ಒಟ್ಟು ನೋಟಗಳು

Monday, November 23, 2020

ಮನದಿ ಭಯವೇತಕೋ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ಮನದಿ ಭಯವೇತಕೋ  ನಿನ್ನ ಇರುವಿನ ಅರಿವು ಮೂಡಿಸೇ ದೂರಾಗುವುದು ಗುರುವೇ
ಸುಪ್ತ ಮನದೊಳು ಗುಪ್ತವಾಗಿಹ ಅರಿಗಳ ಕಾಟವೋ ಅದು ಪ್ರಭುವೇ|

ಬೇಡಿದೊಡೆ ನೀ ಸಲಹುವೆಂದೆನುತ ನಾ ಮಾಡಿದ ಕಾರ್ಯಗಳು ಮನ್ನವಾಗುವುದೇ
ಮನವ ಮನ ಬಂದಂತೆ ಓಡಲು ಬಿಡದೆ ನಿನ್ನ ಅಂಕೆಯಲಿ ನಿಲಿಸೋ  ಗುರುವೇ|

ನಡೆವುದಾ ನಡೆಸಿಹನು ಕಾಲನು ನಿನ್ನ ಅಭಯ ಸದಾ ಇದೆಯೆಂಬ ಭಾವ ನೀಡೋ 
ನನ್ನೊಡೆಯನಾ ಸನಿಹದಿ ಸುಳಿಯದಿರಲಿ ಹುಂಬತನದ ಭಾವವೋ|

ಮರೆತು ಮತ್ತಿನಲಿ ನಡೆದೊಡೆ ಬರಲಿ ಮನದೊಳು ಭಯದ ಭಾವವು
ಎನ್ನ ಇತಿಮಿತಿಯೊಳು ಮೈಮನಸ ಬಿಗಿದಿರಿಸಿ ಪೊರೆಯೋ ಪ್ರಭುವೇ|

ಆಡಿ ನಡೆಯಲಾಗದ ಪದವ ನುಡಿಸಬೇಡ ಅಲ್ಪ ಮತಿಯವನು ನಾನಲ್ಲವೇ
ನಿನ್ನ ಪದತಳದ ಸೇವಕನ ಕಾಯುವವ ನೀನೆಂದು ನಂಬಿ ಬಂದೆನೋ ಸಖರಯಾಧೀಶನೇ|

1 comment: