೂ ಎಂದಾದ್ರೂ ಸಿಗೋಣ, ಸುಖವಾಗಿ ಹೋಗಿ ಬಾ" ಅಂದಿದ್ರು. 

ರಾತ್ರಿ ಮಲಗಿದ ಅಜ್ಜಿ ಆ ಮೇಲೆ ಏಳಲಿಲ್ಲ. ಆದರೆ ವಿಷಯ ಎಲ್ಲರಿಗೂ ತಿಳಿದರೆ ಹಬ್ಬ ಆಚರಿಸುವುದನ್ನೇ ನಿಲ್ಲಿಸಬಹುದೆಂದು ಯೋಚಿಸಿದ ಗುರುನಾಥರು ತಾಯಿಯ ದೇಹಕ್ಕೆ ದಪ್ಪ ಹೊದಿಕೆ ಹೊದಿಸಿದರು. ಅದು ಹೇಗಿತ್ತೆಂದರೆ ಯಾರೇ ನೋಡಿದರೂ ಆಯಾಸವಾಗಿ ಅಜ್ಜಿ ಮಲಗಿದ್ದಾರೇನೋ ಅನಿಸುತ್ತಿತ್ತು. ಅಷ್ಟೇಕೆ ರಾತ್ರಿ ಇದೇ ಅಜ್ಜಿಯ ಪಕ್ಕವೇ ಮಲಗಿದ್ದ ಓರ್ವ ಮಹಿಳಿಗೂ ಕೂಡಾ ಅಜ್ಜಿ ದೇಹ ಬಿಟ್ಟ ವಿಚಾರ ತಿಳಿದಿರಲಿಲ್ಲ. 

ಊರಿನಲ್ಲಿ ಸಂಶಯ ಬರಬಾರದೆಂಬ ಕಾರಣಕ್ಕಾಗೋ ಏನೋ, ರಸ್ತೆ ಮೇಲೆಲ್ಲಾ ಕಡೆ ರಂಗೋಲಿ ಬಿಡಿಸಿದ್ದರು. ಜೊತೆಗೆ ಯಾರಾದರೂ ಒಬ್ಬ ಭಕ್ತರನ್ನು ಊರೊಳಗೆ ಕಳಿಸಿ ಹಬ್ಬ ಆಚರಣೆ ಆಯ್ತೋ ಎಂದು ದೃಢಪಡಿಸಿಕೊಂಡು ತದನಂತರ ತಾಯಿ ದೇಹ ಬಿಟ್ಟ ವಿಚಾರ ತಿಳಿಯುವಂತೆ ಮಾಡಿದರು. 

ಹಾಗೆಯೇ ಇನ್ನೊಮ್ಮೆ ಇದ್ದಕ್ಕಿದ್ದಂತೆ "ನಾಳೆ ಬೆಳಿಗ್ಗೆ 11:30 ರ ಒಳಗೆ ಎಲ್ಲ ಊಟ ಮುಗಿಸಿಕೊಳ್ಳಬೇಕು. ಆ ನಂತರ ಊಟ ಮಾಡೋಕ್ಕಾಗಲ್ಲ" ಅಂದ್ರು. ಅಂತೆಯೇ ಮರುದಿನ ಬೆಳಿಗ್ಗೆ 11:30 ರ ಒಳಗೆ ಮನೆಯಲ್ಲಿದ್ದ ಎಲ್ಲ ಭಕ್ತರಿಗೂ ಊಟ ಬಡಿಸಿದರು. 

ಗುರುನಾಥರ ಮಗ ತನ್ನ ಸಂಬಂಧಿಗಳ ಕಾರಿನಲ್ಲಿ ಬೆಂಗಳೂರಿಗೆ ಹೊರಟರು. ದಾರಿಯಲ್ಲಿ ಕಾರು ಸರ್ಕಾರಿ ಬಸ್ ಗೆ ಡಿಕ್ಕಿ ಹೊಡೆದಿತ್ತು. ಆ ಕಾರಿನ ಮಾಲೀಕನಿಗೆ ಸುಮಾರು ಆರು ತಿಂಗಳಿನಿಂದ "ನೀ ಇಲ್ಲಿಗೆ ಸಧ್ಯಕ್ಕೆ ಕಾರು ತರಬೇಡ" ಅಂತ ಹೇಳ್ತಾನೆ ಇದ್ರು. ಆದ್ರೂ ಅಂದು ಆತ ಕಾರು ತಂದಿದ್ದರು. ಅದು ತನ್ನ ಮಗನಿಗೆ ಆಪತ್ತು ತರುವುದೆಂದು ಗೊತ್ತಿದ್ದರೂ ಈಶ್ವರ ಇಚ್ಛೆಯನ್ನು ಯಾರೂ ಮೀರಲಾರದೆಂಬ ನಿಯಮಕ್ಕೆ ತಾನೂ ಕೂಡ ಬದ್ಧರಾಗಿದ್ದರು. 

ಅಪಘಾತವಾದ ವಿಷಯ ತಿಳಿದ ಮೇಲೂ ಕೂಡಾ ತನ್ನ ಮಗನೆಂಬ ಯಾವ ಮಮಕಾರವೂ ಅಲ್ಲಿ ಕಂಡು ಬರಲಿಲ್ಲ. ಆದರೆ ಕರ್ತವ್ಯ ಪ್ರಜ್ಞೆ ಸದಾ ಜಾಗೃತವಾಗಿದ್ದಿತು. ಅಂತೆಯೇ ತನ್ನ ತಾಯಿ ದೇಹ ಬಿಡುವ ಸಂಗತಿ ಗೊತ್ತಿದ್ದಾಗಲೂ ಅವರೇ ಎಲ್ಲರಿಗೂ ಹೇಳುತ್ತಿದ್ದಂತೆ, "ಸಮಚಿತ್ತದಿಂದ ಇದ್ದು ನೋವು-ನಲಿವು, ರಾಗ-ದ್ವೇಷ, ತಪ್ಪು-ಒಪ್ಪುಗಳೆಲ್ಲಾ ನಮ್ಮ ಮನದ ಭಾವಗಳೇ. ಪಾಪ-ಪುಣ್ಯಗಳೆರಡನ್ನೂ ಮೀರಿ ಮುನ್ನಡೆಯಬೇಕು. ಆಗ ಈಶವರ ನಿಮ್ಮೊಡನಿರುವನು" ಎಂಬ ಮಾತಿನಂತೆಯೇ ನಡೆದುಕೊಂಡಿದ್ದರು. 

"ಚರಣದಾಸನಾದ ನನ್ನ ಹಾಗೂ ಗುರುನಾಥರ ನಡುವೆ ಲೌಕಿಕದಲ್ಲಿ ಗಣನೆಗೆ ಬರುವ ಯಾವ ರಕ್ತ ಬಂಧನವೂ ಇರಲಿಲ್ಲ. ಆದರೆ, ಅದಕ್ಕೂ ಮೀರಿದ ಸಂಬಂಧವಿತ್ತು". 

ಅದರ ಮರ್ಮ ತಿಳಿದಿದ್ದ ಗುರುಗಳು ನನಗೆ ಉಡುದಾರ ಹಾಕಿದರು. ಜನಿವಾರ ಹಾಕಿದರು ಹಾಗೂ ತನ್ನ ಮಗನಂತೆಯೇ ನನ್ನನ್ನು ನೋಡಿಕೊಂಡಿದ್ದರು. ಕೊನೆಯವರೆಗೂ ನುಡಿದಂತೆಯೇ ನಡೆದುಕೊಂಡರು......,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Friday, November 25, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 13


ಕೂಡಲಿಯಿಂದ ಬಂದಿದೀವಿ ಸ್ವಾಮಿ  


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ರಾತ್ರಿ ಎಂಟು ಗಂಟೆಯಾಗಿತ್ತು. ಚಿಕ್ಕಮಗಳೂರಿನ ಭಕ್ತರೊಬ್ಬರ ಮನೆಯಲ್ಲಿ ಗುರುನಾಥರು ನಾಲ್ಕಾರು ಜನರೊಂದಿಗೆ ಮಾತನಾಡುತ್ತಿದ್ದರು. 'ಸ್ವಾಮೀಜಿ'... ಎಂದಾಗ 'ಯಾರು' ಎಂದರು ಗುರುನಾಥರು. ನಾವು ಸ್ವಾಮೀಜಿ 'ಕೂಡಲಿಯಿಂದ ಬಂದಿದ್ದೀವಿ' ಎಂದು ಅಲ್ಲೇ ಹೊರಗಡೆಯೇ ನಿಂತಿದ್ದಾಗ 'ಬನ್ನಿ... ಬನ್ನಿ ಒಳಗೆ' ಗುರುನಾಥರು ಹೊರಗೆ ನಿಂತ ನಮ್ಮ ಐದೂ ಜನರನ್ನು ಕರೆದರು. ಒಳಗೆ ಹೋದ ನಾವು ನಮಿಸಿದೆವು. 'ಅಂತೂ ಗುರುನಾಥರ ದರ್ಶನ ಸಿಕ್ಕಿತಲ್ಲ' ಮನಸ್ಸು ಹಗುರವಾಗಿತ್ತು. 'ಕೂಡಲಿ' ಎನ್ನುವ ಶಬ್ದವೇ ಬಹುಶಃ ನಮಗೆ ಗುರುನಾಥರ ದರ್ಶನ ಕೊಡಿಸಲು ಒಂದು ಎಳೆಯಾಗಿದ್ದಿರಬಹುದೇನೋ?

