ಗುರುನಾಥ ಗಾನಾಮೃತ
ಬಾಗಿಲಲಿ ನಿಂತು ಒಳಗೆ ಬಾರದಿರುವುದು ತರವೆ
ರಚನೆ: ಅಂಬಾಸುತ
ಬಾಗಿಲಲಿ ನಿಂತು ಒಳಗೆ ಬಾರದಿರುವುದು ತರವೆ
ಭಕುತರಾ ಭಾಗ್ಯದಾ ನಿಧಿ ಎಂಬಾ ಬಿರುದು ಪಡೆದಾ ಗುರುವೆ ||ಪ||
ಎನ್ನ ಬಹುಜನ್ಮದಾ ಪುಣ್ಯದಾ ಫಲದಿಂದ
ನೀನೆಗೆ ದೊರಕಿರುವೆ ಎನಗಾಗೆ ಬಂದಿರುವೆ
ಕಾರಣವ ಪೇಳದೆ ಕಣ್ಮುಚ್ಚಿ ನೀನಿಂದು
ಕಾದಿರುವ ಎನ್ನ ಮೇಲೆ ಕರುಣೆಯಾ ತೋರದೆ ||೧||
ಹಾತೊರೆದು ಹಂಬಲಿಸಿ ಹಲುಬುತಿಹೆನೊ
ನಿನ್ನ ಪಾದಪದುಮದ ಸೇವೆಗೆ ನಾ ಕಾದಿಹೆನೊ
ಅಣಿಗೊಳಿಸಿಹೆನೊ ಘಟವಾ ಪಕ್ವಗೊಳಿಸಿ ಮನವ
ಸೊಕ್ಕಾಡೊ ಅರಿಗಳನು ನಾ ದೂರ ತಳ್ಳಿದರೂ ||೨||
ಮಾತನಾಡಲೊಲ್ಲೆ ಏಕೆ ಮುನಿಸು ಎನ್ನಮೇಲೇಕೆ
ಒಳಗೆ ಬಾರದೆ ಪೋಪುದಾದರೆ ಇಲ್ಲಿ ಬಂದೆ ಏಕೆ
ಮತ್ತೆ ಕರೆಯೆನೊ ನೀನೀಗ ಹೋಗುವುದಾದರೆ
ಹಲವು ಬಗೆ ಆಸೆ ಹುಟ್ಟಿಸಿ ನೀರನೆರಚುತಿರುವೆ ||೩||
ಬೇಡಲು ಕರೆಯುತಿಲ್ಲ ಕಾಡಲು ಕರೆಯುತಿಲ್ಲ
ಕೊಳ್ಳಲೂ ಕರೆಯುತಿಲ್ಲ ನೀ ಎನ್ನೊಬ್ಬನಿಗೆ ಅಲ್ಲ
ತಾಯಿ ನೀ ಈ ಮಗನಾ ಮನೆಗೆ ಬಾರದಿದ್ದರೆ
ಕಂಡವರು ಕಂಡಕಂಡ ಹಾಗೆ ಮಾತನಾಡುವರು ||೪||
ಸಖರಾಯಪುರದಿಂದ ಬಂದಿರುವ ಗುರುವೇ
ಅವಧೂತ ಅಪ್ರಮೇಯ ಅನಂತ ನೀನಾಗಿರುವೆ
ಅಂಬಾಸುತನ ಈ ಮನ ಮನೆಗೆ ಒಡೆಯ ನೀನಯ್ಯ
ನೀ ಬಾರದಿದ್ದ ಮೇಲೆ ಅದಕೆ ಒಳಿವು ಇನ್ನೆಲ್ಲಯ್ಯ ||೫||
No comments:
Post a Comment