ಕೂಡಲಿಯ ಜಗದ್ಗುರು ಮಠಕ್ಕೆ ತಮ್ಮ ಶಿಷ್ಯರಿಂದ ಗುರುನಾಥರು ಮಾಡಿಸಿದ ಸೇವೆ ಅಪಾರ. ಹಿಂದಿನ ಜಗದ್ಗುರುಗಳು ನಿರ್ಮಿಸಿದ ಬಹುದೊಡ್ಡ ಕಲ್ಮಠದ ಮೇಲೆ ಅಷ್ಟೇ ಬೃಹತ್ತಾದ ಅತಿದೊಡ್ಡ ಸೌಲಭ್ಯಗಳುಳ್ಳ ಕಟ್ಟಡ ನಿರ್ಮಾಣವಾದದ್ದು ಗುರುನಾಥರಿಂದ. ದೂರದಿಂದ ಬಂದ ಭಕ್ತರಿಗೆ ಉಳಿಯಲು ಅನೇಕ ಅನುಕೂಲ, ನೀರು, ನೀಡಿ ವ್ಯವಸ್ಥೆಗಳಾದುದು ಗುರುನಾಥರಿಂದ ಎಂಬುದು ಅನೇಕರಿಗರಿಯದ ವಿಷಯ. ಇಬ್ಬರು ಜಗದ್ಗುರುಗಳಿಗೂ ಗುರುನಾಥರ ಭಕ್ತರಿಂದ ಕೊಡಿಸಿದ ದೇಣಿಗೆಗೆ ಲೆಕ್ಕವಿಲ್ಲ. ಒಮ್ಮೆ ಕೂಡಲಿಯ ಜಗದ್ಗುರುಗಳನ್ನು ನೋಡಲು ಹೋದಾಗ, ಆ ಗುರುಗಳ ರೂಮಿನ ತುಂಬಾ, ದೊಡ್ಡ ದೊಡ್ಡ ಡಬ್ಬಗಳಲ್ಲಿ ತುಂಬಿದ ಹಲವಾರು ಸಿಹಿ ಭಕ್ಷ್ಯಗಳು, ಹಣ್ಣು ಹಂಪಲುಗಳು, ತರಕಾರಿಗಳು, ವಸ್ತ್ರ ಧಾನ್ಯಾದಿಗಳು ವಿರಾಜಿಸುತ್ತಿದ್ದವು. ದೊಡ್ಡ ಗುರುಗಳಿಗೆ ನಮಿಸಿ ಕುಳಿತಾಗ, ತುಂಬಾ ಹಣ್ಣು ಹಣ್ಣು ವಯಸ್ಸಾದ ಅವರು ಅಷ್ಟೇ ನಿಸ್ವಾರ್ಥ ಮನಸ್ಸಿನವರು... 'ನೋಡ್ರಪ್ಪಾ ಸಖರಾಯಪಟ್ಟಣದ ಅವಧೂತರು ತಮ್ಮ ಶಿಷ್ಯರೊಂದಿಗೆ ಎಷ್ಟೆಲ್ಲಾ ಕಲಿಸಿಬಿಟ್ಟಿದ್ದಾರೆ. ಅವರು ಏನಾದರೂ ಕಳಿಸಿದರೆಂದರೆ ಹೀಗೆ ಉತ್ತಮವಾದದ್ದು, ಅಗಾಧವಾಗಿ ಕಳಿಸಿ ಬಿಡುತ್ತಾರೆ.. ಬನ್ನಿ ನೀವು ಎಲ್ಲಾ ಈ ಸಕ್ಕರೆ ಹೋಳಿಗೆಯನ್ನು ತೆಗೆದುಕೊಳ್ಳಿ... ' ಎಂದು ತುಪ್ಪವನ್ನು ಹಾಕಿ ನಮಗೆಲ್ಲಾ ಕೊಟ್ಟರು. ಸಖರಾಯಪಟ್ಟಣದ ಸಕ್ಕರೆ ಹೋಳಿಗೆ ಅದೆಷ್ಟು ಸವಿಯಾಗಿತ್ತು. ಗುರುನಾಥರು ಕಳಿಸಿದ ಪ್ರಸಾದ ಅನಾಯಾಸವಾಗಿ ಮತ್ತೊಬ್ಬ ಜಗದ್ಗುರುಗಳ ಹಸ್ತದಿಂದ ನಮಗೆ ಒದಗಿದ್ದು ನಮ್ಮ ಭಾಗ್ಯ... ಹೀಗೆ ಎರಡು ಮೂರು ಸನ್ನಿವೇಶಗಳಲ್ಲಿ ಗುರುನಾಥರ ಪ್ರಸಾದ ನನಗೆ ಸಿಕ್ಕಿತ್ತು. ಆದರೂ ಅವರ ದರ್ಶನ ಮಾತ್ರ ಆಗಿರಲಿಲ್ಲ. 

'ಕೂಡಲಿ' ಎಂಬ ಪದ ಗುರುನಾಥರಿಗೆ ಮತ್ತೊಂದು ರೀತಿಯಲ್ಲಿ ಸಂಬಧಿಸಿದ್ದಿರಬಹುದು. ನಲವತ್ತೈದು ವರ್ಷಗಳ ಹಿಂದಿನ ನಂಟು. ನಮ್ಮ ತಂದೆ ಶ್ರೀಕಂಠಯ್ಯನವರು ಗುರುನಾಥರನ್ನು, ಬಸವಾಪಟ್ಟಣದ ರಾಘಣ್ಣನವರನ್ನು, ಬೆಲಗೂರಿನ ಶ್ರೀಗುರುಗಳನ್ನು ನಮ್ಮ ಮನೆಗೆ ಕರೆತರುತ್ತಿದ್ದರು. ಇಂಥ ಸಾಧು ಸಂತರ ಸಂಗಮ ನಮ್ಮ ತಂದೆಯವರೊಂದಿಗೆ ಆಗುತ್ತಿತ್ತು. ಕೂಡಲಿಯ ಸಂಗಮದಲ್ಲಿದ್ದ ನಮ್ಮ ತಂದೆಗೆ ಸಾಧು ಸಂತರ ಸಮಾಗಮವೆಂದರೆ ಅದೇನೋ ಅಕ್ಕರೆ. 

ನಿಮ್ಮ ಮನೆಯಲ್ಲಿ ಕೈತುತ್ತು ಹಾಕುತ್ತಿದ್ದರು 


ಕೂಡಲಿಯಿಂದ ಬಂದವರೆಂದ ಕೂಡಲೇ 'ಶ್ರೀಕಂಠಯ್ಯನವರು ಹೇಗಿದ್ದಾರೆ? ಶ್ರೀನಿವಾಸ ಭಟ್ಟರು ಏನು ಮಾಡುತ್ತಿದ್ದಾರೆ? ಅಲ್ಲಿಯೇ ಸನಿಹದ ಹೊಳಲೂರಿನಲ್ಲಿದ್ದ ಒಬ್ಬ ಸಾಧಕ, ಅವಧೂತರು... ಹನುಮಂತಪ್ಪನವರು ಹೇಗಿದ್ದಾರೆಂದು ಪ್ರೀತಿಯಿಂದ ವಿಚಾರಿಸಿದರು. 

ಏನು ಉತ್ತರಿಸಲಿ.. 'ಸ್ವಾಮೀಜಿ ನಮ್ಮ ತಂದೆ, ನಮ್ಮ ಮಾವ ಇಬ್ಬರೂ ಗತಿಸಿ ಸಾಕಷ್ಟು ಕಾಲವಾಯಿತು. ಹನುಮಂತಪ್ಪ ಸ್ವಾಮಿಗಳೂ ದೈವಾಧೀನರಾಗಿ ಇಪ್ಪತ್ತು ವರ್ಷಗಳೇ ಆದವು' ಎಂದೆ. 

ಇಷ್ಟು ಹೊತ್ತಿಗಾಗಲೇ ಗುರುನಾಥರು ಎರಡು ಮೂರು ಸಾರಿ, ಅನೇಕ ಪಾನೀಯ ಪ್ರಸಾದಗಳನ್ನು ತರಿಸಿಕೊಟ್ಟಿದ್ದರು. 'ನಿಮ್ಮ ಊರಿಗೆ ನಲವತ್ತು ವರ್ಷಗಳ ಕೆಳಗೆ ಬರುತ್ತಿದ್ದೆ. ನಿಮ್ಮ ಊರಿನ ಎಲ್ಲಾ ದೇವಸ್ಥಾನಗಳ ಪೂಜೆ ಮಾಡಿ, ಎರಡು ಬಿಂದಿಗೆ ನೀರನ್ನು ಹೊತ್ತು ತಂದು ನಿಮ್ಮ ಮನೆಯಲ್ಲಿ ಇಡುತ್ತಿದ್ದೆ. ನಿಮ್ಮ ತಾಯಿ ಕೈ ತುತ್ತು ಹಾಕುತ್ತಿದ್ದರು. ನಲವತ್ತೋ, ನಲವತ್ತೈದೋ ವರ್ಷಗಳು ಆದವು. ಇನ್ನೂ ಮರೆತಿಲ್ಲ... ನಮ್ಮನ್ನು ಬಹಳ ವರ್ಷಗಳ ಹಿಂದಕ್ಕೆ ಕರೆದೊಯ್ದು ಬಿಟ್ಟಿರಿ' ಎಂದರು. ಸಂತಸ ಅವರ ಮುಖದಲ್ಲಿತ್ತು. ನನ್ನ ಜೊತೆ ಬಂದಿದ್ದ ನಮ್ಮ ಮಗಳಿಗೆ ಹಾಡು ಹೇಳಲು ಹೇಳಿದ್ದರು. ಆಕೆ ಹಾಡುತ್ತಲೇ ಗುರುನಾಥರ ಪಾದ ಒತ್ತುತ್ತಿದ್ದಳು. ನನಗೂ ಇನ್ನೊಂದು ಪಾದ ಒತ್ತುವ ಸದವಕಾಶವನ್ನು ಗುರುನಾಥರು ಕರುಣಿಸಿದ್ದರು. ಗಾನಸುಧೆ ಸಾಗುತ್ತಲೇ ಇತ್ತು... ಒಂದು ತುಂಡು ಟವೆಲನ್ನು ಸೊಂಟಕ್ಕೆ ಸುತ್ತಿ, ಹೆಗಲ ಮೇಲೊಂದು ಟವೆಲು ಧರಿಸಿ ನಿರ್ಮಲ ಮುಖದಲ್ಲಿ 'ಪರಮಾತ್ಮ' ನಂತೆ ಕಾಣುತ್ತಿರುವ ಗುರುನಾಥರನ್ನು ನೋಡುವುದೊಂದೇ ನಮ್ಮ ಕೆಲಸವಾಗಿತ್ತು. ಜನುಮ ಜನುಮಕ್ಕೆ ಸಾಕಾಗುವ ಕೃಪೆ ಸಿಕ್ಕಂತೆ ಅನಿಸಿತ್ತು. ನಾವಿಲ್ಲಿಗೆ ಬಂದಿದ್ದೇವೆ. ಗುರುನಾಥರು ಇಷ್ಟು ಸುಲಭವಾಗಿ ದರ್ಶನ ನೀಡಿರುವುದೇ ನಮಗೆ, ಅದರಲ್ಲೂ ನನಗಂತೂ ಪರಮಾಶ್ಚರ್ಯದ ಸಂಗತಿಯಾಗಿತ್ತು. 

ನಾಳೆ ನಿಮ್ಮ ಮನೆಗೆ ಬರ್ತೀನಿ 


'ಬಹಳ ದಿನಗಳಾಗಿತ್ತು ಸಂಗೀತ ಕೇಳಿ'.... ಗುರುನಾಥರು ತೃಪ್ತರಾಗಿ ಹೇಳುತ್ತಾ.. 'ಒಹೋ! ಗಂಟೆ ಹನ್ನೊಂದಾಯಿತು. ನಾವಿನ್ನು ಹೊರಡಬಹುದು. ಕಾರಿನಲ್ಲಿ ಪ್ರೆಟ್ರೋಲ್ ಇದೆಯೇ ನೋಡಿಕೊಳ್ಳಿ.. ಹಾಸನಕ್ಕೆ ಹೋಗ್ತಿದ್ದೀರಲ್ಲ ಜೋಪಾನ. ಒಳ್ಳೆಯದು ಹೋಗಿಬನ್ನಿ... ನಾಳೆ ನಿಮ್ಮ ಮನೆಗೆ ಬರ್ತೀನೀಮ್ಮ' ಎಂದು ನನ್ನ ಮಗಳಿಗೆ ಹೇಳುತ್ತಾ... ನಾವಲ್ಲಿಟ್ಟಿದ್ದ ಹಣ, ಜೂಸ್ ಡಬ್ಬಿ, ಎಲ್ಲವನ್ನು ಅವಳ ಮಡಿಲಿಗೆ ಹಾಕಿ' ಇದೆಲ್ಲಾ ನಿನಗೆ ಸೇರಬೇಕಾದ್ದು' ತಗೋ ಎಂದರು. ಇಷ್ಟು ಹೊತ್ತಿಗಾಗಲೇ ಮೊಸರನ್ನ, ಮತ್ತೇನೋ ತಿಂಡಿ, ಕಾಫಿಗಳ ಸರಬರಾಜಾಗಿತ್ತು. ಗುರು ಪ್ರಸಾದವೆಂದು ತೆಗೆದುಕೊಳ್ಳುತ್ತಲೇ ಇದ್ದೆವು. 

ಗುರುನಾಥರು ಹಾಸನದ ತಮ್ಮ ಮನೆಗೆ ಬರುತ್ತಾರಲ್ಲ ಎಂಬ ಸಂತಸ ಸಂಭ್ರಮದಿಂದ 'ಗುರುನಾಥರೇ ನಾಳೆ ಬರ್ತೀರಲ್ಲ... ಎಲ್ಲಿಗೆ ಕಾರು ತರಲಿ... ಎಷ್ಟು ಹೊತ್ತಿಗೆ ಬರಲಿ... ?' ಎಂದು ನನ್ನ ಮಗಳು ಆತಂಕದಿಂದ ಕೇಳಿದಾಗ, 'ಏನೂ ಬೇಡ... ನಾನು ಬರ್ತೀನಮ್ಮ.... ' ಹೋಗಿ ಬಾ ಎಂದು ಆಶೀರ್ವದಿಸಿದರು. 

ಗುರುನಾಥರ ಬಗ್ಗೆ ಕೇಳಿದ್ದ ನನಗೆ ಹೀಗೆ ಗುರುನಾಥರು ಮನದುಂಬುವಂತೆ ಒಂದು ದರ್ಶನ ನೀಡಿ ಹರಸಿದ್ದರು. ಈ ದರ್ಶನ ನಾನು ಮಾಡಲು ನನ್ನ ಮಗಳು ಕಾರಣವೆಂದು ನನಗನ್ನಿಸುತ್ತೆ. 

ಅಂದು ಶಿವಮೊಗ್ಗದಿಂದ ಹಾಸನಕ್ಕೆ ಹೊರಡಲಿದ್ದು ಅವಳು 'ಸಖರಾಯಪಟ್ಟಣಕ್ಕೆ ಹೋಗಿ ಗುರುನಾಥರ ದರ್ಶನ ಮಾಡಿ ಹೋಗುತ್ತೇವೆ ಎಂದಾಗ.. ನಾನು ಬರ್ತೀನಿ.. ಎಂದಿದ್ದೆ. ಅಪ್ಪಾ ಅದೆಲ್ಲಾ ಅಷ್ಟು ಸುಲಭ ಅಲ್ಲ.... ಅದೂ ಗುರುನಾಥರು ಸಿಗಬೇಕಲ್ಲ... ' ಎಂದು ರಾಗವೆಳೆದಾಗ.... 'ಗುರುನಾಥರು ಸಿಕ್ಕೇ ಸಿಗುತ್ತಾರೆ. ದರ್ಶನ ಆಗೇ ಆಗುತ್ತೆ' ಎಂದು ಅದೇನೋಭರವಸೆಯಿಂದ ಹೇಳಿಬಿಟ್ಟೆ. ಮಧ್ಯಾನ್ಹ ಹೊರಟು ಸಖರಾಯಪಟ್ಟಣಕ್ಕೆ ಬಂದು ಕಾದಿದ್ದು, ಸ್ನೇಹಿತರೊಬ್ಬರ ಮನೆಯಲ್ಲಿ ತಂಗಿದ್ದಾಗ ಅವರೂ ನನಗೆ ಗುರುನಾಥರ ವಿಚಾರ ತಿಳಿಸಿದ್ದು, ಮತ್ತೂ ನೋಡಲೇಬೇಕೆಂಬ ಇಚ್ಛೆಯನ್ನು ಭದ್ರ ಮಾಡಿತ್ತು. ಸಂಜೆ ಏಳಾದರೂ ಆ ಊರಿಗೆ ಹೊಸಬನಾದ ನನಗೆ ಏನೂ ತಿಳಿಯಲಿಲ್ಲ. ಅಕಸ್ಮಾತ್ ಸಿಕ್ಕ ಸ್ನೇಹಿತರು, ಮನೆಗೆ ಕರೆದೊಯ್ದು ತಮ್ಮ ಮನೆಯ ವೇದಿಕೆಯ ದರ್ಶನ ಮಾಡಿಸಿ, ತಮ್ಮ ಅಣ್ಣನನ್ನು ಕೇಳಿ ತಿಳಿದುಕೊಂಡು ಗುರುನಾಥರ ಸ್ಥಾನವನ್ನು ತಿಳಿಸಿದ್ದರು. ಹೀಗೆ ಹಲವು ಗುರುಬಂಧುಗಳ ಸಹಕಾರ... ಗುರುನಾಥರ ಕೃಪೆ... ಜೀವನದಲ್ಲೊಮ್ಮೆ ಮಾತ್ರ ದರ್ಶನ ಮಾಡಿಸಿತ್ತು. ಆ ಕರುಣಾಳುಗಳು ದರ್ಶನ ನೀಡಿದ್ದರು. 

ಮಾರನೆಯ ದಿನ ಅದಾವ ರೂಪದಲ್ಲಿ ಗುರುನಾಥರು ಬಂದರೋ ನಮಗಾರಿಗೂ ತಿಳಿದಿರಲಿಲ್ಲ. 'ಬೆಳಗಿನಿಂದ ಸಂಜೆಯವರೆಗೆ ಬಂದವರಿಗೆ, ನಿಮ್ಮ ಮನೆ ಬಾಗಿಲಿಗೆ ಬಂದ ಎಲ್ಲ ಪ್ರಾಣಿಗಳಿಗೆ ಏನಾದರೂ ಕೊಡಮ್ಮಾ' ಎನ್ನುವುದು ಬಿಟ್ಟು ನನ್ನಿಂದ ಬೇರೇನೂ ಮಾಡಲಾಗಲಿಲ್ಲ. ಈಗ ಗುರುನಾಥರು... ಏನೂ ಅರಿಯದ ದಡ್ಡನಿಂದ ಅವರೇ, ಲೇಖನಿಯಾಗಿ ಸದ್ಗುರುನಾಥ ಲೀಲಾಮೃತವನ್ನು ಬರೆಸುತ್ತಿರುವುದು, ತಮ್ಮ ಸಹಸ್ರಾರು ಭಕ್ತರಿಗೆ ನೀಡಿದ್ದನ್ನು, ನನಗೂ ಉಣಬಡಿಸುತ್ತಿರುವುದು, ಗುರುವಂದನೆಯ ಕಾರ್ಯಕ್ರಮದಲ್ಲಿ ಗುರುನಾಥರ ಬಂಧುಗಳ ಮಧ್ಯದಲ್ಲಿ ಇದನ್ನು ಬಿಡುಗಡೆ ಮಾಡಿಸುತ್ತಿರುವುದು ಎಲ್ಲಾ ಗುರುನಾಥರ ಲೀಲೆಯೇ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 



।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 52

ಕಡ್ಡಿ ಮುರಿದಂತೆ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಆ ಹುಡುಗ ಮೂಲತಃ ಮಲೆನಾಡು ಮೂಲದವನು. ಬಹುಶಃ ಹತ್ತನೇ ತರಗತಿಯಲ್ಲಿ ಓದುತ್ತಿದ್ದವ. ಒಮ್ಮೆ ಇದ್ದಕ್ಕಿದ್ದಂತೆ ನಾಪತ್ತೆಯಾದ. ಅವನ ತಂದೆತಾಯಿಗಳು ಜ್ಯೋತಿಷ್ಯ, ಶಾಸ್ತ್ರ ಪೂಜೆಗಳೆಲ್ಲವನ್ನೂ ಮಾಡಿಸಿದರು. ಕೊನೆಗೆ ಪೋಲೀಸ್ ಇಲಾಖೆಗೆ ಮಗ ಕಳೆದು ಹೋದ ಬಗ್ಗೆ ದೂರು ನೀಡಿದ್ದೂ ಆಯ್ತು. ಆದರೆ ಪ್ರಯೋಜನ ಮಾತ್ರ ಶೂನ್ಯ. 

ಹೀಗಿರಲು ಯಾರಿಂದಲೋ ಗುರುನಾಥರ ಬಗ್ಗೆ ತಿಳಿದು ಕೂಡಲೇ ಗುರುನಿವಾಸಕ್ಕೆ ಬಂದು ನನ್ನೊಡೆಯನ ಚರಣಕ್ಕೆರಗಿ ಮಗನ ವಿಚಾರ ಕೇಳಿದರು. 

ಅಂದು ಮಲೆನಾಡಿನಲ್ಲಿ ನಕ್ಸಲ್ ಚಳುವಳಿ ಬಲವಾಗಿತ್ತಾದ್ದರಿಂದ ಆ ದಂಪತಿಗಳಿಗೆ ತಮ್ಮ ಮಗ ನಕ್ಸಲ್ ಹೋರಾಟಕ್ಕೆ ಸೇರಿದನಾ? ಎಂಬ ಕಳವಳವೂ ಇತ್ತು. ಆ ವಿಚಾರವನ್ನು ಗುರುಗಳಲ್ಲಿ ನಿವೇದಿಸಿದರು. 

ತುಸು ಹೊತ್ತು ಸುಮ್ಮನಿದ್ದ ಗುರುನಾಥರು ಬೇರೇನೂ ಹೇಳದೆ ಒಂದೇ ಮಾತಿನಲ್ಲಿ "ನಿಮ್ ಮಗ ಸುರಕ್ಷಿತವಿದ್ದಾನೆ. ಮನೆಗೆ ಬರ್ತಾನೆ. ಧೈರ್ಯವಾಗಿರಿ" ಎಂದು ಅಭಯ ನೀಡಿ ಕಳಿಸಿದರು. 

ಅದಾಗಿ ಬಹುಶಃ 2-3 ವರ್ಷದ ನಂತರ ಆ ಹುಡುಗ ಇಂದು ಹಿಂತಿರುಗಿರುವನು. ತೀರಾ ಇತ್ತೀಚೆಗೆ ಆತನ ಮದುವೆಯೂ ಆಯಿತೆನಿಸುತ್ತದೆ. ಹೀಗೆ ಗುರುನಾಥರ ಮಾತು ಇಂದಿಗೂ ಕಡ್ಡಿ ಮುರಿದಂತೆ ನಡೆದೇ ತೀರುವುದು. ಮೊನ್ನೆ ಆ ಹುಡುಗನ ತಂದೆ ತಾಯಿಗಳು ಮಗನ ಮದುವೆಗೆ ಕರೆಯಲು ನಮ್ಮಲ್ಲಿಗೆ ಬಂದಿದ್ದರೂ ಕೂಡ. 

ಅದೇ ರೀತಿ ಇನ್ನೊಮ್ಮೆ ಓರ್ವ ಗಣ್ಯ ವ್ಯಕ್ತಿಯ ಕಾರು ಗುರುನಾಥರ ಮನೆ ಸಮೀಪದ ತಿರುವಿನಲ್ಲಿ ಗುರುನಿವಾಸದ ಮುಂದೆ ಬರುವುದಕ್ಕೂ ಗುರುನಾಥರು ಮೆಟ್ಟಿಲಿಳಿದು ಬರುವುದಕ್ಕೂ ಸರಿಯಾಯಿತು. ಕಾರಿನಿಂದಿಳಿಯ ಹೊರಟವರನ್ನು ತಡೆದ ಗುರುನಾಥರು ಇನ್ನೊಂದು ಕಾರಿನಲ್ಲಿ ಹೊರಟರು. ಗಣ್ಯರ ಕಾರೂ ಹಿಂಬಾಲಿಸಿತು. ಆ ಗಣ್ಯರು ಯಾಕೆ ಬಂದರೆಂದೂ ಗುರುಗಳು ಕೇಳಲಿಲ್ಲ. ಅವರಿಗೆ ಹೇಳೋಕೂ ಸಮಯ ಸಿಗಲಿಲ್ಲ. ಹಾಗೆ ಸುಮ್ಮನೆ ಗುರುಗಳಿದ್ದ ಕಾರನ್ನು ಹಿಂಬಾಲಿಸುತ್ತಿದ್ದರಷ್ಟೇ. 

ಗುರುಗಳಿದ್ದ ಕಾರು ಅರಸೀಕೆರೆ ಸಮೀಪವಿರುವ ಹೋಟೆಲ್ ಒಂದರ ಸಮೀಪ ನಿಲ್ತು. ಆ ಗಣ್ಯರೂ ತಮ್ಮ ಕಾರನ್ನು ನಿಲ್ಲಿಸಿ ಗುರುನಾಥರ ಸಮೀಪ ಬಂದರು. ಆಗ ಗುರುನಾಥರು ಅಲ್ಲೇ ತುಸು ದೂರದ ಬೀಡಾ ಅಂಗಡಿ ಮುಂದಿದ್ದ ಹುಡುಗನತ್ತ ಕೈ ತೋರಿಸಿ: "ನೋಡಿ ನೀವ್ ಹುಡುಕುತ್ತಾ ಇದ್ದ ಹುಡುಗ ಅಲ್ಲಿದ್ದಾನೆ" ಎಂದು ನಕ್ಕರು. ತಾವೇನೂ ಹೇಳದೆ ತಮ್ಮ ಸಮಸ್ಯೆ ಪರಿಹಾರವಾದದ್ದನ್ನು ಕಂಡು ಆ ಗಣ್ಯ ವ್ಯಕ್ತಿಗಳು ಆನಂದಪರವಶರಾಗಿ ಗುರುಗಳಿಗೆ ವಂದಿಸಿದರು. 

ಇತ್ತೀಚಿಗೆ ಗುರುಭಕ್ತರೊಬ್ಬರು ನಮ್ಮ ಮನೆಗೆ ಬಂದಿದ್ದರು. ಗುರುನಾಥರ ಬಗ್ಗೆ ಮಾತನಾಡುತ್ತಾ ತಾನು ಗುರುನಿವಾಸಕ್ಕೆ ಬಂದ ಸಂದರ್ಭವನ್ನು ಹೀಗೆ ಹೇಳತೊಡಗಿದರು. "ಕೆಲ ವರ್ಷದ ಹಿಂದೆ ನಾನು ಸಮಸ್ಯೆಗಳ ಸರಮಾಲೆ ಹೊತ್ತುಕೊಂಡು ಎಲ್ಲೂ ಪರಿಹಾರ ಕಾಣದೆ ಕೊನೆಗೆ ಸಖರಾಯಪಟ್ಟಣಕ್ಕೆ ಬಂದೆ. ನನ್ನ ಮಾತನಾಡಿಸುತ್ತಾ ಗುರುನಾಥರು 'ನೀವು ಏನೂ ಮಾಡಬೇಡಿ. ಒಂದು ಹೊಸ ಟಯರ್ ತಂದು ಅದನ್ನು ಒಂದು ಬಿಳಿ ಬಟ್ಟೆಯಲ್ಲಿ ಸುತ್ತಿ ನಿಮ್ಮ ಮನೆಯಲ್ಲಿಟ್ಟು ಪ್ರತೀ ದಿನ ಒಂದು ಸಾರಿ ಅದನ್ನು ನೋಡ್ಬೇಕು. ನಿಮಲ್ಲಾ ಸಮಸ್ಯೆ ಪರಿಹಾರವಾಗುತ್ತೆ' ಅಂದಿದ್ರು. ಇಂದು ಅವರ ಕೃಪೆಯಿಂದ ನಮ್ಮ ಕುಟುಂಬ ನೆಮ್ಮದಿಯಾಗಿದೆ" ಎಂದು ಹೇಳಿ ಮತ್ತೊಂದು ವಿಚಾರ ಹೇಳತೊಡಗಿದರು. 

"ಮತ್ತೊಮ್ಮೆ ನಮ್ಮ ಸಂಬಂಧಿಯೊಬ್ಬರ ಮಗ ಕಾಣೆಯಾಗಿದ್ದನು. ಅವನ ಹುಡುಕಾಟಕ್ಕಾಗಿ ಗುರುನಿವಾಸಕ್ಕೆ ಹೋದೆವು. ನಮ್ಮನ್ನು ನೋಡಿ ಗುರುಗಳು 'ನೀವೆಲ್ಲೂ ಹುಡುಕಬೇಡಿ. ಅವನಾಗಿಯೇ ಬರುತ್ತಾನೆ. ಧೈರ್ಯವಾಗಿರಿ' ಎಂದು ಅಭಯ ನೀಡಿ ಕಳಿಸಿಕೊಟ್ಟರು. ಆಗ ಆ ಹುಡುಗ ಏಳನೆಯ ತರಗತಿಯಲ್ಲಿದ್ದು ಓದನ್ನು ಅರ್ಧಕ್ಕೆ ನಿಲ್ಲಿಸಿ ಮನೆ ಬಿಟ್ಟಿದ್ದನು. ಹನ್ನೆರಡು ವರ್ಷದ ನಂತರ ಗುರುವಾಕ್ಯದಂತೆಯೇ ಆತ ವಾಪಸಾಗಿದ್ದು ಇಂದು ಪದವಿ ಮುಗಿಸಿ ಮಂಗಳೂರು ಸಮೀಪ ಒಂದು ಸ್ವಂತ ಉದ್ಯಮ ಆರಂಭಿಸಿರುವನು" ಎಂದು ಆನಂದಪರವಶರಾಗಿ ನುಡಿದು, 'ಅವರು ಮನುಷ್ಯ ದೇಹ ತಾಳಿ ಭುವಿಗೆ ಬಂದ ಸಾಕ್ಷಾತ್ ಈಶ್ವರನೇ..... ಬೇಡಿ ಬಂದ ಭಕ್ತರ ಉದ್ದಾರಕ್ಕಾಗಿ ತನ್ನದೆಲ್ಲವನ್ನೂ ಮರೆತು ಬಾಳಿದ ಅಂತಹ ಸದ್ಗುರು ಇನ್ನೊಬ್ಬರಿಲ್ಲ' ಎಂಬುದು ನಮ್ಮ ನಂಬಿಕೆ ಎಂದು ಹೇಳಿ ಕೈ ಮೇಲೆತ್ತಿ ಆ ಗುರುವಿಗೆ ಕೈ ಮುಗಿದರು" ಎಂದು ನುಡಿದರು.......,,,,,,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Thursday, November 24, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 12


ಕುಚೇಲನ ಮನೆಗೆ ಬಂದ ಶ್ರೀಕೃಷ್ಣ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಗುರುನಾಥರ ಶಿಷ್ಯರುಗಳನ್ನೆಲ್ಲಾ ಮಾತನಾಡಿಸುತ್ತಾ ಹೋದಂತೆ, ಅವರ ಲೀಲಾ ವಿನೋದಗಳು ಅದೆಷ್ಟು ಅಪಾರ-ಅನಂತ ಎನ್ನುವುದರ ಅರಿವಾಗತೊಡಗಿತು. ಗುರುಬಂಧುಗಳೊಬ್ಬರನ್ನು ನಿನಗೆ ಗುರುನಾಥರ ಪರಿಚಯ ಹೇಗಾಯ್ತು. ನಿಮ್ಮ ಮೇಲೇನು ಪ್ರಭಾವ ಬೀರಿದರು ಎಂದು ಕೇಳಿದಾಗ ಸಹಜವಾಗಿ ಅವರು ಹೀಗೆ ಹೇಳತೊಡಗಿದರು. 

"ಬೆಂಗಳೂರಿನಲ್ಲಿ ಮೊದಲು, ಗುರುಬಂಧು ಒಬ್ಬರ ಮನೆಯಲ್ಲಿ ಗುರುನಾಥರನ್ನು ಕಾಣುವ ಸುಯೋಗ ಒದಗಿತು. ನಾನು ಬಯಸಿಯೋ, ಬಯಸದೆಯೋ, ಪದೇ ಪದೇ ಗುರುನಾಥರ ದರ್ಶನವಾಗುತ್ತಿತ್ತು. ಮತ್ತೆ ಇನ್ನೊಬ್ಬ ಸ್ನೇಹಿತರು ನನ್ನನ್ನು ಕಡೂರಿನ ಒಂದು ಗುರುಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು. ಬರುತ್ತಾ ಸಖರಾಯಪಟ್ಟಣದಲ್ಲಿಳಿದು ಗುರುದರ್ಶನ ಮಾಡಿಕೊಂಡು ಊರಿಗೆ ಬಂದೆ. ನನ್ನ ವ್ಯಾಪಾರದ ವಸ್ತುಗಳನ್ನು ಸಖರಾಯಪಟ್ಟಣದಲ್ಲಿ ಗುರುನಾಥರ ಮನೆಯ ಸಮೀಪದಲ್ಲಿಡುತ್ತಿದ್ದೆ. ಶ್ರೀರಾಮನವಮಿಯ ಸಮಯ. ಗುರುನಾಥರ ಮನೆಯಲ್ಲಿ ನೂರು ರೂಪಾಯಿ ಇಟ್ಟುಕೊಂಡು ಸಕ್ಕರೆ ನಿಂಬೆಹಣ್ಣು ತರಿಸಲು ನೋಡುತ್ತಿದ್ದರು. ನಾನು ಹೋಗಿ ಅವುಗಳನ್ನು ತಂದುಕೊಟ್ಟೆ. ಗುರುನಾಥರ ದೃಷ್ಟಿ ನನ್ನ ಮೇಲೆ ಬಿತ್ತು. ಸಹಜವಾಗಿ 'ಏನು ಬಂದಿದ್ದು' ಎಂದು ಗುರುನಾಥರು ಕೇಳಿದಾಗ, 'ನಿಮ್ಮ ಜೊತೆ ಇರಲು ಬಂದೆ' ಎಂದುಬಿಟ್ಟೆ. ಎಲ್ಲೆಲ್ಲಿಂದಲೋ ಗುರುನಾಥರನ್ನು ಹುಡುಕಿ ಬರುವ ಜನರಿದ್ದರು. ನಮಗೆ ಗುರುಕಾರುಣ್ಯ. ಹಾಗಾಗಿ ಕೇವಲ ಇಪ್ಪತ್ತೆರಡು ಕಿಲೋಮೀಟರ್ ಗಳಷ್ಟು ಹತ್ತಿರದಲ್ಲಿ ಗುರುನಾಥರು ಸಿಕ್ಕಿದ್ದರು. ಇದು ನಮ್ಮ ಪುಣ್ಯ. ಆದರೆ, ಆನೇಕ ಸಾರಿ ಅವರನ್ನು ಕಾಣಲು ಹೋಗಬೇಕೆಂದರೆ ಹಲವು ಅಡೆತಡೆಗಳು ಬರುತ್ತಿದ್ದವು. ಮನದಲ್ಲಿ ನಿರ್ಧಾರ ಅಚಲವಾಗಿದ್ದರೆ ಅದು ಹೇಗೋ ಎಸ್.ಟಿ.ಡಿ. ಬೂತ್ ನಲ್ಲಿ ಪರಿಚಯವಾದವರೊಬ್ಬರಿಂದ ಸಾಲ ಪಡೆದಾದರೂ 'ಗುರುಸ್ಥಾನಕ್ಕೆ' ಹೋಗುತ್ತಿದ್ದೆ. 

ಒಮ್ಮೆ ಅನೇಕ ದಿನಗಳಿಂದ ಗುರುನಾಥರಿನ್ನೂ ಕಂಡಿರಲಿಲ್ಲ. ನೋಡಬೇಕೆಂದು ಮನಸ್ಸಾಗಿತ್ತು. ಆದರೆ ಹಣವಿರಲಿಲ್ಲ. ನಮ್ಮ ಮಾವನ ಮಗ ಗೌರಿ ಹಬ್ಬದ ಪೂರ್ವದಲ್ಲಿ ಇಲ್ಲಿಗೆ ಬಂದಿದ್ದರು. ಅವರೂ ಸಖರಾಯಪಟ್ಟಣಕ್ಕೆ ಹೋಗಬೇಕೆಂದಾಗ ಹೊರಟೆ. ಜೇಬಿನಲ್ಲಿ ಹಣವಿಲ್ಲ. ಎಸ್.ಟಿ.ಡಿ. ಬೂತ್ ನಲ್ಲಿ ಬೇರಾರೋ ಇದ್ದರು. ಅವರಿಂದ ಸಾಲ ಪಡೆಯುವುದು ಕಷ್ಟ. 'ಎಂಥಾ ಪರಿಸ್ಥಿತಿ ತಂದೆ ಗುರುವೆ' ಎಂದು ಮನಸ್ಸು ನೊಂದಿತು. ಅಷ್ಟರಲ್ಲಿ ರೋಡ್ ಹಂಪ್ ಬಳಿ ಗುರುನಾಥರು ಕಾರಿನಲ್ಲಿ ಬರುತ್ತಿರುವುದು ಕಂಡಾಗ, ಆದ ಸಂತೋಷ ಅಷ್ಟಿಷ್ಟಲ್ಲ. ದರ್ಶನ ನೀಡಿ ಸಾರ್ಥಕ ಮಾಡಿದರು ನನ್ನನ್ನು. ನಂತರ ಅವರು ಬಂದಿದ್ದ ಗುರು ಬಂಧುಗಳ ಮನೆಗೆ ನಾನು ಹೋದೆ. "ನಿಮ್ಮ ಮನೆ ಎಲ್ಲಿ?" ಎಂದು ವಿಚಾರಿಸಿ, ಪ್ರೀತಿಯಿಂದ ನಮ್ಮ ಮನೆಗೇ ಬಂದರು. ಕುಚೇಲನ ಮನೆಗೆ ಶ್ರೀ ಕೃಷ್ಣ ಪರಮಾತ್ಮ ಬಂದಂತಾಯ್ತು". 

ಗುರು ಕರುಣೆಯ ಅಪಾರತೆಯನ್ನು ಅವರು ತೆರೆದಿಟ್ಟಿದ್ದು ಹೀಗೆ: 'ಬಡವರು, ಆರ್ತರು ಎಂದರೆ ನನಗೆ ಪ್ರೀತಿ. ಏಕೆಂದರೆ ಭಗವಂತನ ಹತ್ತಿರದಲ್ಲವರಿರುತ್ತಾರೆ' ಎಂಬ ಗುರುನಾಥರ ನುಡಿಯನ್ನಿಲ್ಲಿ ಸ್ಮರಿಸಬಹುದಾಗಿದೆ. 

ಗುರುಚಿತ್ತವಿದ್ದಂತೆ 

ಆ ಗುರು ಬಂಧುಗಳು ಗುರು ಕಥಾಮೃತವನ್ನು ಮತ್ತೆ ಹೀಗೆ ಮುಂದುವರೆಸಿದರು. 'ಮೊದಲ ಭೇಟಿಯಲ್ಲಿ ನಿಮ್ಮ ಬಳಿ ಇರಲು ಬಂದೆ' ಎಂದ ನನ್ನ ಮಾತನ್ನು ಒಪ್ಪಿಕೊಂಡರೋ ಏನೋ, ಅನೇಕ ಸಾರಿ ಕರೆಸಿಕೊಂಡರು. ಅವರೇ ಬಂದು ದರ್ಶನವನ್ನು ಕೊಟ್ಟರು. ಜಗದ್ಗುರುಗಳ ವೇದಿಕೆಯನ್ನು ತಮ್ಮ ಭಕ್ತರ ಮನೆಯಲ್ಲೆಲ್ಲಾ ನಿರ್ಮಿಸಿ - ಆರಾಧನೆ, ಪೂಜೆ, ಪುನಸ್ಕಾರಗಳು ನಿರಂತರ ನಡೆಸುತ್ತಾ, ಧರ್ಮ ಪರಿಪಾಲನೆಯಲ್ಲಿ ಗುರುಬಾಂಧವರನ್ನು ಗುರುನಾಥರು ಹಚ್ಚುತ್ತಿದ್ದರು. ಆದರೆ, ಯಾರ ಮನೆಯಲ್ಲಿ ಯಾವಾಗ ಏನಾಗಬೇಕೆಂಬುದೆಲ್ಲಾ ಆ ಗುರುಚಿತ್ತದಾಗಿತ್ತು. 

ಒಂದು ಭಾನುವಾರ ಗುರುಬಂಧು ಒಬ್ಬರ ಮನೆಯಲ್ಲಿ ಅರುಣ ಪಾರಾಯಣ ಇದೆ ಎಂದು ಕರೆಸಿದ್ದರು. ಅಷ್ಟು ಹೊತ್ತಿಗೆ ಎರಡು ಪಾದುಕೆ ತರಿಸಬೇಕೆಂದಿದ್ದರು. ನನ್ನ ಬಳಿ ಲಿಂಗ ಮತ್ತು ಬಸವಣ್ಣನನ್ನು ತರಿಸಲು ಗುರುನಾಥರು ಹೇಳಿದ್ದರು. ನಾನವನ್ನು ತರುವಷ್ಟರಲ್ಲಿ ಪಾದುಕೆಗಳು ಬಂದಿದ್ದವು. ಅವನ್ನು ನನ್ನ ಕೈಗೆ ಕೊಟ್ಟರು. ಇದೇ ಸಮಯದಲ್ಲಿ ಅಲ್ಲಿಗೆ ಗುರುನಾಥರ ಬೀಗರು ನಂಜನಗೂಡಿನಿಂದ ಬಂದರು. ಪಾದುಕೆಗಳನ್ನು ಅವರಿಗೆ ಕೊಡಲು ನನಗೆ ತಿಳಿಸಿದರು. ಲಿಂಗ, ಬಸವಣ್ಣ ಮಾತ್ರ ನನ್ನಲ್ಲೇ ಉಳಿದಿತ್ತು. ಅವನ್ನು ಮತ್ತೊಬ್ಬ ಗುರುಬಂಧುವಿನೊಂದಿಗೆ ನಮ್ಮ ಮನೆಗೆ ಕಳಿಸಿದರು. ಅಲ್ಲಿಟ್ಟು ಆರತಿ ಮಾಡಿದೆವು. ಆಮೇಲೆ ಗುರುನಾಥರು ಫೋನು ಮಾಡಿದಾಗ 'ನೀವು ನಿಮ್ಮ ಮನೆಯಿಂದ ಮತ್ತೊಬ್ಬ ಗುರುಬಂಧುವಿನ ಮನೆಗೆ ಹೋಗಿರಿ' ಎಂದರು. ಅಲ್ಲಿ ಆರತಿ ಮಾಡಿದೆವು. ಅಲ್ಲಿಯೂ ವೇದಿಕೆ ನಿರ್ಮಿಸುವುದೆಂದಾಯ್ತು. ನಾನೊಂದೆಡೆ ನಿಂತಿದ್ದೆ. ಆಗ ಗುರುನಾಥರು ತಮ್ಮ ಮಗಳಿಗೆ ಫೋನು ಮಾಡುತ್ತಿದ್ದರು. ತಾವು ಎಲ್ಲೆಲ್ಲಿ ವೇದಿಕೆ ನಿರ್ಮಾಣ ಮಾಡಿಸುತ್ತಿದ್ದಾರೆಂದು ಮಗಳಿಗೆ ತಿಳಿಸುತ್ತಿದ್ದರು. ಅವರ ಮಾತಿನಲ್ಲಿ ನಮ್ಮ ಮನೆಯಲ್ಲೂ ವೇದಿಕೆ ನಿರ್ಮಾಣವಾಗುವುದು ತಿಳಿಯಿತು. ಗುರುನಾಥರ ಮಾತುಗಳು ಯಾರನ್ನು ಕುರಿತದ್ದು ಎಂಬುದನ್ನು ಎಚ್ಚರಿಕೆಯಿಂದ ಕೇಳಿ ತಿಳಿದುಕೊಂಡಾಗಲೇ ಬಹುದೊಡ್ಡ ಭಾಗ್ಯ ಅವರ ಪಾಲಿಗೊದಗಿ ಬರುವುದು. ಅದು ಗುರುನಾಥರ ಒಂದು ಪರೀಕ್ಷೆಯೂ ಇದಾಗಿರಬಹುದೇನೋ, ಶಿಷ್ಯರ ಸೂಕ್ಷ್ಮಮತಿಯನ್ನು ಪರೀಕ್ಷಿಸುವ ರೀತಿಯಿದೆಯೇನೋ, ಅರಿಯುವುದು ಕಷ್ಟ. ನನ್ನ ಭಾಗ್ಯವಿದು ಎಂದು ಕೂಡಲೇ ಮನೆಗೆ ಬಂದು, ವೇದಿಕೆಯ ತಯಾರಿ ನಡೆಸಿದೆವು. ಮಾರನೆಯ ದಿನವೇ ಗುರುನಾಥರೂ ಬಂದರು. ಹಿಂದಿನ ದಿನವೇ ವೇದಿಕೆಗೆ ಸಂಬಂಧಿಸಿದ ಪೂಜಾ ಕೈಂಕರ್ಯಗಳನ್ನು ಗುರುಬಂಧುಗಳು, ನಡೆಸಿಕೊಟ್ಟಿದ್ದರು. ನಾನು ಕನಸು ಮನಸಿನಲ್ಲೂ ನೆನೆಸಿರಲಿಲ್ಲ. ವೇದಿಕೆಯಾಯ್ತಲ್ಲ, ಇದರ ಪೂಜಾ ವಿಧಿ-ವಿಧಾನವೇನು, ನಾನೇನು ಮಾಡಬೇಕೆಂದೂ, ಚಿಂತಿಸಿರಲಿಲ್ಲ. ಏಕೆಂದರೆ ಎಲ್ಲವೂ ಗುರುನಾಥರೇ ಎಂದು ನಂಬಿದ್ದೆ. 'ಎರಡೂ ಹೊತ್ತು ಆರತಿ ಮಾಡಿಕೊಂಡು ಹೋಗಯ್ಯ ಸಾಕು' ಎಂದು ಗುರುನಾಥರು ಅತಿ ಸರಳವಾದ ಸೇವೆಯನ್ನು ತಿಳಿಸಿದರು. 'ಯದ್ಭಾವಂತದ್ಭವತಿ' ಎಂಬಂತೆ ಆಗಿತ್ತು. ಗುರುನಾಥರ ಸಹವಾಸದ ಸವಿ ನೆನೆಯುತ್ತಾ ಗುರುಬಂಧುಗಳು ಮೌನವಾದರು. 

ಓಹೋ ನಂಬಣ್ಣದ್ದೇ ಕಾರು 


ಗುರುನಾಥರ ಭಕ್ತರೊಬ್ಬರು ಒಂದು ಕಾರು ಕೊಂಡರು. ಮೊದಲಿನಿಂದ ಕಷ್ಟದಲ್ಲಿ ಇದ್ದರೂ 'ಗುರುನಾಥರ ಕೃಪೆಯಿಂದ ನಾನೀಸ್ಥಿತಿಗೆ ಬಂದೆ, ಕಾರು ಕೊಂಡುಕೊಂಡೆ' ಎಂಬ ಸಂತೃಪ್ತ ಭಾವ ಅವರಲ್ಲಿತ್ತು. ಆ ಸಮಯದಲ್ಲಿ ಗುರುನಾಥರು ಸಖರಾಯಪಟ್ಟಣದ ಇದ್ದರು. ಅಷ್ಟೊಂದು ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಅವರು ಬರಲಾಗದಿದ್ದರಿಂದ ಇವರೇ ಕಾರನ್ನು ಸಖರಾಯಪಟ್ಟಣಕ್ಕೆ ಒಯ್ದರು. ಗುರುನಾಥರಿಗೆ ನಮಿಸಿ, ಕಾರು ತೆಗದುಕೊಂಡು ಬಂದಿರುವ ವಿಚಾರ ತಿಳಿಸಿದಾಗ ಅವರಿಗಾದ ಸಂತಸ ಅಷ್ಟಿಷ್ಟಲ್ಲ. ತಾನೇ ಕಾರು ಕೊಂಡಂತೆ ಸಂಭ್ರಮಿಸಿದರು. ತಮ್ಮ ನೋವುಗಳನ್ನೆಲ್ಲಾ ಮರೆತು, ಮಗುವು ಒಂದು ಆಟಿಕೆಯನ್ನು ಪಡೆದಾಗ ಎಷ್ಟು ಸಂತೋಷ ಪಡುತ್ತದೆಯೋ ಹಾಗೆ ಸಂತಸಪಟ್ಟರು. 

ಅದು ರಾತ್ರಿ ಒಂಬತ್ತೂವರೆಯಾಗಿತ್ತು. ಗುರುಗಳ ಹಳೆಯ ಮನೆಯಲ್ಲಿ ಊಟ ಮಾಡಿಕೊಂಡು, ಗುರುಗಳಿದ್ದ ಹೊಸಮನೆಗೆ ಬಂದೆವು. ದೂರ ನಿಲ್ಲಿಸಿದ್ದ ಕಾರನ್ನು ನಮ್ಮ ಗುರುಬಂಧುಗಳು ತಂದರು. ಗುರುನಾಥರು ಮಲಗಿದ್ದರು. ವಿಷಯ ತಿಳಿಸಿದಾಗ ಇಬ್ಬರು ಗುರುಬಂಧುಗಳು ಅವರನ್ನು ಎತ್ತಿಕೊಂಡು ಬಂದರು. "ಓಹೋ.. ನಮಗೆ ಪ್ರಿಯವಾದ ಬಣ್ಣದ್ದೇ ಕಾರು" ಎಂದು ತುಂಬಾ ಸಂತಸದಿಂದ ನುಡಿದರು. ಗುರುನಾಥರನ್ನು ಕಾರಿನಲ್ಲಿ ಕೂರಿಸಿಕೊಂಡು ಅಲ್ಲೇ ಸುತ್ತಾಡಿಸಿ, ಶಿವಾಲಯದ ಬಳಿ ಬಂದು, ದೂರದಿಂದಲೇ ನಮಸ್ಕರಿಸಿ ಮತ್ತೆ ಮನೆಗೆ ಕರೆದೊಯ್ದೆವು. ತಮ್ಮ ಶಿಷ್ಯರು ಕಾರು ತೆಗೆದುಕೊಂಡರೆಂದಾಗ, ಅವರ ಸಂತೋಷ ಅದೆಷ್ಟಿತ್ತೋ, ನಮ್ಮ ಮೇಲೆ ಅವರ ಪ್ರೀತಿ ಎಷ್ಟಿತ್ತೆಂದರೆ, ನೆನೆದರೆ ಈಗಲೂ ಮೈ ಝುಮ್ಮೆನ್ನುತ್ತದೆ' ಗುರುನಾಥರು ದೇಹತ್ಯಾಗ ಮಾಡುವ ಎರಡು-ಮೂರು ತಿಂಗಳ ಹಿಂದೆ ನಡೆದ ಘಟನೆಯನ್ನು ಸ್ಮರಿಸುತ್ತಾ ಗುರುಬಂಧು ಒರು ಶಿಷ್ಯರ ಮೇಲಿದ್ದ ಗುರುನಾಥರ ಮಮತೆಯನ್ನು ಹೀಗೆ ಬಣ್ಣಿಸಿದರು. 

ಅದು ಹಾವಲ್ಲ ನಮ್ಮ ಗುರುಗಳು 


ಭಗವಂತನು ಭಕ್ತರ ಉದ್ಧಾರಕ್ಕಾಗಿ ಭೂಮಿಯಲ್ಲಿ ಸದ್ಗುರುವಾಗಿ ಜನಿಸಿ ಬರುತ್ತಾನಂತೆ. ಆದರೆ, ತನ್ನನ್ನು ಜನ ಸುಲಭವಾಗಿ ಗುರುತಿಸದಂತೆ ಬಾಲಕನಾಗಿಯೋ, ಮತಿಭ್ರಮಣೆಯವರಂತೆ ನಾಟಕ ಮಾಡಿಯೋ, ಮೂಕನಾಗಿಯೋ, ವಿಕಲಾಂಗನಾಗಿಯೋ ಬರುವುದಿದೆ. ಜಗತ್ತಿನ ಜನರನ್ನು ಪರೀಕ್ಷಿಸಲು ಗುರು ಚರಿತ್ರೆಯಲ್ಲಿ ಇಂತಹದೊಂದು ಘಟನೆ ಬರುತ್ತದೆ. ಗುರುಗಳು ಮೂಕ ಮಗುವಾಗಿ ಜನಿಸಿ ಬಾಲ್ಯ ಕಳೆದು ಉಪನಯನದ ವಯಸ್ಸಿಗೆ ಬಂದಾಗ, ತಂದೆ ತಾಯಿಗಳು 'ನಿನ್ನ ಮಾತನ್ನು ಕೇಳದ ಈ ಜೀವನ ವ್ಯರ್ಥವಾಯ್ತಲ್ಲಪ್ಪಾ, ನೀನು ಯಾವಾಗ ಮಾತನಾಡುವುದು ' ಎಂದು ಬೇಡಿದಾಗ, ಜನಿವಾರವನ್ನು ತೋರಿಸಿ 'ತನಗೆ ಉಪನಯನ ಮಾಡಲು' ತಿಳಿಸುತ್ತಾರೆ. ಮೂಕ ಬಾಲಕನಿಗೆ ಬ್ರಹ್ಮೋಪದೇಶವೇ, ಎಂದು ಜನರು ಹುಬ್ಬೇರಿಸುತ್ತಾರೆ. ಆದರೆ ಉಪನಯನವಾಗುತ್ತಿದಂತೆ, ಚತುರ್ವೇದಗಳನ್ನು ಉಚ್ಚರಿಸಿ, ತಮ್ಮ ಗುರುತ್ವ ತೋರಿದ ಕಥೆ ಎಲ್ಲರರಿತದ್ದೇ. ಗುರುನಾಥರ ಬಳಿ ಸಹಾ ಇಂತಹ ಒಬ್ಬ ಮಹಾತಾಪಸಿ ಗುರು, ನರರೂಪ ಧರಿಸಿ ಬಂದಾಗ, ಆ ಬಾಲಕನನ್ನು ತಮ್ಮ ಬಳಿ ಕರೆತಂದಾಗ, 'ಇವರು ಅವಧೂತರು, ನಮಗಿಂತ ದೊಡ್ಡವರು ಚಿಂತಿಸಬೇಡಿ' ಎಂದು ಬಹು ಹಿಂದೆಯೇ ಅವರ ತಂದೆ ತಾಯಿಗಳಿಗೆ ತಿಳಿಸಿದ ಮಾತು ಮುಂದೆ ಸತ್ಯವಾಗಿತ್ತು. 

ಹೀಗಾಗಿ ಗುರುನಾಥರ ಪರಿಚಯವಾಗಿ, ಅವರ ಭಕ್ತರಾಗಿ ನಡೆದುಕೊಳ್ಳುತ್ತಿದ್ದ ಆ ಮನೆಯವರಿಗೆ ಗುರುನಾಥರೆಂದರೆ ಅಪಾರ ಪ್ರೀತಿ. ಒಮ್ಮೆ ಆ ಮನೆಯವರು ಗುರುನಾಥರ ಬಳಿ 'ನಮ್ಮ ಮನೆಗೆ ಯಾವಾಗ ಬರುತ್ತೀರಿ' ಎಂದು ಕೇಳಿದಾಗ 'ನಾಳೆ ಸಂಜೆಯೇ ಬರುತ್ತೇನೆಂದು' ಹೇಳಿಬಿಟ್ಟರು. 

ಆ ಮನೆಯವರು ಗುರುನಾಥರ ಬರುವಿಕೆಯನ್ನು ಎರುಡು ನೋಡುತ್ತಾ ತವಕದಲ್ಲಿದ್ದರು. ಸಂಜೆಯಾಗುತ್ತಾ ಬಂದಿತು. ಇದ್ದಕ್ಕಿದ್ದಂತೆ ಮನೆಯ ಮುಂದೆ 'ಹಾವು, ಹಾವು' ಎಂಬ ದನಿ, ಗದ್ದಲ ಕೇಳಿ ಬಂತು. ಮನೆಯವರೆಲ್ಲ ಹೊರಗೆ ಬಂದರು. ಮನೆಯ ಮುಂದಿದ್ದ ಒಂದು ದೊಡ್ಡ ಚರಂಡಿಯಲ್ಲಿ ಕರಿಯ ದೊಡ್ಡ ನಾಗರಹಾವೊಂದು ಬಂದಿತ್ತು. ಎಲ್ಲರೂ ಗಾಭರಿಯಾದರೂ ಆ ಮನೆಯ ಏಳೆಂಟು ವರ್ಷದ ಬಾಲಕ 'ಅದು ಹಾವಲ್ಲ, ನಮ್ಮ ಗುರುಗಳು, ನನ್ನನ್ನು ಅಲ್ಲಿ ಇಳಿಸಿ... ಎಂದು ಹೇಳಿ' ಆ ಹಾವನ್ನು ಪೂಜಿಸಿ ನಮಸ್ಕರಿಸಿದನಂತೆ... ಗುರುವನ್ನು ಗುರುಮಾತ್ರಾ ತಿಳಿದು ಗುರುತಿಸಬಲ್ಲ. ಸಾಮಾನ್ಯ ನರರಿಗದು  ಅಸಾಧ್ಯ'. 

ಮುಂದೆ ಮಾರನೆಯ ದಿನ ಸಖರಾಯಪಟ್ಟಣದಿಂದ ಗುರುನಾಥರು ಫೋನು ಮಾಡಿ 'ನಾನು ನಿನ್ನೆ ಸಂಜೆ ನಿಮ್ಮ ಮನೆಗೆ ಬಂದಿದೆ. ಎಲ್ಲರಿಗೂ ನನ್ನನ್ನು ಗುರುತಿಸಲಾಗಲಿಲ್ಲವಲ್ಲ' ಎಂದು ಮಾರ್ಮಿಕವಾಗಿ ನುಡಿದರಂತೆ. 

ಹೀಗೆ ಲೀಲಾವತಾರಿಗಳಾದ ಗುರುನಾಥರು, ಹಲವು ರೂಪಗಳಲ್ಲಿ ತಾವು ಹೇಳಿದ ಸಮಯಕ್ಕೆ, ಹೇಳಿದಂತೆ ಬಂದು ಮಾತನ್ನುಳಿಸಿಕೊಂಡ ಮಹಾತ್ಮರಾಗಿದ್ದಾರೆ. ಆದರೆ ಅದನ್ನು ಅರಿತವರು ಮಾತ್ರ ವಿರಳ. ಆ ಅರಿವನ್ನು ಅವರೇ ದಯಪಾಲಿಸಬೇಕಲ್ಲ!!!

ಅವಸರವಿರುವವರು ಮುಂದೆ ಹೋಗಲಿ 


ಗುರುನಾಥರು ಒಮ್ಮೆ ಒಬ್ಬ ಗುರುಬಂಧುವಿನೊಂದಿಗೆ, ಅವರು ಕೊಡಿಸಿದ್ದ ಬೇಕರಿಯ ತಿಂಡಿಯನ್ನು ತಿನ್ನುತ್ತಾ ನಿಂತಿದ್ದಾಗ ಮತ್ತೊಬ್ಬ ಪರಿಚಿತರು ಅಲ್ಲಿಗೆ ಬಂದರಂತೆ. ಗುರುನಾಥರನ್ನು ಕಂಡು 'ಬರುತ್ತೀರಾ, ನನಗೆ ಸ್ವಲ್ಪ ಅರ್ಜೆಂಟಿದೆ, ನೀವು ಬಂದರೆ ಕರೆದುಕೊಂಡು ಹೋಗುತ್ತೇನೆ' ಎಂದು ಅಂದಾಗ ಗುರುನಾಥರು 'ನಾನು ಬರುವುದು ಸ್ವಲ್ಪ ತಡವಾಗುತ್ತದೆ, ನಿಮಗೆ ಅಷ್ಟೊಂದು ಅರ್ಜೆಂಟಿದ್ದರೆ ಹೊರಬಹುದೆಂದರಂತೆ'. 

ಗುರುನಾಥರು ಸನಿಹದಲ್ಲಿದ್ದರೆ ಅದೇನಾಗುತ್ತಿತ್ತೋ ಬಲ್ಲವರಾರು? ಸಾಧು ಸತ್ಪುರುಷರ  ಸಂಗದಲ್ಲಿದ್ದರೆ ಯಮನೂ ಏನೂ ಮಾಡಲಾರ, ಆದರೆ ಮುಂದೆ ಒಂದೈದಾರು ಕಿಲೋಮೀಟರಿನಷ್ಟು ಕಾರಿನಲ್ಲಿ ಹೋಗಿದ್ದ ಆ ವ್ಯಕ್ತಿ, ಆಕ್ಸಿಡೆಂಟ್ ಗೊಳಗಾಗಿ ಮೃತರಾದ ಸುದ್ಧಿ ತಲುಪಿತಂತೆ. 

ಗುರುಬಂಧುಗಳು 'ಅಲ್ಲ ಗುರುನಾಥರೇ ಅವರನ್ನು..... ' ಎಂದು ಏನೋ ಕೆಲ ಹೊರಟಾಗಿ "ಹೋಗುವ ಅವಸರವಿರುವವರನ್ನು ಯಾರು ತಡೆಯಲು ಸಾಧ್ಯ' ವೆಂದು ಮಾರ್ಮಿಕವಾಗಿ ನುಡಿದರಂತೆ. 


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।